Sunday, 19th May 2024

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಪೆರಾರಿವಾಲನ್ ಬಿಡುಗಡೆಗೆ ಆದೇಶ

ನವದೆಹಲಿ: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷ ಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಜಿ ಪೆರಾರಿವಾಲನ್’ನನ್ನು ಬಿಡುಗಡೆ ಮಾಡ ಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಹತ್ಯೆಯ ಸಮಯದಲ್ಲಿ ಹತ್ತೊಂಬತ್ತು ವರ್ಷ ವಯಸ್ಸಿನವನಾಗಿದ್ದ ಪೆರಾರಿವಾಲನ್ ಹತ್ಯೆಯ ಮಾಸ್ಟರ್‌ಮೈಂಡ್‌ನ ಎಲ್‌ಟಿಟಿಇ ವ್ಯಕ್ತಿ ಶಿವರಾಸನ್‌ಗಾಗಿ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದನೆಂದು ಆರೋಪಿಸಲಾಯಿತು. ರಾಜೀವ್ ಗಾಂಧಿ ಹತ್ಯೆಗೆ ಬಾಂಬ್ ನಲ್ಲಿ ಬ್ಯಾಟರಿಗಳನ್ನು ಬಳಸಲಾಗಿತ್ತು.

1998 ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್‌ಗೆ ಮರಣ ದಂಡನೆ ವಿಧಿಸಿತ್ತು. ಮರು ವರ್ಷ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಆದರೆ 2014 ರಲ್ಲಿ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಈ ವರ್ಷದ ಮಾರ್ಚ್‌ ನಲ್ಲಿ, ಉನ್ನತ ನ್ಯಾಯಾಲಯವು ಪೆರಾರಿವಾಲನ್ ಗೆ ಜಾಮೀನು ನೀಡಿತ್ತು.

ಸ್ವಲ್ಪ ಸಮಯದ ನಂತರ ಪೆರಾರಿವಾಲನ್ ಜೈಲಿನಿಂದ ಬೇಗನೆ ಬಿಡುಗಡೆ ಕೋರಿ ಮನವಿ ಸಲ್ಲಿಸಿದ್ದ. ಪೆರಾರಿವಾಲನ್ ಮನವಿ ಯನ್ನು ವಿರೋಧಿಸಿದ ಕೇಂದ್ರವು, ತಮಿಳುನಾಡು ರಾಜ್ಯಪಾಲರು ಈ ವಿಷಯವನ್ನು ರಾಷ್ಟ್ರ ಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದು, ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿತ್ತು.

ಪ್ರಕರಣದ ವಿಳಂಬ ಹಾಗೂ ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು.

error: Content is protected !!