Saturday, 27th July 2024

ಹೈರಾಣಾಗಿಸುವ ಆಫ್ರಿಕಾ ರಾಜಕೀಯ ನಾಯಕರ ನಾಮಪುರಾಣ

ಇದೇ ಅಂತರಂಗ ಸುದ್ದಿ

vbhat@me.com

ಆಫ್ರಿಕಾದ ರಾಜಕೀಯ ನಾಯಕರ ಹೆಸರುಗಳನ್ನು ಉಚ್ಚರಿಸುವುದು ಕಷ್ಟ. (ಅವರಿಗೆ ನಮ್ಮ ಹೆಸರುಗಳನ್ನು ಉಚ್ಚರಿಸುವುದೂ ಕಷ್ಟವಾಗಬಹುದು. ಅದು ಬೇರೆ
ಮಾತು.) ಕಳೆದ ವಾರ ಸಿಎನ್‌ಎನ್ ಅಂತಾರಾಷ್ಟ್ರೀಯ ವಿಷಯಗಳ ವರದಿಗಾರರೊಬ್ಬರು, ‘ನನಗೆ ಆಫ್ರಿಕಾದ ರಾಜಕೀಯಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ, ಆದರೆ ಅಲ್ಲಿನ ರಾಜಕೀಯ ನಾಯಕರ ಹೆಸರುಗಳನ್ನು ಉಚ್ಚರಿಸುವುದು ಕಷ್ಟ’ ಎಂದು ತಮಾಷೆಯಿಂದ ಹೇಳಿದ್ದರು.

ಕಳೆದ ವರ್ಷ ಉದ್ಯಮಿ ಆನಂದ ಮಹೀಂದ್ರ ಅವರು ಒಂದು ಟ್ವೀಟ್ ಮಾಡಿದ್ದರು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೊಸ ತಮ್ಮ ಸಂಪುಟವನ್ನು ವಿಸ್ತರಿಸಿದಾಗ, ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಹೆಸರುಗಳನ್ನು ಉಚ್ಚರಿಸಲು ‘ಎಂಜಿಪಿ ಚಾನೆಲ್’ನ ನ್ಯೂಸ್ ರೀಡರ್‌ಗೆ ಸಾಧ್ಯವಾಗದೇ, ಆತ
ಕ್ಷಮೆಯಾಚಿಸಿ, ನಂತರ ಬ್ರೇಕ್ ತೆಗೆದುಕೊಂಡಾಗ, Can someone PLEASE tell me this is a comedy show and not a real news bulletin. Either way, I wish our TV was this entertaining ಎಂದು ಆನಂದ ಮಹೀಂದ್ರ ಟ್ವೀಟ್ ಮಾಡಿದ್ದರು.

ಅಧ್ಯಕ್ಷರ ಕಚೇರಿಯಲ್ಲಿನ ಸಚಿವ Khumbudzo Ntshavheni,, ವಿದ್ಯುತ್ ಖಾತೆ ಸಚಿವ Dr. Kgosientsho Ramokgopa,, ಸಂವಹನ ಖಾತೆ ಸಚಿವ Mondli Gungubele,, ಕಾರ್ಪೊರೇಟ್ ಗವರ್ನ ಖಾತೆ ಸಚಿವೆ Thembisile Phumelele Simelane-Nkadimeng ಇವರ ಹೆಸರುಗಳನ್ನು ಉಚ್ಚರಿಸಲಾಗದೇ ನ್ಯೂಸ್ ರೀಡರ್ ಹೈರಾಣಾಗಿ, ‘ಈ ಹೆಸರುಗಳನ್ನು ಹೇಳುವುದು ಕಷ್ಟವಾಗುತ್ತಿದೆ. ನನ್ನ ನಾಲಗೆ ಹೊರಳುತ್ತಿಲ್ಲ. ದಯವಿಟ್ಟು ಕ್ಷಮಿಸಿ, ಈಗ ಒಂದು ಬ್ರೇಕ್ ತೆಗೆದುಕೊಳ್ಳೋಣ’ ಎಂದು ಉಸ್ಸಪ್ಪಾ ಎಂದಿದ್ದ.

