Saturday, 27th July 2024

ಬಲಿಪಾಡ್ಯಮಿಯ ಮಹತ್ವ

ಸಾಲುಹಣತೆ

ವಿನೋದ ಕಾಮತ್

ದಾನಶೂರನಾಗಿದ್ದ ಬಲಿ ಚಕ್ರವರ್ತಿಯು, ಮನೆಬಾಗಿಲಿಗೆ ಬಂದ ಅತಿಥಿಯು ಏನೇ ಬೇಡಿದರೂ ಅದನ್ನು ಕೊಡುತ್ತಿದ್ದ. ದಾನ ನೀಡುವುದು ಒಳ್ಳೆಯ ಗುಣವಾಗಿದ್ದರೂ, ಅತಿರೇಕವಾದರೆ ದೋಷವೇ. ಯಾರಿಗೆ, ಯಾವಾಗ, ಎಲ್ಲಿ ದಾನ ಕೊಡಬೇಕೆಂಬುದನ್ನು ಶಾಸ್ತ್ರ ಮತ್ತು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಸಂಪತ್ತನ್ನು/ದಾನವನ್ನು ಸತ್ಪಾತ್ರರಿಗೇ ನೀಡಬೇಕು, ಅಪಾತ್ರರಿಗೆ ನೀಡಿದರೆ ಮದೋನ್ಮತ್ತರಾಗಿ ಮನಬಂದಂತೆ ವರ್ತಿಸುತ್ತಾರೆ. ಆದರೆ ಬಲಿ
ಚಕ್ರವರ್ತಿಯು ಯಾರಿಗಾದರೂ, ಯಾವಾಗ ಬಂದರೂ, ಏನು ಕೇಳಿದರೂ ದಾನವೆಂದು ಕೊಡುತ್ತಿದ್ದರು. ಆಗ ಭಗವಾನ್ ಶ್ರೀವಿಷ್ಣುವು ವಾಮನಾವತಾರ ತಾಳಿ ಬಲಿಯ ಬಳಿ ಭಿಕ್ಷೆಗೆ ತೆರಳಿದ. ‘ಏನು ಬೇಕು?’ ಎಂಬ ಬಲಿಯ ಪ್ರಶ್ನೆಗೆ ವಾಮನ ೩ ಹೆಜ್ಜೆ ಭೂಮಿಯನ್ನು ಕೇಳಿದ. ದಾನ ಕೇಳಲು ಬಂದಿರುವವರು ಯಾರು, ಈ ದಾನ ದಿಂದ ಏನಾಗಲಿದೆ ಎನ್ನುವುದರ ಅರಿವಿಲ್ಲದ ಬಲಿ ಅದಕ್ಕೊಪ್ಪಿದ. ವಿರಾಟರೂಪ ತಳೆದ ವಾಮನ, ಒಂದು ಹೆಜ್ಜೆಯಿಂದ ಸಂಪೂರ್ಣ ಭೂಮಿಯನ್ನೂ, ಮತ್ತೊಂದರಿಂದ ಅಂತರಿಕ್ಷವನ್ನೂ ವ್ಯಾಪಿಸಿಕೊಂಡು ‘ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ?’ ಎಂದು ಕೇಳಿದ.

