Saturday, 27th July 2024

ಕಟ್ಟುವೆವು ನಾವು ಹೊಸ ನಾಡೊಂದನು

ಸಮನ್ವಯ

ಡಿ.ಕೆ.ಶಿವಕುಮಾರ್‌

ಕುಡಿವ ನೀರಿಗೆ ಹೋರಾಡಬೇಕಿದ್ದ ಕಾಲ ಇಂದಿಗೂ ಜೀವಂತವಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆಗಿರುವ ಇತಿಹಾಸವನ್ನು ಮರೆತರೆ ಭಾರತ ಮತ್ತೆ ೨೦೦ ವರ್ಷಗಳಷ್ಟು ಹಿಂದಕ್ಕೆ ಹೋದರೂ ಅಚ್ಚರಿಯಿಲ್ಲ. ಕಾಕತಾಳೀಯ ಎಂಬಂತೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರಕಾರ ಘೋಷಿಸಿದೆ.

ಈ ಘಟನೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆ ತುಮಕೂರಿನ ಚಿಕ್ಕನಾಯಕನಹಳ್ಳಿ ಬಳಿ ಹಾದು ಹೋಗು ತ್ತಿದ್ದ ಸಂದರ್ಭ. ನೆತ್ತಿಯನ್ನು ಸುಡುವ ಬಿಸಿಲನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕುತ್ತಿದ್ದೆವು. ಸಾವಿರಾರು ಜನರ ಮಧ್ಯೆ ತಾಯಿ ಯೊಬ್ಬರು ಕೈಯಲ್ಲಿ ಸೌತೆಕಾಯಿ ಹಿಡಿದುಕೊಂಡು ರಾಹುಲ್ ಗಾಂಧಿ ಕಡೆಗೆ ಕೈ ಬೀಸುತ್ತಿದ್ದರು. ಹತ್ತಿರ ಬನ್ನಿ ಎಂದು ಕೈ ಸನ್ನೆ ಮಾಡಿದ್ದೇ ತಡ ನಮ್ಮ ಬಳಿಗೆ ಓಡಿ ಬಂದ ತಾಯಿ ‘ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ’ ಎಂದು ಕಣ್ಣಲ್ಲಿ ನೀರು ತುಂಬಿ ಕೊಂಡರು.

‘ಉಳುವವನೆ ಭೂಮಿಯ ಒಡೆಯ’ ಕಾನೂನಿನ ಮೂಲಕ ಅಂದು ಬಿತ್ತಿದ ಬೀಜ ಮರವಾಗಿ ಫಲ ಕೊಟ್ಟಿತ್ತು. ಈ ಸನ್ನಿವೇಶ ಸಾಮಾಜಿಕ ನ್ಯಾಯಕ್ಕೆ ಪುಟ್ಟ ಉದಾಹರಣೆ ಮಾತ್ರ. ನಮಗೆ ಸೌತೆಕಾಯಿ ಕೊಟ್ಟ ಶಾರದಮ್ಮ ಅವರು ಇಂದು ನಮ್ಮ ನಡುವೆ ಇಲ್ಲ. ಆದರೆ ಇಡೀ ರಾಜ್ಯ, ದೇಶದಾದ್ಯಂತ ಶಾರದಮ್ಮ
ಅವರಂಥ ಲಕ್ಷಾಂತರ ಕುಟುಂಬಿಕರು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪಾಲುದಾರರಾಗಿದ್ದಾರೆ. ಅನ್ನ ಬೆಳೆದು ಜನರ ಹಸಿವು ನೀಗಿಸುತ್ತಿದ್ದಾರೆ. ‘-.೨೦ ವಿಶ್ವ ಸಾಮಾಜಿಕ ನ್ಯಾಯ’ ದಿನದ ನೆಪದಲ್ಲಿ ಈ ಘಟನೆಯನ್ನು ನೆನಪಿಸಿಕೊಳ್ಳಬೇಕಾಯಿತು.

‘ಸಂಪತ್ತು ಮತ್ತು ಅಧಿಕಾರವು ಸಮಾನ ಹಂಚಿಕೆ ಯಾದಾಗ ಮಾತ್ರ ಸಾಮಾಜಿಕ ನ್ಯಾಯದ ಪರಿಧಿ ಹೆಚ್ಚುತ್ತಾ ಹೋಗುತ್ತದೆ’ ಎಂಬುದು ನನ್ನ ವೈಯಕ್ತಿಕ ನಂಬಿಕೆ. ಸಮಾಜ ದಲ್ಲಿರುವ ಎಲ್ಲ ರೀತಿಯ ಅಸಮಾನತೆಯನ್ನ ಹೋಗಲಾಡಿಸಿ ಹಿಂದುಳಿದ ವರನ್ನು, ಬಡವರನ್ನು, ದುರ್ಬಲರನ್ನು, ತುಳಿತಕ್ಕೆ ಮತ್ತು
ಶೋಷಣೆಗೆ ಒಳಪಟ್ಟವರನ್ನು ರಾಜಕೀಯ ವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದೇ ಸಾಮಾಜಿಕ ನ್ಯಾಯ.

