Tuesday, 23rd April 2024

ಮಕ್ಕಳಿಗೆ ಶಿಕ್ಷಣ ಕೊಡುವಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿಗೊಳಿಸಿ

ಚಿತ್ರದುರ್ಗ: ಶಾಸನಗಳನ್ನು ಕೆತ್ತಿದ ಸಮುದಾಯ ಪೆನ್ನು ಹಿಡಿಯಲಿಲ್ಲ, ಪ್ರಸ್ತುತ ದಿನಮಾನಗಳಲ್ಲಿ ಪೆನ್ನು ಹಿಡಿದು ಶಿಕ್ಷಣವಂತರಾಗಲು ಶ್ರಮಿಸಬೇಕು ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಶ್ರೀಗಳ ೩೬ನೇ ವಸಂತೋತ್ಸವದ ಅಂಗವಾಗಿ ಚಿತ್ರ ದುರ್ಗ ಸರ್ಕಾರಿ ನೌಕರರ ಸಂಘದಿಂದ ಹಮ್ಮಿ ಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ನೌಕರರ ಚಿಂತನ-ಮಂಥನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಮುದಾಯವು ಅಭಿವೃದ್ಧಿ ದಿಕ್ಕಿನಲ್ಲಿ ಜಾಗೃತ ವಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡುವಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿಗೊಳಿಸಿ ಸುಧಾರಣೆಯಂತ ಸಮುದಾಯವನ್ನು ಕೊಂಡೊಯ್ಯಬೇಕೆಂದು ಹೇಳಿದರು.

ಹಿಂಡು ಹಿಂಡಾಗಿ ಬದುಕಬೇಕು ಒಂಟಿ ಒಂಟಿಯಾಗಿ ಇರಬಾರದು, ಹಿಂಡಿನಿಂದ ಒಗ್ಗಟ್ಟು ಸಾಧ್ಯ. ಬೆಳ್ಳಿ ಬಂಗಾರದ ಕಿರೀಟಗಳನ್ನು ಮತ್ತು ದೇಣಿಗೆಯನ್ನು ನೀಡುವು ದಕ್ಕಿಂತ ಹಿಂಡು ಹಿಂಡಾಗಿ ಸಮುದಾಯ ಒಗ್ಗಟ್ಟಿನಿಂದ ಗುರು ವಂದನಾ ಮಾಡುವುದೇ ಉತ್ತಮವಾದ ಕಾರ್ಯ ಎಂದರು.

ಭೋವಿ ಸಮುದಾಯವೆಂದರೆ ಶ್ರಮಿಕವರ್ಗ, ಕಾರ್ಮಿಕ ವರ್ಗ, ರೈತ ವರ್ಗ ಹೀಗ್ಗೆ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡುವ ಅಲೆಮಾರಿ ಸಮುದಾಯ ಶಿಲಾ ಯುಗದಿಂದಲೂ ಇಂದಿನವರೆಗೂ ತನ್ನದೇ ಆದ ಸಂಸ್ಕೃತಿಯನ್ನು ಉಳಿಸಿ, ಬೆಳಿಸಿಕೊಂಡು ಬರುತ್ತಿದೆ. ಕೃಷಿ ಸಂಸ್ಕೃತಿ ಕೈಗೊಂಡವರು ಕೃಷಿ ಕಾರ್ಮಿಕರಾದರು, ಕಟ್ಟಡ ಕೆಲಸ ಮಾಡುವವರು ಕಟ್ಟಡ ಕಾರ್ಮಿಕರಾದರು. ಗಣಿಯಲ್ಲಿ ಕೆಲಸಮಾಡುವವರು ಗಣಿ ಕಾರ್ಮಿಕರಾದರು, ಪ್ರದೇಶದಿಂದ ಪ್ರದೇಶಕ್ಕೆ ಶ್ರಮಿಕ ವೃತ್ತಿಯಲ್ಲಿ ಬೆಳೆದು ಬಂದ ಸಮುದಾಯಕ್ಕೆ ನೆಲೆಯಿಲ್ಲದೆ, ಶಿಕ್ಷಣವಿಲ್ಲದೆ, ಅತಂತ್ರ ಪರಿಸ್ಥಿತಿ ಇದೆ ಎಂದು ಹೇಳಿದರು.

ಉಳಿ ಸುತ್ತಿಗೆಗಳನ್ನು ಬಳಸಿ ಶಾಸನಗಳನ್ನು ಬಳಸಿ ಶಾಸನಗಳನ್ನು ರಚಿಸಿ ಕಲ್ಲುಬಂಡೆಗಳನ್ನು ಹೊಡೆದು ಉಳಿ ಸುತ್ತಿಗೆ ವಾರಸುದಾರರಾಗಿಯೇ ಉಳಿದರು. ಅರೆ ಅಲೆಮಾರಿಗಳಾಗಿ ತಮ್ಮ ಜೀವನ ಶೈಲಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳದೇ ಅದೇ ಸ್ಥಿತಿಯಲ್ಲಿ ಮುಂದುವರೆದಿದ್ದಾರೆ ಎಂದರು.

