Sunday, 8th September 2024

ಅಮೆರಿಕ ಅಧ್ಯಕ್ಷ ಮೌನವ್ರತ ಪಾಲಿಸಿದರೆ ವಿಶ್ವದಲ್ಲಿ ಶಾಂತಿ !

ನೂರೆಂಟು ವಿಶ್ವ

vbhat@me.com

ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆ ಯನ್ನು ಈ ವಾರವೂ ಮುಂದುವರಿಸುತ್ತೇನೆ. ಅವರು ಹೇಳಿದ್ದ ಎಷ್ಟೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲ ವೆನಿಸುತ್ತದೆ. ಇನ್ನು ಅವರು ಮೌನವ್ರತಕ್ಕೆ ಕುಳಿತರೆ ಮಾತಾಡುವುದು ಎಂದೋ? ‘ಯೋಚನೆಗಳು, ಕಲ್ಪನೆಗಳು ಸುಂದರ, ಆದರೆ ಮಾತುಗಳು ಅಸಹ್ಯ. ನಮಗೆ ಮಾತು ಅನಿವಾರ‍್ಯವಲ್ಲ. ಮನುಷ್ಯನಿಗೂ ದೇವರು ಮಾತುಗಳನ್ನು ಕೊಡಬಾರದಿತ್ತು ಎಂದು ಯೋಗೀಜೀ ಆಗಾಗ ಹೇಳುತ್ತಿರುತ್ತಾರೆಂದು ಅವರ ಶಿಷ್ಯರಾದ ಯೋಗಿ ನಿಶ್ಚಿಂತಜೀ ಸಹ ಮೊನ್ನೆ ಹೇಳಿದ್ದು ತಮಾಷೆಯಾಗಿ ಕಂಡಿತು.

‘ನಾನೇನಾದರೂ ಮುಖ್ಯಮಂತ್ರಿಯೋ, ಪ್ರಧಾನಿಯೋ ಆದರೆ ಜನರೆಲ್ಲ ವರ್ಷದಲ್ಲಿ ಕನಿಷ್ಠ ಒಂದು ತಿಂಗಳಾ ದರೂ ಕಡ್ಡಾಯವಾಗಿ ಮೌನವ್ರತ ಆಚರಿಸಲೇ ಬೇಕೆಂಬ ನಿಯಮವನ್ನು ರೂಪಿಸುತ್ತೇನೆ. ನನ್ನನ್ನು ವಾಕ್ ಸ್ವಾತಂತ್ರ್ಯದ ವಿರೋಧಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ವಾಧಿಕಾರಿ ಎಂದು ಜರೆದರೂ ಪರವಾಗಿಲ್ಲ. ಆದರೆ ಮೌನವ್ರತ ಆಚರಿಸಿದ ನಂತರ, ಅದರ ಪರಿಣಾಮವನ್ನು ಅರಿತ ಬಳಿಕ ಅವರೆಲ್ಲ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆಂಬ ವಿಶ್ವಾಸ ವಿದೆ. ಈ ವ್ರತವನ್ನು ಸಾಮಾನ್ಯ ಪ್ರಜೆಗಳಿಗಿಂತ ಮೊದಲು ಅಧಿಕಾರದಲ್ಲಿರುವವರು, ಅಂದರೆ, ಪ್ರಧಾನಿ, ರಾಷ್ಟ್ರಪತಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಪಾಲಿಸಬೇಕು. ಆಗಲೇ ಅದರ ಪರಿಣಾಮ ಶೀಘ್ರ ತಿಳಿಯುತ್ತದೆ.

ಅಮೆರಿಕ ಅಧ್ಯಕ್ಷನಾದರೂ ಒಂದು ತಿಂಗಳ ಮೌನವ್ರತ ಆಚರಿಸಿದರೆ ಜಗತ್ತು ಎಷ್ಟು ಶಾಂತವಾಗಿರುತ್ತದೆ ಎಂಬುದು ಇಡೀ ವಿಶ್ವಕ್ಕೇ ತಿಳಿಯುತ್ತದೆ’ ಎಂದರು ಯೋಗಿ ದುರ್ಲಭಜೀ. ‘ರಾಮಾಯಣದಲ್ಲಿ ಒಂದು ಪ್ರಸಂಗ ಬರುತ್ತದೆ. ಪ್ರತಿ ವರ್ಷ ರಾವಣ ನಲವತ್ತೈದು ದಿವಸ ಮೌನವ್ರತಕ್ಕೆ ಕುಳಿತುಕೊಳ್ಳುತ್ತಿದ್ದನಂತೆ. ಇಡೀ ಲಂಕೆಯಲ್ಲಿ ಶಾಂತಿ ನೆಲೆಸಿರುತ್ತಿತ್ತಂತೆ. ಇದರ ಪರಿಣಾಮ ಮೂರು ತಿಂಗಳುಗಳ ಕಾಲ ಇರುತ್ತಿತ್ತಂತೆ. ಮೌನವ್ರತದ ಬಳಿಕ ರಾವಣ ಮತ್ತಷ್ಟು ಬಲಶಾಲಿ ಹಾಗೂ ವಿವೇಕಶಾಲಿಯಾಗುತ್ತಾನೆಂದು ಜನ ಮಾತಾಡಿಕೊಳ್ಳು ತ್ತಿದ್ದರಂತೆ. ರಾವಣ ಮೌನವ್ರತಕ್ಕೆ ಕುಳಿತ ಸುದ್ದಿ ಹರಡುತ್ತಿದ್ದಂತೆ ಲಂಕೆಯ ಪ್ರಜೆಗಳು ಮೌನವ್ರತಕ್ಕೆ ಶರಣಾಗುತ್ತಿದ್ದರಂತೆ.

