Monday, 16th September 2024

ಏ ಮೇರೆ ವತನ್‌ ಕೆ ಲೋಗೋ – ಗೀತೆಗೆ 60ರ ಸಂಭ್ರಮ !

ಮಲ್ಲಿಕಾರ್ಜುನ ಹೆಗ್ಗಳಗಿ

ಖ್ಯಾತ ಗಾಯಕಿ ಲತಾ ಮಂಗೇಶಕರ್ ಅವರಿಗೆ ಏ ಮೇರೆ ವತನ ಕೇ ಲೋಗೋ ಗೀತೆ ಅವರಿಗೆ ಬಹುದೊಡ್ಡ ಗೌರವ ತಂದುಕೊಟ್ಟಿದೆ. ೬೦ ವರ್ಷಗಳ ಹಿಂದೆ ಈ ಹಾಡು ಪ್ರಥಮ ಬಾರಿಗೆ ಹಾಡಿದ ಹೃದಯ ಸ್ಪರ್ಶಿ ಅನುಭವವನ್ನು ತಮ್ಮ ಮಾತಿನಲ್ಲಿ ಕಟ್ಟಿಕೊಟ್ಟಿದ್ದಾರೆ.

ಅವರ ಮಾತುಗಳು ಅವರ ಸಂಗೀತದಷ್ಟೇ ಮಧುರವಾಗಿವೆ. ದಿಲ್ಲಿಯಲ್ಲಿ ನಡೆದ ೧೯೬೨ರ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ದೇಶಭಕ್ತಿಗೀತೆ ಹಾಗೂ
ಭಜನೆ ಹಾಡುವುದಕ್ಕೆ ಸುಮಾರು ೨ ತಿಂಗಳ ಮೊದಲೇ ನನಗೆ ಆಮಂತ್ರಣ ಬಂದಿತ್ತು. ಒಪ್ಪಿಕೊಂಡಿರುವುದಾಗಿ ತಿಳಿಸಿದ್ದೆ. ಅದೇ ಆಗ ಭಾರತ-ಚೀನಾ ಯುದ್ಧ ಕೊನೆಗೊಂಡಿತ್ತು. ಯಾವ ಯಾವ ಹಾಡು ಹಾಡಬೇಕು ಎಂಬುದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತಿದೆ. ಆಗ ನನಗೆ ಕವಿ ಪ್ರದೀಪ ಅವರಿಂದ ಟೆಲಿಫೋನ್ ಕಾಲ್ ಬಂದಿತು. ತಾವು ಬರೆದ “ಏ ಮೇರೆ ವತನಕೆ ಲೊಗೋ” ಗೀತೆಯನ್ನು ಹಾಡಬೇಕೆಂದು ಸೂಚಿಸಿದರು.

ಹೆಚ್ಚು ಸಮಯ ಇಲ್ಲ. ಹೊಸ ಹಾಡುಗಳಿಗೆ ಧ್ವನಿ ಸಂಯೋಜನೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ನಾನು ಸ್ಪಷ್ಟವಾಗಿ ನಿರಾಕರಿಸಿದೆ ಪ್ರದೀಪ ಅವರು ಪುನಃ ಒತ್ತಾಯಿಸಿ “ಈ ಹಾಡು ಹಾಡಲೇಬೇಕು. ನೀನು ಹಾಡದಿದ್ದರೆ ಈ ಹಾಡು ಪೂರ್ಣವಾಗುವುದಿಲ್ಲ” ಎಂದು ಆಗ್ರಹಿಸಿದ್ದರು. ಗುಜರಾತಿ ಮೂಲದ ಪ್ರಸಿದ್ಧ ಕವಿ ಪ್ರದೀಪ ಕಟ್ಟಾ ಗಾಂಧೀಜಿ ಅನುಯಾಯಿ. ಅವರ ಮಾತು ಮೀರುವುದು ಆಗದೇ ಹಾಡುವುದಕ್ಕೆ ಒಪ್ಪಿಕೊಂಡೆ. ಸರಕಾರ ವ್ಯವಸ್ಥೆ ಮಾಡಿದ್ದ ವಿಶೇಷ ವಿಮಾನದಲ್ಲಿ ನಾನು ಹಾಗೂ ಚಿತ್ರ ಜಗತ್ತಿನ ಗಣ್ಯರಾದ ದಿಲೀಪ ಕುಮಾರ, ಮೆಹಬೂಬಖಾನ, ಸಿ. ರಾಮಚಂದ್ರ ಮುಂತಾದವ ರೊಂದಿಗೆ ಮುಂಬೈಯಿಂದ ದಿಲ್ಲಿಗೆ ಹೋದೆ.

