Friday, 20th September 2024

ಗೋಪಾಲ್ ಪಾಠನೆಂಬ ಧೀರ ಅನುಕರಣೀಯನೇ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಬಡಿದಾಟದಲ್ಲಿ ನಿರತರಾದ ಉಭಯ ಧರ್ಮೀಯರಿಬ್ಬರನ್ನು ದರದರನೆ ಎಳೆದು ತಂದು ಕಲ್ಲಿನಿಂದ ಅವರ ಬೆರಳನ್ನು ಜಜ್ಜಿ, ಇಬ್ಬರ ರಕ್ತವೆರಡನ್ನೂ ಬೆರೆಸಿ ಮನುಷ ರೆಲ್ಲರ ರಕ್ತ ಒಂದೇ, ಅದರಲ್ಲಿ ಧರ್ಮವೇನು ಬಂತು ಎಂದು ನಾಯಕ ನಟ ನಾನಾ ಪಟೇಕರ್ ನೆರೆದ ಗುಂಪನ್ನು ಆಕ್ರೋಶದಿಂದ ಕೇಳುವ ಹಿಂದಿ ಚಿತ್ರದ ದೃಶ್ಯ ನೆನಪಿದೆಯೇ? ಈ ತುಣುಕನ್ನು ಮಾಧ್ಯಮದಲ್ಲಿ ತೋರಿಸುತ್ತಾ ವ್ಯಾಪಕವಾಗಿ ಪ್ರಚಾರ ಕೊಟ್ಟರೆ ಕೋಮು ಸೌಹಾರ್ದತೆಯ ಬೇರುಗಳು ಭದ್ರವಾಗುತ್ತವೆ ಎಂದು ಭರವಸೆ ಹುಟ್ಟಿಸುವ ತಾಕತ್ತು ದೃಶ್ಯಕ್ಕಿದೆ.

ಆದರೆ ಅದು ಎಸ್ಕೇಪಿಸ್ಟ್ ಸಿನೆಮಾ ಸೃಷ್ಟಿಸುವ ಕ್ಷಣಿಕ ಭಾವುಕತೆಯಷ್ಟೆ ಎಂದು ವಾಸ್ತವ ಎಚ್ಚರಿಸುತ್ತದೆ. ವಾಸ್ತವದ ಚೌಕಟ್ಟಿನಲ್ಲಿ ದೃಶ್ಯದ ಆಶಯವನ್ನು ಒರೆಗೆ ಹಚ್ಚಿದಾಗ ಮನುಷ್ಯನ ರಕ್ತ ಒಂದೇ ಅಲ್ಲ ಎನ್ನುವುದು ತಿಳಿಯುತ್ತದೆ. ಮತಾಂತರವೆಂಬ ವ್ಯಾಪಕ ಪಿಡುಗು ತಲೆದೋರುವ ಮುನ್ನ ಭಾರತದಲ್ಲಿ ಇದ್ದದ್ದು ಒಂದೇ ರಕ್ತ. ಆ ಪಿಡುಗಿಗೆ ಸಾಂಸ್ಥಿಕ ರೂಪ ಸಿಕ್ಕಿ ಯಾವುದೋ ಕಾಲವಾಗಿದೆ. ಅದು ಬಂಗಾಳದಲ್ಲಿ ಮಾತ್ರವಲ್ಲ, ಕರ್ನಾಟಕವೂ ಸೇರಿದಂತೆ ಎಲ್ಲೆಡೆಯೂ ಕರೋನಾ ದಂತೆಯೇ ಅನಿಯಂತ್ರಣವಾಗಿದೆ. ನಾವು ಕರೋನಾದಿಂದಲೂ ಪಾಠ ಕಲಿಯಲಿಲ್ಲ, ಮತಾಂತರದ ಅನಿಷ್ಟದಿಂದಲೂ ಪಾಠ ಕಲಿಯಲಿಲ್ಲ.

