Wednesday, 23rd October 2024

Sudeep Mother Passed away : ಪತ್ರಿಕಾಗೋಷ್ಠಿ ಕ್ಯಾನ್ಸಲ್; ಸುದೀಪ್ ತಾಯಿ ಕುರಿತು ಲಾಯರ್ ಜಗದೀಶ್ ಮಾರ್ಮಿಕ ಮಾತು

ಬೆಂಗಳೂರು: ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದಿರುವ ಲಾಯರ್ ಜಗದೀಶ್ ಅವರು ಅಕ್ಟೋಬರ್ 20ರಂದು ಸಂಜೆ ಪ್ರೆಸ್‌ಮೀಟ್‌ ಮಾಡಿ ಮಾತನಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಕಿಚ್ಚ ಸುದೀಪ್ ಅವರ ತಾಯಿ ವಿಧಿವಶವಾಗಿರುವ (Sudeep Mother Passed away) ಕಾರಣ ತಮ್ಮ ಪತ್ರಿಕಾಗೋಷ್ಠಿಯನ್ನು ಅವರು ರದ್ದು ಮಾಡಿದ್ದಾರೆ. ಈ ಮಾಹಿತಿಯನ್ನು ಅವರು ಮತ್ತೊಂದು ವಿಡಿಯೊ ಮಾಡುವ ಮೂಲಕ ಬಹಿರಂಗ ಮಾಡಿದ್ದಾರೆ. ನನ್ನ ಪ್ರೆಸ್‌ ಮೀಟ್ ಮುಂದೂಡಿದ್ದೇನೆ. ದಾದಾ (ಸುದೀಪ್‌) ಅವರ ತಾಯಿಯ ನಿಧನ ಸಂತಾಪದ ನಡುವೆ ಈ ಸುದ್ದಿಗೋಷ್ಠಿ ನಡೆಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಸುದೀಪ್ ಅವರ ತಾಯಿ ಭಾನುವಾರ ಮುಂಜಾನೆ ಅನಾರೋಗ್ಯದ ಕಾರಣ ನಿಧನ ಹೊಂದಿದ್ದರು. ವಯೋಸಹಜ ಸಮಸ್ಯೆಯಿಂದಾಗಿ ಅವರು ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟಗೊಂಡ ಬಳಿಕ ಲಾಯರ್ ಜಗದೀಶ್ ಅವರು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಲಾಯರ್‌ ಕೆ.ಎನ್.ಜಗದೀಶ್‌ ಅವರು ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡ ಆಂಜನೇಯ ದೇವಸ್ಥಾನದ ಬಳಿ ಸಂಜೆ 4.30 ರ ವೇಳೆಗೆ ಸುದ್ದಿಗೋಷ್ಠಿ ಮಾಡುವುದಾಗಿ ವಿಡಿಯೊದಲ್ಲಿ ಹೇಳಿಕೊಂಡಿದ್ದರು. ಹೊಸ ವಿಡಿಯೊದಲ್ಲಿ ಈ ಪ್ರೆಸ್‌ಮೀಟ್‌ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ.

ಸುದೀಪ್‌ ಅವರ ತಾಯಿ ವಿಧಿವಶಗೊಂಡ ಕಾರಣ ನನ್ನ ಪ್ರೆಸ್‌ ಮೀಟ್ ಕ್ಯಾನ್ಸಲ್ ಆಗಿದೆ. ಸುದೀಪ್‌ ಅವರಿಗೆ ಮಾತೃ ವಿಯೋಗದಲ್ಲಿರುವುದ ನಮಗೆಲ್ಲರಿಗೂ ಬೇಸರದ ವಿಷಯ. ತಾಯಿಯ ಮಹತ್ವ ದೊಡ್ಡದು. ತಾಯಿಯನ್ನು ಕಳೆದುಕೊಳ್ಳುವ ಸಂದರ್ಭವನ್ನು ಹೇಳುವುದೇ ಕಷ್ಟ. ನಾನು ಕೂಡ 2011ರಲ್ಲಿ ನನ್ನ ತಾಯಿಯನ್ನು ಕಳೆದುಕೊಂಡಿದ್ದೆ. ಈ ವೇಳೆ ಸಾಕಷ್ಟು ನೋವು ಅನುಭವಿಸಿದ್ದೆ. ಅಂತೆಯೇ ದಾದಾ (ಸುದೀಪ್‌) ಅವರ ತಾಯಿ ನಿಧನ ಹೊಂದಿರುವ ಹೊತ್ತಲ್ಲಿ ಅವರ ಜತೆಗೆ ಇರಬೇಕಾಗಿದೆ ಎಂದು ಲಾಯರ್ ಜಗದೀಶ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ತಾಯಿಯ ಮಹತ್ವದ ಬಗ್ಗೆ ಮಾತನಾಡಿದ್ದ ಸುದೀಪ್‌

