Thursday, 19th September 2024

ಜಾತಿಸೃಷ್ಟಿ, ಅಂಬೇಡ್ಕರ್‌ ಮತ್ತು ದಲಿತ ಪ್ರಜ್ಞೆಯ ವಿನ್ಯಾಸಗಳು

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್ ಬರಹಗಾರ, ಶಿಕ್ಷಕ

ಜಾತಿಯನ್ನು ಹುಟ್ಟುಹಾಕಿದವನು ಬ್ರಾಹ್ಮಣ. ಮುಖ್ಯವಾಗಿ ಮನು. ಆದುದರಿಂದ ಮನುವನ್ನೂ, ಬ್ರಾಹ್ಮಣರನ್ನೂ, ಇವರಿಂದ
ಹುಟ್ಟಿದ ಜಾತಿಯನ್ನೂ ಸರ್ವನಾಶ ಮಾಡದ ಹೊರತು ಯಾರೂ ಸುಖವಾಗಿ ಈ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ – ಎಂಬ ಸುಳ್ಳುಸುದ್ದಿಯೊಂದು ಹಲವು ವರ್ಷಗಳಿಂದ ಪ್ರಚಾರಕ್ಕೆ ಬಂದು ಆಗಾಗ ತುರಿಯಾವಸ್ಥೆಯನ್ನು ಮುಟ್ಟಿ ಚರ್ಚೆಗೆ ಗ್ರಾಸವಾಗು ತ್ತಲೇ ಇರುತ್ತದೆ.

ದಲಿತರು ರಾಷ್ಟ್ರದ ಒಂದು ಭಾಗವಾಗಿ ತಾವೇನೇ ಮಾಡಿದರೂ ಅದು ತಮಗೇ ಹಾನಿಯನ್ನುಂಟು ಮಾಡುತ್ತದೆಂಬುದನ್ನೂ
ಮರೆತು ತಮ್ಮ ಜಾತಿಯನ್ನಾಧರಿಸಿದ ಮೀಸಲಾತಿಗೆ ಒತ್ತುಕೊಟ್ಟು ಸಂಘರ್ಷಕ್ಕಿಳಿಯುತ್ತಲೇ ಇರುತ್ತಾರೆ. Of course ಸಂಘರ್ಷ ಕ್ಕಿಳಿಯುವಂಥ ಹಲವು ಘಟನೆಗಳು ನಡೆಯುತ್ತಲೂ ಇರುತ್ತದೆ. ಜಾತಿ ಹುಟ್ಟಿಕೊಂಡ ಬಗೆಗೆ ಅಂಬೇಡ್ಕರ್ ತುಂಬಾ ಚೆನ್ನಾಗಿ ಓದಿಕೊಂಡವರು ಮಾತ್ರವಲ್ಲ, ಜಾತಿಯ ಬಗ್ಗೆ ಮಾತಾಡಲು ಪೂರ್ಣಪ್ರಮಾಣದಲ್ಲಿ ನೈತಿಕತೆಯುಳ್ಳವರು.

ಎಲ್ಲಾ ದಲಿತರೂ ಅಂಬೇಡ್ಕರರಂತೆ ಯೋಚಿಸಲಾರರು; ಅಂಬೇಡ್ಕರರು ಇಂದಿನ ದಲಿತರಂತೆ ಯೋಚಿಸಿದವರಲ್ಲ. ಕರ್ಮದಲ್ಲಿ
ಬ್ರಾಹ್ಮಣತ್ವ ಹೊಂದಿದ ದಲಿತರನ್ನು, ಕರ್ಮದಲ್ಲಿ ಶೂದ್ರತ್ವ ವನ್ನು ಹೊಂದಿದ ಬ್ರಾಹ್ಮಣರನ್ನು ಮನುಸ್ಮೃತಿ ಹೇಳುತ್ತದೆ.
ಸಮಾಜದಲ್ಲಿ ಇದನ್ನು ಕಾಣಬಹುದು ಕೂಡ. ಜಾತಿಸೃಷ್ಟಿಯ ಬಗ್ಗೆ ಅಂಬೇಡ್ಕರ್ ಮಾತಿದು: ನಿಮ್ಮ ಮೇಲೆ ಒತ್ತಾಯದಿಂದ
ನಾನು ದೃಢಪಟ್ಟು ಹೇಳಬಯಸುವುದೇನೆಂದರೆ, ಮನುವು ಜಾತಿನಿಯಮವನ್ನು ಸೃಷ್ಟಿಸಲೂ ಸಾಧ್ಯವಿಲ್ಲ; ಹಾಗೆ ಮಾಡಲು ಸಾಧ್ಯವೂ ಇರಲಿಲ್ಲ. ಮನುವಿಗಿಂತ ಬಹಳ ಹಿಂದೆಯೇ ಜಾತಿಪದ್ಧತಿಯಿತ್ತು!

