ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಅಪಾರ ಪ್ರತಿಭೆಗಳನ್ನು ಹೊಂದಿರುವ ನಗರ ಬೆಂಗಳೂರು. ಈ ಕಾರಣದಿಂದಾಗಿಯೇ ಬೆಂಗಳೂರನ್ನು ಐಟಿ ಸಿಟಿ ಎಂದು ಕರೆಯಲಾಗುತ್ತದೆ.
ಇದು ರಾಜ್ಯದ ಪಾಲಿಗೆ ಮಾತ್ರವಲ್ಲ ಇಡೀ ರಾಷ್ಟ್ರದ ಪಾಲಿಗೆ ಹೆಮ್ಮೆಯ ಸಂಗತಿ. ಜಗತ್ತಿನ ಪ್ರಮುಖ 9 ತಂತ್ರಜ್ಞಾನ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸಹ ಮಹತ್ವದ ಸ್ಥಾನ ಪಡೆದಿದೆ ಎಂಬುದು ಹೆಮ್ಮೆಯ ಸಂಗತಿ. 1999ರಲ್ಲಿ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಿದರು. ಇದರಿಂದ ಬೆಂಗಳೂರು ಮತ್ತಷ್ಟು ಗಮನ ಸೆಳೆಯಲು ಕಾರಣವಾಯಿತು.
ಇದೀಗ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವೂ ಸಹ ಇದೇ ರೀತಿಯಾಗಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ನೂತನ ಐಟಿ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಐಟಿ ಕ್ಷೇತ್ರವನ್ನು ವಿಸ್ತರಿಸುವ ಹಾಗೂ ಅಭಿವೃದ್ಧಪಡಿಸಲು ಮುಂದಾಗಿದೆ. ಹೊಸ ಐಟಿ ನೀತಿ ಮೂಲಕ 2020ರಿಂದ 2025ರ ವೇಳೆಗೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಗರಿಷ್ಠ 60ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಹೊಂದಲಾಗಿದೆ.
ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಕರ್ನಾಟಕದ ಹೆಸರನ್ನು ಜಗತ್ತಿನ ಭೂಪಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸುವಲ್ಲಿ ಇಂಥ ಬೆಳವಣಿಗೆಗಳು ಪರಿಣಾಮಕಾರಿಯಾಗಿದೆ. ಡಿಜಿಟಲ್ ಕ್ರಾಾಂತಿಯಲ್ಲಿ ಮಹತ್ವದ ಮನ್ನಣೆ ಪಡೆದುಕೊಂಡಿರುವ ಬೆಂಗಳೂರು ತಂತ್ರಜ್ಞಾನ ಕ್ಷೇತ್ರದ ಎಲ್ಲ ರೀತಿಯ ಬದಲಾವಣೆಗೆ ಬೇಗನೆ ಹೊಂದಿಕೊಳ್ಳುವ ಗುಣಹೊಂದಿದೆ ಎನ್ನಲಾಗುತ್ತದೆ. ಇಂಥ ಉತ್ತಮ ಹೆಗ್ಗಳಿಕೆ ತಕ್ಕಂತೆ ಇದೀಗ ಅವಕಾಶವನ್ನು ಸಹ ಒದಗಿಸುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ನಿರೀಕ್ಷಿಸಬಹುದು.