Sunday, 8th September 2024

ಕೈ ಪಾಳೆಯದ ಸುತ್ತ, ಬಿಜೆಪಿಯ ಹುತ್ತ

BJP and Congress

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಅಷ್ಟೊತ್ತಿಗಾಗಲೇ 1991ರ ಲೋಕಸಭಾ ಚುನಾವಣೆಗಳು ಘೋಷಣೆಯಾಗಿದ್ದವು. ಆ ಸಂದರ್ಭದಲ್ಲಿ ಕರ್ನಾಟಕದ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜನತಾ ಪರಿವಾರದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ನಿರ್ಧರಿಸಿದ್ದರು.

ಹೆಗಡೆ ಅವರಂತಹ ಪ್ರಭಾವಿ ನಾಯಕ, ಅದರಲ್ಲೂ ಲಿಂಗಾಯತ ಸಮುದಾಯದ ಪಾಲಿಗೆ ಐಕಾನ್ ಅನ್ನಿಸಿಕೊಂಡ ನಾಯಕ ಬಾಗಲ ಕೋಟೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದಾಗ ಇಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರಿಗೆ ಚಿಂತೆ ಶುರುವಾಯಿತು. ಅಂದ ಹಾಗೆ
1983 ರಲ್ಲಿ ತಾವು ಮುಖ್ಯಮಂತ್ರಿ ಯಾಗುವುದನ್ನು ತಪ್ಪಿಸಿದವರು ಹೆಗಡೆ ಎಂಬ ಸಿಟ್ಟು ಬಂಗಾರಪ್ಪ ಅವರಲ್ಲಿ ಉಳಿದಿತ್ತಲ್ಲ.

ಹೀಗಾಗಿ ಹೆಗಡೆ ಅವರನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಬೇಕು ಎಂಬ ಹಠ ಬಂಗಾರಪ್ಪ ಅವರಿಗಿತ್ತು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯ ರಾಗಿದ್ದ ಹೆಗಡೆ ಅವರನ್ನು ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಹೀಗಾಗಿ ಬಂಗಾರಪ್ಪ ಅವರು ಇಂಟಲಿಜೆನ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿ ಆ ಕ್ಷೇತ್ರದಲ್ಲಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸಿದರೆ ಲಾಭವಾಗುತ್ತದೆ ಎಂಬ ಬಗ್ಗೆ ವರದಿ ಕೊಡಿ ಎಂದು ಹೇಳಿದರು. ಇದರಂತೆ ಇಂಟಲಿಜೆನ್ಸ್ ಅಽಕಾರಿಗಳು ಬಾಗಲಕೋಟೆ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಿದರೂ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸುವುದು ಕಷ್ಟ. ಆದರೂ ಬ್ಯಾರೇಜ್ ನಿರ್ಮಾಣದ ಮೂಲಕ ಇತ್ತೀಚಿನ ದಿನಗಳಲ್ಲಿ ಸಿದ್ಧು ನ್ಯಾಮಗೌಡ ಎಂಬ
ಯುವಕ ಜನರ ಗಮನ ಸೆಳೆದಿದ್ದಾರೆ.

ಹೀಗಾಗಿ ಅವರನ್ನು ಕಣಕ್ಕಿಳಿಸಿದರೆ ಪೈಪೋಟಿ ನೀಡಬಹುದು ಎಂದು ವರದಿ ಕೊಟ್ಟರು. ಇದರ ಆಧಾರದ ಮೇಲೆ ಬಂಗಾರಪ್ಪ ಅವರು ಸಿದ್ಧು ಅವರನ್ನು ಸಂಪರ್ಕಿಸಿ ರಾಮಕೃಷ್ಣ ಹೆಗಡೆ ಅವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ನೀವು ಕಣಕ್ಕಿಳಿಯಬೇಕು ಎಂದಾಗ ಸಿದ್ಧು ನ್ಯಾಮಗೌಡ ಒಪ್ಪಲಿಲ್ಲ. ಹೆಗಡೆ ಅವರಂತಹ ದೊಡ್ಡ ನಾಯಕರ ವಿರುದ್ಧ ನಾನು ಸ್ಪರ್ಧಿಸುವುದೇ? ಇಲ್ಲ, ಸಾಧ್ಯವಿಲ್ಲ ಎಂದು ನ್ಯಾಮ ಗೌಡರು ಹೇಳಿದ್ದರು. ಆದರೆ ಬಂಗಾರಪ್ಪ ಪಟ್ಟು ಬಿಡದೆ ನೀವು ನಾಮಪತ್ರ ಸಲ್ಲಿಸಿ ಸಾಕು, ಉಳಿದಂತೆ ನಾವು ನಿಮ್ಮ ಬೆನ್ನಿಗಿದ್ದೇವೆ ಎಂದರು. ಸರಿ, ಹೆಗಡೆ ಮತ್ತು ಸಿದ್ಧು ನ್ಯಾಮಗೌಡರ ಮಧ್ಯೆ ತುರುಸಿನ ಪೈಪೋಟಿ ಶುರುವಾಯಿತು.