ಪ್ರತಿ ಹೆಸರನ್ನು ಹೇಳುವಾಗ ಐದಾರು ಸಲ, ‘ನನಗೆ ಈ ಹೆಸರುಗಳನ್ನು ಹೇಳಲು ಕಷ್ಟವಾಗುತ್ತಿದೆ, ಕ್ಷಮಿಸಿ’ ಎಂದು ಹೇಳುತ್ತಿದ್ದ. ಆತ ಅನುಭವಿಸಿದ ಪರಿಸ್ಥಿತಿ ಎಂಥವರಿಗಾದರೂ ನಗು ತರಿಸುವಂತಿತ್ತು. ಈ ರೀತಿ ಸಂಕಷ್ಟ ಅನುಭವಿಸಿದವರಲ್ಲಿ ಆ ನ್ಯೂಸ್ ರೀಡರ್ ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. ಆಫ್ರಿಕಾ
ಹೊರತುಪಡಿಸಿ ಉಳಿದ ದೇಶಗಳ ನ್ಯೂಸ್ ರೀಡರುಗಳಿಗೆ ಇದೊಂದು ಶಿಕ್ಷೆ. ಕಳೆದ ವರ್ಷ ಬಿಬಿಸಿ ನ್ಯೂಸ್ ರೀಡರ್, ‘ನಾನು ಮುಂದೆ ಉಚ್ಚರಿಸಲಿರುವ ಆಫ್ರಿಕಾದ ನಾಯಕರುಗಳ ಹೆಸರುಗಳು ತಪ್ಪಾದರೆ, ಕ್ಷಮಿಸಿ ಎಂದು ಮೊದಲೇ ಹೇಳುತ್ತೇನೆ’ ಎಂದು ಪೂರ್ವಾನುಮತಿ ಪಡೆದಿದ್ದ.

‘ನಾವು ಆಫ್ರಿಕಾ ನಾಯಕರ ಹೆಸರುಗಳನ್ನು ಸರಿಯಾಗಿ ಉಚ್ಚರಿಸುತ್ತೇವೆ’ ಎಂದು ಬಿಬಿಸಿ ಹೇಳಿಕೊಂಡರೂ, ತಕ್ಷಣ ಯಾರzದರೂ ಹೆಸರು ಹೇಳುವಾಗ
ಯಡವಟ್ಟು ಮಾಡಿದ ಹಲವು ನಿದರ್ಶನಗಳಿವೆ. ಈ ಕಾರಣದಿಂದ ಬಹುತೇಕ ಅಂತಾರಾಷ್ಟ್ರೀಯ ಟಿವಿ ನ್ಯೂಸ್ ಚಾನೆಲ್‌ಗಳು ವಿಶ್ವಸಂಸ್ಥೆ ಸಿದ್ಧಪಡಿಸಿರುವ World Leaders: A Pronunciation Guide ನ್ನು ಅನುಸರಿಸುತ್ತವೆ. ಇಷ್ಟಾಗಿಯೂ ಕೆಲವೊಮ್ಮೆ ನಾಯಕನೊಬ್ಬನ ಹೆಸರು Obowanjunugwan ಎಂದು ಹೇಳುವುದು ಸುಲಭವಲ್ಲ. ಯಾರಿಗಾದರೂ ನಾಲಗೆ ತಟ್ಟನೆ ಹೊರಳುವುದಿಲ್ಲ.

ಆಫ್ರಿಕಾದಲ್ಲಿರುವ ೫೪ ದೇಶಗಳ ಎಲ್ಲ ನಾಯಕರ ಹೆಸರುಗಳನ್ನು ಉಚ್ಚರಿಸುವುದು ಸುಲಭವಲ್ಲ. ಹಾಗೆಂದು ಕೆಲವರು ಸುಲಭವಾಗಿ ಉಚ್ಚರಿಸುವ ಹೆಸರುಗಳಿಂದ ಜನಪ್ರಿಯರಾಗಿzರೆ. ಅವರ ಪೈಕಿ ನನಗೆ ತಕ್ಷಣ ನೆನಪಾಗುವವರೆಂದರೆ, ನೈಜೀರಿಯಾದ ಮಾಜಿ ಅಧ್ಯಕ್ಷ ಗುಡ್ ಲಕ್ ಜೊನಾಥನ್. ಜಿಂಬಾಬ್ವೆ ಮಾಜಿ ಅಧ್ಯಕ್ಷ ಕಾನಾನ್ ಬನಾನ (ಈಗಿನ ಅಧ್ಯಕ್ಷನ ಹೆಸರು ಎಮ್ಮರ್ಸನ್ ನನ್ಗಾಗ್ವಾ), ಟಾಗೋ ಮಾಜಿ ಪ್ರಧಾನಿ ಮತ್ತು ಅಧ್ಯಕ್ಷ ಸಿಲ್ವನಸ್ ಒಲಿಂಪಿಯೋ, ಲಿಬೆರಿಯಾದ ಮಾಜಿ ಅಧ್ಯಕ್ಷ ವಿಲಿಯಮ್ ಟಬ್ ಮನ್, ತಾಂಜನಿಯಾದ ಸಚಿವ ಜನೆವರಿ ಮಕಂಬ, ದಕ್ಷಿಣ ಆಫ್ರಿಕಾದ ನಾಯಕ ಜೂಲಿಯಸ್ ಮಲೆಮಾ ಮತ್ತು ಮಲಾವಿ ಮಾಜಿ ಅಧ್ಯಕ್ಷ ಹೇಸ್ಟಿಂU ಬಂಡಾ. ಕೆಲವರ ಹೆಸರನ್ನು ನೋಡಿದಾಗ ಅದು ಹೆಸರಾ ಅಥವಾ ವಾಕ್ಯವಾ ಎಂಬ ಸಂದೇಹ ಬರುವುದುಂಟು. ಆಗ ನನಗೆ ನೆನಪಿಗೆ
ಬರುವುದು ಕಾಂಗೋ ದೇಶದ ದಿವಂಗತ ಅಧ್ಯಕ್ಷ ಮೊಬುಟು ಸೇಸೇ ಸೇಕೋ ಕುಕು ನಬೇಂಡು ವಾಜ ಬಂಗಾ. ಇನ್ನು ಕೆಲವರ ಹೆಸರುಗಳನ್ನು ಕೇಳಿದರೆ ನಗು ಬರುತ್ತದೆ.