ಎಲ್ಲಿದೆ ಶಾಂತಿ. ಹಾಗೆಂದು ಆಗಬೇಕಾದ ಕೆಲಸಗಳು ನಡೆಯುತ್ತಿದ್ದವು, ಇನ್ನೂ ತೀವ್ರಗತಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದವು’ ಎಂದು ಯೋಗೀಜೀ ವಿವರಿಸಿ ದರು. ‘ಅಲ್ಲ ಯೋಗೀಜಿ, ನಿಮ್ಮ ಸಲಹೆಯನ್ನೇನಾದರೂ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಸ್ವೀಕರಿಸಿ ಅದನ್ನು ಜಾರಿಗೆ ತಂದರೆ ನಮ್ಮ ಕತೆ ಏನು? ನಾವು ಪತ್ರಿಕೆಯಲ್ಲಿ ಏನು ಬರೆಯೋದು? ಟಿವಿಯಲ್ಲಿ ಏನು ತೋರಿಸೋದು? ನಮ್ಮ ಪರಿಸ್ಥಿತಿಯನ್ನು ಸ್ವಲ್ಪ ಯೋಚಿಸಿದ್ದೀರಾ’ ಎಂದೆ.

ಅದಕ್ಕೆ ಯೋಗೀಜೀ ಹೇಳಿದರು: ‘ಈ ಪತ್ರಿಕೆಗಳು, ಟಿವಿಗಳೇ ಅಶಾಂತಿಗೆ ಕಾರಣ. ಜನ ಹೇಳಿದ್ದನ್ನೇ ಬರೆದು, ತೋರಿಸಿ ಅವರವರಲ್ಲಿ ಜಗಳ ಹಚ್ಚಿಹಾಕಿ ನಿಮ್ಮ ವ್ಯಾಪಾರ ಮುಗಿಸಿಕೊಂಡು ಅಶಾಂತಿ ಕದಡುವುದೇ ನೀವು. ನಿಮ್ಮ ಬೇಳೆ ಬೇಯಿಸಿಕೊಳ್ಳಲು ಜನರ ಮಧ್ಯೆ ಜಗಳ ತಂದಿಡುತ್ತೀರಿ. ಟಿವಿಯವರಂತೂ ಬಾಯಿಗೆ ಮೈಕನ್ನು ತುರುಕಿ ಮಾತಾಡಿಸುತ್ತಾರೆ. ಅವರಿಗೆ ಮತ್ತೇನೂ ಬೇಡ ಬೈಟ್ಸ್ ಬೇಕು. ಅದಕ್ಕಾಗಿ ದಿನಗಟ್ಟಲೆ ಕಾದು ಕುಳಿತಿರುತ್ತಾರೆ. ಟಿವಿ ಪತ್ರಕರ್ತರಿಗೆ ಚೆನ್ನಾಗಿ ಗೊತ್ತು ಬಾಯಿಬಿಟ್ಟರೆ ಬಣ್ಣಗೇಡು ಅಂತ. ಹೀಗಾಗಿ ಅವರು ಬೈಟ್‌ಗೆ ಕಾಯೋದು. ಇಬ್ಬರು ರಾಜಕೀಯ ನಾಯಕರು ಮಾತುಕತೆ ನಡೆಸಿ ಹೊರಬಂದರೆ ಸಾಕು, ಮೈಕ್ ಹಿಡಿಯುತ್ತೀರಿ ಅವರು ಏನೇ ಹೇಳಲಿ ಅದನ್ನೇ ದೊಡ್ಡ ಸುದ್ದಿಯನ್ನಾಗಿ ತೋರಿಸುತ್ತೀರಿ. ಆ ದಿನ ಅದೇ ದೊಡ್ಡ ಸುದ್ದಿ.