ಕುಡಿಯುವ ನೀರಿಗೆ, ನಡೆಯುವ ದಾರಿಗೆ ಹೋರಾಟ ಮಾಡಬೇಕಾಗಿದ್ದ ಕಾಲ ಇಂದಿಗೂ ಜೀವಂತವಿದೆ ಎಂದರೆ ಯಾರೂ ನಂಬುವುದಿಲ್ಲ. ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಒಂದು ಇತಿಹಾಸವಿದೆ. ಈ ಇತಿಹಾಸವನ್ನು ಮರೆತರೆ ನಮ್ಮ ದೇಶ ಮತ್ತೆ ಇನ್ನೂರು ವರ್ಷಗಳಷ್ಟು ಹಿಂದಕ್ಕೆ ಹೋದರೂ ಆಶ್ಚರ್ಯಪಡಬೇಕಾಗಿಲ್ಲ. ಕಾಕತಾಳೀಯ ಎಂಬಂತೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದೆ. ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣ ನವರು ೯೦೦ ವರ್ಷದ ಹಿಂದೆಯೇ ಕನ್ನಡದ ನೆಲ ದಲ್ಲಿ ಸಾಮಾಜಿಕ ನ್ಯಾಯದ ಪರವಾದ ದೊಡ್ಡ ಕ್ರಾಂತಿಯ ಕಿಡಿ ಹೊತ್ತಿಸಿದ್ದರು.

‘ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ| ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ, ಕೂಡಲ ಸಂಗಮದೇವ ನಿಮ್ಮ ಮನೆಯ
ಮಗನೆಂದೆನಿಸಯ್ಯಾ’ ಈ ರೀತಿಯ ನೂರಾರು ವಚನಗಳ ಮೂಲಕ ಕಾಯಕ, ದಾಸೋಹ ಪರಿಕಲ್ಪನೆಯನ್ನು ಹುಟ್ಟುಹಾಕಿ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮಹಾಮನೆ ನಿರ್ಮಾಣ ಮಾಡಿದವರು ಬಸವಣ್ಣ. ಇದರ ಜತೆಗೆ ಸಾರ್ವಜನಿಕ ಜೀವನದಲ್ಲಿ ಇರುವ ನಾವುಗಳು ಪ್ರತಿಕ್ಷಣವೂ ಡಾ.ಬಾಬಾ
ಸಾಹೇಬ್ ಅಂಬೇಡ್ಕರ್ ಅವರ ಈ ಮಾತನ್ನು ನೆನಪಿನಲ್ಲಿ ಇಟ್ಟು ಕೊಳ್ಳಲೇಬೇಕು. ‘ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು’
ಎಂದಿದ್ದರು ಅಂಬೇಡ್ಕರ್. ಅವರು ಬುದ್ಧ, ಬಸವಣ್ಣನವರ ಪರಿಕಲ್ಪನೆಯನ್ನು ಸರಕಾರದ ನೀತಿಯಾಗಿಸಿದವರು.

ಬಾಬಾ ಸಾಹೇಬರು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಅತ್ಯಂತ ಸರಳವಾಗಿ ಸಾಮಾಜಿಕ ನ್ಯಾಯದ ಬಗ್ಗೆ ಹೀಗೆ ವಿವರಿಸಿದ್ದಾರೆ: ‘ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದು. ಕಿಂಚಿತ್ತೂ ಭೇದ ಮಾಡದೆ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಂವಿಧಾನಾತ್ಮಕ ಪರಿಹಾರದ ಹಕ್ಕು, ಶೋಷಣೆಯ ವಿರುದ್ಧ ಹೋರಾಡುವ ಹಕ್ಕನ್ನು ನೀಡಲಾಗಿದೆ. ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಕರ್ತವ್ಯ ಗಳನ್ನು ನೀಡಲಾಗಿದೆ’.