ಇಂತಹ ಕಾಲದಲ್ಲೇ ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಅವರ ಪ್ರಚಾರ ಸಭೆ ಏರ್ಪಾಟಾಯಿತು. ಸಭೆಗೆ ಆಗಮಿಸಿದ್ದ ಜನಸ್ತೋಮ ಹೇಗಿತ್ತೆಂದರೆ ಹೆಗಡೆ ವಿರುದ್ಧ ಸಿದ್ದು ನ್ಯಾಮಗೌಡ ಸೋಲುವುದು ನಿಶ್ಚಿತ ಎಂಬ ಮಾತು ಕೇಳಿ ಬಂತು. ಇದರ ಮಧ್ಯ ವೇದಿಕೆಯಲ್ಲಿದ್ದ ಹೆಗಡೆ ಅವರಿಗೆ ಬಾಯಾರಿಕೆಯಾಯಿತು. ಹೀಗಾಗಿ ಕುಡಿಯಲು ನೀರು ಕೊಡಿ ಎಂದು ಪಕ್ಕದಲ್ಲಿದ್ದವರಿಗೆ ಕೇಳಿದರು. ಆಗ ಕಾರ್ಯಕರ್ತ ರೊಬ್ಬರು ನೀರು ಕೊಟ್ಟರು, ಆದರೆ, ಅದನ್ನು ಹೆಗಡೆ ಮುಟ್ಟಲಿಲ್ಲ. ಕಾರಣ ತೀವ್ರ ಗಂಟಲು ಬೇನೆಯಿಂದ ಬಳಲುತ್ತಿದ್ದ ಅವರಿಗೆ ಬಿಸಿ ನೀರು ಬೇಕಾಗಿತ್ತು. ಆದ್ದರಿಂದ ಸಹಾಯಕನ ಕಡೆ ನೋಡಿದರು. ಆ ಸಹಾಯಕ ತನ್ನ ಬಳಿಯಿದ್ದ ಬ್ಯಾಗಿನಿಂದ ಬಿಸಿ ನೀರಿನ ಪ್ಲಾಸ್ಕ್ ಕೊಟ್ಟಾಗ ಹೆಗಡೆಯವರು ನೀರು ಕುಡಿದರು.

ಆದರೆ ಅಲ್ಲೇ ಸಭೆಯಲ್ಲಿದ್ದವರೊಬ್ಬರು ಯೇ, ಅವರಿಗೆ ನಮ್ಮೂರಿನ ನೀರು ಬೇಡ, ವೋಟು ಯಾಕೆ ಬೇಕು? ಎಂದು ಕೂಗಿದರು. ಈ ಮಾತು ಹೇಗಿತ್ತೆಂದರೆ ಇಡೀ ಸಭೆಯಲ್ಲಿ ಹೆಗಡೆ ಅವರ ನಡುವಳಿಕೆಯ ಬಗ್ಗೆ ಅಪಸ್ವರ ಶುರುವಾಗಿ, ಎಷ್ಟೇ ಆದರೂ ಹೆಗಡೆ ನಮ್ಮವರಲ್ಲ, ಆದರೆ ಸಿದ್ಧು ನ್ಯಾಮಗೌಡ ನಮ್ಮವರು ಎಂಬ ಮಾತು ಕ್ಷೇತ್ರದಾದ್ಯಂತ ಹರಡಿಕೊಂಡಿತು. ಪರಿಣಾಮ ಹೆಗಡೆ ಅವರ ವಿರುದ್ಧ ಸಿದ್ದು ನ್ಯಾಮಗೌಡರು ಗೆಲುವು ಸಾಧಿಸಲು ಅದು ನೆರವಾಯಿತು.

ಎಸ್.ಎಂ.ಕೃಷ್ಣ ಸಿಎಂಯಿದ್ದ ಸಂದರ್ಭದಲ್ಲಿ ಕನಕಪುರ ಲೋಕಸಭಾ ಸದಸ್ಯ ಚಂದ್ರಶೇಖರ ಮೂರ್ತಿ ನಿಧನರಾದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಕೃಷ್ಣ ಸಂಪುಟದ ಪ್ರಭಾವಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸ್ಪರ್ಧಿಸಿ ದರು. ಅದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ. ಶಿವಕುಮಾರ್ ಕನಕಪುರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಭಾವ ಹೊಂದಿದ್ದವರು. ಕೃಷ್ಣರ ಸಂಪುಟದ ಪ್ರಭಾವಿ ಸಚಿವರು ಬೇರೆ. ಹೀಗಾಗಿ ದೇವೇಗೌಡರ ವಿರುದ್ಧ ಡಿ.ಕೆ. ಶಿವಕುಮಾರ್ ಅವರನ್ನು ಗೆಲ್ಲಿಸಲು ಎಸ್.ಎಂ.ಕೃಷ್ಣರ ಸಂಪುಟವೇ ಬೀದಿಗಿಳಿಯಿತು.

ಆದರೆ ಪ್ರಚಾರ ಕಾರ್ಯ ಶುರುವಾಗುತ್ತಿದ್ದಂತೆಯೇ ಕನಕಪುರ ಲೋಕಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಲೇ, ಆ ಡಿ.ಕೆ. ಶಿವಕುಮಾರುಂಗೆ ಮಾಡೋಕೆ ಕೆಲಸ ಇದೆ. ಆದ್ರೆ ದೇವೇಗೌಡ್ರಿಗೆ ಏನೈತೆ ಕೆಲಸ? ಹೀಗಾಗಿ ಶಿವಕುಮಾರು ಇಲ್ಲೇ ಮಿನಿಸ್ಟ್ರಾಗಿರಲಿ, ದೇವೇಗೌಡರು ಡೆಲ್ಲಿಗೆ ಹೋಗಲಿ ಎಂಬ ಮಾತು ಹಬ್ಬತೊಡಗಿತು. ಪರಿಣಾಮ ಡಿ.ಕೆ.ಶಿವಕುಮಾರ್ ಅವರು ಅದೇನೇ ಸರ್ಕಸ್ಸು ಮಾಡಿದರೂ ದೇವೇ ಗೌಡರ ಜಯಭೇರಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿದ್ದ ಕಾಂಗ್ರೆಸ್ ನಾಯಕ ಡಿ.ಕೆ. ನಾಯ್ಕರ್ ಒಂದು ಮನೆ ಕಟ್ಟಿದರು. ಈ ಮನೆ ಕಟ್ಟುವ ಸಂದರ್ಭದಲ್ಲಿ ಅವರ ಆಪ್ತರು ಕೆಲವು ಗಂಧದ ತುಂಡುಗಳನ್ನು ಕೊಟ್ಟರು. ಹೀಗೆ ಆಪ್ತರು ಕೊಟ್ಟ ಗಂಧದ ತುಂಡುಗಳನ್ನು ಏನು ಮಾಡಬೇಕು ಎಂದು ಯೋಚಿಸುವಾಗ ಅವರಿಗೆ ಮನೆಯ ದ್ವಾರಬಾಗಿಲಿಗೆ ಅದನ್ನು ಬಳಸಿ ಕೊಳ್ಳಬಹುದು ಅನ್ನಿಸಿತು. ಅದರ ಪ್ರಕಾರವೇ ಗಂಧದ ತುಂಡುಗಳನ್ನು ಬಳಸಿ ಅವರು ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದರು.

ಆದರೆ ಅವರು ಮನೆ ಪೂರ್ಣಗೊಳಿಸಿ ಗೃಹ ಪ್ರವೇಶ ಮಾಡಿದ ಸಂದರ್ಭದಲ್ಲಿ ಬಂದವರ ಪೈಕಿ ಯಾರೋ ಒಬ್ಬರು ವೋಟು ಕೊಟ್ಟವರು ನಾವು, ಗಂಧದ ಮನೆ ಕಟ್ಟಿಸಿಕೊಂಡವರು ಇವರು ಎಂದು ಎತ್ತಿ ಆಡಿದರು. ಈ ಮಾತುಗಳು ಸುನಾಮಿಯಂತೆ ಪಸರಿಸಿದ್ದಷ್ಟೇ ಅಲ್ಲ ಡಿ.ಕೆ.
ನಾಯ್ಕರ್ ಅವರ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುವಂತೆ ಮಾಡಿದವು.

****
2006ರಲ್ಲಿ ದೇವೇಗೌಡರ ಮೇಲಿನ ಮುನಿಸಿನಿಂದ ಸಿದ್ಧರಾಮಯ್ಯನವರು ಜೆಡಿಎಸ್ ಪಾಳೆಯದಿಂದ ಹೊರಬಿದ್ದಿದ್ದರಿಂದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಉಪಚುನಾವಣೆ ಘೋಷಣೆಯಾದ ಕಾಲದಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಸರಕಾರ ಅಸ್ತಿತ್ವದಲ್ಲಿತ್ತಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಿದ್ಧರಾಮಯ್ಯ ಅವರ ವಿರುದ್ಧ ಉಭಯ ಪಕ್ಷಗಳ ನಾಯಕರ ದಂಡು ಚಾಮುಂಡೇಶ್ವರಿಯ ರಣಾಂಗಣಕ್ಕಿಳಿಯಿತು.

ಪರಿಣಾಮ ಪ್ರಚಾರ ಕಣದಲ್ಲಿ ಸಿದ್ಧರಾಮಯ್ಯ ಅವರ ಶಕ್ತಿ ಕುಗ್ಗಿದಂತೆ ಕಂಡಿತು. ಇನ್ನೇನು ಮತದಾನಕ್ಕೆ ಎರಡು ದಿನಗಳಿರುವಾಗ ಚುನಾ ವಣಾಧಿಕಾರಿಗಳು ಪ್ರಚಾರ ಕಾರ್ಯಕ್ಕೆ ಬ್ರೇಕ್ ಹಾಕಿದರು. ಯಾವ ಪಕ್ಷದವರೂ ಕ್ಷೇತ್ರದಲ್ಲಿರಕೂಡದು ಎಂದು ಕಟ್ಟಪ್ಪಣೆ ವಿಧಿಸಿದರು.
ಈ ಸಂದರ್ಭದಲ್ಲೇ ಮಾಧ್ಯಮಗಳ ವರದಿಗಾರರು ರಾಜಕೀಯ ಪಕ್ಷವೊಂದರ ಪ್ರಚಾರ ಸಾಮಗ್ರಿಗಳಿವೆ ಎಂಬ ಅನುಮಾನದಿಂದ ತಮಗೆ ಎದುರಾದ ವಾಹನವನ್ನು ಬೆನ್ನತ್ತಿದ್ದರು.

ಈ ವಾಹನ ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಜನ ಗುಂಪುಗೂಡಿದರು. ಅಷ್ಟೇ ಆಗಿದ್ದರೆ ಎಲ್ಲವೂ ತಣ್ಣಗಾಗುತ್ತಿತ್ತೇನೋ ಆದರೆ ಅಲ್ಲೇ ಸಮೀಪದ ಅತಿಥಿಗೃಹವೊಂದರಲ್ಲಿ ತಂಗಿದ್ದವರೊಬ್ಬರು ಏನು ಗಲಾಟೆಯಾಗುತ್ತಿದೆ ಎಂಬುದನ್ನು ನೋಡಲು ಹೊರಬಂದರು. ಹೀಗೆ ಹೊರಬಂ ದವರನ್ನು ನೋಡಿದ್ದೇ ತಡ, ವರದಿಗಾರರು ತಮ್ಮ ಕ್ಯಾಮೆರಾವನ್ನು ಆ ಕಡೆ ತಿರುಗಿಸಿ ಶೂಟ್ ಮಾಡತೊಡಗಿದರು. ಅವರು ಹೀಗೆ ಶೂಟ್ ಮಾಡತೊಡಗಿದ್ದೇ ತಡ, ನೋಡಲು ಹೊರ ಬಂದವರ ಹಿಂದಿದ್ದವರು ಅದೇನು ಕಿತ್ಕೋತೀಯೋ ಕಿತ್ಕೋ ಎಂಬಂತೆ ಸನ್ನೆ ಮಾಡಿದರು.

ಹೀಗಾಗಿ ಹೊರಬಂದವರ ಜತೆ ಸನ್ನೆ ಮಾಡಿದ ಆ ವ್ಯಕ್ತಿಯೂ ಕ್ಯಾಮೆರಾದಲ್ಲಿ ಸೆರೆಯಾಗಿ ಇಡೀ ರಾಜ್ಯವೇ ದಿಗ್ಭ್ರಮೆಯಿಂದ ನೋಡು ವಂತಾಯಿತು. ಅಂದ ಹಾಗೆ ಹೊರಗೆ ನಡೆಯುತ್ತಿರುತ್ತದೆ ಗಲಾಟೆ ಏನು ಅಂತ ನೋಡಲು ಅವತ್ತು ಅತಿಥಿಗೃಹದಿಂದ ಹೊರಬಂದವರು ಬೇರೆ ಯಾರೂ ಅಲ್ಲ, ಖುದ್ದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಪರಿಣಾಮ ಕ್ಷೇತ್ರದಾದ್ಯಂತ ಸಿದ್ಧರಾಮಯ್ಯ ಅವರನ್ನು ಸೋಲಿ ಸಲು ಇಡೀ ಸರಕಾರವೇ ಕುಳಿತಿದೆ ಎಂಬ ಭಾವನೆ ದಟ್ಟವಾಗಿ ಹರಡಿ, ಮತದಾರರಲ್ಲಿ ಸಿದ್ಧರಾಮಯ್ಯ ಅವರ ಪರವಾದ
ಒಲವು ಶುರುವಾಯಿತು. ಚುನಾವಣೆಯಲ್ಲಿ ಸಿದ್ಧರಾಮಯ್ಯ ಗೆಲುವು ಸಾಧಿಸಿದರು.
****
2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಷ್ಟೊತ್ತಿಗಾಗಲೇ ಅಸ್ತಿತ್ವಕ್ಕೆ ಬಂದಿದ್ದ ಮೈತ್ರಿಕೂಟ ಸರಕಾರದಲ್ಲಿ ಕಾಂಗ್ರೆಸ್ ಪಾಲುದಾರನಾಗಿದ್ದರಿಂದ ಆ ಪಕ್ಷದಿಂದ ಬೇರೆಯವರು ಸ್ಪರ್ಧಿಸದೆ ನಿಖಿಲ್ ಕುಮಾರ ಸ್ವಾಮಿಗೆ ಬೆಂಬಲ ಘೋಷಿಸಿದ್ದರು. ಇಂತಹ ಕಾಲದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದವರು ಅಂಬರೀಶ್ ಅವರ ಪತ್ನಿ ಶ್ರೀಮತಿ ಸುಮಲತಾ.