ಉದಾಹರಣೆಗೆ, ತಮ್ಮಿಬ್ಬರ ಮಧ್ಯದ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಳ್ಳಲು ನರೇಂದ್ರ ಮೋದಿಯವರು ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿಯವರನ್ನು ಭೇಟಿ ಮಾಡಿದರೆನ್ನಿ, ಆ ಮಾತುಕತೆ ಮೂರು ನಾಲ್ಕು ತಾಸು ನಡೆದರೆ ಆಡ್ವಾಣಿ ಮನೆಮುಂದೆಯೇ ಕುಳಿತಿರುತ್ತೀರಿ. ಮೋದಿ ಹೊರ ಬರುವಾಗ ರಾತ್ರಿ ಒಂದು ಗಂಟೆಯಾದರೂ ನಿಮಗೆ ಹಸಿವು ನಿದ್ದೆ ಯಾವವೂ ಬಾಧಿಸುವುದಿಲ್ಲ. ಅಲ್ಲಿಯೇ ಕುಳಿತಿರುತ್ತೀರಿ. ಮೋದಿ ಹೊರಬರುತ್ತಿದ್ದಂತೆ ಅವರ ಹತ್ತಿರ ಓಡಿ ಅವರ ಬಾಯಿಗೆ ಮೈಕನ್ನು ತುರುಕುತ್ತೀರಿ. ನಮ್ಮಿಬ್ಬರ ಮಧ್ಯೆ ಇದ್ದ ಎಲ್ಲ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿದೆ ಎಂದು ಮೋದಿ ಹೇಳಿದರೆ, ಭಿನ್ನಾಭಿಪ್ರಾಯ ಇತ್ತೆಂಬುದನ್ನು
ಒಪ್ಪಿಕೊಂಡ ಮೋದಿ ಎಂದು ಬರೆಯುತ್ತೀರಿ.

ಬಹುತೇಕ ಎಲ್ಲ ವಿಷಯಗಳ ಬಗ್ಗೆ ಒಮ್ಮತ ಮೂಡಿದೆ ಎಂದರೆ ಇನ್ನೂ ಕೆಲ ವಿಷಯಗಳ ಬಗ್ಗೆ ಒಮ್ಮತ ಮೂಡಬೇಕಿದೆ ಎಂದು ಹೇಳುತ್ತೀರಿ. ಇದೊಂದು ಸೌಜನ್ಯ ಯುತ ಭೇಟಿ ಎಂದು ಹೇಳಿದರೆ, ಮುಸುಕಿನ ಗುದ್ದಾಟ ಮುಂದುವರಿದಿದೆ ಎಂದು ವ್ಯಾಖ್ಯಾನಿಸುತ್ತೀರಿ. ಸರಿ ಇವ್ಯಾವುದರ ಉಸಾಬರಿಯೇ ಬೇಡ ಎಂದು ಪತ್ರಕರ್ತರಿಗೆ ಸಿಗದೇ ಸುಮ್ಮನೆ ಹೊರಟು ಹೋದರೆ, ಮುರಿದು ಬಿದ್ದ ಆಡ್ವಾಣಿ-ಮೋದಿ ಮಾತುಕತೆ ಅಂತೀರಿ. ಹಾಗಾದರೆ ಏನು ಮಾಡಬೇಕು? ಏನು
ಮಾಡಿದರೂ ಅದೊಂದು ವಿವಾದವಾಗಿಯೇ ಪರಿಣಮಿಸುತ್ತದೆ. ಹಾಗೆ ನೋಡಿದರೆ ಪತ್ರಿಕೆ, ಟಿವಿ, survive – ಆಗುತ್ತಿರುವುದೇ ಈ ಬೈಟ್ಸ್‌ಗಳಿಂದ, ಇದು bite journalism ಇಲ್ಲಿ bites ಅಂದ್ರೆ ಹೇಳಿಕೆ ಅಂತಾನೂ ಅರ್ಥ.

ಕಚ್ಚುವುದು ಕಚ್ಚಿಸುವುದು, ಕಚ್ಚಾಡುವುದೇ ಸುದ್ದಿ. ಮಾತಾಡಿದರೆ, ವಿವಾದ, ಜಗಳ, ಹೊಡೆದಾಟ ಗ್ಯಾರಂಟಿ. ಒಂದು ಕ್ಷಣ ಸಾವರಿಸಿಕೊಂಡ ಯೋಗೀಜೀ ಪುನಃ
ಮುಂದುವರಿಸಿದರು-‘ಉನ್ನತ ಸ್ಥಾನದಲ್ಲಿರುವವರು ವರ್ಷದಲ್ಲಿ ಒಂದು ತಿಂಗಳಾದರೂ ಮೌನವ್ರತ ಪಾಲಿಸಬೇಕು ಅಂತ ಹೇಳಿದ್ದು ಈ ಕಾರಣಕ್ಕೆ. ಆದರೆ ನಮ್ಮ ಪ್ರಧಾನಿ ಡಾ.ಮನಮೋಹನಸಿಂಗ್ ಇದ್ದಾರಲ್ಲ, ಅವರಿಗೆ ಮೌನದ ಮಹತ್ವ ಚೆನ್ನಾಗಿ ಗೊತ್ತು. ಅದಕ್ಕಾಗಿ ಅವರು ವರ್ಷದಲ್ಲಿ ಒಂದು ತಿಂಗಳ ಬದಲು, ಅಧಿಕಾರ ದಲ್ಲಿದ್ದ ಹತ್ತು ವರ್ಷವೂ ಮೌನವ್ರತಕ್ಕೆ ಶರಣಾದರು.

