ವಿಧಾನ ಪರಿಷತ್ನಲ್ಲಿ ಸದಸ್ಯರು ಪಕ್ಷಭೇದ ಮರೆತು ಜಾತಿಗಣತಿಯನ್ನು ಬಹಿರಂಗಪಡಿಸುವಂತೆ ಒಕ್ಕೂರಲಿನಿಂದ ಆಗ್ರಹಿಸಿ ದ್ದಾರೆ. ಇದರಿಂದ ಜಾತಿ ಗಣತಿಯ ವಿಷಯ ಮತ್ತೊಮ್ಮೆ ಮಹತ್ವಪಡೆದುಕೊಂಡಿದೆ.
ರಾಜ್ಯದ ಹಲವು ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಗುರುತಿಸುವ ಸಲುವಾಗಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೈಗೊಂಡಿದ್ದ ಸಮೀಕ್ಷೆಯ ವರದಿ ಇಂದಿಗೂ ಅಧಿಕೃತವಾಗಿ ಬಹಿರಂಗಗೊಳ್ಳದಿರುವುದು ವಿಪರ್ಯಾಸ. ಸಮೀಕ್ಷೆಯ ವರದಿಯನ್ನು ಪ್ರಶ್ನಿಸಿ ಕೆಲವರು ಪಿಐಎಲ್ ಸಲ್ಲಿಸಿದ್ದರಿಂದ ಸಿಜೆ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಸಮೀಕ್ಷೆ ಪೂರ್ಣಗೊಂಡಿದ್ದು, ಅಂಕಿ – ಅಂಶಗಳ ಡಿಜಿಟಲೀಕರಣವೂ ಮುಗಿದಿರುವುದಾಗಿ ತಿಳಿದುಬಂದಿತ್ತು.
ಹೊಸ ಅಧ್ಯಕ್ಷರ ನೇಮಕದ ವಿಳಂಬದಿಂದಾಗಿ ಸಮೀಕ್ಷೆ ವರದಿಯ ಬಹಿರಂಗ ವಿಳಂಬವಾಗುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. 2015 ರಲ್ಲಿಯೇ ವರದಿ ಪೂರ್ಣಗೊಂಡಿದ್ದರೂ ಕೆಲವು ತೊಡಕುಗಳ ಕಾರಣದಿಂದಾಗಿ ವರದಿ ಬಹಿರಂಗ ವಿಳಂಬವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಹಲವು ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರೂಪಿಸಿದ ವರದಿ ಇಂದಿಗೂ ಬಹಿರಂಗಗೊಳ್ಳದಿರು ವುದು ಸರಕಾರದ ನಿರ್ಲಕ್ಷ್ಯತೆಗೆ ಸಾಕ್ಷಿ.
ವರದಿಯನ್ನು ಶೀಘ್ರವಾಗಿ ಬಹಿರಂಗಗೊಳಿಸುವಂತೆ ಹೋರಾಟಗಳು ನಡೆದರೂ ಭರವಸೆಯಲ್ಲಿಯೇ ಹಲವು ವರ್ಷಗಳು ಕಳೆದಿವೆ. ಇದೀಗ ವಿಧಾನ ಪರಿಷತ್ನಲ್ಲಿ ಮತ್ತೊಮ್ಮೆ ಈ ವಿಷಯ ಪ್ರಸ್ತಾಪಗೊಳ್ಳುವುದರೊಂದಿಗೆ ಮಹತ್ವಪಡೆದಿದ್ದು, ಈಗಲಾದರೂ ವರದಿ ಬಹಿರಂಗಗೊಳ್ಳುವ ಅಗತ್ಯವಿದೆ.