Sunday, 8th September 2024

ನೈಸರ್ಗಿಕ ವಿಪತ್ತು ಮತ್ತು ರಾಜಕಾರಣ

ವಿಶ್ಲೇಷಣೆ

ರಮಾನಂದ ಶರ್ಮಾ

ವರ್ಷದ ಹಿಂದಿನ ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಅಗಷ್ಟೇ ಅಧಿಕಾರಕ್ಕೇರಿತ್ತು. ಜೂನ್ -ಜುಲೈ  ಕಳೆದರೂ ಮುಂಗಾರು ಮಳೆಯ ಛಾಯೆಯೇ
ಕಾಣುತ್ತಿರಲಿಲ್ಲ. ಜನತೆಯಲ್ಲಿ ಬರಗಾಲದ ಭಯ ಅವರಿಸಿತ್ತು. ವಾಚಾಳಿ ಮತ್ತು ಹಗುರ ಮಾತಿಗೆ ಹೆಸರುವಾಸಿಯಾದ ರಾಜಕಾರಣಿಯೊಬ್ಬರು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ರಾಜ್ಯದಲ್ಲಿ ಬರಗಾಲ ಬರುತ್ತದೆ ಎಂದು ತೀಕ್ಷ್ಣವಾಗಿ ಲೇವಡಿ ಮಾಡಿದ್ದರು.

ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರದಲ್ಲಿದೆ, ಅದರೂ ರಾಜ್ಯದಲ್ಲಿ ಕುಂಭದ್ರೋಣ ಮಳೆ ಬೀಳುತ್ತಿದೆ. ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ ಅಕಾಶಕ್ಕೆ ತೂತು ಬಿದ್ದಂತೆ ಮಳೆ ಬೀಳುತ್ತಿದೆ. ಕರಾವಳಿ, ಮಲೆನಾಡು ಭಾಗ ದಲ್ಲಂತೂ ಮಳೆ ಮತ್ತು ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಚಾಲೆಂಜಿಂಗ್ ಅಗಿದೆ. ಕೆಲವು ಭಾಗದಲ್ಲಿ ಹಿಂದಿನ ವರ್ಷದ ಕೊರತೆಯನ್ನೂ ಸಮೀಕರಿಸಿದೆಯಂತೆ. ಈ ಹಿಂದೆ ಹಗುರವಾಗಿ ಮಾತನಾಡಿದ ಈ ರಾಜ ಕಾರಿಣಿಗಳು ಈಗ ತಮ್ಮ ಮಾತನ್ನು ಮತ್ತು ಲೇವಡಿಯನ್ನು ಹಿಂಪಡೆಯವುರೇ ಎಂದು ಕೇಳುವಂತಾಗಿದೆ.

ಅತಿವೃಷ್ಟಿ, ಅನಾವೃಷ್ಟಿ, ನೆರೆ, ಭೂಕಂಪ ಮೊದಲಾದ ನೈಸರ್ಗಿಕ ವಿಪತ್ತುಗಳು ದೈವೇಚ್ಚೆಯಾಗಿದ್ದು, ಅದರಲ್ಲಿ ಮನುಷ್ಯನ ನಿಯಂತ್ರಣ ಇರುವುದಿಲ್ಲ ಎನ್ನುವುದು ಬದುಕಿನ ಸತ್ಯ ಮತ್ತು ಇದಕ್ಕೆ ಯಾರನ್ನಾದರೂ ದೂರುವುದು, ಹೊಣೆಗಾರರ ನ್ನಾಗಿ ಮಾಡುವುದು ಸಣ್ಣ ಬುದ್ಧಿತನದ ಪರಮಾವಽ. ದಶಕಗಳ ಹಿಂದೆ ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದಾಗ ರಾಜ್ಯವನ್ನು ಬರ ಕಾಡಿತ್ತು. ಬರ ಕೇವಲ ಭೀಕರವಾಗಿರದೇ ನಿರಂತರವಾಗಿಯೂ ಇತ್ತು. ಹೆಗಡೆ ಮತ್ತು ನೀರ್ ಸಾಬ(ನಜೀರ್ ಸಾಬ) ಜೋಡಿಯು ಬರವನ್ನು ಜನ ಮೆಚ್ಚುವಂತೆ ನಿಭಾಯಿಸಿ ಭಾರೀ ಶ್ಲಾಘನೆ ಪಡೆದಿತ್ತು. ಆಗಲೂ ಅಡುವ ಬಾಯಿಯವ ರು ಹೆಗಡೆ ಮುಖ್ಯಮಂತ್ರಿಯಾದಾಗೆಲ್ಲ ಬರ ಗ್ಯಾರಂಟಿ ಎಂದು ಹಲವರು ಟೀಕಿಸಿದ್ದರು.

ಹಾಗೆಯೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗೆ ರಾಜ್ಯದಲ್ಲಿ ನೆರೆ ಕಾಡುತ್ತದೆ ಎಂದೂ ಗೇಲಿ ಮಾಡಲಾಗಿತ್ತು. ಅಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರಿಗೆ ಅವರ ದೆಹಲಿಯ ವರಿಷ್ಠರು ಸಕಾಲದಲ್ಲಿ ಸಚಿವ ಸಂಪುಟ ರಚನೆಗೆ ಅವಕಾಶ ನೀಡದೆ ಸತಾಯಿಸಿ ಅವರೊಬ್ಬರೇ ಕಾಲಿಗೆ ಚಕ್ರ
ಕಟ್ಟಿ ಕೊಂಡವರಂತೆ ರಾಜ್ಯಾದ್ಯಂತ ತಿರುಗಾಡಿ ಪರಿಸ್ಥಿತಿ ಯನ್ನು ನಿಭಾಯಿಸಿದ್ದರು. ಬೊಮ್ಮಾಯಿಯವರು ಮುಖ್ಯಮಂತ್ರಿಯಾದಾಗ ಪ್ರಮಾಣ ಸ್ವೀಕರಿಸುತ್ತಿದಂತೆಯೇ ನೆರೆ ಪರಿಸ್ಥಿತಿಯನ್ನು ಸ್ವತಹ ತಿಳಿಯಲು ಸುರಿಯುವ ಮಳೆಯಲ್ಲಿಯೇ ಕಾರವಾರಕ್ಕೆ ದೌಡಾಯಿಸಿದ್ದರು.

ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಕೆಲವರು ಅಭಿಪ್ರಾಯ ಪಡುವಂತೆ ಯಾರು ಅಧಿಕಾರದಲ್ಲಿ ಇದ್ದಾರೆ ಎನ್ನುವುದರ ಮೇಲೆ ಅವಲಂಭಿತವಾಗಿ ಎರಗುವುದಿಲ್ಲ. ಇದೊಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುವುದು ವೈಚಾರಿಕ ದಿವಾಳಿತನದ ಉದಾಹರಣೆ ಯಾಗಿದ್ದು, ತಮ್ಮ ಹೇಳಿಕೆಗಳಿಂದ ಮಾಧ್ಯಮ ದಲ್ಲಿ ಮಿಂಚುವ ದುಸ್ಸಾಹಸ ಎನ್ನಬಹುದು. ಅತಿವೃಷ್ಟಿ ಮತ್ತು ಅನಾವೃಷ್ಟಿಯನ್ನು ಸರಿಯಾಗಿ ನಿಭಾಯಿಸಲಿಲ್ಲ, ನಿರ್ವಹಿಸಲಿಲ್ಲ ಎಂದು ಟೀಕಿಸಲಿ, ಲೇವಡಿ ಮಾಡಲಿ, ಅದು ಬೇರೆ ಮಾತು. ಅದರೆ, ಈ ನೈಸರ್ಗಿಕ ವಿಪತ್ತುಗಳಿಗೆ ರಾಜಕೀಯ
ಪಕ್ಷಗಳನ್ನೇ ಟಾರ್ಗೆಟ್ ಮಾಡಿ ಹೆಡ್‌ಲೈನ್‌ನಲ್ಲಿ ಕಾಣುವುದು ರಾಜಕೀಯ ಮುತ್ಸದ್ಧಿತನ ಮತ್ತು ಪಕ್ವವಾದ ಬುದ್ಧಿಮತ್ತೆಯ ಲಕ್ಷಣವಲ್ಲ.