ಅಂಥವುಗಳಲ್ಲಿ ನನಗೆ ಪ್ರಮುಖವೆಂದು ಅನಿಸಿದ್ದು – Phelephe Matric Examsion, Tsotetsi Pipinyana Pampoen, Sambu Victor Dont Worry, Amakali Immanuel Very Important Person, Surprise Moriri, Witness Masunda, Trymore Simango ಇತ್ಯಾದಿ.
ಇನ್ನೊಂದು ಹೆಸರಿದೆ. ಅದು ಹೆಸರಲ್ಲ, ನಿಜಕ್ಕೂ ವಾಕ್ಯವೇ -Uvuvwevwevwe Onyetenyevwe Ugwemuhwem Osas. ಈ ಹೆಸರನ್ನು ಹತ್ತು ಸಲ ಹೇಳಿ ಅಂದ್ರೆ ಯಾವನಿಗಾದರೂ ಅದು ಶಿಕ್ಷೆಯೇ.

ಮಾರಿಟಾನಿಯ ಎಂಬ ದರಿದ್ರ ದೇಶ

ನಿಮಗೆ ಯಾರಿಂದಾದರೂ ಫೇಕ್ ಕಾಲ್ ಬಂದರೆ, ಇಂಟರ್ನೆಟ್ ಅಥವಾ ಆನ್ ಲೈನ್ ಲಫಡಾ ಆಯಿತೆಂದರೆ, ಅನುಮಾನವೇ ಬೇಡ, ಅದರ ಮೂಲ ಮಾರಿಟಾನಿಯ. ಆಫ್ರಿಕಾ ಖಂಡದ ವಾಯುವ್ಯಕ್ಕಿರುವ ಈ ದೇಶ ದಟ್ಟ ದರಿದ್ರ. ಇದನ್ನು ಪೂರ್ತಿಯಾಗಿ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಮಾರಿಟಾನಿಯ’ ಅಂತ ಕರೆಯುತ್ತಾರೆ. ಈ ದೇಶದ ಉತ್ತರ ಭಾಗ ಸಹಾರಾ ಮರುಭೂಮಿಯಿಂದ ಆವೃತವಾಗಿದೆ. ಇದನ್ನು ಆವರಿಸಿಕೊಂಡಿರುವ ಇತರ ದೇಶಗಳೆಂದರೆ ಆಲ್ಜೀರಿಯಾ, ಮಾಲಿ ಮತ್ತು ಸೆನೆಗಲ್.

ಆಫ್ರಿಕಾ ಖಂಡದಲ್ಲಿ ಇದು ಹನ್ನೊಂದನೇ ದೊಡ್ಡ ದೇಶ. ವಿಶ್ವದಲ್ಲಿ ಇಪ್ಪತ್ತೆಂಟನೇ ದೊಡ್ಡ ದೇಶವೂ ಹೌದು. ಮಾರಿಟಾನಿಯದ ಶೇ.ತೊಂಬತ್ತರಷ್ಟು ಗಡಿಭಾಗ ಸಹಾರ ಭೂಮಿಯಲ್ಲಿದೆ. ಈ ದೇಶದ ರಾಜಧಾನಿಯ ಹೆಸರನ್ನು ಸರಿಯಾಗಿ ಹೇಳುವುದು ಸಹ ಕಷ್ಟವೇ. ಅದನ್ನು ಇಂಗ್ಲಿಷಿನಲ್ಲಿ Nouakchot ಎಂದು ಬರೆಯು ತ್ತಾರೆ ಮತ್ತು ನಾಚಟ್ ಎಂದು ಉಚ್ಚರಿಸುತ್ತಾರೆ. ಆಫ್ರಿಕಾದಲ್ಲಿದ್ದರೂ, ಇದು ಸಂಪೂರ್ಣ ಅರಬ್ ಪ್ರಭಾವಕ್ಕೊಳಗಾಗಿರುವ ದೇಶ. ಅದರಲ್ಲೂ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಅರಬ್ ಜಗತ್ತಿನ ಭಾಗವೇ ಆಗಿದೆ. ಇದು ಅರಬ್ ಲೀಗ್ ದೇಶಗಳ ಸದಸ್ಯ ಕೂಡ ಹೌದು.