ಮನು ರೂಢಿಯಲ್ಲಿದ್ದ ಅದನ್ನು ಬರೀ ಎತ್ತಿಹಿಡಿದ, ಮತ್ತು ತಾತ್ತ್ವಿಕ ಚೌಕಟ್ಟನ್ನು ಮಾತ್ರ ಕೊಟ್ಟ. ಆದರೆ ಸತ್ಯವಾಗಿಯೂ, ಖಂಡಿತವಾಗಿಯೂ ಈಗಿರುವ ಹಿಂದೂ ಸಮಾಜ ವ್ಯವಸ್ಥೆಯನ್ನು ನಿರ್ಮಿಸಿದವನೂ ಅಲ್ಲ; ಹಾಗೆ ಮಾಡಲು ಶಕ್ಯವೂ ಇರಲಿಲ್ಲ…. ಜಾತಿಯ ಹುಟ್ಟು, ಬೆಳವಣಿಗೆ, ಹಬ್ಬುವಿಕೆ ಎಂಬುದು ಒಬ್ಬ ವ್ಯಕ್ತಿಯ ಬುದ್ಧಿತನಕ್ಕೂ, ಒಂದು ವರ್ಗದ ಶಕ್ತಿಗೂ ಮೀರಿ ನಿಂತ ಮಹಾನ್ ವ್ಯವಸ್ಥೆ….ಹಾಗೆಯೇ ಬ್ರಾಹ್ಮಣನು ಈ ವ್ಯವಸ್ಥೆಯನ್ನು ಸೃಷ್ಟಿಮಾಡಿದನೆಂಬುದೂ ಸುಳ್ಳು. ಮನುವಿನ
ಬಗ್ಗೆ ನಾನು ಹೇಳಿದ ಮೇಲೆ ಹೆಚ್ಚೇನೂ ಉಳಿದಿಲ್ಲ. ಈ ದುರ್ವಾದವೂ ಮೋಸದ್ದು, ಕಿಡಿಗೇಡಿತನದ್ದು. ತರ್ಕವಿಲ್ಲದ ಅವಿವೇಕ ಮತ್ತು ದುರುದ್ದೇಶ್ಯದಿಂದ ಕೂಡಿದ್ದು ಎಂದಷ್ಟೇ ಹೇಳುವೆ.

ಬ್ರಾಹ್ಮಣರು ಎಷ್ಟೋ ತಪ್ಪುಗಳನ್ನು ಮಾಡಿದ ಅಪರಾಧಿಗಳಿರಬಹುದು; ಇದ್ದಾರೆಂದೇ ಹೇಳಲು ನನಗೆ ಧೈರ್ಯವಿದೆ. ಆದರೆ ಜಾತಿಯನ್ನು ಅವರು ಬ್ರಾಹ್ಮಣೇತರ ಪ್ರಜಾವರ್ಗದ ಮೇಲೆ ಹೇರುವುದೆಂಬುದು ಬ್ರಾಹ್ಮಣರ ಶಕ್ತಿಗೆ ಮೀರಿದ್ದಾಗಿತ್ತು (ರೈಟಿಂಗ್ಸ್ ಆಂಡ್ ಸ್ಪೀಚಸ್). ಜಾತಿ ವೃತ್ತಿಗೆ ಸಂಬಂಧಿಸಿದ್ದು. ಒಂದೇ ಕುಲದವರು ಒಂದೇ ಗುರುವಿನೆಡೆ ವಿದ್ಯಾರ್ಜನೆ ಮಾಡಿದ  ವ್ಯವಸ್ಥೆ ಯನ್ನು ಗುರುಕುಲವೆಂದರು. ಆ ಗುರುವೇ ಕುಲಪತಿಯೆನಿಸಿದ.

ಬ್ರಿಟಿಷರು ಬಂದಮೇಲೆ ನಮ್ಮ ವ್ಯವಸ್ಥೆಯನ್ನೂ, ಬುದ್ಧಿಯನ್ನೂ ಕೆಡಿಸಿ ಜಾತಿದ್ವೇಷ ಹಬ್ಬಿಸಿ ಬೆಳೆಸಿದರು. ಅಲ್ಲಿಂದೀಚೆಗೆ ಬ್ರಾಹ್ಮಣ ದ್ವೇಷ, ಬ್ರಾಹ್ಮಣ ನಿರ್ನಾಮ, ಸಂಸ್ಕೃತ ದ್ವೇಷ, ದೇವಳಗಳ ನಾಶ, ಹಿಂದೂ ದಮನ – ಇವೆಲ್ಲ ಚರಿತ್ರೆಯುದ್ದಕ್ಕೂ ಹರಿದು ಬಂದ ಪ್ರವಾಹವಾಗಿ ವರ್ತಮಾನದಲ್ಲಿ ಈ ಬಿಕ್ಕಟ್ಟು ಸೃಜಿಸಿದ ಅನಾಹುತಗಳಿಂದ ನಾವು ಒಂದಾಗಲು ಸಾಧ್ಯವೇ ಇಲ್ಲವೇನೋ ಎಂಬ ಸ್ಥಿತಿಯನ್ನು ತಲುಪಿದ್ದೇವೆ. ದಲಿತರು ಜಾತಿಯನ್ನು ಮುಂದುಮಾಡಿಕೊಂಡು ಮೀಸಲಾತಿಗೆ ಆಗ್ರಹಿಸಿ
ಮುಖ್ಯವಾಹಿನಿಯಲ್ಲಿ ಬೆರೆಯಲು ಅಸಾಧ್ಯವಾಗುತ್ತಿದೆ ಯೇನೋ, ಯಾವಾಗಲೂ ಅನಿಸುತ್ತದೆ.