ಅತಿವೃಷ್ಟಿ ಅನಾಹುತದಲ್ಲಿ ಎರಡು ರೀತಿ ಇರುತ್ತಿದ್ದು, ಒಂದು ರಾಜ್ಯಾದ್ಯಂತ ಹರಿಯುವ ನದಿಗಳಲ್ಲಿ ಅತಿ ಮಳೆಯಿಂದಾಗಿ ನೀರು ದಡ ಏರಿ ಅಂಕೆ ಮೀರಿ ಹರಿಯುವುದು ಮತ್ತು ಪಟ್ಟಣ ನಗರಗಳಲ್ಲಿ ಮಳೆಯ ನೀರು ಸರಿಯಾಗಿ ಹರಿದು ಹೋಗದೆ ಪ್ರವಾಹವಾಗಿ ರಸ್ತೆ, ಕಾಲುವೆ, ಕೆರೆ ಮತ್ತು ಹಳ್ಳಗಳಲ್ಲಿ
ತುಂಬಿ ಹರಿಯುವುದು. ಮೊದಲ ರೀತಿಯ ಪ್ರವಾಹದಲ್ಲಿ ಸರಕಾರವಾಗಲಿ, ಜನತೆಯಾಗಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ನಿಸ್ಸಾಹಯಕರು.ಇದು ಸಂಪೂರ್ಣವಾಗಿ ನಿಸರ್ಗದ ಕೃಪೆಯಲ್ಲಿ ಅಥವಾ ಸೃಷ್ಟಿಕರ್ತನ ಕೈಯಲ್ಲಿ ಇರುತ್ತದೆ. ಸ್ವಲ್ಪಮಟ್ಟಿಗೆ ನದಿಯ ನೀರನ್ನು ಅಲ್ಲಲ್ಲಿ
ತಿರುಗಿಸಿ ಪ್ರವಾಹ ಅಥವಾ ನೆರೆಯ ಬಿರುಸನ್ನು ನಿಯಂತ್ರಿಸಬಹುದು ಎನ್ನುವ ಮಾತು ಕೇಳಿ ಬರುತ್ತಿದ್ದರೂ, ಅದೂ ತಿಳಿದಷ್ಟು, ಯೋಚಿಸಿದಷ್ಟು ಸುಲಭದ ಕೆಲಸವಲ್ಲ. ಇಂಥಹ ಯೋಚನೆಗಳು ಚಿಂತನೆ ಮತ್ತು ಡ್ರಾಯಿಂಗ್ ಬೋರ್ಡ್ ಬಿಟ್ಟು ಹೊರ ಬರಲಿಲ್ಲ. ಈ ನಿಟ್ಟಿನಲ್ಲಿ ಗಂಗಾ-ಕಾವೇರಿಯನ್ನು
ಜೋಡಿಸಬೇಕು ಎಂದು ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ತಮಿಳುನಟ ರಜನಿಕಾಂತ್ ಸುದ್ದಿ ಮಾಡಿದ್ದರು. ಅವರ ಈ ಚಿಂತನೆಯಲ್ಲಿ, ಕುಡಿಯುವ ನೀರು, ನೀರಾವರಿ ಮತ್ತು ಪ್ರವಾಹ ನಿಯಂತ್ರಿಸುವ ಮಹತ್ವಾಕಾಂಕ್ಷೆಗಳಿದ್ದವಂತೆ.