ಅಧಿಕೃತ ಭಾಷೆಯೂ ಅರೇಬಿಕ್. ಅಧಿಕೃತ ಧರ್ಮ ಇಸ್ಲಾಂ. ಇಲ್ಲಿನ ಜನಸಂಖ್ಯೆಯ ಶೇ.ತೊಂಬತ್ತರಷ್ಟು ಮಂದಿ ಸುನ್ನಿ ಮುಸ್ಲಿಮರು. ಈ ದೇಶದಲ್ಲಿ ನೈಸರ್ಗಿಕ ಸಂಪತ್ತು ದಂಡಿಯಾಗಿದೆ. ಕಬ್ಬಿಣದ ಅದಿರು ಮತ್ತು ಪೆಟ್ರೋಲ್ ಯಥೇಚ್ಛ ಸಿಗುತ್ತದೆ. ಆದರೂ ಈ ದೇಶದಲ್ಲಿ ದಟ್ಟ ದಾರಿದ್ರ್ಯ. ಮಾನವ ಹಕ್ಕುಗಳ ಉಲ್ಲಂಘನೆ ಯಲ್ಲಿ ಮಾರಿಟಾನಿಯ ಎತ್ತಿದ ಕೈ. ಈ ಜಗತ್ತಿನಲ್ಲಿ ಗುಲಾಮಗಿರಿಯನ್ನು ತೆಗೆದುಹಾಕಿದ ಕಟ್ಟಕಡೆಯ ದೇಶವೂ ಇದೇ. ೧೯೮೧ ರಲ್ಲಿ ಗುಲಾಮಗಿರಿಯನ್ನು ನಿಷೇಧಿಸಿದರೂ, ೨೦೦೭ ರ ತನಕ, ಜೀತ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿರಲಿಲ್ಲ. ಈಗಲೂ ಆ ದೇಶದ ಕೆಲಭಾಗಗಳಲ್ಲಿ ಗುಲಾಮಗಿರಿ ಜಾರಿಯಲ್ಲಿದೆ. ಈಗಲೂ ಈ ದೇಶದಲ್ಲಿ ಸುಮಾರು ತೊಂಬತ್ತು ಸಾವಿರ ಮಂದಿ ಜೀತದಾಳುಗಳಿದ್ದಾರೆ.

ಗುಲಾಮಗಿರಿಯನ್ನು ಸಂಪೂರ್ಣವಾಗಿ ತೊಡೆದು ಹಾಕಿದ್ದೇವೆ ಎಂದು ಸರಕಾರ ಮೇಲಿಂದ ಮೇಲೆ ಹೇಳುತ್ತದೆ. ನಲವತ್ತೆರಡು ಲಕ್ಷ ಜನಸಂಖ್ಯೆ ಇರುವ ಆ ದೇಶದಲ್ಲಿ ಗುಲಾಮಗಿರಿ ಆ ದೇಶದ ಎಲ್ಲ ರಂಗಗಳಲ್ಲಿ ಹುಲುಸಾಗಿದೆ. ಈ ದೇಶ ಮಿಲಿಟರಿ ಕ್ಷಿಪ್ರ ಕ್ರಾಂತಿಗೂ ಕುಪ್ರಸಿದ್ಧ. ಯಾವಾಗ ದಂಗೆ, ಕ್ರಾಂತಿಯಾಗುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇಪ್ಪತ್ತೊಂದು ವರ್ಷ ಮಾರಿಟಾನಿಯವನ್ನು ಆಳಿದ ಅಧ್ಯಕ್ಷನನ್ನು ಹಠಾತ್ ಕ್ರಾಂತಿಯಲ್ಲಿ ಕಿತ್ತೊಗೆಯಲಾಯಿತು. ಹದಿನೈದನೇ
ಶತಮಾನದಲ್ಲಿ ಪೋರ್ಚುಗೀಸರು, ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚರ ಆಳ್ವಿಕೆಯಲ್ಲಿದ್ದ ಆ ದೇಶ ೧೯೬೦ ರಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು.

ಮಾರಿಟಾನಿಯದಲ್ಲಿ ಇಂದಿಗೂ ಶೇ.ನಲವತ್ತರಷ್ಟು ಜನ ಬಡತನ ರೇಖೆಗಿಂತ ಕೆಳಗಿzರೆ. ಅನಾರೋಗ್ಯ ಮತ್ತು ಅನಕ್ಷರತೆ ಸಮಸ್ಯೆಗೆ ಇನ್ನೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜಗತ್ತಿನ ಸೈಬರ್ ಅಪರಾಧ ಚಟುವಟಿಕೆಗಳಿಗೆ ಈ ದೇಶವೂ ಒಂದು ಕೇಂದ್ರ. ಸೈಬರ್ ಕಳ್ಳರ ಅಡಗುತಾಣವಾಗಿರುವ ಈ ದೇಶ,
ಅವರೆಲ್ಲರಿಗೂ ಆಶ್ರಯ ನೀಡಿದೆ. ಒಂದು ಕಾಲಕ್ಕೆ ಮಾರಿ ಷಸ್, ನೈಜೀರಿಯವನ್ನು ಅಡಗುತಾಣ ಮಾಡಿಕೊಂಡಿದ್ದ ಸೈಬರ್ ಅಪರಾಧಿಗಳು ಈಗ  ಮಾರಿಟಾನಿಯಕ್ಕೆ ಶಿಫ್ಟ್ ಆಗಿದ್ದಾರೆ. ಕಾರಣ ಅಲ್ಲಿ ಅದನ್ನು ತಡೆಗಟ್ಟುವ ಯಾವ ಕಾನೂನು ಇಲ್ಲದಿರುವುದು.

