Saturday, 27th July 2024

ಹಾವೇರಿಯಲ್ಲಿ ಹೆಲ್ಮೆಟ್​ ಜಾಗೃತಿ ಅಭಿಯಾನ ಆರಂಭ

ಹಾವೇರಿ: ಜಿಲ್ಲೆಯಲ್ಲಿ ಅಪಘಾತದಿಂದ ದ್ವಿಚಕ್ರ ವಾಹನ ಸವಾರರ ಸಾವು ಸಂಭವಿಸುತ್ತಿವೆ. ತಡೆಗಟ್ಟಲು ಜಿಲ್ಲೆಯಲ್ಲಿ ಹೆಲ್ಮೆಟ್​ ಜಾಗೃತಿ ಅಭಿಯಾನ ಆರಂಭವಾಗಿದೆ.

ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ಸಂಖ್ಯೆ 200ಕ್ಕೂ ಅಧಿಕ ಇದೆ. ಅದರಲ್ಲೂ ಹೆಚ್ಚಿನ ಸಾವು ಬೈಕ್ ಸವಾರರದ್ದಾಗಿದೆ.

2021ರಲ್ಲಿ ರಸ್ತೆ ಅಪಘಾತದಲ್ಲಿ 1,236 ಜನ ಗಾಯಗೊಂಡರೆ ಸಾವನ್ನಪ್ಪಿದವರ ಸಂಖ್ಯೆ 230 ಇತ್ತು. 2022ರಲ್ಲಿ 1385 ಜನ ರಸ್ತೆ ಅಪಘಾತಗಳಲ್ಲಿ ಗಾಯ ಗೊಂಡರೆ ಮೃತಪಟ್ಟವರ ಸಂಖ್ಯೆ 284. ಹಾಗೇ 2023 ರಲ್ಲಿ ಅಕ್ಟೋಬರ್​ರೆಗೆ 1,134 ಜನ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, 228 ಜನರು ಸಾವನ್ನ ಪ್ಪಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಬೈಕ್​ ಸವಾರರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹದಿಹರೆಯದವರೇ ಹೆಚ್ಚು ಅನ್ನೋದು ಕಳವಳ ಮೂಡಿಸಿದೆ. ರಸ್ತೆ ಅಪಘಾತದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಮಾತ್ರ ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಇದನ್ನರಿತಿರುವ ಹಾವೇರಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಇದೀಗ ರಸ್ತೆ ಅಪಘಾತ ನಿಯಂತ್ರಿಸಲು ಮತ್ತು ಸಾವುಗಳನ್ನು ತಡೆಯಲು ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿರುವ ಸುಮಾರು 19 ಪೊಲೀಸ್ ಠಾಣೆಗಳಲ್ಲಿ 60 ಪಾಯಿಂಟ್ ಮಾಡಿ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. 60 ಪಾಯಿಂಟ್‌ಗಳಲ್ಲಿ ಮುಂಜಾನೆ 9 ರಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ದ್ವಿಚಕ್ರವಾಹನ ಓಡಿಸುತ್ತಿದ್ದರೆ ಅವರ ತಲೆ ಮೇಲೆ ಹೆಲ್ಮೆಟ್ ಇರಲೇಬೇಕು. ಇಲ್ಲದಿದ್ದರೆ ದಂಡಹಾಕುವಂತೆ ಖಡಕ್ಕಾಗಿಯೇ ಸೂಚಿಸಿದ್ದಾರೆ. ಆರಂಭದಲ್ಲಿ ಕೆಲ ದಿನ ಹೆಲ್ಮೆಟ್ ಇಲ್ಲದೆ ಬರುತ್ತಿದ್ದ ಸವಾರರಿಗೆ ಎಚ್ಚರಿಕೆ ನೀಡಿ ಕಳಿಹಿಸುತ್ತಿದ್ದ ಪೊಲೀಸ್ ಇಲಾಖೆ ಸಿಬ್ಬಂದಿ ಇದೀಗ ಹೆಲ್ಮೆಟ್ ಇಲ್ಲದ ಸವಾರರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ವಿಶೇಷವಾಗಿ ಹೆಲ್ಮೆಟ್ ಹಾಕಿಕೊಂಡು ಬರುವ ಬೈಕ್​ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ಪೊಲೀಸರು ಯಮ, ಚಿತ್ರಗುಪ್ತ ಮತ್ತು ಕಿಂಕರ ರೂಪಕದ ಮೂಲಕ ಬೈಕ್​ ಸವಾರರಿಗೆ ಹೆಲ್ಮೆಟ್ ಜಾಗೃತಿ ಮೂಡಿಸು ತ್ತಿದ್ದಾರೆ. ರಸ್ತೆಯಲ್ಲಿ ನಿಲ್ಲುವ ಯಮರಾಯ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ಕೊರಳಿಗೆ ನೇಣುಹಾಕಿ ಕರೆದೊಯ್ಯುವ ರೂಪಕದ ಮೂಲಕ ಅರಿವು ಮೂಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!