ಕೆಲವು ಮೂಲಗಳ ಪ್ರಕಾರ ಇಂಥಹ ಯೋಜನೆಗಳಿಗೆ ಬಂಡವಾಳ ಕ್ರೋಢೀಕರಣ, ಸಂಬಂಧಪಟ್ಟ ರಾಜ್ಯಗಳ ಸ ಹಮತಿ ದೊರಕಿಸುವುದು, ಇಂಜಿನೀಯರಿಂಗ ಕೌಶಲ್ಯ ಚಾಲೆಂಜಿಂಗ್ ಅಗಿದ್ದು, ಅಂತೆಯೇ ಅದು ಮುಂದೆ ಸಾಗಲಿಲ್ಲ ಎನ್ನಲಾಗುತ್ತದೆ. ಅತಿವೃಷ್ಟಿ ಅನಾಹುತದಲ್ಲಿ ಎರಡನೇ ರೀತಿ ನಗರ ಪ್ರವಾಹ ಎನ್ನಬಹುದು. ಇದರಲ್ಲಿ ನಿಸರ್ಗದ ಕೊಡುಗೆ ಕನಿಷ್ಟವಾಗಿದ್ದು, ಇದರ ಪೂರ್ಣ ಹೊಣೆಗಾರಿಕೆ, ಜನತೆ, ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳ ಮೇಲೆ ಇರುತ್ತದೆ. ಮನೆಯ ಕಸವನ್ನು ಕಸ ಸಂಗ್ರಹಿಸುವವರಿಗೆ ನೀಡದೇ ಅಥವಾ ನಿರ್ದಿಷ್ಟ ಸ್ಥಳದಲ್ಲಿ ವಿಲೇವಾರಿ ಮಾಡದೇ ಮನೆಯ ಮುಂದಿನ ಗಟಾರಕ್ಕೆ ಚೆಲ್ಲುವುದು ತನ್ಮೂಲಕ ಮಳೆಯ ನೀರು ಗಟಾರದಲ್ಲಿ ಹರಿಯದಂತೆ ಮಾಡಿ ಅದು ನದಿಯೋಪಾದಿಯಲ್ಲಿ ರಸ್ತೆಯಲ್ಲಿ ಹರಿಯು ವಂತೆ ಮಾಡು ವುದು. ಮನೆಯವರಂತೆ ಎಷ್ಟೋ ಅಂಗಡಿ ಯವರು ಮುಂಜಾನೆ ಅಂಗಡಿಯ ಕಸಗುಡಿಸಿ ಎದುರಿನ ಗಟಾರದಲ್ಲಿ ಚೆಲ್ಲುವುದು ಈ ದೇಶದಲ್ಲಿ ತೀರಾ ಸಾಮಾನ್ಯವಾದ ದೃಶ್ಯಾವಳಿ.

ಇದರಿಂದಾಗುವ ಅನಾಹುತದ ಅರಿವು ಅಗುವುದು ಮಳೆ ಬಂದಾಗ ಗಟಾರದಲ್ಲಿ ನೀರು ಹರಿಯದೇ ಅದು ರಸ್ತೆಯಲ್ಲಿ ಹರಿದು ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿದಾಗಲೇ: ವಿಪರ್ಯಾಸವೆಂದರೆ, ಗಟಾರಕ್ಕೆ ಕಸ ಚೆಲ್ಲಿ ನೀರು ಸರಿಯಾಗಿ ಹರಿಯದಂತೆ ಮಾಡಿದವರೇ, ಗಟಾರ ಇರುವುದು ಮನೆಯ ಕಸವನ್ನು ಚೆಲ್ಲಲು ಎಂದು ಭಾವಿಸುವವರೇ ಏರಿದ ಧ್ವನಿಯಿಲ್ಲಿ ನಗರ ಸಭೆಯವರನ್ನು ಗಟಾರ ಸ್ವಚ್ಚ ಗೊಳಿಸದಿರುವುದಕ್ಕೆ ತರಾಟೆಗೆ ತೆಗೆದು ಕೊಳ್ಳು ತ್ತಾರೆ, ನಗರಸಭೆಯ ಕಾರ್ಯ ವೈಖರಿಯನ್ನು ಮನಸ್ವೀ ಟೀಕಿಸುತ್ತಾರೆ. ಮುಂಜಾನೆ ಮನೆ ಬಾಗಿಲಿಗೆ ಕಸ ಸಂಗ್ರಹಿಸಲು ಬಂದಾಗ ಕಸ ನೀಡದೇ ನಿರ್ಲಕ್ಷವಹಿಸುವವರು, ಉದಾಸೀನ ಮಾಡುವವರು ತಮ್ಮಮನೆಯ ಕೆಲಸ ದಾಕೆಯ ಮೂಲಕ ತಮ್ಮ ಮನೆಯ ಕಸವನ್ನು ಹೊರಗೆ ಕಳಿಸುತ್ತಾರೆ. ಬಹುತೇಕ ಅಶಿಕ್ಷಿತರಿರುವ. ಈ ಕೆಲಸದವರು ಅ ಕಸವನ್ನು ಎಲ್ಲಿ ಖಾಲಿ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ಬಹಿರಂತ ಸತ್ಯ.