Thats a great strategy. ಒಂದು ವೇಳೆ ಡಾ. ಸಿಂಗ್ ಅವರು ವಾಚಾಳಿಯಾಗಿದ್ದರೆ, ಮೊದಲನೆಯದಾಗಿ ಕಾಂಗ್ರೆಸ್ ಪಕ್ಷ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕುಳ್ಳಿರಿಸುತ್ತಿರಲಿಲ್ಲ. ಒಂದು ವೇಳೆ ಕುಳ್ಳಿರಿಸಿದರೂ, ಅವರು ಹೆಚ್ಚೆಂದರೆ ಎರಡು-ಮೂರು ವರ್ಷಗಳ ಕಾಲ ಆ ಹುದ್ದೆಯಲ್ಲಿರುತ್ತಿದ್ದರು. ಏನೋ ಮಾತಾಡಿ, ತಾಪತ್ರಯ ತಂದುಕೊಳ್ಳುತ್ತಿದ್ದರು. ಸೋನಿಯಾಗಾಂಽಯವರು ಇಷ್ಟು ವರ್ಷ ಕಾಂಗ್ರೆಸ್ ಅಧ್ಯಕ್ಷೆಯಾಗಿರುವುದೂ ಅದೇ ಕಾರಣ. ಬೇರೆ ಯಾರಿಂದ ಸಹ ಇದು ಅಸಾಧ್ಯ. ಅಽಕಾರದಲ್ಲಿದ್ದಾಗ ಮಾತಾಡದೇ ಇರುವುದು. ಮೌನಕ್ಕೆ ಶರಣಾಗುವುದು ದೊಡ್ಡ ತಪಸ್ಸು.

ಅದು ದೊಡ್ಡ ಸಾಧನೆ. ಡಾ. ಸಿಂಗ್ ವಿರುದ್ಧ ಬರೆಯಲು ಏನೂ ಇಲ್ಲ. ಅವರ ಮೌನವೇ ನಿಮಗೆ ಅಣಕವಾಗಿ ಕಾಣುತ್ತದೆ. ಅದಕ್ಕಾಗಿ ನೀವು ಅವರನ್ನು ‘ಸೈಲೆಂಟ್ ಮೋಡ್ ನಲ್ಲಿರುವ ಪ್ರಧಾನಿ ಎಂದು ಗೇಲಿ ಮಾಡುತ್ತೀರಾ. ಅದು ಅವರ ಶಕ್ತಿ ಹಾಗೂ ನಿಮ್ಮ ದೌರ್ಬಲ್ಯ. ಅದಕ್ಕಾಗಿ ಅವರು ವರ್ಷ ಹತ್ತಾದರೂ ಆ ಪದವಿಯಲ್ಲಿ ದ್ದಾರೆ. ಮೌನ ದೌರ್ಬಲ್ಯವಲ್ಲ, ಅದು ತಾಕತ್ತು. ಮೌನಕ್ಕಿರುವ ಶಕ್ತಿ ಮಾತಿಗಿಲ್ಲ. ಈ ಕಾರಣಕ್ಕಾಗಿಯೇ ನಾನು ಮೌನವ್ರತವನ್ನು ಪ್ರತಿಪಾದಿಸುವುದು.

‘ಅಮೆರಿಕ ಅಧ್ಯಕ್ಷರೂ ಒಂದು ತಿಂಗಳ ಮೌನ ಧರಿಸಿದರೆ ಇಡೀ ವಿಶ್ವವೇ ಶಾಂತವಾಗಿರುತ್ತದೆ. ಒಂದು ದೇಶಕ್ಕೆ ಹೋದಾಗ, ಅನುಕೂಲಕ್ಕೆ ತಕ್ಕ ಹಾಗೆ ಮಾತಾಡುವುದರಿಂದ ಸಮಸ್ಯೆಯನ್ನು ಆಹ್ವಾನಿಸಿಕೊಳ್ಳುತ್ತಾರೆ. ಸಿರಿಯಾ ಮೇಲೆ ಯುದ್ಧ ಸಾರುತ್ತೇನೆ ಎಂಬ ಅಮೆರಿಕ ಅಧ್ಯಕ್ಷರ ಒಂದು ಹೇಳಿಕೆ World Order ಅನ್ನು ಬುಡಮೇಲು ಮಾಡುತ್ತದೆ. ಆ ಮಾತು ಹೇಳಿದ ಒಂದು ವರ್ಷದ ನಂತರವೂ ಪರಿಣಾಮ ಬುದುಗುಡುತ್ತಿರುತ್ತದೆ. ಇಡೀ ಜಗತ್ತು ಮೌನವ್ರತ ದಲ್ಲಿರುವುದೂ ಒಂದೇ, ಅಮೆರಿಕ ಅಧ್ಯಕ್ಷ ಮಾತಾಡುವುದೂ ಒಂದೇ. ಆತನ ಒಂದು ಮಾತಿಗೆ ವಿಶ್ವದ ಶಾಂತಿಯನ್ನು ಕಲ್ಲವಿಲಗೊಳಿಸುವ ಶಕ್ತಿಯಿದೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವವರು ಹೆಚ್ಚು ಹೆಚ್ಚು ಮೌನ ಧರಿಸಬೇಕು, ಕಡಿಮೆ ಅಂದ್ರೆ ಕಡಿಮೆ ಮಾತಾಡಬೇಕು, ಹೆಚ್ಚು ಯೋಚಿಸಬೇಕು. ಈ ಸರಳ ಸಂಗತಿ ಅರಿಯದವರೆಲ್ಲ ಸಮಸ್ಯೆಯನ್ನು ಆಹ್ವಾನಿಸಿಕೊಂಡು ಕಷ್ಟ ಅನುಭವಿಸಿದ್ದಾರೆ ಎಂದರು ಯೋಗೀಜೀ.