ಒಂದು ರೀಲ್ ಕತೆ ಹಾಗೂ

ಇತ್ತೀಚಿನ ದಿನಗಳಲ್ಲಿ ಬಹಳ ವೈರಲ್ ಆದ ಒಂದು ರೀಲ್ ನೋಡುತ್ತಿದ್ದೆ. ಒಬ್ಬಾಕೆ ರಸ್ತೆಯಲ್ಲಿ ಸಂದರ್ಶನ ಮಾಡುತ್ತಾ ಯುವಕ ನೊಬ್ಬನಿಗೆ, ‘ನಿಮಗೆ ಎರಡು -ನ್ನಿ ಕ್ವಶ್ಚನ್ ಕೇಳ್ತೀನಿ… ಮರದಲ್ಲಿ ಮತ್ತು ಗಿಡದಲ್ಲಿ ಬಿಡದೇ ಇರೋ ಕಾಯಿ ಯಾವುದು? ಎಂಬ ಪ್ರಶ್ನೆ ಕೇಳುತ್ತಾಳೆ. ಅದಕ್ಕೆ ಆ ಯುವಕ, ‘ಮೇಡಂ, ನಮ್ಮ ಮನಸ್ಸು… ನಮಗೆ ಒಳ್ಳೇದು ಮಾಡಿದರೆ ದೇವರು.. ಅಷ್ಟೇ.. ಸಾಕು, ಮರೆಯಾಕೆ ನಮಗೆ. ಏನಂತೀರಾ? ತಾಯಿಗೆ ಕೈಮುಗಿಸಿ, ದೇವರು ಒಳ್ಳೇದನ್ನು ಮಾಡ್ತಾನೆ ನಮಗೆ.. ಏನಂತೀರಾ? … ಅಷ್ಟೇ..’ ಅಂತಾನೆ. ಆಕೆ ಕೇಳಿದ್ದೇ ಒಂದು, ಆತ ಹೇಳಿದ್ದೇ ಇನ್ನೊಂದು. ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ಆ ಯುವಕ ಅಸಂಬದ್ಧ ಉತ್ತರವನ್ನು ಆತ್ಮವಿಶ್ವಾಸದಿಂದ ಹೇಳಿದ್ದ.  ಈ ರೀಲ್ ನೋಡುವಾಗ ನನಗೆ ಮತ್ತೊಂದು ಪ್ರಸಂಗ ನೆನಪಾಯಿತು.

ನೈಜೀರಿಯಾದ ರಾಜಕಾರಣಿ ಮತ್ತು ಒಂದು ಅವಧಿಗೆ ಸಂಸತ್ ಸದಸ್ಯನಾಗಿದ್ದ ಪ್ಯಾಟ್ರಿಕ್ ಒಬಹಿಯಾಗಬಾನ್‌ನ ಇಂಗ್ಲಿಷ್ ಬಹಳ ಪ್ರಸಿದ್ಧ. ಮೊದಲನೆಯದಾಗಿ, ಆತ ಮಾತಾಡಲಾರಂಭಿಸಿದರೆ, ನಿಲ್ಲಿಸುವುದೇ ಇಲ್ಲ. ಉದ್ದನೆಯ ವಾಕ್ಯಗಳನ್ನು ಬಳಸಿ ಮಾತಾಡುವುದೆಂದರೆ ಆತನಿಗೆ ಇಷ್ಟ. ‘ಪೂರ್ಣವಿರಾಮವಿಲ್ಲದೇ
ಮಾತಾಡುವ ರಾಜಕಾರಣಿ’ ಎಂದೇ ಅವನನ್ನು ಪತ್ರಿಕೆಗಳು ಸಂಬೋಧಿಸುತ್ತವೆ. ಆತನಿಗೆ ಏನೇ ಕೇಳಿ, ಅದಕ್ಕೆ ಸಂಬಂಧ ಇಲ್ಲದ ಉತ್ತರ ನೀಡುತ್ತಾನೆ.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆತನಿಗೆ ಇಂಗ್ಲಿಷನ್ನುಮನಬಂದಂತೆ ಬಳಸುವ ಖಯಾಲಿ. ಆತನ ಬಾಯಲ್ಲಿ ಇಂಗ್ಲಿಷ್ ತನ್ನ ಎಲ್ಲ ಅರ್ಥಗಳನ್ನೂ ಕಳೆದುಕೊಳ್ಳುವುದು ನಿಶ್ಚಿತ. ಒಂದು ಪದವನ್ನು ಹೇಗೆ ಬೇಕಾದರೂ ಬಳಸುವುದು ಅವನಿಗೆ ಅಭ್ಯಾಸವಾಗಿ ಹೋಗಿದೆ. ಒಮ್ಮೆ ಆತ ಸಂಸತ್ತಿನಲ್ಲಿ ಮಾತಾಡುತ್ತಾ, Government has smilingly take a decision to ban illegal drugs which will beautifully harmful to the society which otherwise cause irreparable damage to the mankind which is the backbone of any civilised society in the world so that we can rest assured that the present dispensation will care the future of the people in all respect by any
means without an iota of doubt in the minds of people who are integral part of any system that the Nigerian Govt pride ofಎಂದು ಹೇಳಿದ್ದ.