ನಗರ-ಪಟ್ಟಣಗಳ ರಸ್ತೆಯನ್ನು ಗುಡಿಸಿ ಸ್ವಚ್ಚಗೊಳಿಸುವುದು, ಗಟಾರಗಳಲ್ಲಿ ಸಿಲುಕಿರುವ ಕಸವನ್ನು ತೆಗೆದು ಹೊರಸಾಗಿಸುವುದು, ರಸ್ತೆಗಳಲ್ಲಿ ಬಿದ್ದಿರುವ ಹಸಿ ಮತ್ತು ಒಣ ತ್ಯಾಜ್ಯವನ್ನು ಸಂಗ್ರಹಿಸಿ ಹೊರಸಾಗಿಸುವುದು ನಗರಸಭೆ ಮತ್ತು ಪುರಸಭೆಗಳ ಮುಖ್ಯ ಕೆಲಸಗಳು. ಹಾಗೆಯೇ ನಗರ ಮಧ್ಯದಲ್ಲಿ ಹಾದು
ಹೋಗುವ ರಾಜಕಾಲುವೆಗಳ ಹೂಳು ಎತ್ತುವುದು ಮತ್ತು ಅ ವುಗಳಲ್ಲಿ ಸೇರಿರುವು ತ್ಯಾಜ್ಯವನ್ನು ಹೊರ ತೆಗೆಯುವುದೂ ಅವರ ಕೆಲಸ. ಅದರೆ ಅದು ಯೋಜನೆಯಂತೆ ನಡೆಯದೆ ಒಂದೇ ಒಂದು ಸಾಧಾರಣ ಮಳೆ ಬಿದ್ದರೂ ನಗರದಲ್ಲಿ ಪ್ರವಾಹ ಉಕ್ಕೇರಿ ಬದುಕು ಹೈರಾಣವಾಗುತ್ತದೆ. ಹರಿಯಬೇಕಾದ ಸ್ಥಳಗಳಲ್ಲಿ ಮಳೆನೀರು ಹರಿಯದೆ ರಸ್ತೆ ಪಾದಚಾರಿ ಮಾರ್ಗಗಳಲ್ಲಿ ಮಳೆಯ ನೀರು ದಾರಿಯನ್ನು ಕಂಡುಕೊಳ್ಳುತ್ತದೆ. ನಗರ ಮತ್ತು ಪಟ್ಟಣಗಳಲ್ಲಿನ ರಾಜಕಾಲುವೆಗಳ ಮೂಲಕ ಹರಿದು ಹೊರಹೋಗಬೇಕಾದ ಮಳೆಯ ನೀರು ಈ ಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯ, ಕಸ ಕಡ್ಡಿ ಮತ್ತು ಹೂಳಿನಿಂದಾಗಿ ಮಳೆ ನೀರು ಅಕ್ಕ ಪಕ್ಕದ ಬೀದಿ ಮತ್ತು ಮನೆಗಳನ್ನು ಹೊಕ್ಕಿ ಹರಿಯುತ್ತದೆ.