ಇತಿಹಾಸದಿಂದ ಪಾಠ ಕಲಿಯದಿದ್ದರೆ ಅದು ಮರುಕಳಿಸುತ್ತದೆ, ಅನ್ನುತ್ತಾರೆ. ಅದು ಮಮತಾ ಬ್ಯಾನರ್ಜಿಗೆ ಅನ್ವಯಿಸುವುದಿಲ್ಲ. ಆಕೆ ಒಂದು ಪಾಠವನ್ನು ಕಲಿತಿದ್ದಾಳೆ. ಅದೇನೆಂದರೆ, ಹಿಂದೂಗಳ ಚರಮ ಗೀತೆಯನ್ನು ಹಾಡಲು ಆಯಕಟ್ಟಿನ ಜಾಗಗಳಲ್ಲಿ ಮುಸ್ಲಿಂ ಪೊಲೀಸರನ್ನು ನೇಮಿಸುವುದು. ಆಕೆ ಮನನ ಮಾಡಿದ ಪಶ್ಚಿಮ ಬಂಗಾಳದ ಇತಿಹಾಸ, ಅದರ ರಕ್ತಸಿಕ್ತ ಇತಿಹಾಸವನ್ನು ಮುಂದುವರೆಸುತ್ತಿದೆ. ವಿಧಾನ ಸಭಾ ಸದಸ್ಯ ತನ್ನ ಕ್ಷೇತ್ರದ ಪೊಲೀಸ್ ಠಾಣೆಗಳಲ್ಲಿ ತನಗೆ ಬೇಕಾದ ಇನ್ಸ್ಪೆಕ್ಟರನ್ನು ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯ ಶುರು ಆದದ್ದು ರಾಮಕೃಷ್ಣ ಹೆಗಡೆ ಅಧಿಕಾರದವಧಿಯಲ್ಲಲ್ಲ.

ಸದುದ್ದೇಶದಿಂದ ಅವರು ಪರಿಚಯಿಸಿದ ಈ ಪರಿಪಾಠ ಕಾಲಾಂತರದಲ್ಲಿ ಠಾಣೆಗಳು ವಿವಿಧ ಜಾತಿಗಳ ಸಂಘಗಳಾಗಿ ರೂಪಾಂತರಗೊಳ್ಳುವುದರಲ್ಲಿ ಪರ್ಯಾವ ಸಾನಗೊಂಡಿತು. ಆದರೆ, ಈ ವಿಕೃತಿ ಮೊದಲು ಕಂಡುಬಂದದ್ದು ಪಶ್ಚಿಮ ಬಂಗಾಳದಲ್ಲಿ. ಅದಾಗಿ ನಿನ್ನೆ ಆಗಸ್ಟ್ 16ಕ್ಕೆ 75 ವರ್ಷಗಳಾದವು. ಅಮೃತ
ಮಹೋತ್ಸವವೆನ್ನಲಾಗುವುದಿಲ್ಲ, ಮಹಾ ಮೃತೋತ್ಸವವೆನ್ನಬೇಕು. ದೇಶದ ವಿಭಜನೆಗೆ ವ್ಯಕ್ತವಾದ ಹಿಂದೂ ಪ್ರತಿರೋಧಕ್ಕೆ ಕೆರಳಿದ ಮುಸ್ಲಿಂ ಲೀಗ್ ನಾಯಕ ಜಿನ್ನಾ ನೇರ ಕ್ರಮಕ್ಕೆ ಕರೆ ನೀಡುತ್ತಾನೆ. ಅದನ್ನು ಕೊಲ್ಕೊತಾದಲ್ಲಿ ಜಾರಿಗೆ ತರುವುದು ಬಂಗಾಳದ ಅಂದಿನ ಮುಖ್ಯಮಂತ್ರಿ ಹುಸೇನ್ ಶಾಹಿದ್ ಸುಹ್ರವರ್ದಿ.

