ಚೀನಾದಿಂದ ಹೊರಬಂದ ಕೈಗಾರಿಕೆಗಳನ್ನು ಆಕರ್ಷಿಸಲು ವಿದ್ಯುನ್ಮಾನ ವಿನ್ಯಾಸದ ವ್ಯವಸ್ಥೆೆ ಹಾಗೂ ತಯಾರಿಕಾ ವಲಯದಲ್ಲಿ
ವಿಶೇಷ ರಿಯಾಯಿತು ಕುರಿತು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕಾರಣದಿಂದ ರಾಜ್ಯದಲ್ಲಿ ಇದೀಗ ಅಭಿವೃದ್ಧಿ ವಿಚಾರ ಮಹತ್ವ ಪಡೆದುಕೊಂಡಿದ್ದು, ಮುಖ್ಯವಾಗಿ ಉದ್ಯೋಗ ಸೃಷ್ಟಿಯ ವಿಚಾರ ಹೆಚ್ಚು ಪ್ರಸ್ತಾಪಗೊಳ್ಳುತ್ತಿದೆ.
ನೂತನ ಕೈಗಾರಿಕಾ ನೀತಿಯಡಿ ಬೆಂಗಳೂರಿನಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಹೊಂದಲಾಗಿದೆ. ಇದೆಲ್ಲವೂ ಬೆಳವಣಿಗೆ ಹಾಗೂ ಉದ್ಯೋಗ ಅಪೇಕ್ಷಿತರ ಪಾಲಿಗೆ ಸಿಹಿ ಸುದ್ದಿ. ಈ ಯೋಜನೆಯ ಅನುಷ್ಠಾನದ ಮೂಲಕ ದೇಶದ ಟ್ರಿಲಿಯನ್ ಡಾಲರ್ ಆರ್ಥಿಕ ಪ್ರಗತಿಗೆ ಶೇ.30ರಷ್ಟು ಮಾಹಿತಿ ತಂತ್ರಜ್ಞಾನದಿಂದಲೇ ಕೊಡುಗೆ ನೀಡಲು ನಿರ್ಧರಿಸಲಾಗಿದೆ. ಆದರೆ, ಇಂಥ ಮಹತ್ವದ ಬೆಳವಣಿಗೆಯ ಹಿನ್ನೆೆಲೆಯಲ್ಲಿಯೇ ಕರ್ನಾಟಕ ರಾಜ್ಯ ಉದ್ಯಮಸ್ನೇಹಿ ರ್ಯಾಾಂಕಿಂಗ್ ಪಟ್ಟಿಯ ಸ್ಥಾನದಲ್ಲಿ ಕುಸಿತ ಕಂಡಿದೆ.
ಇದು ರಾಜ್ಯದ ಪಾಲಿಗೆ ಆಘಾತಕಾರಿ ಬೆಳವಣಿಗೆ. ಕೇಂದ್ರ ಸರಕಾರ ಪ್ರಕಟಿಸುವ ಉದ್ಯಮ ಸ್ನೇಹಿ ರಾಜ್ಯಗಳ ರ್ಯಾಾಂಕಿಂಗ್
ಪಟ್ಟಿಯಲ್ಲಿ ಕರ್ನಾಟಕ 17ನೇ ಸ್ಥಾನ ಪಡೆದಿದೆ. ಈ ಹಿಂದೆ 8ನೇ ಸ್ಥಾನದಲ್ಲಿದ್ದ ರಾಜ್ಯ ಇದೀಗ 2019ನೇ ಸಾಲಿನ ಪಟ್ಟಿಯಲ್ಲಿ 9ಸ್ಥಾನಗಳಷ್ಟು ಕುಸಿತ ಕಂಡಿದೆ. ಇದು ಉದ್ಯಮ ವಲಯದಲ್ಲಿನ ಆಘಾತಕಾರಿ ಬೆಳವಣಿಗೆ. ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಬಹಳಷ್ಟು ನಿರೀಕ್ಷೆೆಗಳನ್ನು ಹೊಂದಿದ್ದು, ರಾಜ್ಯದ ಪ್ರಗತಿಯನ್ನು ಕಾತುರದಿಂದ ಎದುರು ನೋಡುತ್ತಿರುವ ವೇಳೆಯಲ್ಲಿ ಇಂಥದೊಂದು ಬೆಳವಣಿಗೆ ಅಚ್ಚರಿ ಮೂಡಿಸಿದೆ. ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳುವ ಪಟ್ಟಿಯಲ್ಲಾದರೂ ಉತ್ತಮ ಸ್ಥಾನವನ್ನು ಪಡೆಯುವಲ್ಲಿ ಸಕಲ ಪ್ರಯತ್ನಗಳು ಕಾರ್ಯಾರಂಭ ಗೊಳ್ಳಬೇಕಿದೆ.