ನಾನು ಬಾಲ್ಯ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕೆಲಸ ಕಾರ್ಯಗಳನ್ನು ನೋಡಿ ಬೆಳೆದವನು. ನಾನು ರಾಜಕೀಯಕ್ಕೆ ಪದಾ ರ್ಪಣೆ ಮಾಡುವ ವೇಳೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರ ಗೊಳ್ಳುತ್ತಿದ್ದ ಉಚ್ಛ್ರಾಯ ಸ್ಥಿತಿ ಎನ್ನಬಹುದು. ಶ್ರೀಮತಿ ಇಂದಿರಾ ಗಾಂಧಿ ಅವರ ‘ಉಳುವ ವನೆ ಭೂಮಿಯ ಒಡೆಯ’ ಯೋಜನೆಯ ಫಲವಾಗಿ ಕೋಟ್ಯಂತರ ಕುಟುಂಬಗಳು ಭೂಮಿಯನ್ನು ಪಡೆದಿದ್ದವು. ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರ ಕನಸಿಗೆ ಬೆನ್ನೆಲುಬಾಗಿ ನಿಂತರು. ಅರಸು ಅವರ ಕಾಲದ ಜನತಾ ಮನೆ ಯೋಜನೆ ಬಗ್ಗೆ ಸಣ್ಣ ಉದಾಹರಣೆ ನೀಡುವು ದಾದರೆ. ೧೯೭೨-೭೩ ರಲ್ಲಿ ೮೫ ಲಕ್ಷ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡುವ ಮೂಲಕ ಪ್ರಾರಂಭ ವಾದ ಸೂರು ನೀಡುವ ಯೋಜನೆ ಕ್ರಾಂತಿ ಸೃಷ್ಟಿ
ಸಿತು.

ಅಂಕಿ-ಅಂಶಗಳ ಪ್ರಕಾರ ೧೯೭೧- ೧೯೮೧ರ ಅವಽಯಲ್ಲಿ ಕರ್ನಾಟಕದಲ್ಲಿ ಎದ್ದು ನಿಂತ ಮನೆಗಳ ಸಂಖ್ಯೆ ೩೧,೦೪,೦೭೩. ಅರಸು ಅವರು ಜಾರಿಗೆ ತಂದ ಉದ್ಯೋಗ ಭರವಸೆಯ ಯೋಜನೆಯು, ೨೦೦೫ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ ಜಾರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಗೆ ಸ್ಪೂರ್ತಿ. ಜೀತವಿಮುಕ್ತಿ, ಮಲ ಹೊರುವ ಪದ್ಧತಿಯ ನಿಷೇಧ, ಗ್ರಾಮೀಣ ಬಡವರ ಸಾಲಮನ್ನಾ ಯೋಜನೆ, ನಗರ ಕೊಳಚೆ ಪ್ರದೇಶ ನಿರ್ಮೂಲನೆಗೆ ಕೊಳಚೆ ನಿರ್ಮೂಲನ ಮಂಡಳಿ ಸ್ಥಾಪನೆ, ಬಡವರಿಗೆ ಮತ್ತು ಬೇರೆ ಬೇರೆ ವೃತ್ತಿ ಸಮುದಾಯಗಳಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ರಸ್ತೆ ಬದಿಯಲ್ಲಿ ಚಮ್ಮಾರಿಕೆಗೆ ಲಿಡ್ಕರ್ ಸಂಸ್ಥೆ ಮೂಲಕ ನೆರವು, ಭಿಕ್ಷಾಟನೆ ನಿರ್ಮೂಲನಕ್ಕೆ ಕ್ರಮ, ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪನೆ,
ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಗಳ ಸ್ಥಾಪನೆ ಸೇರಿದಂತೆ ಇನ್ನೂ ಅನೇಕ ಕಾರ್ಯ ಕ್ರಮಗಳು ಜಾರಿ ಯಾದವು. ನನ್ನ ರಾಜಕೀಯ ಗುರುಗಳಾದ ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕ
ಕಾರ್ಯಕ್ರಮದ ಮೂಲಕ ಲಕ್ಷಾಂತರ ಗ್ರಾಮೀಣ ಯುವಕರು ಸರಕಾರಿ ಕೆಲಸ ಪಡೆಯಲು ಕಾರಣರಾದರು.

ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಕಾರಣ ರಾಜ್ಯದ ಬಹುತೇಕ ಕುಟುಂಬಗಳಲ್ಲಿ ಎಂಜಿನಿಯರ್, ವೈದ್ಯರು ಉದಯಿಸಿದರು. ಎಸ್.ಎಂ.ಕೃಷ್ಣ ಅವರ ಐಟಿ ಕ್ರಾಂತಿಯಿಂದಾಗಿ ಹಳ್ಳಿಹೈದರು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ೨೦೧೩-೧೮ರ ಅವಧಿಯಲ್ಲಿ ಸಿದ್ದ ರಾಮಯ್ಯ ಅವರ ನೇತೃತ್ವದಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಗರ್ಭಿಣಿ ಸ್ತ್ರೀಯರಿಗೆ ಮಾತೃಪೂರ್ಣ ಯೋಜನೆ ಸೇರಿದಂತೆ
ಹಿಂದೆಂದೂ ಕಾಣದಂಥ ಅಭೂತಪೂರ್ವ ಯೋಜನೆಗಳನ್ನು ನೀಡಲಾಯಿತು.