ಶೂದ್ರರು ಯಾರು? ಎಂಬುದಕ್ಕೆ ಅಂಬೇಡ್ಕರ್ ಉತ್ತರವಿದು: ಸೂರ್ಯವಂಶದ ಗೌರವಾನ್ವಿತ ದೊರೆಗಳ ಆರ್ಯಕುಲದವರೇ ಈ ಶೂದ್ರರು. ಒಂದು ಕಾಲದಲ್ಲಿ ಮೂರೇ ವರ್ಣಗಳಿದ್ದವು. ಶೂದ್ರರು ಕ್ಷತ್ರಿಯರೇ ಆಗಿದ್ದರು. ಒಂದೊಮ್ಮೆ ಬ್ರಾಹ್ಮಣರಿಗೂ ಅವರಿಗೂ ದೀರ್ಘಕಾಲ ಮನಸ್ತಾಪವಾಗಿ, ಬ್ರಾಹ್ಮಣರಿಗೆ ಇವರು ನಾನಾ ಹಿಂಸೆ, ಕ್ರೌರ್ಯ, ಅಪಮಾನಗಳನ್ನು ನೀಡುತ್ತಾ ಬಂದ ಪ್ರಯುಕ್ತ, ಅವರ ಕಾಟ ತಡೆಯಲಾರದೆ ಬ್ರಾಹ್ಮಣರು ಅವರಿಗೆ ಉಪನಯನ, ಪೌರೋಹಿತ್ಯ, ಯಾಜನಗಳನ್ನು ನಿಲ್ಲಿಸಿ ಬಹಿಷ್ಕರಿಸಿದರು.
ಹೀಗಾಗಿ ಕ್ಷತ್ರಿಯರು ಪತಿತರಾದರು. ವೈಶ್ಯರಿಗಿಂತ ಕೆಳಗಾದರು (ಹು ವೆರ್ ದ ಶೂದ್ರಾಸ್?). ಅಂಬೇಡ್ಕರರಿಗಿದ್ದ ಸಂಸ್ಕೃತ ಪಾಂಡಿತ್ಯ ನೆಹರೂ, ಗಾಂಧಿ, ಇಂದಿರಾ, ರಾಜೀವ್ – ಯಾರಿಗೂ ಇರಲಿಲ್ಲ. ದಲಿತರು ಹೇಗೆ ಆದರು? ಎಂಬುದಕ್ಕೆ ಅಂಬೇಡ್ಕರ್ ವಾದವಿದು: ಅವರು ವೀರಕ್ಷತ್ರಿಯರಾಗಿ, ಮುಸ್ಲಿಂ ಆಕ್ರಮಣಕಾರರೊಡನೆ ಹೋರಾಡಿ ಸೋತು ಬಂದ ವೀರರಾಗಿ, ಸೋತು
ಬಂದವರನ್ನು ಸಮಾಜ ಒಳಸೇರಿಸದೇ, ಮೂಢನಂಬಿಕೆ ಯಿಂದ ಹೊರಗಿಟ್ಟ ಪರಿಣಾಮ, ಒಂದು. ಅಥವಾ ಸಾಮೂಹಿಕವಾಗಿ ಬೌದ್ಧಮತ ಅಂಗೀಕರಿಸಿ, ಬ್ರಾಹ್ಮಣರೊಡನೆ ಘರ್ಷಣೆಯಾಗಿಯೂ ಹಾಗಾಗಿರಬಹುದು.

ಅಥವಾ ಮಾಂಸಾಹಾರ, ಗೋಭಕ್ಷಣಾದಿಗಳಿಂದ, ಬೌದ್ಧರಾಗಿಯೂ ಶೀಲ ಬದಲಾಗದೇ ಹಾಗಾಗಿರಲು ಸಾಕು – ಇತ್ಯಾದಿ (ಎ ಟ್ರ್ಯೂ ಆರ್ಯನ್, ಕಾನ್ರಾಡ್ ಎಲ್ಟ್ಸ್ ). ದಲಿತರು ಆತ್ಮವಿಮರ್ಶೆಯೊಂದಿಗೆ ಅಂಬೇಡ್ಕರರನ್ನು ಮೆಚ್ಚಿ ಆರಾಧಿಸುವಾಗ ಅವರ ಚಿಂತನೆ ಗಳನ್ನು ಅಳವಡಿಸಿಕೊಂಡರೆ ಬಹುಪಾಲು ಸಮಸ್ಯೆಗೆ ಪರಿಹಾರ ಸಾಧ್ಯವೇನೋ!

ಆರ್ಥಿಕ ಸ್ಥಿರತೆ, ವೃತ್ತಿ ಖಾತರಿಗಳ ಅಭಯವನ್ನಿತ್ತು ನಿಜವಾಗಿ ಹಿಂದುಳಿದ ದಲಿತರನ್ನು ಮೇಲೆತ್ತಿ ಜಾತಿ ಅವರಿಗೆ ಮುಖ್ಯವಾಗ ದಂತೆ ವ್ಯವಸ್ಥೆಯನ್ನು ಸಮತೋಲನಗೊಳಿಸುವುದು ಸಾಧ್ಯವಿದೆಯೆಂದು ವಿವೇಕಾನಂದರು ಹೇಳುತ್ತಾರೆ. ಜಾತ್ಯತೀತ ರಾಷ್ಟ್ರ ವಾಗಿ ಜಾತಿಯನ್ನೇ ಪ್ರಬಲ ಅಸ್ತ್ರವಾಗಿ ಭಿನ್ನಾಭಿಪ್ರಾಯಗಳಿಗೆ, ಸಂಘರ್ಷಗಳಿಗೆ ಎರವಾಗದಂತೆ ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಚಿಂತನಾಶಕ್ತಿ ನಮ್ಮಲ್ಲಿದೆ.

ಯಾವಾಗಲೂ ಇರುತ್ತದೆ ಕೂಡ. ಇದು ದಲಿತರಿಗೆ ಮಾತ್ರವಲ್ಲ, ಎಲ್ಲ ಜಾತಿಯವರಿಗೂ ಅನ್ವಯಿಸುವ ಮಾತು. ಜಾತಿಯಿಂದ ಹುಟ್ಟಬಹುದಾದ ದ್ವೇಷ ಯಾರನ್ನೂ ಉಳಿಯಗೊಟ್ಟಿದೆ? ದ್ವೇಷದಿಂದಲೇ ಅಲ್ಲವೆ ರಾಷ್ಟ್ರ ರಾಷ್ಟ್ರಗಳು ಉರಿಯುತ್ತಿರುವುದು.
ಭೂಮಿಯ ಮೇಲಿಂದಲೇ ಯಹೂದ್ಯ ಸಂತಾನವನ್ನು ತೊಡೆದುಬಿಡುವುದಾಗಿ ಘೋಷಿಸಿ, ಕೋಟ್ಯಂತರ ನಿರಪರಾಧಿಗಳನ್ನು ಹಿಟ್ಲರ್ ಸುಟ್ಟುಸಾಯಿಸಿದ. ಕ್ರೈಸ್ತರು, ಮುಸ್ಲಿಮರದ್ದೂ ಇದೇ ಮನಸ್ಥಿತಿ. ಕ್ರೈಸ್ತನಾಗಿದ್ದ ಹಿಟ್ಲರನಿಗೆ ಅಂದಿನ ಕ್ರೈಸ್ತ ಮುಖಂಡರು ಹಿತವಚನ ಹೇಳಿ ಸರಿಪಡಿಸ ಬಹುದಿತ್ತಲ್ಲವೇ? ಹೇಳಿದರೆ ಕೇಳುತ್ತಿದ್ದನೇ ಎಂಬುದು ಸಂದೇಹವಾಗಿತ್ತು ಅವರಿಗೆ!