ಅದಕ್ಕೆ ಬಲಿ ಚಕ್ರವರ್ತಿ, ಅದನ್ನು ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡ. ಅಂತೆಯೇ ಆತನ ತಲೆಯ ಮೇಲೆ ಮೂರನೆಯ ಹೆಜ್ಜೆಯಿಟ್ಟು ಪಾತಾ ಳಕ್ಕೆ ತಳ್ಳುವುದಕ್ಕೂ ಮೊದಲು ವಾಮನ, ‘ಏನಾದರೂ ವರ ಕೇಳಿಕೋ’ ಎಂದ. ಆಗ ಬಲಿ, ‘ನೀವು ನನ್ನನ್ನು ಪಾತಾಳಕ್ಕೆ ತಳ್ಳುವವರಿದ್ದೀರಿ, ಪೃಥ್ವಿಯ ಮೇಲಿನ ನನ್ನೆಲ್ಲ ಸಾಮ್ರಾಜ್ಯವೂ ಅಂತ್ಯಗೊಳ್ಳಲಿದೆ. ಆದ್ದರಿಂದ, ಈ ೩ ಪಾದದ ಭೂಮಿದಾನದಿಂದ ಘಟಿಸಿದ ಪೃಥ್ವಿಯ ರಾಜ್ಯವು, ಪ್ರತಿವರ್ಷ ೩ ದಿನಗಳ ಕಾಲವಾದರೂ ನನ್ನ ರಾಜ್ಯವೆಂದು ಗುರುತಿಸಲ್ಪಡಲಿ; ಯಮನ ಪ್ರೀತ್ಯರ್ಥ ದೀಪದಾನ ಮಾಡುವವರಿಗೆ ಯಮಯಾತನೆಯಾಗದಿರಲಿ, ಅಪಮೃತ್ಯು ಬಾರದಿರಲಿ ಮತ್ತು ಅವರ ಮನೆಯಲ್ಲಿ ಲಕ್ಷ್ಮಿ ನಿರಂತರ ವಾಸಿಸಲಿ’ ಎಂಬ ವರ ಬೇಡಿದ.

ಆ ೩ ದಿನಗಳೆಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ. ಇದಕ್ಕೆ ಬಲಿರಾಜ್ಯವೆನ್ನುತ್ತಾರೆ. ಇದನ್ನು ವಿಕ್ರಮ ಸಂವತ್ಸರ ಕಾಲಗಣನೆಯ ವರ್ಷಾರಂಭದ ದಿನವೆಂದು ಆಚರಿಸಲಾಗುತ್ತದೆ. ಬಲಿಪಾಡ್ಯಮಿಯಂದು ನೆಲದ ಮೇಲೆ ೫ ಬಣ್ಣಗಳಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರನ್ನು ಪೂಜಿಸಲಾಗುತ್ತದೆ. ನಂತರ ಬಲಿಯ ಪ್ರೀತ್ಯರ್ಥ ದೀಪ ಮತ್ತು ವಸಗಳ ದಾನ ಮಾಡುತ್ತಾರೆ.
ಅಂದು ಪ್ರಾತಃಕಾಲ ಅಭ್ಯಂಗಸ್ನಾನದ ನಂತರ ಸ್ತ್ರೀಯರು ಪತಿಗೆ ಆರತಿ ಬೆಳಗುತ್ತಾರೆ. ಅಂದು ಪಕ್ವಾನ್ನದ ಭೋಜನ ಮಾಡುತ್ತಾರೆ. ಬಲಿರಾಜ್ಯ
ದಲ್ಲಿ ಶಾಸ್ತ್ರವು ಹೇಳಿದ ನಿಷಿದ್ಧ ಕರ್ಮಗಳನ್ನು ಬಿಟ್ಟು ಜನರು ತಮ್ಮ ಮನಸ್ಸಿಗೆ ತೋಚಿದಂತೆ ವರ್ತಿಸಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ.

ಅಭಕ್ಷ್ಯ ಭಕ್ಷಣ, ಅಪೇಯಪಾನ ಮತ್ತು ಅಗಮ್ಯಾಗಮನ ಇವು ನಿಷಿದ್ಧ ಕರ್ಮಗಳಾಗಿವೆ; ಶಾಸ್ತ್ರದ ಸಮ್ಮತಿ ಇರುವುದರಿಂದ ಜನರು ಪರಂಪರೆಯಂತೆ ವಿನೋದ ವಿಲಾಸ ಮಾಡುತ್ತಾರೆ. ಹೊಸಬಟ್ಟೆ ಧರಿಸಿ ಇಡೀ ದಿನವನ್ನು ಆನಂದದಲ್ಲಿ ಕಳೆಯುತ್ತಾರೆ. ಈ ದಿನ ಗೋವರ್ಧನನನ್ನು ಪೂಜಿಸುವ ಪದ್ಧತಿಯಿದೆ. ಇದಕ್ಕಾಗಿ ಸಗಣಿಯಲ್ಲಿ ಶಂಕುವಿನಾಕಾರದ ಪುಟ್ಟ ಗೋಪುರ ಮಾಡಿ ಅದರ ಮೇಲೆ ಗರಿಕೆ ಮತ್ತು ಹೂವುಗಳನ್ನು ಸಿಕ್ಕಿಸುತ್ತಾರೆ. ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ/ ಮೂರ್ತಿಗಳನ್ನು ಜತೆಗಿಟ್ಟು ಪೂಜಿಸಿ ಮೆರವಣಿಗೆ ಮಾಡುತ್ತಾರೆ. ಬಲಿಯನ್ನು ಪೂಜಿಸುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನಿಸಿದ್ದರೂ, ಗಳಿಸಿದ ಪುಣ್ಯದಿಂದಾಗಿ ಅವನ ಮೇಲೆ ವಾಮನನ ಕೃಪೆಯಾಯಿತು.

