ಡ್ರಗ್ಸ್ ಪ್ರಕರಣದಿಂದಾಗಿ ಕನ್ನಡ ಚಿತ್ರರಂಗ ಇದೀಗ ಮಹತ್ವ ಪಡೆದುಕೊಂಡಿದೆ. ಚಿತ್ರರಂಗದ ಕೆಲವು ಕಲಾವಿದರ ಮಾದಕ ಪದಾರ್ಥಗಳ ಸೇವನೆ ಆರೋಪದಿಂದಾಗಿ ಇಡೀ ಚಿತ್ರರಂಗ ಕಳಂಕವನ್ನು ಎದುರಿಸುತ್ತಿದೆ.
ಕನ್ನಡ ಚಿತ್ರರಂಗಕ್ಕಿದು ಸಂದಿಗ್ಧತೆಯ ಕಾಲ. ಒಂದೆಡೆ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ಮಾದಕ ವ್ಯಸನದ ಆರೋಪದಿಂದ ಕಳಂಕ ಉಂಟಾಗಿದೆ. ಈ ಬೆಳವಣಿಗೆಯಲ್ಲಿ ಕನ್ನಡಚಿತ್ರರಂಗ ಚೇತರಿಕೆ ಕಾಣಲು ಬಹಳಷ್ಟು ಶ್ರಮಿಸಬೇಕಿದೆ. ಜತೆಗೆ ಸರಕಾರಗಳಿಂದಲೂ ಸಮರ್ಪಕ ಪ್ರೋತ್ಸಾಹ ದೊರೆಯಬೇಕಿರುವುದು ಅಗತ್ಯ. ದಿನೇ ದಿನೇ ಮಹತ್ವದ ಪಡೆದುಕೊಳ್ಳುತ್ತಿರುವ ಡ್ರಗ್ಸ್ ಮಾಫಿಯಾದ ಪ್ರಕರಣವು ಕನ್ನಡಚಿತ್ರರಂಗದೊಂದಿಗಿನ ನಂಟಿನ ಮೂಲಕ ಅಪಕೀರ್ತಿ ತಂದೊಡ್ಡುತ್ತಿದೆ.
ಇದರ ನಡುವೆ ಚಿತ್ರರಂಗದ ಸಾಲುಸಾಲು ಸಮಸ್ಯೆಗಳು ಮರೆಯಾಗಿರುವುದು ದುರಂತದ ಸಂಗತಿ. ಕನ್ನಡ ಚಿತ್ರರಂಗಕ್ಕೆ ಘನತೆ ಒದಗಿಸಿದ ಖ್ಯಾತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ಸ್ಥಾಪನೆಯು ದಶಕ ಕಳೆದರೂ, ಇನ್ನೂ ಭೂಮಿಪೂಜೆಯ ಹಂತದಲ್ಲಿದೆ. ಚಿತ್ರಮಂದಿರಗಳು ತೆರೆಯದಿರುವುದರಿಂದ ಸಿನಿಮಾ ಮಂದಿರಗಳ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಫೈರಸಿ ಹಾಗೂ ಡಬ್ಬಿಂಗ್ ಹಾವಳಿಯಿಂದ ನಿರ್ಮಾಪಕರು ಕಂಗಾಲಾಗಿದ್ದಾರೆ. ಬಹುಕಾಲದ ಬೇಡಿಕೆಗಳಾಗಿರುವ ಏಕಗವಾಕ್ಷಿ ಪದ್ಧತಿ, ವ್ಯಾಟ್, ಜಿಎಸ್ಟಿ ಮರುಪಾವತಿ ಹಾಗೂ ಮುಖ್ಯವಾಗಿ ಚಿತ್ರನಗರಿ ನಿರ್ಮಾಣದ ವಿಷಯಗಳು ಭರವಸೆಗಳಾಗಿಯೇ ಉಳಿದಿವೆ. ಉಳಿದಂತೆ ಕಲಾವಿದರು, ತಂತ್ರಜ್ಞರು, ಸ್ಟುಡಿಯೋಗಳು, ಲ್ಯಾಬ್ಗಳು ಆರ್ಥಿಕ ಸಂಕಷ್ಟದಿಂದ ಸಂಕಷ್ಟಕ್ಕೆ ಗುರಿ ಯಾಗಿವೆ. ಈ ಸಂದರ್ಭದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರ ಬದುಕಿನ ಭದ್ರತೆಯೇ ಚಿತ್ರೋದ್ಯಮದ ಪಾಲಿಗೆ ಬಹುದೊಡ್ಡ ಸಮಸ್ಯೆ ಮತ್ತು ಸವಾಲಾಗಿ ಪರಿಣ ಮಿಸಿದೆ. ಇಷ್ಟೊೊಂದು ಸಾಲು ಸಾಲು ಸಮಸ್ಯೆಗಳನ್ನು ಹೊಂದಿರುವ ಕನ್ನಡ
ಚಿತ್ರರಂಗವು ಸಮಸ್ಯೆ ನಿವಾರಣೆಯ ಹಿತದೃಷ್ಟಿಯಿಂದ ಮಹತ್ವ ಪಡೆಯದೆ, ಮಾದಕ ವ್ಯಸನದ ಕಾರಣದಿಂದಾಗಿ ಗಮನ ಸೆಳೆಯುತ್ತಿರುವುದು ದುರಂತ.