ರಂಜಾನಿನ ಹದಿನೆಂಟನೇ ದಿನ ಹಿಂದೂಗಳ ಹುಟ್ಟಡಗಿಸಲು ಶುರುವಿಕ್ಕುತ್ತಾನೆ. ಪ್ರವಾದಿ ಮೊಹಮದ್ ಅನ್ಯರಿಂದ ಮೆಕ್ಕಾವನ್ನು ವಶಪಡಿಸಿಕೊಂಡ ಈ ಸುದಿನ ದಂದೇ ನಾವು ಹಿಂದೂಗಳ ರುಂಡವನ್ನು ಚೆಂಡಾಡಬೇಕು ಎಂದು ತನ್ನ ಜನರನ್ನು ಛೂ ಬಿಡುತ್ತಾನೆ. ಬಹುಸಂಖ್ಯಾತ (ಪ್ರತಿಶತ 64) ಕೊಲ್ಕೊತಾ ಹಿಂದೂಗಳ ರಕ್ತದೋಕುಳಿಗೆ ಮಸೀದಿಗಳಿಂದ ನಿರಂತರ ಕರೆ ನೀಡಲಾಗುತ್ತದೆ. ಆಗಸ್ಟ್ 16 ಮತ್ತು 17 ಅಮಾಯಕ ಹಿಂದೂಗಳ ಮಾರಣ ಹೋಮ ನಡೆಯುತ್ತದೆ. ಹಿಂದೂ ಹೆಣ್ಣುಮಕ್ಕಳು ತಾಲಿಬಾನ್ ಪೂರ್ವಜರ ಪಶುಪ್ರವೃತ್ತಿಗೆ ಆಹುತಿಯಾಗುತ್ತಾರೆ. ಅಂಥವರ ಸಂಖ್ಯೆ 10000. ಪೈಶಾಚಿಕ ಮತಾಂಧರಿಂದ ಕೊಲೆ, ಅತ್ಯಾಚಾರ, ಮಾನಭಂಗ, ಸುಲಿಗೆ, ಲೂಟಿ, ದೊಂಬಿಗಳು ಅವ್ಯಾಹತವಾಗಿ ನಡೆಯುತ್ತದೆ.

ತಲೆ ಕಡಿಯುವುದು, ಕಾಲು ಮುರಿಯುವುದನ್ನು ತಡೆಯುವವರೇ ಇಲ್ಲ. ಎರಡೇ ದಿನಗಳಲ್ಲಿ ಉರುಳಿದ ಹಿಂದೂಗಳ ಸಂಖ್ಯೆಯನ್ನು ಸುಮಾರು ೫೦೦೦ದಿಂದ 7000 ಎಂದು ಅಂದಾಜು ಮಾಡಲಾಗುತ್ತದೆ. ದಾನವರ ದಾಳಿಗೆ ಸಿಗದೇ ಓಡುತ್ತಿದ್ದವರನ್ನು ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಹಾಕಲಾಗುತ್ತದೆ. ತಪ್ಪಿಸಿ ಕೊಳ್ಳಲು ದೋಣಿ ಏರುವವರನ್ನು ಬೆನ್ನತ್ತಿ ನೀರಿನಲ್ಲಿ ದೂಡಲಾಗುತ್ತದೆ. ಈ ಕಾರಣಕ್ಕೂ ದಮನಕ್ಕೆ ಒಳಗಾದವರ ನಿಖರವಾದ ಸಂಖ್ಯೆ ಸಿಕ್ಕಿಲ್ಲ. ಮೃಗಗಳ ಈ ದಾಳಿ ನಗರಾದ್ಯಂತ ನಡೆಯಬೇಕಾದರೆ ಪೊಲೀಸರದಾರೂ ಏನು ಮಾಡುತ್ತಿದ್ದರು? ಕೊಲ್ಕೊತಾವನ್ನು ಕಫೀರಮುಕ್ತಗೊಳಿಸುವ ಮುಸ್ಲಿಂ ಲೀಗಿನ ಉದ್ದೇಶವನ್ನು ಜಾರಿಗೊಳಿಸಲು ಆಕ್ರಮಣಕ್ಕೆ ಮುಂಚೆಯೇ ಬಂಗಾಳಿ ಹಿಂದೂಗಳು ಹೆಚ್ಚಾಗಿದ್ದ ಪೊಲೀಸ್ ಇಲಾಖೆಗೆ ಸಂಯುಕ್ತ ಪ್ರಾಂತ್ಯ (ಈಗಿನ ಉತ್ತರ ಪ್ರದೇಶ) ದಿಂದ
ಮುಸ್ಲಿಂ ಮತ್ತು ಪಠಾಣ ಪೊಲೀಸರನ್ನು ಆಮದು ಮಾಡಿಕೊಳ್ಳಲಾಗಿತ್ತು.

ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ರಕ್ಕಸ ಸುಹ್ರವರ್ದಿ ಸ್ವಯಂ ಹಾಜರಿದ್ದು ಆಕ್ರಮಣಕ್ಕೊಳಗಾದ ಹಿಂದೂಗಳ ರಕ್ಷಣೆಗೆ ಪೊಲೀಸರು ಧಾವಿಸದಂತೆ ಆದೇಶ ನೀಡುತ್ತಿದ್ದ.  ಲಾಗಾಯ್ತಿನಿಂದಲೂ ಮುಸ್ಲಿಂ ದಂಗೆಕೋರರಿಂದ ಆಕ್ರಮಣಕ್ಕೊಳಪಟ್ಟಿರುವ ಹಿಂದೂಗಳು ಕೊಲ್ಕೊತಾದಿಂದ ಕಾಲು ಕೀಳುತ್ತಾರೆ, ಹೈರಾಣಾಗಿರುವ ಅವರು ದೌರ್ಜನ್ಯಕ್ಕೆ ಪ್ರತಿರೋಧವೆಲ್ಲಿ ತೋರುತ್ತಾರೆ ಎಂಬುದು ಮುಸ್ಲಿಂ ಲೀಗಿನ ಲೆಕ್ಕಾಚಾರವಾಗಿತ್ತು. ಅದು ವಾಸ್ತವವೇ. ಹಾಗೆಂದೇ, ಲಕ್ಷಕ್ಕೂ ಮೀರಿ ಹಿಂದೂ ಗಳು ಉಟ್ಟಬಟ್ಟೆಯಲ್ಲಿ ಪಲಾಯನಮಾಡುತ್ತಾರೆ.

ಆದರೆ ಲೀಗ್ನ ಲೆಕ್ಕಾಚಾರವನ್ನು ತಪ್ಪಿಸುವುದು ಗೋಪಾಲ್ ಮುಖರ್ಜಿ (ಗೋಪಾಲ್ ಚಂದ್ರ ಮುಖ್ಯೋಪಾಧ್ಯಾಯ ಎಂದೂ ಕರೆಯಲಾಗುತ್ತದೆ) ಎಂಬ ಕಸಾಯಿ ಖಾನೆಯ ಒಡೆಯ. ಆತನ ಅಡ್ಡ ಹೆಸರು ಗೋಪಾಲ್ ಪಾಠ. ವಂಗ ಭಾಷೆಯಲ್ಲಿ ಪಾಠ ಪದದ ಅರ್ಥ ಮೇಕೆಗಳು. ಸ್ವಾತಂತ್ರ್ಯ ಹೋರಾಟದ ಕುಟುಂಬ ದಿಂದ ಬಂದ ಗೋಪಾಲ್ ಮುಸ್ಲಿಂ ದ್ವೇಷಿಯೇನಲ್ಲ. ಆತನ ಗಿರಾಕಿಗಳ ಪೈಕಿಯೇ ಸಾಕಷ್ಟು ಜನ ಮುಸ್ಲಿಮರರಿರುತ್ತಾರೆ. ಅವರಲ್ಲಿ ಅನೇಕರು ಅವರ ಗೆಳೆಯರು. ಎಗ್ಗಿಲ್ಲದೆ ನಡೆಯುವ ಹಿಂಸಾಚಾರಕ್ಕೆ ಪ್ರತಿರೋಧ ವ್ಯಕ್ತಪಡಿಸಲು ಹಿಂದೂ ಹುಡುಗರನ್ನು ಒಟ್ಟಿಗೆ ಸೇರಿಸುತ್ತಾರೆ. ಜಾತ್ಯಾತೀತವಾಗಿ ಒಗ್ಗೂಡುವ ಹಿಂದೂಗಳು ಮೂರನೇ ದಿನ ಪ್ರತ್ಯಾಕ್ರಮಣದಲ್ಲಿ ತೊಡಗುತ್ತಾರೆ. ಮುಸ್ಲಿಂ ಕೆಡುಕರನ್ನು ಸದೆಬಡಿಯುತ್ತಾರೆ. ಮಾರ್ವಾಡಿ ಜನಾಂಗ ಆರ್ಥಿಕ ನೆರವು ನೀಡಿದರೆ, ಕಮ್ಮಾರರು ಕತ್ತಿ, ಮಚ್ಚುಗಳನ್ನು ರಾತ್ರೋರಾತ್ರಿ ತಮ್ಮ ಕುಲುಮೆಗಳಲ್ಲಿ ತಯಾರಿಸುತ್ತಾರೆ.