ಒಬಹಿಯಾಗಬಾನ್ ಇಂಗ್ಲಿಷ್ ಬಗ್ಗೆ ಅವನ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದಾಗ ಆತ, “I am maniacally bewildered, overgassted and flabbergasted at the paraplegic crinkumcrankum’ ಎಂದು ಹೇಳಿ ಎಲ್ಲರನ್ನೂ ದಂಗುಬಡಿಸಿದ್ದ. ನೈಜೀರಿಯಾದ ಪ್ರಸಿದ್ಧ ಕಾದಂಬರಿಕಾರ, ಕವಿ ಮತ್ತು ವಿಮರ್ಶಕ ಚಿನುವ ಅಚಿಬೆ, ಆಫ್ರಿಕಾದ ಬರಹಗಾರರ ಬಗ್ಗೆ ಮಾತಾಡುತ್ತಾ, ‘ಅವರ ಹಾಗೆ (ಆಫ್ರಿಕಾದ ಬರಹಗಾರರು) ಇಂಗ್ಲಿಷನ್ನು ಕುಲಗೆಡಿಸಿದವರು ಯಾರೂ ಇಲ್ಲ. ಭಾಷೆಯನ್ನು ತಮಗೆ ಬೇಕಾದ ಹಾಗೆ, ಮನಸೋ ಇಚ್ಛೆ ಬಳಸುತ್ತಾರೆ. ಒಂದು ಪದದೊಳಗೆ ಇನ್ನೊಂದನ್ನು ಸೇರಿಸಿ, ಮತ್ಯಾವುದೋ ಪದವನ್ನು ಟಂಕಿಸುತ್ತಾರೆ, ಕೊನೆಯಲ್ಲಿ ಭಾಷೆಯನ್ನು ವಿರೂಪಗೊಳಿಸುತ್ತಾರೆ’ ಎಂದು ಮೂವತ್ತು ವರ್ಷಗಳ ಹಿಂದೆಯೇ ಹೇಳಿದ್ದ.

ಚಿನುವ ಅಚಿಬೆ ಮಾತು ಪದೇ ಪದೆ ಸತ್ಯ ಎಂದು ಮನವರಿಕೆಯಾಗುತ್ತಿದೆ.

ಅಡ್ವಾಣಿಯವರ ನೆನಪಿನ ಶಕ್ತಿ
ಬಿಜೆಪಿ ಹಿರಿಯ ನಾಯಕ ಎಲ.ಕೆ.ಅಡ್ವಾಣಿ ಅವರ ನೆನಪಿನ ಶಕ್ತಿ ಅಗಾಧವಾಗಿತ್ತು. ಅವರು ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿ ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡ ಬಳಿಕ ಅವರ ಹೆಸರನ್ನು ಎಂದೂ ಮರೆಯುತ್ತಿರಲಿಲ್ಲ. ಹತ್ತು ವರ್ಷಗಳ ಬಳಿಕ ಭೇಟಿಯಾದರೂ, ಪೂರ್ಣ (ಇನಿಷಿಯಲ್ ಸಹಿತ) ಹೆಸರು, ಹಿಂದಿನ ಭೇಟಿಯ ವಿವರಗಳನ್ನು ನೆನಪು ಮಾಡುತ್ತಿದ್ದರು. ಒಮ್ಮೆ ಅವರು ಲಕ್ನೋದಲ್ಲಿರುವ ತಮ್ಮ ಪಕ್ಷದ ಕಾರ್ಯಕರ್ತ ಪ್ರಾಣನಾಥ ಮಿಶ್ರಾ ಎಂಬುವವರ ಮನೆಗೆ ಬೆಳಗಿನ ಉಪಾಹಾರಕ್ಕೆ ಹೋಗಿದ್ದರು. ಅಡ್ವಾಣಿ ಅವರ ಜತೆಗೆ ಸುಮಾರು ಹದಿನೈದು ಜನರೂ ಇದ್ದರು. ಅಲ್ಲಿ ಅವರು ಸುಮಾರು ಮುಕ್ಕಾಲು ಗಂಟೆ ಕಳೆದಿದ್ದರು. ಅದಾಗಿ ಹದಿನೇಳು ವರ್ಷಗಳ ಬಳಿಕ, ಅಡ್ವಾಣಿಯವರು ಲಕ್ನೋಕ್ಕೆ ಹೋದಾಗ, ಮಿಶ್ರಾ ಅವರು ಸಿಕ್ಕಿದರು.