ಅದಕ್ಕೂ ಮಿಗಿಲಾಗಿ ರಾಜಕಾಲುವೆಗಳನ್ನು ಆಕ್ರಮಿಸಿ ಅಕ್ರಮ ಕಟ್ಟಡಗಳನ್ನು ಕಟ್ಟಿ ರಾಜಕಾಲುವೆಯನ್ನು ಕಿರಿದಾಗಿಸಿ, ಮಳೆ ಪ್ರವಾಹದ ನೀರು ಬಡಾವಣೆಗಳನ್ನು ನುಗ್ಗುವಂತೆ ಮಾಡುವುದು ಇನ್ನೊಂದು ದುರಂತ ಮತ್ತು ಪಟ್ಟಣ-ನಗರಗಳಲ್ಲಿ ಪ್ರವಾಹದ ಅನಾಹುತಕ್ಕೆ ಮಾನವ ನಿರ್ಮಿತ ಪರೋಕ್ಷ ಪ್ರೇರಣೆ. ಈಗ ನಗರದಲ್ಲಿ ಮೊದಲಿನಷ್ಟು ಮಳೆ ಬೀಳುವುದಿಲ್ಲ, ಅಷ್ಟು ದೊಡ್ಡದಾದ ರಾಜಕಾಲುವೆ ಮತ್ತು ಗಟಾರಗಳ ಅವಷ್ಯಕತೆ ಇಲ್ಲ
ಎನ್ನುವ ಮೊಂಡುವಾದ ಬೇರೆ. ರಾಜಾಕಾಲುವೆಗಳನ್ನು ಆಕ್ರಮಿಸಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ತೆರವು ಗೊಳಿಸುವ ಮಾತು ಅಗಾಗ ಕೇಳಿ ಬರುತ್ತದೆ. ಮಳೆ ಮತ್ತು ಪ್ರವಾಹದ ಅನಾಹುತದ ಘಟನೆಗಳು ಉಂಟಾದಾಗ ಈ ಕೂಗು ಮೇಲಕ್ಕೇರಿ ಅಷ್ಟೇ ತ್ವರಿತವಾಗಿ ಕೆಳಗಿಳಿಯುತ್ತದೆ. ಹಾಗೆಯೇ
ಅದೆಷ್ಟೋ ಕೆರೆಗಳು ನಾಪತ್ತೆಯಾಗಿದ್ದು ಮತ್ತು ಇದ್ದ ಹಲವು ಕೆರೆಗಳೂ ಭೂಗಳ್ಳರಿಂದಾಗಿ ಕಿರಿದಾಗಿದ್ದು ಬೇರೆ ವಿಷಯ. ಸಣ್ಣ ಮಳೆಯಾದರೂ ಈ ಕೆರೆಗಳು ತುಂಬಿ ಹರಿಯುವುದು ಸಾಮಾನ್ಯ ದೃಶ್ಯ.

ಮಳೆಗಾಲ ಮತ್ತು ನೆರೆಹಾವಳಿಯ ಅನಾಹುತದ ಬಗೆಗೆ ಸ್ಪಷ್ಟ ವಾಗಿ ತಿಳಿದಿದ್ದ ಬ್ರಿಟಿಷ್ ಸರಕಾರವು ಮುಂಜಾಗೃತೆ ಕ್ರಮವಾಗಿ ಬರಸಾತ್ ರಿಪೇರಿ ಎನ್ನುವ ಯೋಜನೆಯನ್ನು ನಿರೂಪಿಸಿತ್ತು. ಮಳೆಗಾಲ ಅರಂಭವಾಗುವ ಮೊದಲೇ ಇದನ್ನು ಕಾರ್ಯಗತ ಗೊಳಿಸುತ್ತಿತ್ತು. ಈ ಯೋಜನೆ ಅಡಿಯಲ್ಲಿ ರಸ್ತೆಯ ಕೊರಕಲುಗಳನ್ನು ತುಂಬುವುದು, ಗಟಾರಗಳನ್ನು ಸ್ವಚ್ಚಗೊಳಿಸುವುದು, ರಸ್ತೆಗೆ ಬಾಗಿದ ಗಿಡಗಂಟಿಗಳನ್ನು ಟ್ರಿಮ್ ಮಾಡುವುದು, ಸರಕಾರಿ ಕಟ್ಟಡಗಳಿಗೆ ಜಡಿಲ ತಟ್ಟಿ ಕಟ್ಟುವುದು (ಆ ಕಾಲದಲ್ಲಿ ಬಹುತೇಕ ಮಣ್ಣಿನ ಗೋಡೆಗಳೇ ಇರುತ್ತಿದ್ದು, ಮಳೆಯಿಂದ ರಕ್ಷಣೆಗಾಗಿ) ಕಾಲು ಸಂಕಗಳನ್ನು ದುರಸ್ತಿ ಪಡಿಸುವುದು ಮುಂತಾದ ಮಳೆಗಾಲ ಪೂರ್ವದ ಎಚ್ಚರಿಕೆ ಕೆಲಸಗಳನ್ನು ಮಾಡುತ್ತಿದ್ದರು.

