ಚೆನ್ನೈ: ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ವಿ ಶಾಂತಾ ಸೋಮವಾರ ನಿಧನರಾದರು.
ತೀವ್ರ ಉಸಿರಾಟದ ತೊಂದರೆ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಶಾಂತಾ ಅವರನ್ನು ಚೆನ್ನೈನ ಆಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರ ಹೃದಯಾಘಾತದಿಂದಾಗಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಂತಾ ಅವರ ದೇಹವನ್ನು ಗಾಂಧಿ ನಗರದ ಹಳೆಯ ಕ್ಯಾನ್ಸರ್ ಸಂಸ್ಥೆಗೆ ಸ್ಥಳಾಂತರಿಸಲಾಗಿದ್ದು. ಮಂಗಳವಾರ ಸಂಜೆ ಬೆಸೆಂಟ್ ನಗರದಲ್ಲಿ ಅಂತ್ರಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.
ಶಾಂತಾ ಅವರು, ಕ್ಯಾನ್ಸರ್ ಆರೈಕೆ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ಹೆಸರುವಾಸಿಯಾಗಿದ್ದರು. ಮಾರ್ಚ್ 11, 1927 ರಂದು ಜನಿಸಿದ ಡಾ. ಶಾಂತಾ ಅವರು, ಕ್ಯಾನ್ಸರ್ ಗುಣಪಡಿಸುವಿಕೆ, ತಡೆಗಟ್ಟುವಿಕೆ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.