ವೈಜ್ಞಾನಿಕವಾಗಿ ಜಾತಿಗಣತಿ ನಡೆಸಲು ಮುನ್ನಡಿ ಇಟ್ಟಿದ್ದೇ ನಮ್ಮ ಸರಕಾರ. ಗೋಪಾಲಕೃಷ್ಣ ಅಡಿಗರ ಕವಿತೆ ನಮ್ಮ ಸರಕಾರದ ಗ್ಯಾರಂಟಿ ಯೋಜನೆ ಗಳ ಆಶಯವನ್ನೇ ಪ್ರತಿಧ್ವನಿಸುತ್ತದೆ. ‘ಇರುವೆಲ್ಲ ವನು ಎಲ್ಲ ಜನಕೆ ತೆರವಾಗಿಸುವ, ಸಮಬಗೆಯ ಸಮಸುಖದ ಸಮದುಃಖದ, ಸಾಮರಸ್ಯದ
ಸಾಮಗಾನ ಲಹರಿಯ ಮೇಲೆ, ತೇಲಿ ಬರಲಿದೆ ನೋಡು, ನಮ್ಮ ನಾಡು!’ ಎಂದು ಸಾಗುತ್ತದೆ ಆ ಸಾಲು. ಪ್ರಸ್ತುತ ಇಡೀ ಭಾರತವೇ ಕರ್ನಾಟಕ ಮಾದರಿಯ ಕಡೆಗೆ ತಿರುಗಿ ನೋಡುತ್ತಿದೆ.

‘ಫ್ರೀಬೀಸ್’ ಎಂದು ಆಡಿಕೊಂಡವರೇ ಅದರ ಫಲಾನುಭವಿಗಳಾಗಿದ್ದಾರೆ. ಆದರೆ ಇಂದು ಕೇವಲ ೯ ತಿಂಗಳಲ್ಲಿ ೧.೫ ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ. ೨೦೨೪- ೨೫ರಲ್ಲಿ ೫೨,೦೦೦೯ ಕೋಟಿ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಗೌರವ ಸಲ್ಲಿಸುವುದು ಎಂದರೆ ಇದೇ ಅಲ್ಲವೇ? ಬಾಬಾ ಸಾಹೇಬರ ನೇತೃತ್ವದಲ್ಲಿ ಸಂವಿಧಾನ ರಚನೆಗೆ ಜವಾಹರಲಾಲ್ ನೆಹರು ಅವರು
ಬದ್ಧತೆ ತೋರಿದ ಕಾರಣಕ್ಕೆ ನೀರು, ಅನ್ನ, ಸೂರು ಎಲ್ಲರಿಗೂ ಸಿಗುವಂತಾಗಿದೆ. ಇಲ್ಲದಿದ್ದರೆ ಎಲ್ಲರಂತೆ ಓಡಾಡು ವಂತಿರಲಿಲ್ಲ, ಅಕ್ಷರದ ಗಂಧ ಗಾಳಿಯೂ ತಾಕುತ್ತಿರಲಿಲ್ಲ.

ಕಾಲಗರ್ಭದಲ್ಲಿ ಬಹುದೂರ ಸಾಗಿ ಬಂದಿದ್ದೇವೆ. ಈಗ ಹೊಸ ತಲೆಮಾರಿಗೆ ನಮ್ಮ ಇತಿಹಾಸವನ್ನು ನೆನಪಿಸುವ, ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಎನ್ನುವ ಸಾಲುಗಳನ್ನು ಯುವ ಜನರು ಗುನುಗಬೇಕಿದೆ. ಕೊನೆಯದಾಗಿ ಹೇಳುವುದಾದರೆ ಯುಗದ ಕವಿ, ಜಗದ ಕವಿ ಕುವೆಂಪು ಅವರ ಈ ಸಾಲು ಗಳು ಪ್ರತಿಯೊಬ್ಬರ ಎದೆಯಲ್ಲಿ ಪ್ರತಿಧ್ವನಿಸಬೇಕಿದೆ: ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃ ಕಶ್ಚಿತವಲ್ಲ! ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ, ನೀರೆಲ್ಲವೂ
ತೀರ್ಥ!’

(ಲೇಖಕರು ಉಪಮುಖ್ಯಮಂತ್ರಿಗಳು)

Leave a Reply

Your email address will not be published. Required fields are marked *

error: Content is protected !!