Saturday, 27th July 2024

ಆಂಬುಲೆನ್ಸ್-ಗ್ಯಾಸ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ: ರೋಗಿ ಸಾವು, ಚಾಲಕನಿಗೆ ಗಾಯ

ಶಿರಸಿ/ ಹೊನ್ನಾವರ: ಆಂಬುಲೆನ್ಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಆಂಬುಲೆನ್ಸ್ ನಲ್ಲಿದ್ದ ರೋಗಿ ಮೃತಪಟ್ಟು, ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಗೋಕರ್ಣದ ರಾಮಕೃಷ್ಣ ಗಣಪತಿ ಪ್ರಸಾದ (70) ಅಪಘಾತದಲ್ಲಿ ಮೃತಪಟ್ಟವರು. ಹೊನ್ನಾವರ ರಾಮತೀರ್ಥ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.
ಗೋಕರ್ಣದಿಂದ ಹೆಚ್ಚಿನ ಚಿಕಿತ್ಸೆಗೆ ರೋಗಿಯನ್ನು ಹೊನ್ನಾವರ ಖಾಸಗಿ ಆಸ್ಪತ್ರೆಗೆ ಒಯ್ಯುತ್ತಿದ್ದ ಆಂಬುಲೆನ್ಸ್, ಮಂಗಳೂರು ಕಡೆಯಿಂದ ಕಾರವಾರ ಕಡೆ ಹೊರಟಿದ್ದ ಗ್ಯಾಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಆಂಬುಲೆನ್ಸ್ ನುಜ್ಜುಗುಜ್ಜಾಗಿದೆ.
ಆಂಬುಲೆನ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯವಾಗಿ, ಅವರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಂತರ ಗ್ಯಾಸ್ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಹೊನ್ನಾವರ ಸಿಪಿಐ ಎಸ್. ಆರ್.  ಶ್ರೀಧರ, ಪಿಎಸ್ಐ ಶಶಿಕುಮಾರ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಉಂಟಾದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು.
ಹೊನ್ನಾವರ ಠಾಣೆಯಲ್ಲಿ ಟ್ಯಾಂಕರ್ ಚಾಲಕ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!