ದಲಿತೋದ್ಧಾರಕ್ಕಾಗಿ ಗಾಂಧಿ, ಅಂಬೇಡ್ಕರ್ ಪ್ರಯತ್ನಿಸಿದರು ಎಂದ ಮಾತ್ರಕ್ಕೆ ಈ ರಾಷ್ಟ್ರ ಅವರನ್ನು ಗೌರವಾದರಿಸಿದ್ದಲ್ಲ. ಜಾತೀಯತೆಯ ಮೂಲೋತ್ಪಾಟನೆಗೆ ಅವರು ನಿರಂತರ ಶ್ರಮಿಸಿದರೆಂಬುದೇ ಮುಖ್ಯವಾಗಿ. ಅವರ‍್ಯಾರೂ ಬ್ರಾಹ್ಮಣ ದ್ವೇಷ, ಸರಸ್ವತೀ ದ್ವೇಷ ಮಾಡಲಿಲ್ಲ. ಶ್ರೀರಾಮ – ಕೃಷ್ಣರು ಕ್ಷತ್ರಿಯರೇ ಆಗಿದ್ದರು. ಅವರನ್ನು ನಾವೆಲ್ಲ ಆರಾಧಿಸಿ ಪೂಜಿಸುತ್ತಿಲ್ಲವೆ? ಅವರನ್ನು ಜಾತಿ ನೋಡಿ ತಿರಸ್ಕರಿಸಿದ್ದೇವೆಯೇ? ಯಾರಿಗೇ ಆದರೂ ದ್ವೇಷವೇ ಒಂದು ಕ್ಯಾರೆಕ್ಟರ್ ಆಗಬಾರದು. ಅದು ತನ್ನನ್ನು
ತಾನು ಸುಟ್ಟುಕೊಳ್ಳುತ್ತಾ ಸುತ್ತಮುತ್ತಲಿನ ವಾತಾವರಣವನ್ನೂ ಸುಡುತ್ತದೆ. ಈ ಸುಡುವ ಕ್ರಿಯೆ ಕೊನೆಗೊಳ್ಳುವುದು ಎಲ್ಲವೂ ಬೂದಿಯಾಗುವುದರೊಂದಿಗೆ.

ಸರ್ವನಾಶವೇ ಇದರೊಡಲು. ಯಾರದ್ದೆ  ‘ಎಡ’ ಚಿಂತನೆಗಳಿಗೆ ಮಾರುಹೋಗಿ ಬದುಕನ್ನು ನಿರಂತರ ಸಂಘರ್ಷದಲ್ಲಿ ಹಾಳು ಮಾಡಿಕೊಳ್ಳುವುದೇಕೆ? ಬದುಕು ಎಲ್ಲದಕ್ಕಿಂತ ದೊಡ್ಡದು. ಜಾತಿಯೇ ಬದುಕಲ್ಲ; ಬದುಕು ಜಾತಿಯ ಮೇಲೂ ನಿಂತಿಲ್ಲ. ಅಂಬೇಡ್ಕರ್ ಬಯಸಿದ್ದು ಜಾತಿವಿಹೀನ ಬದುಕನ್ನು. ಬಸವಣ್ಣನ ಕ್ರಾಂತಿಯೂ ಇದೇ ಹಿನ್ನೆಲೆಯದ್ದು. ದಲಿತರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಬ್ರಾಹ್ಮಣರು ಹೇಗೆ ಕಾರಣರಾದಾರು? ವ್ಯವಸ್ಥಿತವಾಗಿ ನಮ್ಮನ್ನು ದಾರಿ ತಪ್ಪಿಸಿದವರ‍್ಯಾರು? ತಪ್ಪಿಸುತ್ತಿರುವವರ‍್ಯಾರು? ಇದೆ ನಮ್ಮ ನಮ್ಮನ್ನು ಒಡೆಯುವ ಯಾರದ್ದೇ ಷಡ್ಯಂತ್ರವೆಂದು ಯೋಚಿಸಬೇಡವೆ? ಇದೆಲ್ಲ ರಾಷ್ಟ್ರೀಯ ಚರ್ಚೆಯ ವಿಷಯಾಂಶಗಳು.

