Saturday, 27th July 2024

ಹೋಲಿಕೆಯ ಹೇರಿಕೆಯೇಕೆ?

ಸಂದೀಪ್ ಶರ್ಮಾ ಮೂಟೇರಿ

‘ಹುಲಿಯ ಮೈಬಣ್ಣ ನೋಡಿ, ನರಿ ಮೈ ಸುಟಗೊಂಡಿತ್ತಂತ’ ಎಂಬ ಮಾತು ಉತ್ತರ ಕನ್ನಡದ ಜನಪದದಲ್ಲಿ ಬಹಳ ಚಾಲ್ತಿಯಲ್ಲಿದೆ. ಹುಲಿಯ ಮೈ ಬಣ್ಣಕ್ಕೆ ಮರುಳಾದ ನರಿಯೊಂದು ತಾನೂ ಅದರಂತಾಗಲು ಮೈಯನ್ನು ಸುಟ್ಟುಕೊಂಡು ಜೀವವನ್ನೇ ಬಲಿಕೊಟ್ಟ ಕಾಲ್ಪನಿಕ ಪ್ರಸಂಗವು, ಇತ್ತೀಚೆಗೆ ನಡೆದ ಕಚೇರಿಯ ವಿಚಾರ ಸಂಕಿರಣವೊಂದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಹೇಳಿದ ಕಥೆಗೆ ಅನುಗುಣವಾಗಿತ್ತು.

ಸಂಬಂಧಿಕರೊಬ್ಬರು ಹೊಸ ಮನೆ ಕಟ್ಟಿಸಿದ್ದು, ದಾಯಾದಿಗಳ ಮಗನೊಬ್ಬನಿಗೆ ಅಮೆರಿಕದಲ್ಲಿ ನೌಕರಿ ಸಿಕ್ಕಿದ್ದು, ಸಹೋದ್ಯೋಗಿಗೆ ಕೆಲಸದಲ್ಲಿ ಬಡ್ತಿ ಯಾಗಿದ್ದು, ಪಕ್ಕದ ಮನೆಯವರು ಕಾರು ಕೊಂಡಿದ್ದು ಹೀಗೆ ಮಾತಿನುದ್ದಕ್ಕೂ ಬೇರೆಯವರ ಪ್ರಗತಿ ವಿವರಿಸುತ್ತಾ, ಇದೆಲ್ಲಾ ತಮ್ಮಿಂದ ಸಾಧ್ಯವಾಗುತ್ತಿಲ್ಲ ವೆಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು. ನನಗೆ ತಿಳಿದಿರುವಂತೆ, ನನ್ನ ಸ್ನೇಹಿತರದು ಅನುಕೂಲಸ್ಥ ಕುಟುಂಬ, ಇಷ್ಟಾದರೂ ಅವರು ಅತ್ಯಂತ ವ್ಯಥೆಯಲ್ಲಿದ್ದದ್ದು ನೋಡಿ ಬೇಸರವಾಯಿತು.

ಹೀಗೆ ಬೇರೆಯವರ ಬದುಕಿನೊಂದಿಗೆ ತಮ್ಮ ಬದುಕನ್ನು ಹೋಲಿಸಿ ವ್ಯಥೆಪಟ್ಟುಕೊಳ್ಳುವುದು, ಅದನ್ನೊಂದು ಹೇರಿಕೆ ಮಾಡಿಕೊಳ್ಳುವುದು ಅವರಿಗೆ ಚಟದಂತೆ ಅಂಟಿಕೊಂಡಿದೆ. ‘ಉಟ್ಟರೂ ಬೆತ್ತಲೆ, ಉಂಡರೂ ಹಸಿವು’ ಎನ್ನುವಂಥ ಮನಸ್ಥಿತಿಯಿಂದಾಗಿ ಬದುಕಿನ ಸಂತೋಷದ ಕ್ಷಣಗಳನ್ನು ಅನುಭವಿ ಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಡಗರದ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದೆ. ತಾಯಂದಿರಿಬ್ಬರು ತಮ್ಮ ಮಕ್ಕಳ ‘ವೆಸ್ಟರ್ನ್ ಡಾನ್ಸ್’ ಭಂಗಿಯ ಕುರಿತು ಬಂಧುಗಳೊಡನೆ ಮಾತನಾಡುತ್ತಿದ್ದಾಗ, ಪರಸ್ಪರ ಸ್ಪರ್ಧೆಗೆ ಇಳಿದಿರುವಂತೆ ಭಾಸವಾಗುತ್ತಿತ್ತು.