ಯೋಗೀಜೀ ಅವರ ಮಾತುಗಳನ್ನೆಲ್ಲ ಕೇಳಿಸಿಕೊಂಡ ಬಳಿಕ, ‘ಯೋಗೀಜೀ, ನೀವು ಹೇಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ನಮ್ಮ ಕತೆ ಏನು? ಪತ್ರಿಕೆ, ಟಿವಿಗಳು ಏನು ಮಾಡಬೇಕು ಎಂಬುದನ್ನು ಹೇಳಲಿಲ್ಲವಲ್ಲ’ ಎಂದೆ. ‘ನಾನು ಹೇಳುವುದು ಕಠೋರವೆನಿಸ ಬಹುದು, ಆದರೆ ನನ್ನ ಮಾತು ಇನ್ನು ಇಪ್ಪತ್ತು ವರ್ಷಗಳ ಬಳಿಕ ನಿಜವೆಂದು ಅನಿಸಬಹುದು. ಅಷ್ಟೊತ್ತಿಗೆ ಪರಿಸ್ಥಿತಿ ಕೈಮೀರು ತ್ತದೆ. ಅದೇನೆಂದರೆ, ಸಾಂಸ್ಕೃತಿಕ ಭಾರತವನ್ನು ದಿವಾಳಿಯೆಬ್ಬಿಸಿದ್ದೇ ಟಿವಿ. ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆ, ಸಂಪ್ರದಾಯ, ರೀತಿ-ರಿವಾಜುಗಳನ್ನು ಹಾಳುಗೆಡವಿದ್ದೇ ಟಿವಿ. ಹಳ್ಳಿಗಳು ಸಹ ನಗರಗಳನ್ನು ಅನುಕರಿಸುತ್ತಿವೆ.

ಬೆನ್ನು ನೋವು ಬಂದಾಗ ಯಾರೂ ‘ಅಯ್ಯೋ’ ಅನ್ನುವುದಿಲ್ಲ. ಎಲ್ಲರೂ ‘ಔಚ್’ ಅಂತಾರೆ. ಎಲ್ಲರೂ ಟಿವಿ ಭಾಷೆಯನ್ನು ಅನುಕರಿಸುತ್ತಿದ್ದಾರೆ. ಟಿವಿ ನಮಗೆ ಗೊತ್ತಿಲ್ಲದೇ ನಮ್ಮನ್ನು ನಿಯಂತ್ರಿಸುತ್ತಿದೆ. ಕಾಂಪ್ಲಾನ್ ಕುಡಿದರೆ ನಮ್ಮ ಮಗನೂ ಸಚಿನ್ ತೆಂಡುಲ್ಕರ್ ಆಗಬಹುದೆಂಬ ಭ್ರಮೆ ತಾಯಂದಿರನ್ನು ಆವರಿಸಿ ಕೊಳ್ಳುತ್ತಿದೆ. ಸಾಯಂಕಾಲ ಬಿಡುವಿನ ಸಮಯದಲ್ಲಿ ಹಳ್ಳಿಗಳಲ್ಲಿ ಜನ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರುತ್ತಿದ್ದರು. ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈಗ ಎಲ್ಲರೂ ನಿರ್ದಿಷ್ಟ ಸ್ಥಳ ಅಂದ್ರೆ ಟಿವಿ ಮುಂದೆ ಎನ್ನುವಂತಾಗಿದೆ. ಹಳ್ಳಿಗಳಲ್ಲಿ ಊರಿಗೆ ಊರೇ ಟಿವಿ ಮುಂದೆ ಕುಳಿತಿರುತ್ತದೆ. ನಗರಗಳಲ್ಲೂ ಇದೇ ವಾತಾವರಣ, ನಮ್ಮ ಎಲ್ಲ ಚಟುವಟಿಕೆಗಳೂ ಟಿವಿ ಕೇಂದ್ರಿತ, ಅಲ್ಲಿನ ಟಿವಿ ಕಾರ‍್ಯಕ್ರಮಕ್ಕೆ ಅನುಗುಣವಾಗಿ ನಮ್ಮ ದಿನಚರಿ ಯನ್ನು ರೂಪಿಸಿಕೊಳ್ಳುವಂತಾಗಿದೆ.