ಸಮಸ್ತ ಹಿಂದೂಗಳು ಒಂದಾಗಿ ಭಾರತೀಯ ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಔನ್ನತ್ಯಕ್ಕೊಯ್ಯಬೇಕಿದೆ. ಇದಕ್ಕೆ ಸರಕಾರಗಳು, ಮಾಧ್ಯಮ ಗಳು, ಭಾರತೀಯರೆಲ್ಲರೂ ಕೈಗೂಡಿಸಬೇಕಿದೆ. ಅಂಬೇಡ್ಕರರ ದಲಿತೋದ್ಧಾರದ ಕನಸು ಅಂಬೇಡ್ಕರ್
ಚಿಂತನೆಗಳಿಂದಲೇ ಆರಂಭವಾಗಬೇಕಿದೆ. ಬಹುಕಾಲದ ಹಿಂದೆಯೇ ವರ್ಣಗಳು ಮಿಶ್ರಿತವಾಗಿರುವುದರಿಂದ ಹೀಗೆಯೇ ಆಯಿತು ಅಂತ ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಸತ್ಯ, ದಾನ, ಕ್ಷಮೆ, ಶೀಲ, ಕರುಣೆ, ತಪಸ್ಸು, ದಾಕ್ಷಿಣ್ಯ, ಇಂಥ ಗುಣಗಳು ಯಾವನಲ್ಲಿ ರುತ್ತದೋ ಅವನೇ ಬ್ರಾಹ್ಮಣನು, ಇಲ್ಲದವನು ಅಬ್ರಾಹ್ಮಣ. ಶೂದ್ರನಲ್ಲೂ ಇವು ಇರುವುದಾದರೆ ಅವನೇ ಬ್ರಾಹ್ಮಣ. ಬ್ರಾಹ್ಮಣ ನಲ್ಲಿ ಇಲ್ಲವಾದರೆ ಅವನೇ ಶೂದ್ರ. ಬ್ರಾಹ್ಮಣನು ತನ್ನ ಚಾರಿತ್ರ್ಯ ಪತನಕ್ಕೆ ಕಾರಣವಾದ ಅನ್ಯ ವೃತ್ತಿಗಳಲ್ಲಿ ಬಿದ್ದರೆ, ನಿರಂತರ ವಾಗಿ ತೊಡಗಿಕೊಂಡರೆ, ಡಂಭಾಚಾರಿಯಾದರೆ ಶೂದ್ರನಿಗಿಂತ ಕಡೆಯಾಗುತ್ತಾನೆ. ಕೀಳಾಗುತ್ತಾನೆ. Of course ನಿಕೃಷ್ಟ ನಾಗಲೇಬೇಕು.

ಇನ್ನೊಬ್ಬನು ಶೂದ್ರನಾಗಿ ಹುಟ್ಟಿಯೂ ಮನೋನಿಗ್ರಹ, ಇಂದ್ರಿಯ ನಿಗ್ರಹದೊಂದಿಗೆ, ಸತ್ಯ- ಧರ್ಮಗಳಲ್ಲಿ ಸದಾ ಇರುತ್ತಾನಾದರೆ ಅವನೇ ಬ್ರಾಹ್ಮಣನಾಗುತ್ತಾನೆ. ಅಂದರೆ ಬ್ರಾಹ್ಮಣ್ಯಕ್ಕೆ ಚಾರಿತ್ರ್ಯವೇ ಕಾರಣ ಎಂದಂತಾಯಿತು. ಮಹಾಭಾರತದ ಧರ್ಮವ್ಯಾಧ,
ರಾಮಾಯಣದ ಶಬರಿಯಂಥವರು ಇದಕ್ಕೆ ಜ್ವಲಂತ ನಿದರ್ಶನ. ಎಲ್ಲಾ ಶಬರರೂ ಶಬರಿಯಂಥಾಗಲಿಲ್ಲ, ಎಲ್ಲಾ ವ್ಯಾಧರು ಧರ್ಮವ್ಯಾಧರಾಗಲಿಲ್ಲ. ಒಂದು ಕಾಲದಲ್ಲಿ ಕ್ಷತ್ರಿಯರಾಗಿದ್ದು ಈಗ ದಲಿತರಾಗಿರುವವರು ಮತ್ತೆ ಏಕೆ ಕ್ಷತ್ರಿಯರಾಗಬಾರದು? ಅವರು ಸಂಕಲ್ಪ ಮಾಡುವವರಾದರೆ ಸಮಸ್ಯೆ ತೀರುತ್ತದೆ. ಕುರುಬರಾಗಿ ಹುಟ್ಟಿ, ಬಹಮನಿ ಅರಸರ ಸೇನೆಯಲ್ಲಿ, ಸೇವೆಯಲ್ಲಿ ಮುಸ್ಲಿಮರಾಗಿ ಮತಾಂತರಗೊಂಡಿದ್ದ ಹಕ್ಕಬುಕ್ಕರಿಗೆ ವಿದ್ಯಾರಣ್ಯರು ಕ್ಷಾತ್ರದೀಕ್ಷೆ ಕೊಟ್ಟು ಅರಸರನ್ನಾಗಿಸಿದಾಗ ಯಾವ
ಅಧ್ಯಾತ್ಮವೂ ಅಡ್ಡಿಬರಲಿಲ್ಲ!

ಈಗಲೂ ಅಷ್ಟೇ. ನಾಯಕರು,  ಬೇಡರು, ರೆಡ್ಡಿಗಳು, ತಿಗಳರು, ನಾಯ್ಡುಗಳು, ಜಾಟರು, ಹೂಣರು, ಪಟೇಲರು ಮುಂತಾದ ದಲಿತ ವರ್ಗದವರು ಅಂಬೇಡ್ಕರರ ಚಿಂತನೆಯ ದಾರಿಯಲ್ಲಿ ಕ್ಷತ್ರಿಯರಾಗಬೇಕು. ಇವರನ್ನು ಸರಕಾರೀ ಜಾತಿಯಾಧಾರದ ಮೇಲೆ ಒಡೆದು
ಮೀಸಲಾತಿಗೆ ಬಡಿದಾಡುವಂಥ ದುಸ್ಥಿತಿಗೆ ತಂದ ದುಷ್ಟ ರಾಜಕಾರಣ ಸಾಯಬೇಕು. ಸಮಷ್ಟಿಯ ಹಿತ, ಒಗ್ಗಟ್ಟು, ಐಕ್ಯಭಾವ, ರಾಷ್ಟ್ರಾಭ್ಯುದಯಕ್ಕೆ ಮಾರಕವಾಗುವ ಮೀಸಲಾತಿಯನ್ನು ಮೊದಲು ನಿಲ್ಲಿಸಬೇಕು.