‘ಅಡ್ವಾಣಿಯವರೇ, ನಾನು ಪ್ರಾಣನಾಥ ಮಿಶ್ರಾ. ಸುಮಾರು ಹದಿನೇಳು ವರ್ಷಗಳ ಹಿಂದೆ, ನೀವು ನಮ್ಮ ಮನೆಗೆ ಬಂದಿದ್ದಿರಿ. ಪ್ರಾಯಶಃ ನೀವು ಮರೆತಿರ ಬಹುದು. ಅದಾದ ಬಳಿಕ ನೀವು ಅವೆಷ್ಟೋ ಮನೆಗಳಿಗೆ ಹೋಗಿದ್ದಿರಬಹುದು. ಹೀಗಾಗಿ ನಿಮಗೆ ಮರೆತು ಹೋಗಿರಬಹುದು’ ಎಂದು ಹೇಳಿದರು. ಆಗ ಆಡ್ವಾಣಿಯವರು, ‘ಮಿಶ್ರಾಜೀ, ನಿಮ್ಮ ಮನೆಗೆ ಬಂದಿದ್ದನ್ನು ನಾನು ಮರೆತಿಲ್ಲ. ನಿಮ್ಮ ಪತ್ನಿ ಶಾರದಾ ಅವರು ಹೇಗಿದ್ದಾರೆ? ನಿಮ್ಮ ಪುತ್ರಿ ಅರುಣಾದೇವಿ ಈಗ ಎಲ್ಲಿದ್ದಾರೆ? ನಿಮ್ಮ ಮನೆಯಂದು ನಾಯಿ ಇತ್ತಲ್ಲ, ಅದರ ಹೆಸರು ಪಾಂಡು ತಾನೇ? ಇದು ಈಗ ಬದುಕಿರಲಿಕ್ಕಿಲ್ಲ ಅಲ್ಲವೇ?’ ಎಂದು ಕೇಳಿದರು.

ಪ್ರಾಣನಾಥ ಅವರ ಪ್ರಾಣಪಕ್ಷಿ ಚೀರಿಕೊಂಡಿರಬೇಕು! ಆತ ಹೇಳಿದ ಹನ್ನೊಂದು ಉಕ್ತಿಗಳು ಆಪಲ್ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸ್ಟೀವ್ ಜಾಬ್ಸ ನನಗೆ ಇಷ್ಟ. ಆತ ಜಗತ್ತಿಗೆ ಕಂಪ್ಯೂಟರ್ ಮತ್ತು ಮೊಬೈಲ್ ಫೋನನ್ನು ಸುಂದರವಾಗಿ ರೂಪಿಸಬಹುದು ಎಂದು ತೋರಿಸಿ ಕೊಟ್ಟವ. ನಾನು ಬಹಳ ವರ್ಷಗಳ ವರೆಗೆ ಆತ ಬರೆದ ಹನ್ನೊಂದು ವಾಕ್ಯಗಳನ್ನು ನನ್ನ ಟೇಬಲ್ ಮೇಲಿನ ಗ್ಲಾಸಿನೊಳಗೆ ಇಟ್ಟುಕೊಂಡಿದ್ದೆ. ಸಮಯ
ಸಿಕ್ಕಾಗೆ ಆ ವಾಕ್ಯಗಳನ್ನು ಓದುತ್ತಿz. ಸ್ಟೀವ್ ಜಾಬ್ಸ ಹೇಳಿದ ಆ ಮಾತುಗಳು ಎಲ್ಲ ಕಾಲಕ್ಕೂ ಸಲ್ಲುವಂಥವು. ‘ಕಳೆದ ೩೩ ವರ್ಷಗಳಿಂದ, ನಾನು ಪ್ರತಿದಿನ ಬೆಳಗ್ಗೆ
ಕನ್ನಡಿಯಲ್ಲಿ ನೋಡುತ್ತೇನೆ ಮತ್ತು ನನ್ನನ್ನು ಕೇಳಿಕೊಳ್ಳುತ್ತೇನೆ – ‘ಇಂದು ನನ್ನ ಜೀವನದ ಕೊನೆಯ ದಿನವಾಗಿದ್ದರೆ, ಈ ದಿನ ನಾನು ಏನು ಮಾಡಬೇಕೆಂದಿ zನೋ, ಅದನ್ನು ಮಾಡುತ್ತಿದ್ದಾನಾ? ಈ ಪ್ರಶ್ನೆಗೆ ಬಹಳ ದಿನಗಳವರೆಗೆ ಉತ್ತರ ‘ಇಲ್ಲ’ ಎಂದಾದರೆ, ನಾನು ಮುಂದೇನು ಮಾಡಬೇಕು ಎಂಬುದನ್ನು ಬದಲಿಸುತ್ತೇನೆ.