ಸಂತೋಷದಿಂದ ಆಟವಾಡಿಕೊಂಡಿದ್ದ ಮಕ್ಕಳಿಬ್ಬರನ್ನೂ ಕರೆದು, ಅಲ್ಲಿ ನೆರೆದಿದ್ದವರ ಎದುರು ಅವರ ಪ್ರತಿಭೆಯನ್ನು ಬಲವಂತವಾಗಿ ಪ್ರದರ್ಶಿಸ ಲಾಯಿತು. ಸಹಜವೆನ್ನುವಂತೆ, ಒಂದು ಮಗುವಿನ ಆತ್ಮವಿಶ್ವಾಸ ಹಾಗೂ ಕುಣಿತ, ಹೋಲಿಕೆಯಲ್ಲಿ ಇನ್ನೊಂದು ಮಗುವಿಗಿಂತ ಕೊಂಚ ಹಿಂದಿತ್ತು. ಇದು ಆ ಮಗುವಿನ ತಾಯಿಗೆ ನಿರೀಕ್ಷಿಸಲಾಗದ ಸೋಲಿನಂತೆ ಭಾಸವಾಯಿತು. ಆ ಮಗುವನ್ನು ಆಕೆ ವಾಚಾಮಗೋಚರವಾಗಿ ಬೈಯುತ್ತ, ತನಗೆ ಬಂಧುಗಳೆ ದುರು ಅವಮಾನವಾಯಿತೆಂದು ಮದುವೆ ಮನೆಯಲ್ಲೇ ಆ ಮಗುವನ್ನು ದೈಹಿಕವಾಗಿ ಶಿಕ್ಷಿಸಿದಳು. ಇದರಿಂದಾಗಿ, ಅದುವರೆಗೂ ಸಂಭ್ರಮದಿಂದ ಕೂಡಿದ್ದ ವಾತಾವರಣಕ್ಕೆ ಸೂತಕದ ಕಳೆ ಆವರಿಸಿದಂತಾಯಿತು.

ಇತ್ತೀಚೆಗೆ ಈ ರೀತಿಯ ದುರ್ವರ್ತನೆ ವಿದ್ಯಾಭ್ಯಾಸಕ್ಕೂ ಹೊರತಾಗಿಲ್ಲ. ಮಕ್ಕಳ ಆಟ, ಪಾಠ, ಶಾಲೆ, ವೃತ್ತಿ ಹೀಗೆ ಪ್ರತಿಯೊಂದು ಹಂತದಲ್ಲೂ ಪಾಲಕರು
ಬೇರೆಯವರೊಂದಿಗೆ ಹೋಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬೇರೆಯವರ ನಿರ್ಧಾರಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ದಾಯಾದಿಗಳು, ನೆರೆಹೊರೆ ಯವರು, ಬಂಧುಗಳು, ಪರಿಚಿತರ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಎಂದು ಗಮನಿಸಿ ಅದನ್ನೇ ತಮ್ಮ ಮಕ್ಕಳಿಗೂ ಒದಗಿಸಲು ಮುಂದಾಗುತ್ತಾರೆ. ತಮಗೆ ಇಷ್ಟವಿರಲಿ ಇಲ್ಲದಿರಲಿ, ಪಾಲಕರ ಆಸೆಯನ್ನು ಪೂರೈಸಲು ಮಕ್ಕಳು ತಮ್ಮ ಆಸಕ್ತಿಯನ್ನು ಬಲಿಗೊಡಬೇಕಾದ ಪ್ರಸಂಗ ಎದುರಾಗುತ್ತಿದೆ. ಪಾಲಕರು ಅಪೇಕ್ಷಿಸಿದಂತೆ ಶೈಕ್ಷಣಿಕವಾಗಿ ಹೆಚ್ಚಿನದನ್ನು ಸಾಧಿಸಲು ವಿಫಲರಾಗುವ ಮಕ್ಕಳ ಬದುಕು ಕೆಲವೊಮ್ಮೆ ತೀವ್ರ ಸಂಕಷ್ಟದಲ್ಲಿ ಪರ್ಯವಸಾನ ಗೊಳ್ಳುವುದು ಸಾಮಾನ್ಯವಾಗಿದೆ.