“ಏ ಮೇರೆ ವತನಕೆ ಲೊಗೋ” ಹಾಡಿನ ರಿಹರ್ಸಲ್ ವಿಮಾನದಲ್ಲಿಯೆ ಮಾಡಿಕೊಂಡೆ. ಸಿ. ರಾಮಚಂದ್ರರಾವ್ ಧ್ವನಿ ಸಂಯೋಜನೆಗೆ ಮಾರ್ಗದರ್ಶನ ಮಾಡಿದರು. ಜ.೨೬ ರಂದು ಸಂಜೆ ಭಜನೆ ಹಾಗೂ ರಾಷ್ಟ್ರಭಕ್ತಿಯ ಗೀತೆಗಳ ಕಾರ್ಯಕ್ರಮ ದಿಲ್ಲಿಯ ವಿಶಾಲ ಮೈದಾನದಲ್ಲಿ ಆಯೋಜನೆ ಮಾಡಿಲಾಗಿತ್ತು. ಪ್ರಧಾನಿ ಪಂ. ನೆಹರೂ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಾನು ಮೊದಲು ಒಂದು ಭಜನೆ ಹಾಡಿದೆ. ನಂತರ ಏ ಮೇರೆ ವತನಕೆ ಲೊಗೋ ಹಾಡು ಹಾಡಿದೆ. ಈ ಹಾಡು ಅಲ್ಲಿದ್ದ ಪ್ರೇಕ್ಷಕರ ಮನಸ್ಸನ್ನು ಹಿಡಿದು ಅಲ್ಲಾಡಿಸಿದ್ದು ನನಗೆ ಕಾಣುತ್ತಿತ್ತು. ಹಾಡು ಮುಗಿದ ಮೇಲೆ ವೇದಿಕೆಯ ಹಿಂದುಗಡೆ ಕಲಾವಿದರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ರೂಮ್‌ನಲ್ಲಿ ಬಂದು ಕುಳಿತುಕೊಂಡೆ.

ಕರವಸ್ತ್ರದಿಂದ ಮುಖದ ಮೇಲಿನ ಬೆವರು ಒರೆಸುಕೊಳ್ಳುತ್ತಿದೆ. ಚಲನಚಿತ್ರ ಹಿರಿಯ ಕಲಾವಿದ ಮೆಹಬೂಬ್ ಖಾನ್ ಅವಸರದಿಂದ ನನ್ನ ಬಳಿಗೆ ಬಂದು ನೆಹರೂಜಿ ಕರೆಯುತ್ತಿದ್ದಾರೆ ತಕ್ಷಣ ಬನ್ನಿ ಎಂದು ನನ್ನನ್ನು ಕರೆದುಕೊಂಡು ಹೋದರು. ನೆಹರೂಜಿ ಬಳಿ ನಿಲ್ಲುವುದು ಒಂದು ಬಹುದೊಡ್ಡ ರೋಮಾಂಚನ ಸಂಗತಿ. ಅವರು ನನ್ನ ಕೈ ಹಿಡಿದು “ಹುಡುಗೀ ನೀನು ಹಾಡಿ ನಾನು ದುಃಖಿಸಿ ಅಳುವಂತೆ ಮಾಡಿದಿ. ಯೂ ಗರ್ಲ್ ಮೇಡ್ ಟು ಕ್ರಾಯ್ ಎಂದು ಹೇಳಿದರು. ಅವರ ಕಣ್ಣಂಚಿನಲ್ಲಿ ಕಂಬನಿ ತುಂಬಿಕೊಂಡಿದ್ದವು. ಗಂಟಲೂ ಕೂಡ ಬಿಗಿದುಕೊಂಡಿತ್ತು. ನಾನು ಸ್ಥಂಬಿಭೂತಳಾಗಿ ನಿಂತೆ.

ನೆಹರೂಜಿ ವೇದಿಕೆಯಿಂದ ನಿರ್ಗಮಿಸಿ ಕಾರು ಹತ್ತಿ ಹೊರಟು ಹೋದರು. ಮರುದಿನ ನಮ್ಮನ್ನೆಲ್ಲ ನೆಹರೂಜಿ ಉಪಹಾರಕ್ಕೆ ಆಮಂತ್ರಿಸಿದ್ದರು. ಹಿರಿಯ ಗಾಯಕ ರೆಲ್ಲ ನೆಹರೂಜಿಯೊಂದಿಗೆ ಮಾತಿನಲ್ಲಿ ತೊಡಗಿದ್ದರು. ನಾನು ಬದಿಯ ಕೊಣೆಯಲ್ಲಿ ಒಬ್ಬಳ್ಳೇ ಕುಳತಿದ್ದೆ. ಆಗ ಇಂದಿರಾಗಾಂಧಿ ಬಂದರು. ನೀವು ಇಲ್ಲಿ ಏಕೆ ಕುಳಿತಿದ್ದೀರಿ, ಒಳಗೆ ಬನ್ನಿ ಎಂದು ಹೇಳಿದರು. ಇಲ್ಲ ನಾನು ಇಲ್ಲಿಯೇ ಕಂಪರ್ಟ್ ಆಗಿ ಇದ್ದೇನೆ ಎಂದು ಹೇಳಿದೆ. ನಿಮ್ಮ ಇಬ್ಬರು ಫ್ಯಾನ್‌ಗಳು ಒಳಗೆ ಇದ್ದಾರೆ. ಕರೆ ತರುತ್ತೇನೆ ಎಂದು ಇಂದಿರಾಗಾಂಧಿ ಹೇಳಿ ಒಳಗೆ ನಡೆದರು. ಅವರು ಒಂದು ನಿಮಿಷದ ನಂತರ ತಮ್ಮ ಮಕ್ಕಳಾದ ರಾಜೀವ ಹಾಗೂ ಸಂಜಯ ಗಾಂಧಿ ಯವರನ್ನು ಕರೆತಂದರು.