ಬೇರೆಯವರ ಅಭಿಪ್ರಾಯಗಳ ಗದ್ದಲ, ನಿಮ್ಮ ಅಂತರಂಗದ ಧ್ವನಿಯನ್ನು ಮುಳುಗಿಸಲು ಎಂದೂ ಅವಕಾಶ ನೀಡಬಾರದು. ನೀವು ನಾಯಕನೋ ಮತ್ತು ಫಾಲೋವರೋ ಎಂಬುದನ್ನು ನೀವು ಮಾಡುವ ಸಾಧನೆ ಮತ್ತು ಆವಿಷ್ಕಾರ ನಿರ್ಧರಿಸುತ್ತವೆ. ಕೆಲವು ಸಲ ಜೀವನವಿದೆಯಲ್ಲ, ಇಟ್ಟಿಗೆ ತೆಗೆದುಕೊಂಡು
ನಿಮ್ಮ ಹಣೆಗೆ ಹೊಡೆಯುತ್ತದೆ. ಆಗ ಬದುಕಿನ ಬಗ್ಗೆ ನಂಬಿಕೆ ಕಳೆದುಕೊಳ್ಳಬಾರದು. ನೀವು ಮುಂದೆ ನೋಡುತ್ತಾ ಚುಕ್ಕೆ(ಡಾಟ್ಸ)ಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ. ನೀವು ಹಿಂದಕ್ಕೆ ನೋಡುತ್ತಿರುವಾಗ ಮಾತ್ರ ಅವುಗಳನ್ನು ಸಂಪರ್ಕಿಸಬಹುದು. ಆದ್ದರಿಂದ ಭವಿಷ್ಯದಲ್ಲಿ ಚುಕ್ಕೆಗಳು ಹೇಗಾದರೂ ಸಂಪರ್ಕ ಗೊಳ್ಳುತ್ತವೆ ಎಂಬುದನ್ನು ನಂಬಬೇಕು.

ಜಗತ್ತನ್ನು ಬದಲಾಯಿಸಬವು ಎಂಬ ಕ್ರೇಜಿ ಐಡಿಯಾ ಇದ್ದವರು ಮಾತ್ರ ಅದನ್ನು ಬದಲಿಸಬಲ್ಲರು. ಸ್ಮಶಾನದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗುವುದು ನನಗೆ
ಮುಖ್ಯವಲ್ಲ. ಇಂದು ನಾನು ಅದ್ಭುತವಾದುದನ್ನು ಮಾಡಿದ್ದೇನೆ ಎಂದು ರಾತ್ರಿ ಮಲಗುವಾಗ ಹೇಳುವುದಷ್ಟೇ ನನಗೆ ಮುಖ್ಯ. ನಿಮ್ಮ ಭಾವನೆ ಮತ್ತು ಅಂತಃಪ್ರeಯನ್ನು ಅನುಸರಿಸುವ ಧೈರ್ಯವನ್ನು ಮಾಡಬೇಕು. ನೀವೇನಾಗಬಯಸಿದ್ದೀರಿ ಎಂಬುದು ಅವುಗಳಿಗೆ ಗೊತ್ತಾಗುತ್ತವೆ. ನಾನು ಏನನ್ನೋ ಕಳೆದುಕೊಳ್ಳಲಿದ್ದೇನೆ ಎಂಬ ಯೋಚನೆಯ ಬಲೆಯಲ್ಲಿ ಸಿಲುಕಿಕೊಳ್ಳುವುದಕ್ಕಿಂತ, ನಾನು ಒಂದಲ್ಲ ಒಂದು ದಿನ ಸಾಯಲಿದ್ದೇನೆ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ನೀವು ಈಗಾಗಲೇ ಬೆತ್ತಲಾಗಿದ್ದೀರಿ. ನಿಮ್ಮ ಹೃದಯವನ್ನು ಅನುಸರಿಸದಿರುವುದಕ್ಕೆ ಕಾರಣಗಳೇ ಇಲ್ಲ.

ನಿಮ್ಮ ಜೀವನವನ್ನು ನಿರ್ಧರಿಸುವುದು ನೀವು ಮಾಡಿರುವ ಕೆಲಸ. ನಮಗೆ ಸಿಗುವ ದೊಡ್ಡ ನೆಮ್ಮದಿಯೆಂದರೆ, ನೀವು ಯಾವುದು ಮಹಾನ್ ಕೆಲಸ ಎಂದು ಭಾವಿಸಿದ್ದೀರೋ, ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದು. ಮಹಾನ್ ಕೆಲಸವನ್ನು ಮಾಡುವ ಏಕೈಕ ಮಾರ್ಗವೆಂದರೆ, ನಿಮಗೆ ಯಾವುದು ಇಷ್ಟವೋ
ಅದನ್ನೇ ಮಾಡುವುದು. ಸದಾ ಹಸಿವಿನಿಂದಿರಿ ಮತ್ತು ಹುಚ್ಚಾಟಗಳನ್ನು ಮಾಡುತ್ತಿರಿ.

Leave a Reply

Your email address will not be published. Required fields are marked *

error: Content is protected !!