ಕಣಕ್ಕಿಳಿಯಲು ಕಸರತ್ತು
ಅಂತಿಮಗೊಳ್ಳದ ಅಭ್ಯರ್ಥಿಗಳು
ರಂಗನಾಥ ಕೆ.ಮರಡಿ
ತುಮಕೂರು : ಲೋಕಸಭಾ ಕಣಕ್ಕಿಳಿಯಲು ಬಿಜೆಪಿ ಕಾಂಗ್ರೆಸ್ ಪಕ್ಷದಲ್ಲಿ ರಣಕಲಿಗಳ ಪೈಪೋಟಿ ತೀವ್ರಗೊಂಡಿದ್ದು, ಟಿಕೆಟ್ ಪಡೆಯಲು ಕಸರತ್ತು ಆರಂಭವಾಗಿದೆ. ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ಖಚಿತತೆ ಇನ್ನೂ ಸಿಕ್ಕಿಲ್ಲ, ಆದರೂ ಆಕಾಂಕ್ಷಿಗಳು ಕ್ಷೇತ್ರ ಸಂಚಾರವನ್ನು ನಿಲ್ಲಿಸದೆ, ಮತದಾರರನ್ನು ಭೇಟಿ ಮಾಡುವ ಕೆಲಸ ಮಾಡುತ್ತಿದ್ದಾರೆ
ವರಿಷ್ಠರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸದ ಕಾರಣ ಕಲಿಗಳ ಎದೆಯಲ್ಲಿ ಆತಂಕ ಶುರುವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಲವು ತಿಂಗಳುಗಳಿಂದ ಕ್ಷೇತ್ರ ಸಂಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಟಿಕೆಟ್ ಘೋಷಣೆಯನ್ನು ಜಾತಕ ಪಕ್ಷಿಯಂತೆ ಕಾಯುವಂತಾ ಗಿದೆ.
ಆಕಾಂಕ್ಷೆಗಳು ಅಧಿಕವಾಗಿದ್ದು ಪ್ರತಿಯೊಬ್ಬರೂ ಸಹ ಟಿಕೆಟ್ ಪಡೆಯಲು ದೆಹಲಿಯವರೆಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಆಗಿರುವುದರಿಂದ ಕಣಕ್ಕಿಳಿಯಲು ದಳ ಪಾಳಯದಿಂದ ಅಭ್ಯರ್ಥಿಗಳು ಮುನ್ನುಗ್ಗುತ್ತಿಲ್ಲ. ಸದ್ಯಕ್ಕೆ ಕೈ ,ಕಮಲ ಪಾಳೆಯದಲ್ಲಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಆಗಿದ್ದರೂ ಸಹ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿತ್ತು. ದಳಪತಿಗಳು ಕಾರ್ಯಕರ್ತರನ್ನು ಯಾವ ರೀತಿ ಮನವೂಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ
ಸೋಮಣ್ಣಗೆ ಸಂಸದ ಸಾಥ್
ಮಾಜಿ ಸಚಿವ ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಹಾಲಿ ಬಿಜೆಪಿ ಸಂಸದ ಬಸವರಾಜು, ತುಮಕೂರಿಗೆ ಸೋಮಣ್ಣರನ್ನು ಕರೆತರಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ಮಾಧುಸ್ವಾಮಿ ಕಣಕ್ಕಿಳಿಯಲು ಪ್ರಯತ್ನ ನಡೆಸುತ್ತಿದ್ದು, ಹೊರಗಿನವರು ಸ್ಪರ್ಧೆ ಮಾಡಿದರೆ ಗೆಲ್ಲುವುದು ಕಷ್ಟ ಎಂಬ ಸಂದೇಶ ರವಾನೆ ಮಾಡುವುದರ ಮೂಲಕ ಸೋಮಣ್ಣ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೊಂದಲದಲ್ಲಿ ಸೋಮಣ್ಣ-ಮುದ್ದಹನುಮೇಗೌಡ
ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲು ಮಾಜಿ ಸಚಿವ ಸೋಮಣ್ಣ, ಮಾಜಿ ಸಂಸದ ಮುದ್ದಹನುಮೇಗೌಡ ತಯಾರಿ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಿಂದ ಇಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಕೈ ಪಾಳಯ ರಣತಂತ್ರ ರೂಪಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಬಿಜೆಪಿಯಿಂದ ಸ್ಪರ್ಧಿಸಬೇಕೋ ಅಥವಾ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಬೇಕೋ ಎಂದು ಸೋಮಣ್ಣ, ಮುದ್ದ ಹನುಮೇಗೌಡ ಅವರು ಗೊಂದಲಕ್ಕೀಡಾಗಿದ್ದಾರೆ.
ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೊಡಿ
ಪಕ್ಷವನ್ನು ತ್ಯಜಿಸಿ ವರ ಹೋಗಿರುವವರನ್ನು ಮತ್ತೆ ಕರೆತಂದು ಟಿಕೆಟ್ ಕೊಡಬೇಡಿ. ಪಕ್ಷದಲ್ಲಿದ್ದು ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಿ. ನಾವು ಟಿಕೆಟ್ ಸಿಗುವ ಭರವಸೆಯಿಂದ ಕ್ಷೇತ್ರದಲ್ಲಿ ಸಂಚಾರ ಮಾಡುವ ಮೂಲಕ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತೇವೆ. ಹೀಗಿರುವಾಗ ಹೊರಗಿನವರಿಗೆ ಟಿಕೆಟ್ ನೀಡಿದರೆ ನಮಗೆ ಅನ್ಯಾಯವಾಗುತ್ತದೆ ಕಾಂಗ್ರೆಸ್, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಜೆಡಿಎಸ್ ಉಸ್ತುವಾರಿಗಳ ನೇಮಕ
ದಳಪತಿಗಳು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರನ್ನು ಕಾರ್ಯಾಧ್ಯಕ್ಷ ಹಾಗೂ ಉಸ್ತುವಾರಿ ಯನ್ನಾಗಿ ನೇಮಿಸಿ. ಸಹ ಉಸ್ತುವಾರಿಗಳನ್ನಾಗಿ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ಸುಧಾಕರ್ ಲಾಲ್ ಹಾಗೂ ಗೋವಿಂದರಾಜು ಅವರನ್ನು ನೇಮಿಸಲಾಗಿದೆ ಹಾಗೂ ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದು ಕುತೂಹಲ ಮೂಡಿಸಿದೆ.
ಬಾಕ್ಸ್ )))))
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಮುರುಳೀಧರ ಹಾಲಪ್ಪ
ಸಂಜಯ್ ಜಯಚಂದ್ರ
ನಿಕೇತ್ ರಾಜ್
ಬಾಕ್ಸ್ ))))
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಮಾಧುಸ್ವಾಮಿ
ವಿ.ಸೋಮಣ್ಣ
ಮುದ್ದಹನುಮೇಗೌಡ
ಡಾ.ಪರಮೇಶ್
ಸ್ಪೂರ್ತಿ ಚಿದಾನಂದ್
ರವಿಶಂಕರ್ ಹೆಬ್ಬಾಕ