ದಲಿತರೂ ಸೇರಿದಂತೆ ಉಳಿದೆಲ್ಲ ಹಿಂದೂಗಳೂ ಶಸ್ತ್ರ ಸನ್ನದ್ಧರಾಗಿ ಪ್ರತೀಕಾರಕ್ಕೆ ನುಗ್ಗುತ್ತಾರೆ. ಅಂತಹ ವಿಷಮ ಸ್ಥಿತಿಯಲ್ಲೂ ಮುಸ್ಲಿಂ ಹೆಂಗಸರು, ಮಕ್ಕಳು ಮತ್ತು ವೃದ್ಧರನ್ನು ಮುಟ್ಟಬಾರದೆಂಬ ಧಾರ್ಮಿಕ ನಿಲುವು ತಳೆಯಲಾಗುತ್ತದೆ. ಗೋಪಾಲ್ ನೇತೃತ್ವದ ಹಿಂದೂ ಸಾಹಸಿಗರ ತಿರುಗೇಟಿಗೆ ಮುಸ್ಲಿಮರು ಬೆಚ್ಚು ತ್ತಾರೆ. ಎರಡು ದಿನ ಅನುಭವಿಸಿದ ತಿರುಗೇಟಿನ ತೀವ್ರತೆಗೆ ನಲುಗಿದ ಅವರು ಶಾಂತಿ ಬಯಸಿ ಸಂಧಾನಕ್ಕೆ ಕಾತುರರಾಗುತ್ತಾರೆ.

ದಂಗೆಕೋರರ ಅತ್ಯಾಚಾರವನ್ನು ನಾಚಿಸುವಂತೆ ಕಾಂಗ್ರೆಸ್-ಕಮ್ಯುನಿಸ್ಟರಿಂದ ಆಕ್ರಮಣಕ್ಕೊಳಗಾದ ಇತಿಹಾಸದಲ್ಲಿ ಮುಸ್ಲಿಮರ ಈ ನರಮೇಧಕ್ಕಾಗಲೀ,
ಪೊಲೀಸರ ದ್ರೋಹಕ್ಕೆ ಒಳಗಾದ ಹಿಂದೂಗಳು ಆತ್ಮರಕ್ಷಣೆಗಾಗಿ ಒಗ್ಗೂಡಿ ನಡೆಸಿದ ಹೋರಾಟಕ್ಕಾಗಲೀ ಅವಕಾಶವಿಲ್ಲ. ಅಂದು ಗೋಪಾಲ್ ಪಾಠ ತನ್ನ ಪಡೆಯೊಂದಿಗೆ ಮುನ್ನುಗ್ಗಿ ಆವೇಶದಿಂದ ಕಾದಾಡದಿದ್ದರೆ ಅದಿನ್ನೆಷ್ಟು ಹಿಂದೂಗಳು ಜೀವ ತೆರಬೇಕಾಗುತ್ತಿತ್ತೊ. ಮುಸ್ಲಿಂ ಲೀಗ್ ಕಣ್ಣಿಟ್ಟಿದ್ದ ಕೊಲ್ಕೊತಾ ನಗರ ಮತ್ತು ಬಂಗಾಳದ ಒಂದೆರಡು ಸಂಪದ್ಭರಿತ ಜಿಲ್ಲೆಗಳು ಭಾರತದಿಂದ ಬೇರ್ಪಟ್ಟು ಪೂರ್ವ ಪಾಕಿಸ್ತಾನದ (ಬಾಂಗ್ಲಾದೇಶದ) ಪಾಲಾಗುತ್ತಿದ್ದವು.

