ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದ್ದು, ಚಿತ್ರ ನಿರ್ಮಾಪಕ, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಗುರುವಾರ ಪ್ರಚಾರ ನಡೆಸಿದರು.
ಕಳೆದ ಬುಧವಾರ ನಟಿ ಖುಷ್ಬೂ ಸುಂದರ್ ಪ್ರಚಾರ ನಡೆಸಿದ್ದರು. ರೋಡ್ ಶೋ ಮೂಲಕ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದರು.
ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ದರ್ಶನ್ ಅವರು ಮುನಿರತ್ನ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಚುನಾವಣಾ ಅಖಾಡಕ್ಕೆ ಇಳಿಯಲಿದ್ದು, ನಾಳೆ ಶಿರಾದಲ್ಲಿ, ನಾಡಿದ್ದು ಆರ್.ಆರ್.ನಗರದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಯಡಿಯೂರಪ್ಪ ಶಿರಾದ ಮದಲೂರು, ಶಿರಾ ಟೌನ್ನಲ್ಲಿ ಪ್ರಚಾರ ಮಾಡಲಿದ್ದು ಇದೇ 31ರಂದು ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಕೈಗೊಳ್ಳಲಿದ್ದಾರೆ.
ನ.3ರಂದು ಆರ್.ಆರ್.ನಗರ ಉಪ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರ ಭಾನುವಾರ ಅಂತ್ಯವಾಗಲಿದೆ. ಆದ್ದರಿಂದ, ವಿವಿಧ ರಾಜಕೀಯ ಪಕ್ಷಗಳು ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿವೆ.