Sunday, 8th September 2024

ದೇಹಸಮತೋಲನ- ಜೀವ ವಿಸ್ಮಯ ೨

ಶಿಶಿರ ಕಾಲ

shishirh@gmail.com

ವೇಗ ಎಂದಾಕ್ಷಣ ಮೊದಲು ನೆನಪಾಗುವುದು ಉಸೇನ್ ಬೋಲ್ಟ್. 100 ಮೀಟರ್ – 9.58 ಸೆಕೆಂಡಿನಲ್ಲಿ. ಎಂದರೆ ಆತನ ಸ್ಪೀಡ್ 10.44 ಮೀ. ಪ್ರತೀ ಕ್ಷಣಕ್ಕೆ, 37.58 ಕಿ.ಮೀ.ವೇಗ. ಆತ ಜೀರೋ ವೇಗದಿಂದ ಓಟ ಶುರುಮಾಡುವುದು. ಇದರರ್ಥ ಆತನ ಓಟದಲ್ಲಿ ಟಾಪ್ ಸ್ಪೀಡ್ ಅದಕ್ಕಿಂತ ಜಾಸ್ತಿ. 43.99 ಕಿಮೀ. ಪ್ರತೀ ಗಂಟೆಗೆ. ಬೈಕ್ ಕಾರು ಓಡಿಸುವವರು ಅದು ಎಷ್ಟು ವೇಗ ಎಂದು ವಾಹನ ಓಡಿಸುವಾಗ ಗ್ರಹಿಸಬಹುದು.

ವೇಗಕ್ಕೆ ಇನ್ನೊಂದು ಚೀತಾ – ಚಿರತೆ. ಚಿರತೆಯ ಗರಿಷ್ಠ ದಾಖಲಾದ ವೇಗ 128 ಕಿಮೀ. ಅಷ್ಟು ವೇಗವನ್ನು ಅಳೆದದ್ದು ಹೇಗೆ ಎಂದು ಹುಡುಕಾಡುತ್ತಿದ್ದಾಗ ಹೆಚ್ಚಾಗಿ ಜೀಪು ಅಥವಾ ವಾಹನದ ಹಿಂದೆ ಮಾಂಸವನ್ನು ಬಳ್ಳಿಯಲ್ಲಿ ಕಟ್ಟಿಕೊಂಡು ಓಡಿಸುವಾಗ ಹಿಂದೆ ಚಿರತೆಯನ್ನು ಬಿಟ್ಟು ಅಳೆದರು ಎನ್ನುವುದು. ಈಗ ಉದ್ಭವವಾದ ಪ್ರಶ್ನೆಯೆಂದರೆ ಚಿರತೆ ಯಾವಾಗಲೂ ಅಷ್ಟೇ ವೇಗದಲ್ಲಿ ಓಡುತ್ತದೆಯೇ? ಇದೇ ಪ್ರಶ್ನೆಯನ್ನು ಇಟ್ಟುಕೊಂಡು ಆಫ್ರಿಕಾದ ಕಾಡಿನಲ್ಲಿರುವ ಹತ್ತೆಂಟು ಚಿರತೆಗಳಿಗೆ ಜಿಪಿಎಸ್ ಮತ್ತು ಇನ್ನು ಕೆಲವು ಸೆನ್ಸಾರ್ ಗಳನ್ನೂ ಅಳವಡಿಸಿ ನೋಡಲಾಗಿ ಎರಡು ಮೂರು ತಿಂಗಳಲ್ಲಿ ಯಾವತ್ತೂ ಒಂದೇ ಒಂದು ಚಿರತೆ 100 ಕಿಮೀಗಿಂತ ವೇಗವಾಗಿ ಓಡಿದ್ದು ದಾಖಲಾಗಲೇ ಇಲ್ಲ.

ಏಕೆಂದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಓಡುವ ಪ್ರಮೇಯವೇ ಬಂದಿರಲಿಲ್ಲ. ಉಳಿದ ಅದರ ಬೇಟೆಗಳ ಅತಿ ಹೆಚ್ಚಿನ ವೇಗವೇ ಅಷ್ಟಾಗಿತ್ತು. ಆದರೆ ಈ ಪ್ರಯೋಗದ ಉಳಿದ ವಿವರಗಳನ್ನು ಓದುವಾಗ ಅಲ್ಲಿ ಢಾಳಾಗಿ ಕಂಡದ್ದು ಚಿರತೆಯ ದೇಹ ಸಮತೋಲನ ಕಾಪಾಡಿಕೊಳ್ಳುವ ಯಾಂತ್ರಿಕತೆ – ಮೆಕ್ಯಾನಿಸಂ. ಚಿರತೆಯನ್ನು ಚಿರತೆಯನ್ನಾಗಿಸಿದ್ದು ಅದರ ವೇಗವಲ್ಲ, ಅದರ ಸಮತೋಲನದ ತಾಕತ್ತು ಎನ್ನುವುದು ಈ ಒಂದಿಡೀ ಪ್ರಯೋಗ ಮತ್ತು ಅದರ ವಿಶ್ಲೇಷಣೆಯಿಂದ ತಿಳಿದುಬಂದದ್ದು.

ಪ್ರತಿಯೊಂದು ಪ್ರಾಣಿಗೆ ಅದರ ವೈಶಿಷ್ಟ್ಯ ತಂದುಕೊಡುವುದೇ ಅದರ ದೇಹದ ಬ್ಯಾಲೆನ್ಸ್‌ನ ಸಾಮರ್ಥ್ಯ. ಯಾವುದೇ ಪ್ರಾಣಿ ಯಿರಲಿ – ಈ ಬ್ಯಾಲೆನ್ಸಿಂಗ್‌ನಲ್ಲಿ ಸ್ವಲ್ಪವೇ ತಪ್ಪಿದರೂ ಸಾವು ಪಕ್ಕಾ. ಮಂಗನನ್ನೇ ತೆಗೆದುಕೊಂಡರೆ ಅದರ ಬಾಲವೇ ಅದರ ಸಮತೋಲನ, ಎಲ್ಲ ಮಂಗಾಟಗಳನ್ನೂ ಸಾಧ್ಯವಾಗಿಸುವುದು. ಬಾಲವಿದ್ದರೆ ಮಂಗಗಳ ಮರದ ಮೇಲಿನ ವೇಗ ಮನುಷ್ಯ ನಿಗೂ ಸಾಧ್ಯವಾಗುತ್ತಿತ್ತೇನೋ.

ಯಾವುದೇ ಜೀವಿಯಿರಲಿ, ಎಲ್ಲ ಸಂವೇದಿ ಇಂದ್ರಿಯಗಳು ಸಮವಿದ್ದರಷ್ಟೇ ಬದುಕು ಸಾಧ್ಯ. ಸಾಮಾನ್ಯವಾಗಿ ಪಂಚೇಂದ್ರಿಯ ಗಳೇ ಮುಖ್ಯ ಎನ್ನುತ್ತೇವೆ ಆದರೆ ಸುಪ್ತ ಇಂದ್ರಿಯಗಳು ಅದೆಷ್ಟು ಮುಖ್ಯೆ ಅನ್ನುವುದು ಯಾವುದೇ ಒಂದು ಸರಿಯಿಲ್ಲದ ಸ್ಥಿತಿ ಉಂಟಾದಾಗ ಮಾತ್ರ ಅನುಭವಕ್ಕೆ ಬರುತ್ತದೆ. ನನ್ನ ಸಹೋದ್ಯೋಗಿಯೊಬ್ಬರಿಗೆ ಐವತ್ತರ ಆಸುಪಾಸು. ಅವರಿಗೊಂದು ವಿಚಿತ್ರ ಸಮಸ್ಯೆ ಎದುರಾದದ್ದು ಇತ್ತೀಚೆ ಹಂಚಿಕೊಕೊಂಡಿದ್ದರು.

ಅವರ ದೇಹದಲ್ಲಿ ಬ್ಯಾಲೆನ್ಸ್ ಅನ್ನು ಕಾಪಾಡುವ ಅಂಗ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕ್ರಮೇಣ ಸಮಯ ಕಳೆದಂತೆ ಈ
ಸಮಸ್ಯೆ ಅದೆಷ್ಟು ಉಲ್ಬಣವಾಯಿತೆಂದರೆ ಅವರು ನಿಂತಲ್ಲಿಂದ ಒಮ್ಮಿಂದೊಮ್ಮೆಲೆ ಒಂದಿಷ್ಟು ದೂರ ಹೋಗಿ ನೆಲಕ್ಕೆ ಬಿದ್ದು
ಬಿಡುತ್ತಿದ್ದರು. ಮನುಷ್ಯನ ದೇಹ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಳ ಕಿವಿಯ Labyrinth Semicircular
Canals (ಲಿಬೃಂತ್ಸ ) ಎನ್ನುವ, ಶೇಂಗಾ ಬೀಜದಷ್ಟು ಚಿಕ್ಕ ಅಂಗ.

ಇದರಲ್ಲಿ ದ್ರವ ತುಂಬಿಕೊಂಡಿರುತ್ತದೆ ಮತ್ತು ನಮ್ಮ ದೇಹದ ಸಮತೋಲನ ಗುರುತ್ವಾಕರ್ಷಣ ಶಕ್ತಿಗನುಗುಣವಾಗಿ ಈ ದ್ರವ ಚಲಿಸಿ ಆ ಮೂಲಕ ಮೆದುಳು ಅದನ್ನು ಗ್ರಹಿಸಿ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಮಾಡುತ್ತದೆ. ಹಾಗೆ ನೋಡಿದರೆ ಈ ಚಿಕ್ಕ ಅಂಗದ ಮಹತ್ವ ಉಳಿದ ಪಂಚೇಂದಿಡ್ರಿಯದಷ್ಟೇ. ನನ್ನ ಸಹೋದ್ಯೋಗಿಗೆ ಲಿಬೃಂತ್ ನ ಮೂರು ಅರ್ಧಚಂದ್ರಾ ಕೃತಿಯ ಭಾಗಗಳಲ್ಲಿ ಒಂದರಲ್ಲಿ ಇನೆಕ್ಷನ್ ಕಾಣಿಸಿಕೊಂಡಿತ್ತು. ಹಾಗಾಗಿ ಅವರ ಇಡೀ ದೇಹದ ಸಮತೋಲನದ ಬಗ್ಗೆ ತಪ್ಪು ಲೆಕ್ಕಾಚಾರ ಮೆದುಳಿಗೆ ರವಾನೆಯಾಗಿ ಮೆದುಳು ಸರಿ ನಿಂತಾಗ ಬೀಳುವುದನ್ನು ತಡೆಗಟ್ಟುವ ಸಂವೇದನೆಯನ್ನು ದೇಹದ ಅಂಗಗಳಿಗೆ ಕಳುಹಿಸಿ ಅವರನ್ನು ಅವರ ದೇಹದ ಅಂಗಗಳೇ ದೂಡಿ ಬೀಳುವಂತೆ ಮಾಡುತ್ತಿತ್ತು.

ಈ ಇಂದ್ರಿಯಗಳು ಮತ್ತು ಸಂವೇದನೆಗಳ ಬಗ್ಗೆ ಇತಿಹಾಸದುದ್ದಕ್ಕೂ ನಾನಾರೀತಿಯ ಪರೀಕ್ಷೆಗಳು ನಡೆದಿವೆ. ಈ ಇಂದ್ರಿಯ ಗಳ ಬಗ್ಗೆ ಬಹಳ ಮೊದಲೇ ಒಂದಿಷ್ಟು ಪರೀಕ್ಷೆ ಮಾಡಿದವನು ಅಲೆಸ್ಯಾಂಡ್ರೋ ವೋಲ್ಟಾ. ವೋಲ್ಟಾ 1970 ರಲ್ಲಿ ಅರಿಸ್ಟಾಟಲ್ ಉಖಿಸಿದ ಪಂಚೇಂದ್ರಿಯಗಳನ್ನು ಇನ್ನಷ್ಟು ಅರಿಯಲು ತನ್ನ ಮೇಲೆಯೇ ಪ್ರಯೋಗಕ್ಕೆ ಮುಂದಾದ. ಮೊದಲಿಗೆ ಎರಡು ಚಿಕ್ಕ ಎಲೆಕ್ಟ್ರೋಡ್‌ಗಳ ಮೂಲಕ ಕಣ್ಣಿಗೆ ಚಿಕ್ಕ ಶಾಕ್ ಕೊಟ್ಟುಕೊಂಡ.

ಆಗ ಆತನಿಗೆ ಅಲ್ಲಿ ಬೆಳಕಿಲ್ಲದಿದ್ದರೂ ಬೆಳಕಿನ ಅನುಭವವಾಯಿತು. ನಂತರ ಚರ್ಮಕ್ಕೆ ಅದೇ ರೀತಿ ವಿದ್ಯುತ್ ಹಾಯಿಸಿ ಕೊಂಡಾಗ ಬಿಸಿ ಮತ್ತು ನೋವು ಅನುಭವಕ್ಕೆ ಬಂತು. ನಾಲಿಗೆಗೆ ಶಾಕ್ ಕೊಟ್ಟಾಗ ಒಂದು ವಿಚಿತ್ರ ರುಚಿಯ ಅನುಭವ ವಾಯಿತು. (ಬ್ಯಾಟರಿ ಸೆಲ್ಲಿನ ತುದಿಗೆ ನಳಿಗೆ ತಾಗಿಸಿಕೊಂಡು ಇದನ್ನು ಅನುಭವಿಸಬಹುದು) ಆದರೆ ಒಳ ಕಿವಿಗೆ ಶಾಕ್ ಕೊಟ್ಟುಕೊಂಡಾಗ ಏನೂ ಆಗಲೇ ಇಲ್ಲ. ನಂತರ ವಿದ್ಯುತ್ ಪ್ರಮಾಣವನ್ನು 30 ವೋಲ್ಟಗೆ ಹೆಚ್ಚಿಸಿ ಶಾಕ್ ಕೊಟ್ಟಾಗ
ಆತನಿಗೆ ದೊಡ್ಡ ಶಬ್ದದ ಅನುಭವದ ಜೊತೆ ಜೊತೆ ತಲೆ ತಿಗುರುವ ಅನುಭವವೂ ಆಯಿತು. ಬಹುಶಃ ಆಗ ವೋಲ್ಟಾ ತಲೆ ತಿರುಗಿದ್ದು – ಉಂಟಾದ ದೊಡ್ಡ ಶಬ್ದದ ಅನುಭವದಿಂದ ಎಂದೇ ಅಂದುಕೊಂಡಿರಬೇಕು.

ಇದಾದ ಸುಮಾರು ನಾಲ್ಕು ದಶಕದ ನಂತರ -ರೆನ್ಸ ಇಡೀ ದೇಹದ ಸಮತೋಲನಕ್ಕೆ ಒಳ ಕಿವಿಯ ಒಂದು ಭಾಗ ಕಾರಣ ಎನ್ನುವುದು ಕಂಡುಹಿಡಿದದ್ದು. ಯಾವ ಪ್ರಾಣಿಗಳಲ್ಲಿ ಈ ಬ್ಯಾಲೆನ್ಸ್ ಮಾಡುವ ಅಂಗ ಹೆಚ್ಚು ವಿಕಾಸಗೊಂಡಿದೆಯೋ ಅವೆಲ್ಲ ವೇಗದಲ್ಲಿ ಅಥವಾ ಬದುಕುವ ಚಾಕಚಕ್ಯತೆಯಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿವೆ ಎಂದೇ ಅರ್ಥ. ಹಾಗೆ ನೋಡಿದರೆ ಎರಡು ಕಾಲಿನಲ್ಲಿ ನಡೆಯಲು ಮನುಷ್ಯ ಶುರುಮಾಡಿದ್ದು ಇಡೀ ವಿಕಸನದಲ್ಲಿಯೇ ಮಹತ್ವದ್ದು.

ಎರಡು ಕಾಲಿನಲ್ಲಿ ನಿಲ್ಲುವುದು, ಓಡುವುದು ಇವೆಲ್ಲ ಅತ್ಯಂತ ಕಷ್ಟದ್ದು. ಮುಂದೆ, ಹಿಂದೆ, ಆಚೀಚೆ ಹೇಗೆ ಬೇಕಾದರೂ
ಬೀಳಬಹುದು. ಆ ಕಾರಣಕ್ಕೆ ಜಗತ್ತಿನಲ್ಲಿ ಎರಡು ಕಾಲಿನಲ್ಲಿ ಚಲಿಸುವ ಪ್ರಾಣಿ ವರ್ಗ ತೀರಾ ಕಡಿಮೆ. ಹೆಚ್ಚಿನವು ನಾಲ್ಕು
ಕಾಲು ಅಥವಾ ಹಕ್ಕಿಗಳಾದಲ್ಲಿ ಕಾಲು ಮತ್ತು ರೆಕ್ಕೆಯನ್ನು ಬಳಸಿಯೇ ಚಲಿಸುತ್ತವೆ. ಮನುಷ್ಯ ಮಾತ್ರ ಕೈಯನ್ನು ಸಮತೋಲನಕ್ಕೆ ಬಳಸಿದರೂ ಕೈ ಇಲ್ಲದೆಯೇ ಬದುಕಬಲ್ಲ.

ಈ ಕುತ್ತಿಗೆಯ ಮೇಲಿನ ಭಾಗ ನೆಲಕ್ಕೆ ಅಡ್ಡಲಾಗಿ ಚಲಿಸುವುದರಿಂದ ಲಂಬವಾಗಿ ಇಟ್ಟು ಚಲಿಸುವುದಕ್ಕೆ ಕಲಿಯುವ ಹಂತದಲ್ಲಿ ಈ ಇಡೀ ಸಮತೋಲನ ಕಾಪಾಡುವ ಅಂಗ ಕೂಡ ಅಷ್ಟೇ ಬದಲಾವಣೆಯನ್ನು ಹೊಂದಿದೆ. ಉಸೇನ್ ಬೋಲ್ಟ ಮತ್ತು ಚಿರತೆಯ ಸ್ಲೋ ಮೋಷನ್ ವಿಡಿಯೋವನ್ನು ಕೆಲ ದಿನಗಳ ಹಿಂದೆ ಯುಟ್ಯೂಬ್‌ನಲ್ಲಿ ನೋಡುತ್ತಿದ್ದೆ. ಇದಾದ ನಂತರ ಅತ್ಯಂತ ವೇಗವಾಗಿ ಸ್ಪ್ರಿಂಟ್ ಮಾಡುವ ಹಲವು ಓಟಗಾರರ ವಿಡಿಯೋ ಕೂಡ ನೋಡಿದಾಗ ಅಲ್ಲ ಕಾಣಿಸಿದ್ದು ಒಂದು ಅಂಶ. ಅದೇನೆಂದರೆ ಚಿರತೆ, ಉಸೇನ್ ಬೋಲ್ಟ್, ಉಳಿದ ಓಟಗಾರರು ಓದುವಾಗ ಅವರ ತಲೆಯ ಭಾಗ ಓಟದ ಉದ್ದಕ್ಕೂ ನೆಲದಿಂದ ಒಂದೇ ಅಂತರದಲ್ಲಿ ಇದ್ದದ್ದು.

ಉಸೇನ್ ಒಂದು ಕಡೆ ಇಂಟರ್‌ವ್ಯೂನಲ್ಲಿ ಓಟಗಾರರಿಗೆ ಕಿವಿ ಮಾತು ಹೇಳುತ್ತ work on your balance not muscle ಎಂದು ಹೇಳುತ್ತಾನೆ. ಸಮತೋಲನ ಮಾಂಸಖಂಡಕ್ಕಿಂತ ಮುಖ್ಯ ಎನ್ನುತ್ತಾನೆ. ಇದು ಚಿರತೆ ಸೇರಿದಂತೆ ಎಲ್ಲ ಪ್ರಾಣಿ ಪ್ರಭೇದಗಳ ವೇಗಕ್ಕೂ ಅನ್ವಯವಾಗುತ್ತದೆ. ಚಿರತೆ ಓಡುವಾಗ ತಲೆಯಭಾಗ ಅದೆಷ್ಟು ಸ್ಥಿವಾಗಿರುತ್ತದೆಂದರೆ ಅದು ಬೇಟೆ ಯನ್ನು ಕಣ್ಣು ಒಂಚೂರೂ ಮೇಲೆ ಕೆಳಗೆ ಮಾಡದಂತೆ ಸ್ಪಷ್ಟವಾಗಿ ನೋಡಬಲ್ಲದು. ಇದರ ಜತೆ ಇದರಿಂದಾಗಿ ಅದರ ಒಳಕಿವಿಯಲ್ಲಿರುವ ಸಮತೋಲನದ ಅಂಗ ಕೂಡ ಅಷ್ಟೇ ಸಮರ್ಥವಾಗಿ ಕೆಲಸಮಾಡಬಲ್ಲದು.

ಈ ಸಮತೋಲನವಿಲ್ಲದಿದ್ದಲ್ಲಿ ಚಿರತೆ ಆ ವೇಗವನ್ನು ಯಾವತ್ತೂ ಪಡೆಯುತ್ತಲೇ ಇರಲಿಲ್ಲ. ಇದೆಲ್ಲ ಸಮತೋಲನದ ಬಗ್ಗೆ ವಿಚಾರ ಮಾಡುವಾಗ ನನಗೆ ಅಚ್ಚರಿಯ ನೆನಪಾಗುವುದು ಯಕ್ಷಗಾನದ ಹಾಸ್ಯ ನಟ ಸೀತಾರಾಮ್ ಕುರ್ಮಾ. ನಾನು ಚಿಕ್ಕವನಾಗಿzಗ ನೋಡಿದ ಯಕ್ಷಗಾನದಲ್ಲಿ ಸೀತಾರಾಮ್ ಕುಮಾರ್ ರಂಗಸ್ಥಳಕ್ಕೆ ಬಂದು, ಅಬ್ಬರ ಚಂಡೆಯ ಸದ್ದಿಗೆ ಸುಮಾರು ಒಂದು ನೂರು ಗಿರ್ಕಿ ಹೊಡೆಯುತ್ತಿದ್ದರು. ಇಷ್ಟು ಚಿಕ್ಕ ರಂಗಸ್ಥಳ, ಅವರು ಗಿರ್ಕಿ ಹೊಡೆಯುವುದನ್ನು ನೋಡುತ್ತಿದ್ದರೆ ನಮಗೆಲ್ಲ ಎಲ್ಲಿ ಬಿದ್ದು ಬಿಡುತ್ತಾರೇನೋ ಎಂದು ಟೆನ್ಷನ್ ಆಗುತ್ತಿತ್ತು. ಆದರೆ ಸೀತಾರಾಮ್ ಕುಮಾರ್ ನೂರು ಗಿರ್ಕಿ ಹೊಡೆದ ನಂತರದ ಕ್ಷಣದ ಯಕ್ಷಗಾನದ ಭಾಗವತಿಕೆಗೆ, ಮದ್ದಳೆಗೆ ಹೆಜ್ಜೆ ಹಾಕುತ್ತಿದ್ದರು.

ಇಷ್ಟು ಹೊತ್ತು ತಿರಿಗಿದವರು ಬೇರೆಯಾರೋ ಎನ್ನುವಷ್ಟು ದೇಹದ ಸಮತೋಲನ. ಈ ಲಿಬೃಂತ್ಸ್ ಬಗ್ಗೆ ಓದಿ ತಿಳಿದಾಗ ನನಗೆ ಮೊದಲು ನೆನಪಿಗೆ ಬಂದದ್ದೇ ಅವರು. ಬಹುಶಃ ಅವರಿಗೆ ಲಿಬೃಂತ್ಸ್ ಇರಲೇ ಇಲ್ಲವೇನೋ? ಇರದಿದ್ದಲ್ಲಿ ಅವರು ನಂತರದಲ್ಲಿ ಹೆಜ್ಜೆ ಹಾಕುತ್ತಿದ್ದುದು, ನಿಲ್ಲುತ್ತಿದ್ದುದು ಹೇಗೆ? ಇತ್ಯಾದಿ. ತೆಂಕು ತಿಟ್ಟಿನ ಯಕ್ಷಗಾನಗಳಿಂದ ಹಿಡಿದು ಬ್ಯಾಲೆ ಆದಿಯಾಗಿ ಹಲವು ನಾಟ್ಯ ಪ್ರಕಾರಗಳಲ್ಲಿ ಈ ರೀತಿ ಅತಿಮಾನುಷ ರೀತಿಯಲ್ಲಿ ಸುತ್ತುವುದು ಸಾಮಾನ್ಯ.

ಆದರೆ ಎಲ್ಲ ಕಡೆ ನೀವು ಸೂಕ್ಷ್ಮವಾಗಿ ಗ್ರಹಿಸಿದಲ್ಲಿ ಅವರೆಲ್ಲ ಸುಮ್ಮನೆ ಸುತ್ತುವುದಿಲ್ಲ. ಬದಲಿಗೆ ಮೊದಲು ಮುಂಡದ ಭಾಗ
೧೮೦’ ತಿರುಗಿಸುತ್ತಾರೆ, ನಂತರ ಮುಂದಿನ ಅರೆಕ್ಷಣದಲ್ಲಿ ತಲೆಯ ಭಾಗ ತಿರುಗಿಸುತ್ತಾರೆ. ಹೀಗೆ ಮಾಡುವ ಮೂಲಕ ಅವರು
ಒಂದು ಸುತ್ತು ಬರುವಾಗ ಅರ್ಧ ಕ್ಷಣ ಮಾತ್ರ ತಲೆಯ ಭಾಗ ತಿರುಗುತ್ತದೆ. ಆಗೆಲ್ಲ ಅವರ ದೃಷ್ಟಿ 180’ಯ ಎರಡು
ಬಿಂದುಗಳಲ್ಲಿಯೇ ಕೇಂದ್ರಿತವಾ ಗಿರುತ್ತದೆ.

ಹೀಗೆ ಮಾಡುವುದರಿಂದ ಒಳ ಕಿವಿಯಲ್ಲಿರುವ ಸಮತೋಲನದ ಅಂಗಕ್ಕೆ ಅರೆಕ್ಷಣ ತಿರುಗಿ ಇನ್ನೊಂದು ಅರೆಕ್ಷಣ ಸುಧಾರಿಸಿ ಕೊಳ್ಳಲು ಸಮಯ ಸಿಗುತ್ತದೆ. ಅದರ ಅರ್ಥ ಅವರ ದೇಹ ಯಾವುದೇ ಸಮಯದಲ್ಲಿ ಅರೆಕ್ಷಣ ಮಾತ್ರ ತಿರುಗುತ್ತಿದೆ ಎನ್ನುವ ಗ್ರಹಿಕೆ ಮೆದುಳಿಗೆ ರವಾನೆಯಾ ಗುತ್ತದೆ. ಹಾಗಾಗಿ ಅವರೆಲ್ಲ ತಲೆ ತಿರುಗಿ ಬೀಳುವುದಿಲ್ಲ. ಇದೊಂದು ರೀತಿಯಲ್ಲಿ ನಮ್ಮ ಮೆದುಳನ್ನು ಮೋಸಮಾಡುವುದು ಎನ್ನುವುದಕ್ಕಿಂತ ಟ್ರೈನ್ ಮಾಡುವುದು ಎಂದು ಹೇಳಬಹುದು.

ಅದು ಬಿಟ್ಟು ದೇಹ ಮತ್ತು ತಲೆಯನ್ನು ಒಂದೇ ಸಮನೆ ಅಡ್ನಾಡಿ ತಿರುಗಿಸಿದರೆ ಆ ನೃತ್ಯಪಟು ಒಂದೆರಡು ಸುತ್ತಿನಲ್ಲಿಯೇ ತಲೆತಿರುಗಿ ಬೀಳುವುದು ಪಕ್ಕಾ. ಈ ಕಾರಣಕ್ಕೆ ಈ ಎಲ್ಲ ನೃತ್ಯಪಟುಗಳಿಗೆ ಕತ್ತಲೆಯಲ್ಲಿ ಗಿರ್ಕಿ ಹೊಡೆಯಲು ಸಾಧ್ಯ ವಾಗುವು ದಿಲ್ಲ. ಹಾಗಂತ ಕೇವಲ ಈ ಲಿಬೃಂತ್ಸ್ ಒಂದೇ ಸಮತೋಲನಕ್ಕೆ ಸರ್ವಕಾರಣ ಎನ್ನುವಂತಿಲ್ಲ. ಅದು ಕೇವಲ ಮೆದುಳು ಸಮತೋಲನಕ್ಕೆ ಬಳಸುವ ಅಂಗವಷ್ಟೇ. ನೀವು ಸುರಂಗದೊಳಕ್ಕೆ ಹೋಗುವ ವಿಡಿಯೋವನ್ನು ನಿಮ್ಮ ಸುತ್ತ 360’ ನೋಡಿದರೆ ಕೂತಲ್ಲಿಯೇ ನಿಮಗೆ ತಲೆ ತಿರುಗುತ್ತದೆ. ಕೆಲವು ೩ಈ ವಿಡಿಯೋ ನೋಡುವಾಗ ತಲೆ ತಿರುಗುವ ಅನುಭವ ವಾಗುವುದು ಇದೆ.

