Thursday, 19th September 2024

ಸಂಸತ್ ಆವರಣದಲ್ಲಿ ಉಪಸಭಾಪತಿ ಹರಿವಂಶ್ ಉಪವಾಸ ಸತ್ಯಾಗ್ರಹ

ನವದೆಹಲಿ: ಕೃಷಿ ಮಸೂದೆ ಮಂಡನೆ ವೇಳೆ ಗದ್ದಲ ಮಾಡಿದ್ದ ರಾಜ್ಯಸಭೆ ಸದಸ್ಯರ ವರ್ತನೆ ಕುರಿತು ಉಪಸಭಾಪತಿ ಹರಿವಂಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸತ್ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಕಳೆದ ಸೋಮವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲವಾಗಿ ಎಂಟು ಸಂಸದರ ಅಮಾನತುಗೊಂಡ ಬಳಿಕವೂ ಹೈಡ್ರಾಮ ಮುಂದುವರಿದಿದ್ದು, ಒಂದೆಡೆ ವಿಪಕ್ಷ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಗೆ ಅಮಾನತು ಗೊಂಡ ಸಂಸದರು ಸಾಥ್ ನೀಡಿದ್ದಾರೆ. ಇನ್ನು ಸಂಸದರ ಆಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಕೂಡ ಉಪವಾಸ ನಿರಶನಕ್ಕೆ ಕೂತಿದ್ದಾರೆ. ಉಪವಾಸ ಕೂರುವ ಮುನ್ನ ಹರಿವಂಶ್ ಅವರು ಮಂಗಳವಾರ ಬೆಳಗ್ಗೆ ಧರಣಿ ನಿರತ ಎಂಟು ಸಂಸದರನ್ನು ಭೇಟಿಯಾಗಿ ಚಹಾ ಕೊಟ್ಟು ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ, ಸಂಸದರ ಧರಣಿ ಕೈ ಬಿಡಲು ಅಸಮ್ಮತಿ ಸೂಚಿಸಿದರು.

ಇದರಿಂದ ಬೇಸತ್ತ ಹರಿವಂಶ್ ಅವರು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ತಾನು ಇಡೀ ದಿನ ಉಪವಾಸ ನಿರಶನಕ್ಕೆ ಕೂತಿರುವುದಾಗಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆಯವರೆಗೂ ಉಪವಾಸ ಕೂರುವುದಾಗಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಎರಡು ಕೃಷಿ ಮಸೂದೆಗಳನ್ನ ಭಾನುವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ದುರ್ವರ್ತನೆ ತೋರಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸದಸ್ಯರ ದುರ್ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನಾಸಿರ್ ಹುಸೇನ್ ಸೇರಿದಂತೆ ಎಂಟು ಸಂಸದರನ್ನು ಒಂದು ವಾರದ ಕಾಲ ಅಮಾನತು ಮಾಡಿರುವುದಾಗಿ ತಿಳಿಸಿದರು.