ಹೊಸದುರ್ಗ: ಕೆಎಸ್ಆರ್ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ 70 ಲಕ್ಷ ರೂಪಾಯಿ ವಂಚಿಸಿದ್ದ ಐವರನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಬಂಧಿಸಲಾಗಿದೆ.
ಹೊಸದುರ್ಗ ನಿವಾಸಿ ಅಭಿಷೇಕ್ ಅ.9 ರಂದು ಪೊಲೀಸರಿಗೆ ನೀಡಿದ್ದ ದೂರು ಆಧರಿಸಿ ಬಾದಾಮಿ ತಾಲೂಕಿನ ಕುಟುಕನಕೇರಿ ಗ್ರಾಮದ ಮಹಮದ್ ಅಲ್ಲಾ ಸಾಬ್, ಸುಭಾಷ್ ಕಾಲೋನಿಯ ಬಸವರಾಜ್, ಬಾಗಲಕೋಟೆಯ ವೀರಭದ್ರಪ್ಪ ಸೋಮಲಿಂಗಪ್ಪ ಅರಗಿನ ಶೆಟ್ಟಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದ ಮಂಜುನಾಥ್ ಹಾಗು ಬೆಂಗಳೂರಿನ ಆರ್ಪಿಸಿ ಲೇಔಟ್ನ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ವಿಕಾಸಸೌಧ, ವಿಧಾನಸೌಧದಲ್ಲಿ ಉನ್ನತಾಧಿಕಾರಿಗಳು ಪರಿಚಯವಿದ್ದಾರೆ. ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿ ಉದ್ಯೋಗಾ ಕಾಂಕ್ಷಿಗಳನ್ನು ನಂಬಿಸಿ ಹಣ ಪಡೆದಿದ್ದಾರೆ. ಹಂಗರಿ ಬೊಮ್ಮನಹಳ್ಳಿ ಕೆಎಸ್ಆರ್ಟಿಸಿ ಕಚೇರಿ ಬಳಿ ಸಂದರ್ಶನ ಮಾದರಿಯಲ್ಲಿ ನಾಟಕ ಮಾಡಿದ್ದಾರೆಂದು ತಿಳಿದುಬಂದಿದೆ.
2019ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರಿ ನಿರೀಕ್ಷಕರು, ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಇದನ್ನೇ ಬಂಡವಾಳ ಮಾಡಿ ಕೊಂಡು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದರು.
12 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಕಾರು, ನಕಲಿ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆಯ ಲಾಗಿದೆ.