ನಮ್ಮ ಕಾಲದ ಎರಡು ಮಹಾನ್ ವ್ಯಕ್ತಿತ್ವವೆಂದರೆ, ಇರುವುದೆಲ್ಲವನ್ನೂ ಕಳಚಿಕೊಳ್ಳುತ್ತಾ ಲೌಕಿಕದ ನಂಟನ್ನು ಬಿಟ್ಟು ಮೇರುಸದೃಶವಾದ ವ್ಯಕ್ತಿತ್ವವನ್ನು ತನ್ನ ರೂಪಕ ಗಳಿಂದಲೇ ಗಳಿಸಿದ ಗಾಂಧಿ ಹಾಗೂ ಇಲ್ಲದಿರುವುದನ್ನು ಒಟ್ಟುಗೂಡಿಸುತ್ತಾ ಮನುಷ್ಯ ಬದುಕಿನ ಔನ್ನತ್ಯವನ್ನು, ಉತ್ಕರ್ಷವನ್ನು ಅದರ ಆತ್ಯಂತಿಕವಾದ ನೆಲೆಯಲ್ಲಿ ಆರ್ಜಿಸಿದ ಮಹರ್ಷಿ ಎಂಬ ದಲಿತ ಜನಾಂಗದ ಅಭಿಮಾನ ಮತ್ತು ಹೆಮ್ಮೆಯಾಗಿ ಭಾರತರತ್ನನೆನಿಸಿದ ಡಾ.ಅಂಬೇಡ್ಕರ್.

ಈರ್ವರೂ ಮನುಷ್ಯ ಜೀವಿತದಲ್ಲಿ ಏರಬಹುದಾದ ಎತ್ತರವನ್ನೂ ಏರಿ ಅದರ ಪರಮಗಮ್ಯವನ್ನು ಕಂಡವರು. ಇವರಡೂ ನಮ್ಮ ಕಾಲದ ಅದ್ಭುತ ಪರಿವರ್ತನೆಗಳೇ ಸರಿ! ಈ ಎರಡೂ ಪರಿವರ್ತನೆಗಳಾದ ಕಾಲದ ನಾವು ಬದುಕುತ್ತಿದ್ದೇವೆ. ಇದು ಪ್ರತಿ ಭಾರತೀಯ ನಿಗೂ ಮಾದರಿಯಾಗಬೇಕು. ಈ ಅರಿವು ಹುಟ್ಟಿದರೆ ಎಲ್ಲರೂ ಸೇರಿ ಹೊಸ ಭಾರತ ಕಟ್ಟಲು ಸಾಧ್ಯವಿದೆ. ಆಗ ಅದು ಕಳೆದು ಹೋದ ವಿಶ್ವಗುರು ಸ್ಥಾನವನ್ನು ಭಾರತಕ್ಕೆ ನೀಡೀತು. ನಮ್ಮ ನಮ್ಮ ಮಾನವೀಯತೆಗೆ ಸವಾಲಾಗಿ ಅಸ್ಪೃಶ್ಯತೆ ನಿಂತಿದೆ. ಸವರ್ಣೀ ಯರನ್ನು ಎದುರಿಸುವ ಸ್ವಾಭಿಮಾನದ ಪ್ರಜ್ಞೆ ದಲಿತರಲ್ಲಿ ಹುಟ್ಟಿ ಅವರು ಅಂಬೇಡ್ಕರರಂತೆ ಎಲ್ಲವನ್ನೂ ಗಳಿಸುತ್ತಾ ಸಹನೀಯ ಬದುಕಿನ ಗತಿಯ ಉನ್ನತಿಯನ್ನು ಕಾಣಬೇಕು. ಜಾತಿಯ ಭೂತ ಸಾಯಬೇಕೆಂದರೆ ಜಾತಿಯ ಬಗ್ಗೆ ಮಾತನಾಡುವುದನ್ನು
ಮೊದಲು ಬಿಡಬೇಕು. ಅದು ನಮಗೆ ಸಾಧ್ಯವಿದೆಯೇ? ಜಾತಿಯನ್ನು ಬಿಟ್ಟುಬಿಟ್ಟರೆ ನಮ್ಮ ರಾಜಕಾರಣ ನಿರ್ಮಾಲ್ಯಗೊಂಡೀತು. ರಾಜಕಾರಣಿಗಳು ಸುಭಗ ಸಂಪನ್ನರಾದಾರು. ಆಲೋಚಿಸಿ ನೋಡಿ: ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಜಾತಿಪ್ರಜ್ಞೆ ಹುಟ್ಟು ವುದೇ ಇಲ್ಲ.

Of course ಹುಟ್ಟಲು ಸಾಧ್ಯವೂ ಇಲ್ಲ. ಹಾಗೆ ನಿತ್ಯದ ಬದುಕಿನಲ್ಲಿ ನಾವೆಲ್ಲ ಮನುಷ್ಯರು ಎಂಬ ಭಾವದಲ್ಲಿ, ಆ ಅರಿವಲ್ಲಿ ಬದುಕನ್ನು ನೋಡಿದರೆ ಜಾತಿ ಮಾಯವಾಗುತ್ತದೆ. ಜಾತಿಯ ಭೂತ ಉಳಿದಿರುವುದು ವಿಧಾನಸೌಧದಲ್ಲಿ, ರಾಜಕಾರಣಿಗಳ ವಿಷತುಂಬಿದ ತಲೆಯಲ್ಲಿ, ಜಾತಿಯ ರಾಜಕೀಯವನ್ನೇ ಗುರಿಯಾಗಿಟ್ಟುಕೊಂಡು ಬರೆಯುವ ವರದಿಗಾರರಲ್ಲಿ. ನಾನು ಮುಸ್ಲಿಮ, ನಾನು ಕ್ರೈಸ್ತ, ನಾನು ಹಿಂದೂ, ನಾನು ಆ ಜಾತಿ, ಈ ಮತ, ಆ ಪಂಥ ಅಂದರೆ ಹೊಟ್ಟೆ ತುಂಬುವುದಿಲ್ಲ. ಇದೆ ಹೊಟ್ಟೆ ತುಂಬಿ ದವರು ಅಮಾಯಕರನ್ನು ಪ್ರಚೋದಿಸಿ ಮಾಡುತ್ತಿರುವ ನೀಚ ರಾಜಕೀಯದ ಹೊಲಸು ಹೇಯ ಕುಕೃತ್ಯ. ಅಂಬೇಡ್ಕರರ
ಚಿಂತನೆಯಲ್ಲಿ ದಲಿತರು ಸಮಕಾಲೀನ ಭಾರತವನ್ನು ಪ್ರತಿನಿಧಿಸಬೇಕು.