ಅಂತಹ ಪರಾಕ್ರಮಿ ಗೋಪಾಲ್ ಪಾಠ ಮುಖರ್ಜಿಯನ್ನು ಪುಂಡನೆಂದು, ಆತನನ್ನು AWTV ಗಾಗಿ ಸಂದರ್ಶಿಸಿದ ಆಂಡ್ರೂ ವೈಟ್ಹೆಡ್ ಎಂಬ ಅಯೋಗ್ಯ ಪತ್ರಕರ್ತ
ಜರೆದಿದ್ದಾನೆ. ನಿಷ್ಠೆಯಿಂದ ಒಂದು ಕಾಲದಲ್ಲಿ ಲಂಕೇಶ್ ಪತ್ರಿಕೆಯನ್ನು ಓದುತ್ತಿದ್ದವರಲ್ಲಿ ನಾನೂ ಒಬ್ಬ. ಮುಸ್ಲಿಮರ ಕ್ರೌರ್ಯ, ಚಿಂತಕ ಲಂಕೇಶರಿಗೆ ಶೌರ್ಯವಾಗಿ ಕಾಣುತ್ತಿತ್ತು. ಹಿಂದೂಗಳನ್ನು ಹೇಡಿಗಳಾಗಿ ಚಿತ್ರಿಸುತ್ತಿದ್ದರು. (ಲಟ್ಯೆನ್ಸಿನ ಜಾಣರು ದೆಹಲಿಯಲ್ಲೇ ಇರಬೇಕೆಂದಿಲ್ಲ.) ಆ ತಪ್ಪಿಗೆ ನಾವೀಗ ಬೆಲೆ ತೆರುತ್ತಿದ್ದೇವೆ.
ಆ ಬೆಲೆ ಏನೆಂದರೆ, ಪತ್ರಿಕೋದ್ಯಮದ ಧ್ರುವೀಕರಣ. ಇದು ರಾಜಕೀಯ ಧ್ರುವೀಕರಣದ ವಿಸ್ತರಣೆ. ಒಂದು ಸೀಮಿತ ಅರ್ಥದಲ್ಲಿ ಇದು ರಾಜಕೀಯ ಧ್ರುವೀಕರಣ ಕ್ಕಿಂತ ಅಥವಾ ಅಷ್ಟೇ ಅಪಾಯಕಾರಿ. ಪತ್ರಕರ್ತರು ತತ್ವದ ಆಧಾರದ ಮೇಲೆ ಪರಸ್ಪರ ದೂರವಾಗುವುದೆಂದರೆ ಸತ್ಯದಿಂದ ವಿಮುಖರಾಗುವುದು. ಅದರ ಪರಿಣಾಮ ಸತ್ಯ-ಅಸತ್ಯಗಳ ಧ್ರುವೀಕರಣ.

ದ ವಯರ್ (The Wire)ನಲ್ಲಿ ನೇರ ಕ್ರಮ ದಿವಸದ ಅನಾಹುತವನ್ನು ಈ ರೀತಿ ವಿಮರ್ಶಿಸಲಾಗಿತ್ತು. ಹಿಂಸಾಚಾರದಲ್ಲಿ ಸತ್ತ ಮುಸ್ಲಿಮರ ಸಂಖ್ಯೆಯನ್ನು
ನೋಡಿದಾಗ ಹಿಂದೂಗಳೇನು ಸುಮ್ಮನೆ ಕುಳಿತಿರಲಿಲ್ಲ ಎಂಬರ್ಥದ ಮಾತು. ಅಂದರೆ, ಹಿಂದೂಗಳೂ ತಪ್ಪಿತಸ್ಥರು ಎಂಬ ತಾತ್ಪರ್ಯ. ಜೀವವನ್ನು ಕಸಿಯಲು
ಬಂದವರನ್ನಾಗಲೀ, ಮಾನಹರಣಕ್ಕೆ ಮೇಲೆರಗಿದವನನ್ನಾಗಲೀ ಕೊಲ್ಲುವುದಕ್ಕೆ ಕಾನೂನು ಅಡ್ಡ ಬರುವುದಿಲ್ಲ. ಅದನ್ನು ಕೊಲೆಯೆಂದು ಪರಿಗಣಿಸಲಾಗುವುದಿಲ್ಲ.
ಇನ್ನು, ಕೊಲೆಗಡುಕರನ್ನು ಸಾಹಸಿಗಳೆಂದು ಬಣ್ಣಿಸುವುದನ್ನು ಕೊಲೆಗೆ ಪ್ರಚೋದನೆ ನೀಡಿದಂತೆಯೇ.

ಇದರಿಂದ ಹಾನಿಗೊಳಗಾದ ಸಮುದಾಯವನ್ನು ಹೇಡಿಗಳೆಂದು ಚಿತ್ರಿಸಿವುದು ಅವರನ್ನು ಹೇಡಿಗಳಲ್ಲವೆಂದು ಸಾಬೀತುಗೊಳಿಸುವಂತೆ ಪ್ರಚೋದಿಸುವುದೂ ಸಾಮಾಜಿಕ ಶಾಂತಿಗೆ ಭಂಗ ತಂದಂತೆ. ಇಲ್ಲಿ ಮುಖ್ಯವಾದ ಅಂಶವೆಂದರೆ ಪಶ್ಚಿಮ ಬಂಗಾಳದ ಸ್ಥಿತಿ ಅಂದಿಗೂ, ಇಂದಿಗೂ ಬದಲಾಗಿಲ್ಲ. ನಿಷ್ಪಕ್ಷಪಾತವಾಗಿ
ಕಾರ್ಯ ನಿರ್ವಹಿಸಬೇಕಾದ ಪೊಲೀಸರೇ ತಮ್ಮ ಸಮವಸ್ತ್ರದ ಗೌರವವನ್ನು ಆಡಳಿತಪಕ್ಷದ ಪದತಲದಲ್ಲಿಟ್ಟು ಆದೇಶ ಸ್ವೀಕರಿಸುತ್ತಾರೆಂದರೆ ರಕ್ಷಿಸಲ್ಪಡಬೇಕಾದ ನಾಗರಿಕರ ಪಾಡೇನು? ಆಫ್ಘಾನಿಸ್ತಾನದಲ್ಲಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳಿಗೂ, ಮಮತಾ ದೀದಿಗೂ ವ್ಯತ್ಯಾಸವಾದರೂ ಏನು? ಕರ್ನಾಟಕದಲ್ಲಿ ಪರಿಸ್ಥಿತಿ ಭಿನ್ನವೆಂದುಕೊಳ್ಳಲು ಇತ್ತೀಚಿನ ಘಟನೆಗಳು ಬಿಡುವುದಿಲ್ಲ.