ಮಕ್ಕಳಿಗೆ ತಂದೆ-ತಾಯಿ, ಗುರು, ಹಿರಿಯರಿಗಿಂತ ಟಿವಿಯೇ ಗುರು. ಅದೇ ಆದರ್ಶ, ಇದರಿಂದ ಗ್ರಾಮೀಣ ಕಲೆ, ನಾಟ್ಯ, ಸಂಪ್ರ ದಾಯ ಗಳೆಲ್ಲ ಮಾಯವಾಗುತ್ತಿವೆ. ಇಡೀ ದೇಶವನ್ನು ಇಂದು ಟಿವಿ ನಿರ್ದೇಶಿಸುತ್ತಿದೆ. ಪೆರುವಂಥ ದೇಶ ಮೂರು ತಿಂಗಳುಗಳ ಕಾಲ ಟಿವಿಯ ಮೇಲೆ ಕೆಲವು ಪ್ರದೇಶಗಳಲ್ಲಿ ಪ್ರಯೋಗಾರ್ಥವಾಗಿ ದಿಗ್ಬಂಧನ ಹೇರಿತು. ಪರಿಣಾಮ ಸಕಾರಾತ್ಮಕವಾಗಿತ್ತು. ಇದನ್ನು ಕ್ರಮೇಣ ಬೇರೆ ಪ್ರದೇಶಗಳಿಗೆ ವಿಸ್ತರಿಸುವ ಆಶಯವನ್ನು ಅಲ್ಲಿನ ಸರಕಾರ ಹೊಂದಿದೆ. ಇಡೀ ಪೀಳಿಗೆ, ತಲೆಮಾರು ಟಿವಿ ಮುಂದೆ ಕುಳಿತು ಕಳೆದುಬಿಟ್ಟರೆ ಏನಾಗಬೇಡ?’ ಯೋಗೀಜಿ ಮಾತು ಬದಲಿಸಿದರು.

‘ಯಾವುದೇ ಕ್ಷೇತ್ರವಿರಬಹುದು. ಅಲ್ಲಿ ಅಪರಿಮಿತ ಸಾಧನೆ ಮಾಡಿದ ಜನರನ್ನು ಭೇಟಿ ಮಾಡಿ ಅವರೊಂದಿಗೆ ಕೆಲ ಸಮಯವನ್ನಾದರೂ ಕಳೆಯುವುದು, ನನಗೆ ಇಷ್ಟವಾದ ಸಂಗತಿ. ಇತ್ತೀಚೆಗೆ ಮೂರು ಸೇತುವೆ ಸಹಿತ ಹದಿನಾಲ್ಕು ಕಿ.ಮೀ. ರಸ್ತೆಯನ್ನು ಮಾಡಿದ ಗ್ರಾಮಸ್ಥರನ್ನು ಭೇಟಿ ಮಾಡಿದ್ದೆ. ಸರಕಾರದಿಂದ ಒಂದು ರುಪಾಯಿ ಸಹಾಯವಿಲ್ಲದೇ ನಲವತ್ತೊಂದು ಮಂದಿ ರೈತರು ಸೇರಿ ರಸ್ತೆ ಸೇತುವೆ ನಿರ್ಮಿಸಿದ್ದರು. ಅವರೆಲ್ಲರ ಜತೆ ಕಳೆದಾಗ ಗೊತ್ತಾದ ಒಂದು ಅಂಶವೇ ನೆಂದರೆ, ಅವರಾರೂ ನಕರಾತ್ಮಕವಾಗಿ ಯೋಚಿಸುವವರಲ್ಲ. ಮಾಡೋಣ, ಯಾಕಾಗೊಲ್ಲ, ಮಾಡಿಯೇ ಸಿದ್ಧ, ನಾವು ಮಾಡದಿದ್ದರೆ ಮತ್ತ್ಯಾರು
ಮಾಡಬೇಕು. ಸುಮ್ಮನೆ ಕುಳಿತರೆ ಮುದುಕರಾಗಿ ಬಿಡುತ್ತೇವೆ.