ಅಂದಾಗ ರಾಷ್ಟ್ರಕ್ಕೂ ಹಿತ, ದಲಿತರಿಗೂ ಮುಖ್ಯವಾಹಿನಿಯಲ್ಲಿ ಸ್ಥಾನಮಾನ್ಯತೆ ಪ್ರಾಪ್ತಿಸಾಧ್ಯ. ದಲಿತ ಚಿಂತನೆ ಈ ದಿಸೆಯಲ್ಲಿ ಸಾಗುವುದಕ್ಕೆ ದಲಿತ ಚಿಂತಕರು, ಮುಖಂಡರು ಹೆಜ್ಜೆಯಿಡಬೇಕು. ಈ ಮಾತು ದಲಿತರಿಗಷ್ಟೇ ಅಲ್ಲ, ಅಲ್ಪಸಂಖ್ಯಾತರಿಗೂ ಕೂಡ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂಬೇಡ್ಕರ್ ಅನುಭವಿಸಿದ ಕಷ್ಟಗಳನ್ನು ಇಂದಿನ ದಲಿತರು ಅನುಭವಿಸುತ್ತಿಲ್ಲವೇನೋ ಎನಿಸುತ್ತಿದೆ!

ಕೇವಲ ಜಾತಿಯ ಕಾರಣಕ್ಕಾಗಿ ಯಾರೂ ಅವಮಾನಗಳನ್ನು ಕಷ್ಟಗಳನ್ನು ನಿತ್ಯದ ಬದುಕಿನಲ್ಲಿ ಅನುಭವಿಸಬಾರದು. ಅಂಬೇಡ್ಕರ್ ತಂದೆ – ತಾಯಿಗಳು ಮಗನನ್ನು ವಿದ್ಯಾವಂತನನ್ನಾಗಿಸಬೇಕೆಂಬ ಹಂಬಲವನ್ನು ಬಹುವಾಗಿ ಹೊಂದಿದ್ದರು. ಅಂಬೇಡ್ಕರರನ್ನು ಎತ್ತಿ ಮೆರೆಯಿಸಿ ಹೊಗಳಿ ಕೊಂಡಾಡುವ, ಮೀಸಲಾತಿ ಹೋರಾಟದಲ್ಲಿ ತಮ್ಮ ಜನಾಂಗಕ್ಕೆ ಅನುಕೂಲವಾಗ ಲೆಂದು ಬಯಸುವ ದಲಿತರು, ದಲಿತ ಚಿಂತಕರು, ದಲಿತ ಸಂಘಟನೆಗಳು ತಮ್ಮ ವರ್ಗದ ಮಕ್ಕಳನ್ನು ಕಲಿಕೆಯ ಕಡೆ ಗಮನ ಸೆಳೆಯುವಂತೆ ದೊಡ್ಡ ಪ್ರಯತ್ನ ಮಾಡಬೇಕಿದೆ. ದಲಿತರ ಮುಖ್ಯಪಾತ್ರವಿರುವುದು ಅಂಬೇಡ್ಕರರ ಚಿಂತನೆಗಳನ್ನು ನಿಜಗೊಳಿ ಸುವುದರಲ್ಲಿ.

ಅವುಗಳನ್ನು ಬದುಕಿನ ಗತಿಬಿಂಬಕ್ಕೆ ತಂದುಕೊಳ್ಳುವಲ್ಲಿ. ಕೇವಲ ಸರಕಾರದ ಸವಲತ್ತುಗಳನ್ನು ದೊರಕಿಸಿಕೊಳ್ಳುವುದರಲ್ಲಲ್ಲ ಎಂಬ ಪ್ರಜ್ಞೆಯಲ್ಲಿ ಜಾಗೃತರಾದರೆ ಜಾತಿಯ ಕುರಿತಾಗಿ ಹುಟ್ಟುವ ಗೊಂದಲಗಳು ನಿಂತೀತು! ಮುಖ್ಯವಾಗಿ ಸಮಗ್ರ ಭಾರತೀಯ ಸಮಾಜವು ಜಾತಿ ಎಂಬ ಕೊಚ್ಚೆಯ ಬಚ್ಚಲಿನಿಂದ ಹೊರಬರಬೇಕು. ಇದು ಸಾಧ್ಯವೇ? ಎಲ್ಲರೂ ಯೋಚಿಸಬೇಕಾಗಿದೆ.