ಈಶ್ವರೀ ಕಾರ್ಯವೆಂದು ಜನಸೇವೆ ಮಾಡಿದ ಅವನು ಸಾತ್ವಿಕ ವೃತ್ತಿಯವನೂ ದಾನಿಯೂ ಆಗಿದ್ದ. ಪ್ರಾರಂಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅಜ್ಞಾನಿ
ಯಾಗಿರುವುದರಿಂದ ಅವನಿಂದ ಅಯೋಗ್ಯ ಕಾರ್ಯಗಳು ಘಟಿಸುತ್ತಿರುತ್ತವೆ; ಆದರೆ ಜ್ಞಾನ ಮತ್ತು ಈಶ್ವರೀಕೃಪೆಯಿಂದ ಆತ ದೈವತ್ವವನ್ನು ಪಡೆಯ ಬಹುದು ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಇಂಥ ನಿರ್ಭಯದಿಂದ ಸತ್ಕರ್ಮವನ್ನು ಮಾಡಿದರೆ ಅವನಿಗೆ ಮೃತ್ಯುವಿನ ಭಯವೇ ಇರುವುದಿಲ್ಲ; ಯಮನು ಕೂಡ ಅವನ ಮಿತ್ರ ಅಥವಾ ಬಂಧುವಾಗುತ್ತಾನೆ. ತನಗೆ ಸರ್ವಸ್ವವನ್ನೂ ಅರ್ಪಿಸುವವನ ದಾಸನಾಗುವ ತಯಾರಿಯನ್ನೂ ಭಗವಂತ ಇಟ್ಟುಕೊಂಡಿರುತ್ತಾನೆ ಎಂಬುದನ್ನು ವಾಮನ ಅವತಾರದಲ್ಲಿ ತೋರಿಸಿಕೊಟ್ಟಿದ್ದಾನೆ.

ಬಲಿಯು ವಾಸ್ತವದಲ್ಲಿ ಅಸುರ ಕುಲದವನಾಗಿದ್ದರೂ, ಸರ್ವಸ್ವವನ್ನೂ ತನಗೆ ಉದಾರವಾಗಿ ಸಮರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನ ಮಾಡಿ, ಜೀವನಕ್ಕೆ ಹೊಸಸ್ವರೂಪ ನೀಡಿ ಉದ್ಧರಿಸಿ ದ. ಅವನ ರಾಜ್ಯದಲ್ಲಿದ್ದ, ಅಸುರವೃತ್ತಿಗೆ ಪೋಷಕವಾಗಿರುವ ಭೋಗಮಯ ವಿಚಾರ ಗಳನ್ನು ತೆಗೆದುಹಾಕಿ, ತ್ಯಾಗಭಾವನೆಯನ್ನು ಅಂಕುರಿಸಿ, ಜನತೆಗೆ ದೈವೀವಿಚಾರಗಳನ್ನು ನೀಡಿ, ಸುಖ-ಸಮೃದ್ಧಿಯ ಜೀವನವನ್ನು ಪ್ರದಾನಿಸಿದ.

(ಲೇಖಕರು ಸನಾತನ ಸಂಸ್ಥೆಯ ರಾಜ್ಯ ವಕ್ತಾರರು)

Leave a Reply

Your email address will not be published. Required fields are marked *

error: Content is protected !!