ಈಗಲೂ ಇದು ಬೇರೆ ರೂಪದಲ್ಲಿ ಇದು ಇದ್ದು, ಅದರಲ್ಲಿ ಬ್ರಿಟಿಷ್ ಕಾಲದ ಬದ್ಧತೆ ಕಾಣುವುದಿಲ್ಲ. ಮಳೆ ಅರಂಭವಾಗಿ ಕೆಲವು ಅನಾಹುತಗಳು ಅದ ಮೇಲೆಯೇ ಸಂಬಂಧಪಟ್ಟವರು ಎಚ್ಚೆತ್ತು ಕೊಳ್ಳುವುದು ತೀರಾ ಸಾಮಾನ್ಯ. ವಿಳಂಬವಾಗಿ ಅರಂಭವಾದ ಈ ಕೆಲಸಗಳಲ್ಲಿಯೂ ಬದ್ಧತೆ ಇರುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಗಟಾರಗಳಲ್ಲಿ ಸಿಲುಕಿರುವ ಕಸವನ್ನು ಮತ್ತು ತ್ಯಾಜ್ಯವನ್ನು ತೆಗೆದು ಕೂಡಲೇ ಹೊರಸಾಗಿಸದೆ ವಾರಗಟ್ಟಲೆ
ಬಿಟ್ಟು ಹೋಗಿ, ಸಾರ್ವಜನಿಕರು ಧ್ವನಿ ಏರಿಸಿದಾಗಲೇ ಹೊರಸಾಗಿಸುವುದು ಕಾಣಬರುತ್ತದೆ. ಅಷ್ಟರಲ್ಲಿ ಗಟಾರದಿಂದ ಹೊರತೆ ಗೆದ ಕಸ ಪುನಃ ಗಟಾರವನ್ನು ಸೇರುವುದನ್ನು ಅಲ್ಲಗೆಳೆಯಲಾಗದು.

ಇದು ಒಂದು ರೀತಿಯಲ್ಲಿ ಪುನರಪಿ ಜನನಂ, ಪುನರಪಿ ಮರಣಂನಂತೆ. ಎನ್ನಬಹುದು. ಅತಿವೃಷ್ಟಿಯಿಂದಾಗುವ ಅನಾಹುತ ಒಂದು ರೀತಿಯಲ್ಲಿ
ಜಂಟಿ ಖಾತೆ ಇದ್ದಂತೆ. ಇದಕ್ಕೆ ಕೇವಲ ಒಬ್ಬರನ್ನು, ಒಂದು ಇಲಾಖೆಯನ್ನು ದೂಷಿಸಲಾಗದು. ಇದರಲ್ಲಿ ಜನತೆ, ಸರಕಾರ, ಸಂಸ್ಥೆಗಳು ಮತ್ತು ನಮ್ಮ ದೂರದೃಷ್ಟಿ ಇಲ್ಲದ ಕೆಲವು ಯೋಜನೆಗಳು ಕಾರಣ ಎನ್ನಬಹುದು. ಸಂದರ್ಭಕ್ಕೆ ಸರಿಯಾಗಿ ಯಾರು ಹೆಚ್ಚು, ಯಾರು ಕಡಿಮೆ ಎಂದು ನಿರ್ಧಾರ ವಾಗುತ್ತದೆ. ಈ ಜಂಜಾಟದಲ್ಲಿ ಬಲಿ ಪಶುವಾಗುವುದು ಸಾಮಾನ್ಯ ಜನತೆ.

(ಲೇಖಕರು: ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!