Thursday, 19th September 2024

CM’s Bengaluru Rounds: ಸಿಎಂ ಬೆಂಗಳೂರು ಸಿಟಿ ರೌಂಡ್ಸ್‌; ರಸ್ತೆ, ಮೂಲ ಸೌಕರ್ಯ ಕಾಮಗಾರಿಗಳ ವೀಕ್ಷಣೆ

CM's Bengaluru Rounds

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ನಗರದ ವಿವಿಧೆಡೆ ಗುರುವಾರ ಭೇಟಿ ನೀಡಿ(CM’s Bengaluru Rounds), ರಸ್ತೆ ಅಭಿವೃದ್ಧಿ ಮತ್ತು ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದರು. ಹೆಬ್ಬಾಳದ ಬಳಿ ಬಿಡಿಎ ಮೇಲ್ಸೇತುವೆ ಕಾಮಗಾರಿ, ಹೊರವರ್ತುಲ ರಸ್ತೆಯ ಕರಿಯಣ್ಣನ ಪಾಳ್ಯದ ಬಳಿ ಸರ್ವೀಸ್ ರಸ್ತೆಯಲ್ಲಿ ಡಾಂಬರೀಕರಣ, ಹೆಣ್ಣೂರು ಜಂಕ್ಷನ್ ಬಳಿ‌ ಡಾಂಬರೀಕರಣ, ಕೆ.ಆರ್ ಪುರ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ನಕ್ಷೆಗಳ ವೀಕ್ಷಣೆ ನಡೆಸಿದರು. ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ಮೆಟ್ರೋ ಮುಖಾಂತರ ವಿಧಾನಸೌಧಕ್ಕೆ ಪಯಣಿಸಿದರು.

ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ ಸುಮಾರು 1344.84 ಕಿ.ಮೀ. ಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಗುಂಪಿಗೆ ಸೇರಿದ್ದು, ಉಳಿದ ಸುಮಾರು 11533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆ ಗುಂಪಿಗೆ ಸೇರಿವೆ.

ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ “ಸಾಂಪ್ರದಾಯಿಕವಾಗಿ” ಬೆಸ್ಕಾಂ ಕೇಬಲ್, ನೀರು ಸರಬಾರಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್‌ಗ್ಯಾಸ್‌ನ ಕೊಳವೆಗಳು, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆ ಗುಂಡಿಗಳು ಉದ್ಭವಿಸುತ್ತಿವೆ.

ಈ ರಸ್ತೆ ಗುಂಡಿಗಳನ್ನು ಅತೀ ಶೀಘ್ರವಾಗಿ ದುರಸ್ತಿ ಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ ಬ್ಯಾಚ್ ಮಿಕ್ಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಬ್ಯಾಚ್ ಮಿಕ್ಸ್ ಘಟಕದಿಂದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಉದ್ಭಿಸುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿರುತ್ತದೆ. ಅದೇ ರೀತಿ ವಲಯ ಮಟ್ಟದ ರಸ್ತೆಗಳನ್ನು ವಾರ್ಡ್‌ವಾರು ವಿಭಾಗಗೊಳಿಸಲಾಗಿದ್ದು, ಪ್ರತಿ ವಾರ್ಡ್‌ಗೆ 15 ಲಕ್ಷಗಳಂತೆ ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಮಾಡಲಾಗಿದೆ.

ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ರಸ್ತೆ ಗುಂಡಿ ಉದ್ಭಿಸಿದ ಕೆಲವೇ ಸಮಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಲಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿಗಳು ಉದ್ಭವಿಸುತ್ತಿದ್ದು, ಮಳೆಗಾಲದಲ್ಲಿಯೂ ರಸ್ತೆ ಗುಂಡಿ ಮುಚ್ಚಲು ತಂಪಾದ ಡಾಂಬರು ಮಿಶ್ರಣ ಪದ್ಧತಿಯನ್ನು ತಯಾರಿಸುವ ಘಟಕವನ್ನು ಸಹ ಬಿಬಿಎಂಪಿ ವತಿಯಿಂದಲೆ ಸ್ಥಾಪಿಸಲಾಗಿದೆ.

ರಸ್ತೆ ಅಗೆತದಿಂದ ಆಗುವ ರಸ್ತೆ ಗುಂಡಿಗಳನ್ನು ಆಯಾ ಸಂಸ್ಥೆಗಳೇ ಅಂದರೆ ಬೆಸ್ಕಾಂ, ಕೆ.ಪಿ.ಟಿ.ಸಿ.ಎಲ್, ಗೇಲ್‌ಗ್ಯಾಸ್ ರವರುಗಳೇ ಮುಚ್ಚುವಂತೆ ಆದೇಶ ನೀಡಲಾಗಿದ್ದು, ರಸ್ತೆ ಗುಂಡಿಗಳಿಗೆ ಕಡಿವಾಣ ಹಾಕಲಾಗಿರುತ್ತದೆ. ಬಿಡಬ್ಲ್ಯುಎಸ್‌ಎಸ್‌ಬಿ ಸೇರಿ ಇತರೆ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಲಾಗಿದ್ದು, ರಸ್ತೆ ಅಗೆಯುವ, ರಸ್ತೆ ದುರಸ್ತಿ ಗೊಳಿಸುವ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲಾಗಿದೆ.