ಒಂದು ದಿನವನ್ನೂ ವ್ಯರ್ಥಗೊಳಿಸಬಾರದು ಎಂದು ಯೋಚಿಸುವ, ಅದನ್ನೇ ಮಂತ್ರವನ್ನಾಗಿಸಿಕೊಂಡ hghಟಥಿ ಛಿhಚಿಡಿgeಜ ತಂಡವದು. ಈಗ ಅವರು ದೊಡ್ಡ ಗುಡ್ಡಕ್ಕೆ ಸುರಂಗ ಕೊರೆದು ಊರಿಗೆ ನೀರು ತರಲು ಹೊರಟಿದ್ದಾರೆ. ಸರಕಾರ ನಮ್ಮ ತಂಟೆಗೆ ಬರದಿದ್ದರೆ ಸಾಕು ಎನ್ನುವವರು. ‘ನಮ್ಮ ಸರಕಾರ, ಮುಖ್ಯಮಂತ್ರಿ ಗಳ ಸುತ್ತಮುತ್ತ ನೆಗೆಟಿವ್ ಯೋಚನೆ ತುಂಬಿದ ಅಽಕಾರಿಗಳು, ಚೇಲಾಗಳು, ಹಿಂಬಾಲಕರೇ ತುಂಬಿರುತ್ತಾರೆ. ಅವರಿಗೆ ಯಾವುದೇ ಕೆಲಸ, ಯೋಜನೆ ಹೇಳಿ. ಅದನ್ನು ಮಾಡುವದು ಎಷ್ಟು ಕಷ್ಟ, ಯಾಕೆ ಫೀಸಿಬಲ್ ಅಲ್ಲ ಎಂದು ಮನಮುಟ್ಟುವಂತೆ ವಿವರಿಸುತ್ತಾರೆ.

ಅಪ್ಪಿತಪ್ಪಿಯೂ ಈ ಕೆಲಸ ಮಾಡೋಣ, ಯಾಕಾಗೊಲ್ಲ ಎಂದು ಹೇಳುವುದಿಲ್ಲ. ವಿನಾಕಾರಣ ಕಾಲಹರಣ ಮಾಡುತ್ತಾರೆ. ಒಂದು ಯೋಜನೆಯನ್ನು ಹಳ್ಳ ಹಿಡಿಸುವುದು ಹೇಗೆ ಎಂದೇ ಅಕಲು ಹಾಕುತ್ತಿರುತ್ತಾರೆ. ಮುಖ್ಯಮಂತ್ರಿಗಳು ಇದಕ್ಕಾಗಿ ಇದನ್ನು ಮಾಡಿ ಎಂದರೂ ಹಲವು ಅಡೆತಡೆಗಳ ನೆಪ ಹೇಳುತ್ತಾರೆ. ಕೊಕ್ಕೆ ಹಾಕುತ್ತಾರೆ. ಅದೆಂಥ ನೆಗೆಟಿವ್ ಎನರ್ಜಿ ಅವರಲ್ಲಿ ತುಂಬಿಕೊಂಡಿರಬಹುದು? ಸರಕಾರದಿಂದ ಯಾವ ಕೆಲಸವೂ ಸಾಧ್ಯವಿಲ್ಲ ಅಥವಾ ವಿಳಂಬ ಎಂಬುದಕ್ಕೆ
ಇದೇ ಕಾರಣ. ನಮ್ಮ ಸುತ್ತಮುತ್ತ ಗೊಣಗುವವರು, ಚಾಡಿ ಹೇಳುವವರು, ಸದಾ ನೆಗೆಟಿವ್ ಸಂಗತಿಗಳನ್ನು ಹೇಳುವವರೇ ತುಂಬಿದ್ದರೆ ಹೀಗೇ ಆಗುತ್ತದೆ. ಅಲ್ಲಿ ಸಕಾರಾತ್ಮಕ ಚಿಂತನೆಯಿರುವವರು ವಿರಳ.

ಬರೀ ಅಪನಂಬಿಕೆ, ಸಂದೇಹ ಪ್ರವೃತ್ತಿಯವರೇ ತುಂಬಿರುತ್ತಾರೆ. ತಮ್ಮನ್ನು ಭೇಟಿ ಮಾಡಲು ಬರುವವರನ್ನು ಅನುಮಾನ ದಿಂದಲೇ ನೋಡುವ ಗುಣ ಬೆಳೆಸಿಕೊಂಡಿರುತ್ತಾರೆ. ಸರಕಾರದಲ್ಲಿ ಯಾಕೆ ಕೆಲಸ ಆಗುವುದಿಲ್ಲ ಎಂಬುದಕ್ಕೆ ಇದೇ ಕಾರಣ. ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ, ಅವರ ಜತೆ ಅರ್ಧ ಗಂಟೆ ಕಳೆಯಿರಿ. ಅವರು ನಿಮ್ಮನ್ನು ಪ್ರೇರೇಪಿಸುವುದಿಲ್ಲ. ನಿಮ್ಮಲ್ಲಿ ಉತ್ಸಾಹ ತುಂಬುವುದಿಲ್ಲ, ನಾವು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇವೆಂದು ನೀವು ಜಂಭ ಪಡಬಹುದೇ ಹೊರತು, ಅವರ ವಿಚಾರ, ಸೂರ್ತಿದಾಯಕ ಮಾತುಗಳಿಂದಲ್ಲ.