ಮೆದುಳು ಒಂದು ವಂರ್ಡ ಎನ್ನುವುದಕ್ಕೆ ಇದೊಂದು ಉದಾಹರಣೆ. ನೀವು ಈ ರೀತಿಯ ೩ಈ ವಿಡಿಯೋ ನೋಡುವಾಗ
ಮೆದುಳು ಈ ಲಿಬೃಂತ್ಸ್ ಸರಿ ಕೆಲಸ ಮಾಡುತ್ತಿಲ್ಲವೇನೋ ಎಂದು ಗ್ರಹಿಸಿ ಕಣ್ಣಿನ ಮೇಲೆಯೇ ಹೆಚ್ಚು ಅವಲಂಬಿತವಾಗುತ್ತದೆ.
ಆಗ ತಲೆತಿರುಗಿದ ಅನುಭವವಾಗುತ್ತದೆ. ಒಂದು ವೇಳೆ ಕಗ್ಗತ್ತಲ ಕೋಣೆಯಲ್ಲಿ ಬಹಳ ಹೊತ್ತು ಒಂದೇ ವೇಗದಲ್ಲಿ ತಿರುಗುವ
ಕುರ್ಚಿಯಲ್ಲಿ ಕೂತಿದ್ದರೆ ಆಗ ನಮಗೆ ತಿರುಗುತ್ತಿರುವ ಅನುಭವ ಶೂನ್ಯವಾಗಿ ಬಿಡುತ್ತದೆ.

ಅದಕ್ಕೆ ಕಾರಣ ಲಿಬೃಂತ್ಸ್ ನಲ್ಲಿರುವ ದ್ರವ ಒಂದೇ ವೇಗದಿಂದಾಗಿ ಒಂದೇ ಸ್ಥಳದಲ್ಲಿರುತ್ತದೆ ಮತ್ತು ಕಣ್ಣಿಗೆ ಕೂಡ ಕಗ್ಗತ್ತಲೆ ಯಿಂದಾಗಿ ತಿರುಗುವ ಅನುಭವವಾ ಗುವುದಿಲ್ಲ. ಆಗ ಅಲ್ಲಿ ಬ್ಯಾಲೆನ್ಸಿಗೆ ಮೆದುಳು ಮೂರನೆಯ ಅಂಗವಾದ ಚರ್ಮ,ಗಾಳಿಯ ಸ್ಪರ್ಶವನ್ನು ಆಶ್ರಯಿಸುತ್ತದೆ. ಗಾಳಿಯೂ ಬೀಸದಂತಾದರೆ ತಿರುಗುವುದು ನಮ್ಮ ಅರಿವಿಗೇ ಬರುವುದಿಲ್ಲ. ನಂತರ ತಿರುಗುವ ಅರಿವು ಬರುವುದು ಸಡನ್ನಾಗಿ ತಿರುಗುವ ಕುರ್ಚಿಯನ್ನು ನಿಲ್ಲಿಸಿದಾಗ.

ಇಲ್ಲಿ ಹೇಳಲು ಹೋರಟ ಇನ್ನೊಂದು ವಿಚಾರವೆಂದರೆ ಒಂದು ಅಂಗ ಸರಿ ಕೆಲಸ ಮಾಡುತ್ತಿಲ್ಲ ಎಂದು ಮೆದುಳಿಗೆ ಅನುಮಾನ ಬಂದಾಗ ಅದು ಗ್ರಹಿಕೆಗೆ ಬರದಂತೆ ಇನ್ನೊಂದು ಅಂಗದ ಮೇಲೆ ಅವಲಂಬನೆಯನ್ನು ಸ್ಥಳಾಂತರಿಸುವ ಜಾಣತನದ ಬಗ್ಗೆ.

error: Content is protected !!