ರಸ್ತೆ ಅಗೆತವನ್ನು ತಡೆಗಟ್ಟಲು ಪ್ರಮುಖ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿಯ ಜತೆಗೆ ಡಕ್ಟ್‌ಗಳ ನಿರ್ಮಾಣವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳ ಉದ್ಭವಿಕೆಗೆ ಕಡಿವಾಣ ಹಾಕಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Waqf: ವಕ್ಫ್ ತಿದ್ದುಪಡಿಯಿಂದ ಅಲ್ಪಸಂಖ್ಯಾತ ಆರ್ಥಿಕ ಮೂಲಕ್ಕೆ ಪೆಟ್ಟು

ಕೈಗೊಂಡಿರುವ ಪರಿಹಾರ ಕ್ರಮಗಳು

1.ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಮತ್ತು ದುರಸ್ತಿಪಡಿಸಲು ಹಾಗೂ ನಿಗದಿತ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚಲಾದ ಕಾರ್ಯವಿಧಾನದ ಬಗ್ಗೆ ನಿಗಾ ವಹಿಸಲು “ರಸ್ತೆ ಗುಂಡಿ ಗಮನ” ಎಂಬ ನೂತನ ಮೊಬೈಲ್ ಆ್ಯಪ್‌ ಅನ್ನು ಸೃಜಿಸಲಾಗಿದೆ.

2.ರಸ್ತೆ ಗುಂಡಿಗಳಿಗೆ ಕಡಿವಾಣ ಹಾಕಲು 2023-24ನೇ ಸಾಲಿನಲ್ಲಿ ಒಟ್ಟು 1700 ಕೋಟಿ ರೂ. ಅನುದಾನದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ವೈಟ್ ಟಾಪಿಂಗ್ ರಸ್ತೆ ನಿರ್ಮಾಣದಿಂದ ದೀರ್ಘ ಬಾಳಿಕೆಯ ಮತ್ತು ಕಡಿಮೆ ನಿರ್ವಹಣೆ ವೆಚ್ಚದ ರಸ್ತೆಗಳನ್ನು ನಿರ್ಮಿಸಿದಂತಾಗುತ್ತದೆ.

3. ಬೆಂಗಳೂರು ನಗರದಲ್ಲಿ ಒಟ್ಟು 1611 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, 459 ಕಿ.ಮೀ. ಉದ್ದದ ರಸ್ತೆ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಪ್ರಸ್ತುತ ವರ್ಷದಲ್ಲಿಯೇ ಈ 459 ಕಿ.ಮೀ. ಉದ್ದದ ರಸ್ತೆಯನ್ನು 659.71 ಕೋಟಿಗಳಲ್ಲಿ ಡಾಂಬರಿಕರಣವನ್ನು ನವಂಬರ್ ತಿಂಗಳಿನಿಂದ ಕೈಗೆತ್ತಿಗೊಳ್ಳಲಾಗುವುದು ಮತ್ತು ಮಾರ್ಚ್ ಅಂತ್ಯದವರೆಗೆ ಪೂರ್ಣಗೊಳಿಸಲಾಗುವುದು.

4.ರಸ್ತೆ ಗುಂಡಿ ಗಮನ ಆ್ಯಪ್‌ನಲ್ಲಿ ಇಲ್ಲಿಯವರೆಗೂ 1376 ರಸ್ತೆ ಗುಂಡಿಗಳನ್ನು ಪೂರ್ಣಗೊಳಿಸಲಾಗಿದ್ದು, 2684 ರಸ್ತೆ ಗುಂಡಿಗಳ ತ್ವರಿತ ದುರಸ್ತಿಗೊಳಿಸಲು ಕ್ರಮವಹಿಸಲಾಗಿದೆ. ವಾರ್ಡ್ ಮಟ್ಟದ ರಸ್ತೆಗಳಲ್ಲಿನ ಗುಂಡಿಗಳನ್ನು ದುರಸ್ತಿಗೊಳಿಸಲು ಪ್ರತಿ ವಾರ್ಡ್‌ಗೆ 15 ಲಕ್ಷಗಳನ್ನು ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.

5. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳನ್ನು ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಸ್ವಂತ ಬ್ಯಾಚ್ ಮಿಕ್ಸ್‌ ಘಟಕದಿಂದ ಡಾಂಬರು ಪೂರೈಸಲಾಗುತ್ತಿದ್ದು, ಸೆ. 20ರೊಳಗಾಗಿ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.