ಸರಿ, ಪ್ರಚಾರ ಕಾರ್ಯ ಶುರುವಾಯಿತು. ಇನ್ನೇನು ಅದು ಬಿರುಸು ಪಡೆಯಬೇಕು ಎಂಬ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡಪ್ಪ ಹೆಚ್.ಡಿ.ರೇವಣ್ಣ ಅವರು ಗಂಡ ಸತ್ತು ಇನ್ನೂ ನಾಲ್ಕು ದಿನಗಳಾಗಿಲ್ಲ ಆಗಲೇ ರಾಜಕೀಯ ಶುರು ಮಾಡಿದ್ದಾರೆ ಎಂಬರ್ಥದಲ್ಲಿ ಸುಮಲತಾ ವಿರುದ್ಧ ವಾಗ್ಧಾಳಿ ನಡೆಸಿದರು. ಯಾವಾಗ ರೇವಣ್ಣ ಅವರು ಇಂತಹ ಮಾತುಗಳನ್ನಾಡಿದರೋ ಆಗ ಮಂಡ್ಯ ಲೋಕಸಭಾ ಕ್ಷೇತ್ರದುದ್ದ ಆ ಧ್ವನಿಯಲ್ಲಿದ್ದ ಕ್ರೌರ್ಯ ಮಾರ್ದನಿಸಿತು. ಅಷ್ಟೇ ಅಲ್ಲ, ಪ್ರಚಾರ ಕಾರ್ಯ ನಡೆದಂತೆಯಲ್ಲ ಸುಮಲತಾ ಪರವಾದ ಅನು ಕಂಪದ ಅಲೆ ಕ್ಷೇತ್ರವನ್ನು ಆವರಿಸಿತು. ಅಂದ ಹಾಗೆ ಸುಮಲತಾ ಅವರಿಗೆ ತೆರೆಯ ಹಿಂದಿನಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಬೆಂಬಲ ನೀಡಿದ್ದರಾದರೂ ರೇವಣ್ಣ ಅವರು ಒಂದು ಮಾತು ಈ ಬೆಂಬಲವನ್ನು ಗೆಲುವಿನ ದಡಕ್ಕೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತು.

****
ಅಂದ ಹಾಗೆ ಇದನ್ನೆಲ್ಲ ಏಕೆ ನೋಡಬೇಕೆಂದರೆ ರಾಜಕೀಯದಲ್ಲಿ ಬಾಯಿ ತಪ್ಪಿ ಆಡುವ ಒಂದು ಮಾತು, ಎಚ್ಚರ ತಪ್ಪಿ ಇಡುವ ನಡೆ ವಿನಾಶಕಾರಿ ಅಸ್ತ್ರಗಳಂತಾಗಿ ಬಿಡುತ್ತವೆ. ಹೀಗಾಗಿ ರಾಜಕಾರಣದಲ್ಲಿ ರುವವರು ಯಾವ ಕ್ಷಣದಲ್ಲೂ ಮೈ ಮರೆಯುವ ಹಾಗೆಯೇ ಇಲ್ಲ. ಪರಿಸ್ಥಿತಿ ಹೀಗಿರುವಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದ ಮುಂದೆ ಆಡಳಿತಾರೂಢ ಬಿಜೆಪಿ ಡಜನ್ನುಗಟ್ಟಲೆ ಸಮ್ಮೋಹನಾಸ್ತ್ರಗಳನ್ನು ಬಳಸಿ ಕುಳಿತಿದೆ ಅದು ಪ್ರಯೋಗಿಸಿರುವ ಹಿಜಬ್ ಅಸ್ತ್ರವೇ ಇರಬಹುದು, ಮತಾಂತರ ನಿಷೇಧ ಕಾಯ್ದೆ ಇರಬಹುದು, ಲವ್ ಜೆಹಾದ್ ವಿಷಯವೇ ಇರಬಹುದು, ಕೇಸರಿ ಧ್ವಜವೇ ಇರಬಹುದು.

ಕೇಂದ್ರದ 370 ನೇ ವಿಧಿಯೇ ಇರಬಹುದು, ಒಟ್ಟಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳು ಕಾಂಗ್ರೆಸ್ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಈ ಪೈಕಿ ಯಾವ ವಿಷಯವೇ ಇರಬಹುದು, ಅದಕ್ಕೆ ಉತ್ತರಿಸದೆ ಇದ್ದರೆ ಕೈಲಾಗದವರು ಎಂಬ ದೂಷಣೆಗೆ ಗುರಿಯಾಗಬೇಕು, ಉತ್ತರಿಸಿದರೆ ಹಿಂದೂ ವಿರೋಽ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳಬೇಕು ಎಂಬಂತಿದೆ. ಹೀಗಾಗಿ ಏನು
ಮಾತನಾಡಿದರೆ ಏನು ತಪ್ಪಾಗುತ್ತದೋ ಎಂದು ಕಾಂಗ್ರೆಸ್ ನಾಯಕರು ಅಂಜಿಕೊಳ್ಳುವ ಸ್ಥಿತಿ ಬಂದಿದೆ.

error: Content is protected !!