ಹಾವೇರಿ: 68ನೇ ಕನ್ನಡ ರಾಜ್ಯೋತ್ಸವ ಸಂಬಂಧ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಸಾಧಕರ ಹೆಸರನ್ನು ಘೋಷಿಸಿದರು. ಈ ಬಾರಿ ಜಿಲ್ಲೆಯ ಸಾಹಿತಿ, ರಂಗಕರ್ಮಿ ಸತೀಶ್ ಕುಲಕರ್ಣಿ ಅವರಿಗೆ ಸಾಹಿತ್ಯ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಬಂಡಾಯ ಮತ್ತು ದಲಿತ ಸಾಹಿತ್ಯದ ಮೂಲಕ ಗುರುತಿಸಿಕೊಂಡಿರುವ ಸತೀಶ್ ಕುಲಕರ್ಣಿ ಅವರು ಕಳೆದ 50 ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕಾವ್ಯ ವಿಭಾಗದಲ್ಲಿ ಕುಲಕರ್ಣಿ ಅವರಿಗೆ ಪ್ರಶಸ್ತಿ ಲಭಿಸಿದೆ. 8 ವಿವಿ ಗಳಲ್ಲಿ ಇವರ ಕವಿತೆಗಳು ಪಠ್ಯಗಳಾಗಿವೆ. ಪುಟ್ಟರಾಜ್ ಎಂಬ ವಿದ್ಯಾರ್ಥಿ ಸತೀಶ್ ಕುಲಕರ್ಣಿ ಸಾಹಿತ್ಯದ ಮೇಲೆ ಪಿಹೆಚ್ಡಿ ಮಾಡಿದ್ದಾರೆ.
ಸಾಹಿತಿ ಸತೀಶ್ ಕುಲಕರ್ಣಿ ಪ್ರತಿಕ್ರಿಯಿಸಿ, ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಕರ್ನಾಟಕ ಎಂದು ನಾಮಕರಣಗೊಂಡ ಸುವರ್ಣ ಸಂಭ್ರಮ ಸಂದರ್ಭದಲ್ಲಿ ನನಗೆ ಪ್ರಶಸ್ತಿ ದೊರೆತಿರುವುದು ಖುಷಿಯಾಗಿದೆ. ಇದೊಂದು ಮರೆಯಲಾರದ ಕ್ಷಣ. ಅದರಲ್ಲೂ ಸಾಹಿತ್ಯ ಕ್ಷೇತ್ರಕ್ಕೆ ಪ್ರಶಸ್ತಿ ದೊರೆತಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.