ಬಿಗ್‌ಬಾಸ್‌ನಲ್ಲಿ ‘ವಾರದ ಕತೆ ಕಿಚ್ಚನ ಜತೆ’ ಎಪಿಸೋಡ್‌ನಲ್ಲಿ ಸುದೀಪ್‌ ಅವರ ತಾಯಿಯ ಮಹತ್ವದ ಬಗ್ಗೆ ಮಾತನಾಡಿದ್ದರು. ಬಿಸ್‌ಬಾಸ್‌ ಮನೆಯೊಳಗೆ ಚೈತ್ರಾ ಕುಂದಾಪುರ ಅವರು ‘ಅಪ್ಪನಿಗೆ ಹುಟ್ಟಿದರೆ’ ಎಂಬ ಪದ ಬಳಸಿದ್ದರು. ಈ ಪದಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುದೀಪ್‌ ಅಪ್ಪನಿಗೆ ಹುಟ್ಟಿದರೆ ಎಂಬ ಅಮ್ಮನಿಗೆ ಅವಮಾನ ಮಾಡಿದಂತೆ ಎಂದು ಹೇಳಿದ್ದರು.

ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್(Sudeep Mother passed away) ಅವರ ತಾಯಿ ಸರೋಜಾ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅವರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ ಇನ್ನು ಮಧ್ಯಾಹ್ನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Bigg Boss Jagadeesh : ಮಧ್ಯರಾತ್ರಿಲಿ, ಹೈವೇ ರಸ್ತೇಲಿ ಲಾಯರ್ ಜಗದೀಶ್ ಮಾತು ಕೇಳಿ! ವಿಡಿಯೊ ಇದೆ

ಶನಿವಾರ ಸಂಜೆಯೇ ಸುದೀಪ್ ತಾಯಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದು ಬಂದಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸುದೀಪ್ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ. ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದು ಬಂದಿದೆ. ಸುದೀಪ್ ಅವರ ತಾಯಿ ಸರೋಜಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಜೆಪಿ ನಗರದ ನಿವಾಸದತ್ತ ಆಗಮಿಸುತ್ತಿದ್ದಾರೆ.

ಸದ್ಯ ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಶೂಟಿಂಗ್‌ ಮತ್ತು ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಅವರು ಬಿಗ್‌ಬಾಸ್‌ ಸೀಸನ್ 11 ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಇನ್ಮುಂದೆ ಶೋ ನಡೆಸಿಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಫೇಸ್​ಬುಕ್ ಲೈವ್ ಬಂದು, ‘ಬಿಗ್ ಬಾಸ್ ಶೋನಲ್ಲಿ ಕನ್ನಡ ಬಳಕೆ ಹೆಚ್ಚು ಆಗುತ್ತಿಲ್ಲ. ಈ ಬಾರಿಯ ಸ್ಪರ್ಧಿಗಳಿಗೆ ತುಂಬಾ ಕನ್‌ಫ್ಯೂಶನ್ ಆಗುತ್ತಿದೆ. ಬರೆದಿರುವ ಪಾಯಿಂಟ್ಸ್‌ ಸರಿಯಾಗಿ ಇಲ್ಲ. ಸರಿಯಾಗಿ ಕಮ್ಯೂನಿಕೇಟ್ ಮಾಡದೆ ಗೊಂದಲ ಆಗುತ್ತಿದೆ. ಈ ತರಹದ ಬೆಳವಣಿಗೆಯಿಂದ ಅಸಮಾಧಾನಗೊಂಡು ಸುದೀಪ್ ಬಿಡಲು ನಿರ್ಧಾರ ಮಾಡಿದ್ದಾರೆ,’ ಎಂದು ಹೇಳಿದ್ದರು.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಹಾಗೂ ಕಲರ್ಸ್ ನಡುವೆ ಎಲ್ಲವೂ ಸರಿಯಿಲ್ಲ, ಬಿಗ್ ಬಾಸ್ ಆಯೋಜಕರ ಜೊತೆ ಕಿರಿಕ್ ಆಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದೀಗ ಸುದೀಪ್ ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದರು.

‘‘ನನ್ನ ಒಂದು ಟ್ವೀಟ್​ಗೆ ನೀವು ಸಂಬಂಧಿಸಿ ಬರುತ್ತಿರುವ ಎಲ್ಲಾ ಸಪೋರ್ಟ್​ಗೆ ಅಭಿನಂದನೆ. ಆದರೆ ನನ್ನ ಹಾಗೂ ಚಾನೆಲ್​ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ. ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದೆ. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದವನ್ನು ಎದುರಿಸುತ್ತಿರುವಾಗ ನಾನು ಹಿಂದೆ ಕುಳಿತುಕೊಂಡು ನೋಡುತ್ತಾ ಸಂಭ್ರಮಿಸುವವರ ಪಟ್ಟಿಗೆ ಸೇರಿದ ವ್ಯಕ್ತಿ ನಾನಲ್ಲ. ಚಿಯರ್ಸ್ & ಲವ್’’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.