ಸಾಮಾಜಿಕ ಬದುಕಿನಲ್ಲಿ ಮನುಷ್ಯ ಮನುಷ್ಯರ ನಡುವೆ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಅನೇಕ ರೀತಿಯ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು
ವೈವಿಧ್ಯಗಳೆಂದು ಭಾವಿಸಿ ಮನುಷ್ಯ ಮುನ್ನಡೆದರೆ, ಅವನ ಪಯಣದ ಪಥದಲ್ಲಿ ಯಾವ ಆತಂಕಗಳಾಗಲೀ ವಿರೋಧಾಭಾಸಗಳಾಗಲೀ ಎದುರಾಗ ಲಾರವು. ದುರಂತವಿರುವುದು ಮನುಷ್ಯನು ವ್ಯತ್ಯಾಸಗಳನ್ನು ವೈವಿಧ್ಯಗಳೆಂದು ನೋಡದೆ ಸಂಕಷ್ಟಗಳೆಂದು ಭಾವಿಸುವುದರಲ್ಲಿ. ಪರಿಣಾಮವಾಗಿ, ಮನುಷ್ಯ ಇನ್ನೊಬ್ಬರ ಬದುಕಿನೊಂದಿಗೆ ತನ್ನ ಬದುಕನ್ನು ಹೋಲಿಸಿಕೊಂಡು ಬದುಕನ್ನು ನರಕಗೊಳಿಸಿಕೊಳ್ಳುತ್ತಾನೆ. ಮನುಷ್ಯನ ಈ ಸ್ವಭಾವವನ್ನು ನೋಡಿಯೇ ಡಿವಿಜಿಯವರು, ‘ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು, ಹರುಷಕದೆ ದಾರಿಯೆಲೊ ಮಂಕುತಿಮ್ಮ’ ಎಂದಿರುವರು.

‘ಎದೆ ತುಂಬಿ ಹಾಡಿದೆನು’ ಎಂಬ ಕವನದಲ್ಲಿ ಜಿ.ಎಸ್.ಶಿವರುದ್ರಪ್ಪನವರು, ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ
ಕರ್ಮ ನನಗೆ; ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ’ ಎಂದಿದ್ದಾರೆ. ಇನ್ನೊಬ್ಬರಿಗಾಗಿ ಜೀವನವನ್ನು ನಡೆಸ ಲೋಸುಗ ಇರುವ ಜೀವನೋತ್ಸಾಹಕ್ಕೆ ಸಂಚಕಾರ ತಂದುಕೊಳ್ಳುವುದು, ಇನ್ನೊಬ್ಬರ ಹೋಲಿಕೆಯ ಹೇರಿಕೆಯಿಂದಾಗಿ ಆ ಜೀವನೋತ್ಸಾಹವನ್ನು
ಬರಿದುಗೊಳಿಸಿ, ನಮ್ಮ ಜೀವನವನ್ನು ಅವರಿಗೆ ಹಸ್ತಾಂತರಿಸುವುದು ಅಗತ್ಯವೇ? ಮನುಷ್ಯ ಮಾತ್ರ ಈ ಕ್ರಿಯೆಗೆ ಹೇಗೆ ಆತುಕೊಂಡನೋ? ವಿವೇಚನಾಶಕ್ತಿ ಇರುವ ಮನುಷ್ಯನ ಬದುಕು ಹೋಲಿಕೆಯಿಂದ ನರಕವಾಗಬಾರದು. ಈ ವಿಷಯದಲ್ಲಿ ಮನುಷ್ಯನು ಪರಿಸರದಲ್ಲಿರುವ ಉಳಿದೆಲ್ಲ ಜೀವಸಂಗತಿಗಳಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ.

(ಲೇಖಕರು ಸಿವಿಲ್ ಎಂಜಿನಿಯರ್)

Leave a Reply

Your email address will not be published. Required fields are marked *

error: Content is protected !!