ಇತಿಹಾಸ ಕಾಲ ಗರ್ಭದಲ್ಲಿ ಸ್ವಾವಲಂಭಿಗಳಾದ ಭೋವಿಗಳು, ರಾಜರು, ಗೌಡರು, ಪಟೇಲರು, ಹಿರಿಯರು ಆಗಿ ಗುರುತಿಸಿಕೊಂಡು ಬಂದವರು ಧಾರ್ಮಿಕ ಸ್ಥಿತಿಯಲ್ಲಿ ಬದಲಾಗದೆ ಮೂಡನಂಬಿಕೆ, ಕಂದಾಚಾರಗಳನ್ನು ಆಚರಣೆಗಳಿಂದ ಹೊರಬಾರಬೇಕಾಗಿದೆ. ಭಾವಾನತ್ಮಕ ಜೀವಿಗಳಾಗಿ ಬದುಕಿದ್ದಾರೆ ಮೂಢ ನಂಬಿಕೆಯ ಕಾರಣಕ್ಕೆ ಕೆರೆಗಳ ನಿರ್ಮಾಣದ ಸಂದರ್ಭದಲ್ಲಿ ನರಬಲಿ, ಪ್ರಾಣಿ ಬಲಿಗಳನ್ನು ನೀಡಿದ ಸಮುದಾಯ ಧಾರ್ಮಿಕ ನಂಬಿಕೆಯಿಂದ ಹೊರಬಾರ ಬೇಕೆಂದು, ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಸಂಸ್ಕೃತಿ ಮತ್ತು ಧಾರ್ಮಿಕ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಸಮುದಾಯ ಸಂಘಟನೆಯಾಗಬೇಕು. ಶಿಕ್ಷಣದಿಂದ ಮಾತ್ರ ಸಮುದಾಯ ಸಂಘಟನೆಯಾಗಲು ಸಾಧ್ಯವೆಂದು ಹೇಳಿದರು.

ಉಪವಿಭಾಗಾಧಿಕಾರಿಗಳಾದ ಚಂದ್ರಯ್ಯ ಮಾತನಾಡಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮುದಾಯ ಸಂಘಟನೆಯಾದರೆ ಯಶಸ್ವಿ ಸಾಧ್ಯ. ಆ ಸಂಘಟನೆಯನ್ನು ಇತರೆ ಸಮುದಾಯದ ಸಂಘಟನೆಗಳೊಂದಿಗೆ ಕಟ್ಟಬೇಕೆಂದರು. ಸಂಘಟನೆಗಳನ್ನು ಕಟ್ಟುವ ಕಾರ್ಯ ಮಾಡಬೇಕೆ ವಿನಃ ಹೊಡೆಯುವ ಕಾರ್ಯವನ್ನು ಮಾಡಬಾರದು ಎಂದು ಹೇಳಿದರು. ಸಂಘಟನೆಯದ್ದೇ ಆದ ಚೌಕಟ್ಟನ್ನು ಹಾಗೂ ಷರತ್ತು ಮತ್ತು ನಿಬಂಧನೆಗಳನ್ನು ಮೀರದೆ ಸೇವೆ ಮಾಡಿದಲ್ಲಿ ಮಾಡಿದ ಕಾರ್ಯದಲ್ಲಿ ಮತ್ತು ಇಲಾಖೆಯಲ್ಲಿ ಉತ್ತಮ ಹೆಸರುಗಳಿಸಬಹುದು ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದ ಸೇವೆಯ ಜೊತೆಗೆ ಕುಟುಂಬದ ಅಭಿವೃದ್ಧಿಯು ಮರೆಯಬಾರದು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಿಕ್ಕಂದವಾಡಿ ಮಂಜುನಾಥ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಸಮಾಜದ ಅಭಿವೃದ್ಧಿಯನ್ನು ಮರೆತಾಗ ಆಡಳಿತ ಯಂತ್ರ ಉತ್ತಮವಾಗಿ ನಡೆಯಲು ಸಾಧ್ಯವಾಗುತ್ತದೆ. ಮಾಡುವ ಕಾರ್ಯದಲ್ಲಿ ಪ್ರಮಾಣಿಕತೆ ಮತ್ತು ನೈತಿಕತೆ ಇಟ್ಟುಕೊಂಡು ಸೇವೆ ಮಾಡಿದಾಗ ಗುರಿಮುಟ್ಟಲು ಸಾಧ್ಯ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಶಿವರುದ್ರಯ್ಯ, ಕೋಲಾರ ನೌಕರರ ಸಂಘದ ಅಧ್ಯಕ್ಷರಾದ ರತ್ನಯ್ಯ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!