Saturday, 26th October 2024

Waqf board: ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು: ಎಂ.ಬಿ. ಪಾಟೀಲ್‌ ಸ್ಪಷ್ಟನೆ

Waqf board

ಬೆಂಗಳೂರು: ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ (Waqf board) ಎನ್ನುವ ಗೊಂದಲ ಸೃಷ್ಟಿಯಾಗಿದೆ. ಇಲ್ಲಿ 11 ಎಕರೆ ಮಾತ್ರ ವಕ್ಫ್‌ಗೆ ಸೇರಿದ್ದು, ಇದರಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ. ಇದನ್ನು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿಯೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1974ರಲ್ಲಿ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದನ್ನು ವಕ್ಫ್‌ ಮಂಡಳಿ 1977ರಲ್ಲಿ ಸರಿ ಮಾಡಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಈ ಎರಡೂ ದಾಖಲೆಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಮಹಾಲಬಾಗಾಯತದಲ್ಲಿ. ಆದರೆ ಗೆಜೆಟ್‌ನ ಬ್ರ್ಯಾಕೆಟ್ ಒಳಗೆ ಹೊನವಾಡ ಎಂದು ಬರೆದು ಬಿಟ್ಟಿದ್ದಾರೆ. ಈ ವಿಷಯವನ್ನು ರೈತರು ನಮ್ಮ ಗಮನಕ್ಕೆ ತಂದ ಕೂಡಲೇ ಅ.19ರಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಎಲ್ಲರನ್ನೂ ಕರೆದು, ಸಭೆ ನಡೆಸಿ, ಸೂಕ್ತ ನಿರ್ದೇಶನ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ ಅವರಾಗಲಿ, ಯತ್ನಾಳ್ ಅವರಾಗಲಿ ರಾಜಕೀಯ ಮಾಡಬೇಕಾಗಿಲ್ಲ. ರೈತರ ಒಂದಿಂಚು ಕೂಡ ವಕ್ಫ್ ಆಸ್ತಿ ಆಗಲು‌ ಬಿಡಲ್ಲ’ ಎಂದರು.

ಹೊನವಾಡ ಗ್ರಾಮವು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲೇ ಇದೆ. ಇಲ್ಲಿನ ಹತ್ತು ಸರ್ವೇ ನಂಬರುಗಳಲ್ಲಿರುವ 11 ಎಕರೆ ಮಾತ್ರ ವಕ್ಫ್ ಆಸ್ತಿಯಷ್ಟೆ. ಗೆಜೆಟ್‌ನಲ್ಲಿನ‌ ತಪ್ಪುಗಳನ್ನು ವಕ್ಫ್‌ನವರೂ ಒಪ್ಪಿ, ಅದನ್ನು ತೆಗೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ತಪ್ಪು ದಾಖಲಾತಿಯಿಂದ ಹೀಗಾಗಿದೆ ಎಂದು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ. ದುರದೃಷ್ಟವೆಂದರೆ, ಈ ಲೋಪ ಇಷ್ಟೊಂದು ತಡವಾಗಿ ಗೊತ್ತಾಗಿದೆ. ಯಾವುದು ನಿಯಮಾನುಸಾರ ವಕ್ಫ್ ಆಸ್ತಿಯೋ ಅದಷ್ಟೇ ಅವರಿಗೆ ಸೇರುತ್ತದೆ. ರೈತರಾಗಲಿ, ಖಾಸಗಿ ಮಾಲೀಕರಾಗಲಿ ಈ ಬಗ್ಗೆ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಈ ಸಂಬಂಧ ನಾನು ಅಧಿಕಾರಿಗಳೊಂದಿಗೆ ಸದ್ಯದಲ್ಲೇ ಮತ್ತೊಂದು ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | DK Shivakumar: ಅಕ್ರಮ, ಕಳಪೆ ಗುಣಮಟ್ಟದ ಕಟ್ಟಡಗಳ ತೆರವಿಗೆ ಮುಲಾಜಿಲ್ಲದೆ ಕ್ರಮ; ಡಿ.ಕೆ. ಶಿವಕುಮಾರ್

ವಿಜಯಪುರ ಜಿಲ್ಲೆಯ ಎರಡು ಕಡೆಗಳಲ್ಲಿ ಮಾತ್ರ ವಕ್ಫ್ ಆಸ್ತಿ ಸಂಬಂಧ ಸ್ವಲ್ಪ ಗೊಂದಲವಿದೆಯಷ್ಟೆ. ಈ ಪೈಕಿ ಒಂದು ಜಮೀನು ಬಬಲೇಶ್ವರ ತಾಲೂಕಿನಲ್ಲಿದ್ದು, ಅದು ಜಹಗೀರದಾರರ ಮನೆತನಕ್ಕೆ ಸೇರಿದ್ದಾಗಿದೆ. ಇನ್ನೊಂದು ವಿಜಯಪುರ ನಗರ ವ್ಯಾಪ್ತಿಯಲ್ಲಿರುವ 70 ಎಕರೆಗೆ ಸಂಬಂಧಿಸಿದ್ದು, ಇದು ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ವಿವರಿಸಿದ್ದಾರೆ.