Friday, 26th July 2024

ವಿಶ್ವವಾಣಿ ವರದಿ ಪರಿಣಾಮ – ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ

ವಿಶ್ವವಾಣಿ ವರದಿ ಪರಿಣಾಮ

ಕೊಟ್ಟೂರು: ಪಟ್ಟಣದ ಯಾವುದೇ ಮಾರ್ಗವಾಗಿ ಸಂಚರಿಸಿದರೂ ಹದಗೆಟ್ಟ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದೆ ಎಂದು ಆಗ ೧೧ರಂದು ವಿಶ್ವವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.

ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡ್ಡವಾಗಿದ್ದ ೨೪*೭ ಪೈಪ್ ಲೈನ್ ಕಾಮಗಾರಿ ಕೆಲಸ ಆರಂಭಿಸಿದ್ದಾರೆ. ಪತ್ರಿಕೆಯೊಂದಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರು ಆದೋನಿ ಮಾತನಾಡಿ, ಹಲವು ವರ್ಷಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ಕೆಲಸ ಸಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದವು. ಜೊತೆಗೆ ವಿಶ್ವವಾಣಿ ಪತ್ರಿಕೆಯಲ್ಲಿ ಈ ಸಮಸ್ಯೆ ಕುರಿತು ವರದಿಯನ್ನು ಪ್ರಕಟಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಅತಿ ಬೇಗನೆ ಈ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

೨೪*೭ ಕುಡಿಯುವ ನೀರು ಯೋಜನೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಳಂಬವಾಗಿತ್ತು. ಲೋಕೋಪ ಯೋಗಿ ಇಲಾಖೆಯಿಂದ ಅನುಮತಿ ಸಿಕ್ಕಿದ್ದು ಇನ್ನು ಎರಡು ತಿಂಗಳಲ್ಲಿ ಕೊಟ್ಟೂರು ಪಟ್ಟಣದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಆರಂಭವಾಗಲಿದೆ ಎಂದು ೨೪*೭ ಯೋಜನೆಯ ಸಹಾಯಕ ಇಂಜಿನಿಯರ್ ಶುಭಾಷ್ ಮಾಳಗಿ ಹೇಳಿದರು.

ಅತ್ಯಂತ ಪರಿಣಾಮಕಾರಿಯಾಗಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ ಸಾರ್ವಜನಿಕರಿಂದ ಮತ್ತು ವಿವಿಧ ಸಂಘ ಸಂಸ್ಥೆಗಳು ಪತ್ರಿಕೆಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!