ಬಾಗಲಕೋಟೆ : ಮಳೆ ಕಡಿಮೆ ಆದರೂ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳಿಂದ ನೀರು ಹರಿಯಬಿಟ್ಟಿರುವುದರಿಂದ ಭಾನುವಾರವೂ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಗೆ 18 ಸಾವಿರ ಕ್ಯೂಸೆಕ್ ನೀರು ಹರಿಸ ಲಾಗಿದೆ.
ಘಟಪ್ರಭಾ ನದಿಯ ಅಬ್ಬರಕ್ಕೆ ಮುಧೋಳ ತಾಲ್ಲೂಕಿನ ನಂದಗಾಂವ ಗ್ರಾಮ ನಡುಗಡ್ಡೆಯಾಗಿ ಬದಲಾಗಿದೆ. ನಂದಗಾಂವ ಹಾಗೂ ಸುತ್ತಲಿನ ತೋಟಗಳಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದ 55 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮಿರ್ಜಿ, ಒಂಟಿಗೋಡಿ, ಚನಾಳದಲ್ಲೂ ಘಟಪ್ರಭೆಯ ಆರ್ಭಟಕ್ಕೆ ನದಿ ತಟದ ನೂರಾರು ಎಕರೆ ಹೊಲಗಳಲ್ಲಿ ಬೆಳೆದ ಕಬ್ಬು, ಗೋವಿನ ಜೋಳ ಜಲಾವೃತ ವಾಗಿವೆ. ನದಿ ದಂಡೆಯಲ್ಲಿ ವಾಸವಿದ್ದ 10ಕ್ಕೂ ಹೆಚ್ಚು ಕುಟುಂಬ ಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ತಳಕವಾಡದ ವೀರಭದ್ರೇಶ್ವರ ಗುಡಿ, ಎಸ್.ಕೆ.ಆಲೂರಿನಲ್ಲಿ ಶಾಲಾ ಕಟ್ಟಡದಲ್ಲಿ ನಡೆಯುತ್ತಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಜಲಾವೃತವಾಗಿವೆ. ತಳೇವಾಡ ರಲ್ಲಿ ಜನವಸತಿಗೂ ನೀರು ನುಗ್ಗಿದ್ದು, ಕಳೆದ ವರ್ಷ ಕಟ್ಟಿಸಿಕೊಟ್ಟಿದ್ದ ಆಸರೆ ಮನೆಗಳಿಗೆ ನಿವಾಸಿಗಳನ್ನು ಕಳುಹಿಸಲಾಗಿದೆ.