ಈ ಹುಡುಗರಿಬ್ಬರು ಮಂದಹಾಸ ಬೀರುತ್ತ ನನ್ನ ಬಳಿ ಬಂದು ಕುಳಿತರು. ನೆಹರೂಜಿ ಒಳಗೆ ಕರೆದಿದ್ದರಿಂದ ಎದ್ದು ಅವರ ಬಳಿಗೆ ಹೋಗಿ ನಮಸ್ಕರಿಸಿದೆ. ಈ
ಬಾರಿ ನೆಹರೂಜಿ ಅದೇಕೋ ಹೆಚ್ಚು ಮಾತನಾಡಲಿಲ್ಲ. ಮುಂದೆ ೧೯೬೪ರಲ್ಲಿ ಮುಂಬೈನಲ್ಲಿ ಒಂದು ಧಾರ್ಮಿಕ ಸಂಸ್ಥೆ ಸಹಾಯಾರ್ಥ ಸಂಗೀತ ಕಾರ್ಯಕ್ರಮ
ಆಯೋಜಿಸಲಾಗಿತ್ತು. ಪ್ರಧಾನಿ ನೆಹರೂಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂದೂ ಕೂಡ ಅವರು “ಏ ಮೇರೆವತನಕೆ ಲೊಗೋ” ಹಾಡು ಹಾಡಲು
ನನಗೆ ಸೂಚಿಸಿದರು. ನನ್ನ ಹಾಡು ಮುಗಿಯುತ್ತಿದ್ದಂತೆ ನೆಹರೂ ಎದ್ದು ಹೊರ ನಡೆದರು.

ಕಾರಿನಲ್ಲಿ ಕುಳಿತ ನೆಹರೂಜಿ ನನ್ನನ್ನು ಕರೆಸಿಕೊಂಡರು. ನಾನು ಬಂದ ತಕ್ಷಣ ಕಾರಿನ ಗ್ಲಾಸ್ ಇಳಿಸಿ ನನ್ನ ಪ್ರತಿ ಕಾರ್ಯಕ್ರಮದಲ್ಲಿ ಏ ಮೇರೆ ವತನಕೆ ಲೋಗೋ ಹಾಡು ಹಾಡಲೇಬೇಕು ಎಂದು ಕಟ್ಟಪ್ಪಣೆ ರೀತಿಯಲ್ಲಿ ನನಗೆ ಹೇಳಿದರು. “ಏ ಮೇರೆವತನ ಕೇ ಲೊಗೋ ಜರಾ ಆಂಖೋಮೇ ಭರಲೋ ಪಾನಿ ಜೋ ಶೆಹಿದ್ ಹುಯೇ ಉನಕೆ ಯಾದಕರೋಕುರಬಾಣಿ” ಈ ಹಾಡನ್ನು ನಾನು ಕಳೆದ ೬೦ ವರ್ಷಗಳಿಂದ ಹಾಡುತ್ತಿದ್ದೇನೆ.

ದೇಶ ವಿದೇಶಗಳ ಸಂಗೀತ ಕಾರ್ಯಕ್ರಮದಲ್ಲಿ ಈ ಹಾಡು ಇಲ್ಲದೇ ನನ್ನ ಕಾರ್ಯಕ್ರಮ ಕೊನೆಗೊಳ್ಳುವುದಿಲ್ಲ. ೨೦೧೨ ರಲ್ಲಿ ಈ ಹಾಡಿನ ಸುವರ್ಣ ಮಹೋತ್ಸವ ದೇಶದ ತುಂಬ ನಡೆಯಿತು. ಪ್ರದೀಪಜಿ ಬರೆದ ಈ ಹಾಡು ಒಂದು ಅಮರ ಗೀತೆ. ಕಾವ್ಯಕ್ಕೆ ಬಹುದೊಡ್ಡ ಶಕ್ತಿಯಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ನೆಹರೂಜಿ ಈಗಲೂ ಈ ಹಾಡನ್ನು ಕೇಳುತ್ತಿರುವಂತೆ ನನಗೆ ಭಾಸವಾಗುತ್ತಿದೆ. ಈಚೆಗೆ ದಿಲ್ಲಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಲತಾಜೀ ಈ ಸಂಗತಿಗಳನ್ನು
ಬಿಚ್ಚಿಟ್ಟಿದ್ದಾರೆ.