ಕಳೆದ ವಾರ ಕ್ಲಬ್ ಹೌಸ್ ಕೊಠಡಿಯೊಂದರಲ್ಲಿ ಚರ್ಚೆ ನಡೆದಿತ್ತು. ಪಶ್ಚಿಮ ಬಂಗಾಳದ ಪ್ರಸಕ್ತ ಪರಿಸ್ಥಿತಿಯನ್ನು ಕುರಿತದ್ದು. ಹಿಂದೂಗಳು ಆತ್ಮರಕ್ಷಣೆಗೆ ಶಸ್ತ್ರ
ಸನ್ನದ್ಧರಾಗಬೇಕೇ ಎಂಬುದನ್ನು ಸುದೀರ್ಘವಾಗಿ ಚರ್ಚಿಸಲಾಯಿತು. ದೆಹಲಿ ಪತ್ರಕರ್ತರನ್ನೂ ಸೇರಿದಂತೆ ಒಂದೆರಡು ನೂರು ತಿಳುವಳಿಕೆಯುಳ್ಳ ಜವಾಬ್ದಾರಿ ಯುತ ಸಾರ್ವಜನಿಕರು ಪಾಲ್ಗೊಂಡಿದ್ದರು.

ಚರ್ಚೆಯ ನಂತರದ ನಿರ್ಣಯವಿದು: ಹಿಂದೂಗಳು ತಮ್ಮ ದೈಹಿಕ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಸನ್ನದ್ಧರಾಗಬೇಕೇ ವಿನಃ ಮೊದಲು ಆಕ್ರಮಣದಲ್ಲಿ ತೊಡಗಬಾರದು. ಪ್ರತ್ಯಾಕ್ರಮಣಕ್ಕೆ ಪ್ರಚೋದನೆ ಒಡ್ಡಿದಲ್ಲಿ ಗಲಭೆಕೋರರನ್ನಷ್ಟೇ ಬಡಿದೋಡಿಸಬೇಕು, ಮಹಿಳೆಯರನ್ನೂ, ಮಕ್ಕಳನ್ನೂ, ವೃದ್ಧರನ್ನೂ ಮುಟ್ಟ ಬಾರದು. ಕಾನೂನು ಮತ್ತು ಸುಸ್ಥಿತಿ ಕಾಪಾಡುವಲ್ಲಿ ವಿಚ್ಚಿದ್ರಕಾರಿ ಶಕ್ತಿಗಳ ಕುರಿತು ಗೋಪ್ಯ ಮಾಹಿತಿ ಕಲೆಹಾಕುವ ಪೊಲೀಸರು ಇಂತಹ ವಿಷಯಗಳತ್ತಲೂ ಗಮನಹರಿಸುತ್ತಾರೆಂದು ನಂಬಿದ್ದೇನೆ.

ಯಾವುದೇ ಪಕ್ಷದ ಅಥವಾ ವ್ಯಕ್ತಿಯ ಮರ್ಜಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಅವರು ನೆಲದ ಕಾನೂನನ್ನು ಜಾರಿಗೊಳಿಸಿದ್ದೇ ಆದಲ್ಲಿ ಸಮಾಜದ ಎಲ್ಲ ವರ್ಗದ, ಎಲ್ಲ ಜಾತಿ ಧರ್ಮಗಳ ಜನ ನೆಮ್ಮದಿಯಿಂದ ಬಾಳಲು ಅನುಕೂಲ. ಅದಾದಲ್ಲಿ ಪೊಲೀಸರಿಗೂ ನೆಮ್ಮದಿ. ದೇವರಜೀವನ ಹಳ್ಳಿಯಲ್ಲೋ, ಕಾಡುಗೊಂಡನ ಹಳ್ಳಿ ಯಲ್ಲೋ ನಾನಾ ಪಟೇಕರ್‌ನ ಚಿತ್ರ ಪ್ರದರ್ಶಿಸಿ ಶಾಂತಿಯನ್ನು ಪುನರ್‌ಸ್ಥಾಪಿಸುವ ಬಾಬತ್ತು ಬೀಳುವುದಿಲ್ಲ. ಎಲ್ಲರ ರಕ್ತವೂ ಒಂದೇ ಎಂಬ ಮಾತಿಗೂ ಅರ್ಥ ಬರುತ್ತದೆ.