ಕೊನೆಯ ಮಾತು: ಡಿಸ್ಕವರಿ ಆಫ್‌ ಇಂಡಿಯಾದಲ್ಲಿ ನೆಹರೂ ಬರೆದದ್ದು; ರಾಮಾಯಣ ಮಹಾಭಾರತಗಳು ಎಲ್ಲ ಭಾರತೀಯ ವರ್ಗದ ಜನರಿಗೂ, ಪ್ರಗತಿಗೆ, ಉನ್ನತ ಬೌದ್ಧಿಕತೆಯಿಂದ ಹಿಡಿದು ಸಾಮಾನ್ಯತೆಯವರೆಗೆ, ಓದು – ಬರೆಹ ಬಾರದ ಹಳ್ಳಿಗರಿಗೂ ಆವಶ್ಯವಾದ ಅಂಶಗಳು ಸಿಗುವಂತೆ ಮಾಡಿವೆ. ಬಹುಮುಖೀ ಸಮಾಜವನ್ನು ಏಕತ್ವದಲ್ಲಿ ಹಿಡಿದಿಟ್ಟ ಪ್ರಾಚೀನ ಭಾರತೀಯರ ಗುಟ್ಟು ಇಲ್ಲಿದೆ. ಆ ಬಹುಮುಖತ್ವ ಜಾತಿಗಳಲ್ಲಿರಬಹುದು, ಸ್ವಭಾವದಲ್ಲಿರಬಹುದು. ಆದರೆ ಎಲ್ಲರಿಗೂ ವೀರೋಚಿತ ಸಂಸ್ಕೃತಿ, ಪರಂಪರೆ ನೈತಿಕ ಜೀವನಾಧಾರದ ಹಿನ್ನೆಲೆಗಳನ್ನು ಸಮಾನವಾಗಿ ಇವು ಒದಗಿಸಿವೆ. ಎಲ್ಲ ವೈವಿಧ್ಯ, ದ್ವಂದ್ವ, ವೈರಸ್ಯಗಳನ್ನು ಮೀರಿ ಉಳಿಯಬಲ್ಲ ಏಕತೆಯನ್ನು, ಬೇಕೆಂತಲೇ ಪ್ರಾಚೀನರು ಇಲ್ಲಿ ಉಳಿಸಿಬಿಟ್ಟರು.

ಜಾತಿದ್ವೇಷ ಏಕಿರಲಿಲ್ಲವೆಂಬ ಕಾರಣವನ್ನು ನೆಹರೂರ ಈ ಮಾತಿನಲ್ಲಿ ಗುರುತಿಸಬಹುದು. ಇದೇ ಗ್ರಂಥದಲ್ಲಿ ಸರ್ ಜಾರ್ಜ್
ಬರ್ಡ್ ವುಡ್ ಮಾತುಗಳನ್ನೂ ನೆಹರೂ ಸಮರ್ಥಿಸುತ್ತಾರೆ. ಹಿಂದೂಗಳು ಜಾತಿವ್ಯವಸ್ಥೆಯನ್ನು ಹಿಡಿದಿರುವ ತನಕ ಭಾರತವು ಭಾರತವಾಗಿರುತ್ತದೆ. ಈ ವೈಭವಯುಕ್ತ ಉಪಖಂಡವು ಅದನ್ನು ಬಿಟ್ಟ, ಅದನ್ನು ಹಾಳುಮಾಡಿಕೊಂಡ ದಿನದಿಂದ, ಅದು ಲಂಡನ್ನಿನ ಒಂದು ಉಪನಗರವೆನಿಸಿದ ಈಸ್ಟ್ ಎಂಡ್ ಆಗಿ ಆಂಗ್ಲೋ ಸ್ಯಾಕ್ಸನ್ ಸಾಮ್ರಾಜ್ಯಭಾಗವಾಗಿ ಬಿಡುತ್ತದೆ. ಸ್ವಂತಿಕೆ ಕಳೆದುಕೊಳ್ಳುತ್ತದೆ. ಇಲ್ಲಿ ನೆಹರೂರ ಕೆ: ಜಾತಿ ಇರಲಿ, ಬಿಡಲಿ, ನಮ್ಮ ಸ್ಥಿತಿ ಹಾಗಾಗಿ ಬಿಟ್ಟಿದೆ.

ಬರ್ಡ್ ವುಡ್ ಹೇಳಿದ್ದು ಒಂದು ದೃಷ್ಟಿಯಲ್ಲಿ ಸರಿ. ಇಷ್ಟು ದೊಡ್ಡ, ಪ್ರಬಲ, ದೀರ್ಘ ಇತಿಹಾಸದ ವ್ಯವಸ್ಥೆಯು ಕುಸಿದರೆ ನಮ್ಮ ಚೌಕಟ್ಟೇ ಹಾಳಾದೀತು. ಅನೈಕ್ಯ, ಜಗಳ, ಅಪಾರ ಜನಹಿಂಸೆ, ನೋವುನಲಿವು, ಬಹುಪ್ರಮಾಣದ ವಿಕೃತಿ, ವ್ಯಕ್ತಿ ಜೀವನದಲ್ಲೂ ಸಮಷ್ಟಿಯಲ್ಲೂ ಬರಬಾರದಾದರೆ ಈ ಜಾಗದಲ್ಲಿ ಬೇರೊಂದು ಸಮರ್ಥ ವ್ಯವಸ್ಥೆ ಬೇಕಾಗುತ್ತದೆ. ಅದು ನಮ್ಮ ಕಾಲಕ್ಕೂ ಭಾರತೀಯ ಜಾಯಮಾನಕ್ಕೂ ಒಗ್ಗುವಂತಾಗಿರಬೇಕಾದ್ದು ಮುಖ್ಯ.

ನಾವು ಶೂನ್ಯವನ್ನು ಸೃಷ್ಟಿಸಲಾಗದು! ತುಂಬಬೇಕು. ಇಲ್ಲವಾದರೆ ನಮ್ಮ ಸರ್ವನಾಶದ ರೀತಿಯಲ್ಲಿ ಅದು ತನ್ನನ್ನು ತುಂಬಿ ಕೊಂಡೀತು – (ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು – ಡಾ.ಕೆ.ಎಸ್. ನಾರಾಯಣಾಚಾರ್ಯ). ಜಾತಿ ಯೊಳಗಣ ಜಗತ್ತೂ ಬೇಡ, ಜಗತ್ತಿನೊಳಗಣ ಜಾತಿಯೂ ಬೇಡ. ಜಾತಿಗೊಂದು ಜಗದ್ಗುರುಗಳಂತೂ ಬೇಡವೇ ಬೇಡ. ಯಾಕೆಂದರೆ ಅವರು ಜಾತಿಯನ್ನು ಬಿಡದ ಜಾತ್ಯತೀತರು.