ನೆಗೆಟಿವ್ ವಾತಾವರಣ ತುಂಬಿರುವ ಕಡೆ ಯಾವ ಘನ ಕಾರ‍್ಯವನ್ನೂ ನಿರೀಕ್ಷಿಸುವುದು ಅಸಾಧ್ಯ. ನಿಮ್ಮ ಮನೆ, ಆಫೀಸು, ಅಕ್ಕಪಕ್ಕ ಇಂಥ ಒಂದಿಬ್ಬರು ವ್ಯಕ್ತಿಗಳು ಇದ್ದರೂ ಸಾಕು, ಅವರು ನಿಮ್ಮಲ್ಲಿ ನಕಾರಾತ್ಮಕತೆಯನ್ನು ಬಿತ್ತುತ್ತಿರುತ್ತಾರೆ. ಅದೇ ನೀವು ಸಾಧಕರ ಜತೆಗೆ ಇದ್ದರೆ, ಅವರೇ ನಿಮ್ಮನ್ನು ಮುನ್ನಡೆಸುತ್ತಾರೆ. ಕೆಲ ದಿನಗಳ ಹಿಂದೆ ಲೇಹ್ ಹಿಮಪರ್ವತಗಳಲ್ಲಿ ಮೂರು ವರ್ಷ ಬರೀ ಮೈಯಲಿದ್ದ ಸಾಧುವೊಬ್ಬರನ್ನು ಭೇಟಿ ಮಾಡಿದ್ದೆ. ಚಳಿಗಾಲದಲ್ಲಿ ಮೈನಸ್ ಹತ್ತು-ಹನ್ನೆರಡು ಡಿಗ್ರಿ ಸೆಂಟಿಗ್ರೇಡ್ ಕೊರೆಯುವ ಚಳಿಯಲ್ಲಿ ಬರೀ ಮೈಯಲ್ಲಿ ಎರಡು ನಿಮಿಷ ಇದ್ದರೆ, ಮೂಳೆ ಕೊರೆದು ಹೋಗಬಹುದು.

ಆದರೆ ಆ ತಪಸ್ವಿ ಮೂರು ವರ್ಷದಿಂದ ಬರೀ ಮೈಯಲ್ಲಿದ್ದಾರೆ! ಇದು ಹೇಗೆ ಸಾಧ್ಯವಾಯಿತು ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು ಹೇಳಿದರು- ‘ಮನಸ್ಸು! ತಾನು ಮೈ ತುಂಬಾ ಬಟ್ಟೆ ಹೊದ್ದುಕೊಂಡಿದ್ದೇನೆ, ಬೆಚ್ಚಗಿದ್ದೇನೆ ಎಂದು ಅವರು ಮೂರು ವರ್ಷಗಳಿಂದಲೂ ತಮ್ಮನ್ನು ನಂಬಿಸಿಕೊಂಡು ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದಾರೆ. ಅವರನ್ನು ಕಂಡರೆ ಚಳಿಯೇ ಓಡಿ ಹೊರಟು ಹೋಗುತ್ತದೆ. ಈ ಆಸಾಮಿ ನನ್ನ ಜತೆ ಎರಡು ವಾರವಿದ್ದರು. ಅವರು ಒಂದು ಸಲವೂ ನೆಗೆಟಿವ್ ಮಾತು ಹೇಳಿದ್ದನ್ನು ಕೇಳಲಿಲ್ಲ. ಕಲ್ಲನ್ನು ಕೊಟ್ಟರೂ ಚೆನ್ನಾಗಿ ಅಗೆಯಬಹುದು ಎಂಬ ಉತ್ಸಾಹ ಅವರಲ್ಲಿತ್ತು.

ಇಂಥ ಜನ ನನಗೆ ಅರಿವಿಲ್ಲದಂತೆ ನನ್ನಲ್ಲಿ ಹೊಸ ಶಕ್ತಿ, ಆಸೆ, ಭರವಸೆ, ವಿಶ್ವಾಸ, ನಂಬಿಕೆ ತುಂಬುತ್ತಾರೆ. ಮನಸ್ಸು ಎಂಥಾ ಸಾಹಸಕ್ಕಾದರೂ ಎದ್ದು ನಿಲ್ಲುತ್ತದೆ’ ಎಂದರು ಯೋಗಿ ದುರ್ಲಭಜೀ. ಈ ಮಾತನ್ನು ಕೇಳಿದ ನನ್ನಲ್ಲಿಯೂ ಯೋಗೀಜೀ ಅದೇ ಭಾವವನ್ನು ಬಿತ್ತಿದ್ದರು. ಇನ್ನು ನಿಮ್ಮ ಸರದಿ!

Leave a Reply

Your email address will not be published. Required fields are marked *

error: Content is protected !!