ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದನಿ ಪರ್ವತದ ಮೇಲೆ ಕೆರೆ ಕಟ್ಟಿರುವ ಕಾಮೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಬಳಿಕ ಆಗಿನ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಕಾಮೇಗೌಡರನ್ನು ಭೇಟಿ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿಯೂ ಕಾಮೇಗೌಡರಿಗೆ ಒಲಿದು ಬಂದಿತ್ತು. ಸೋಮವಾರ ಸಂಜೆ ಕಾಮೇಗೌಡರ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.
ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿ.
12 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿಗಳನ್ನು ಮೇಯಿಸಲು ಕಾಮೇಗೌಡರು ಹೋದಾಗ ವಿಪರೀತ ದಾಹವಾಗಿತ್ತು. ಎಲ್ಲಿ ಹುಡುಕಿ ದರೂ ಒಂದು ಹನಿ ನೀರು ಸಿಗಲಿಲ್ಲ. ತುಸು ದೂರದಲ್ಲಿದ್ದ ಮನೆಗೆ ಹೋಗಿ ಅವರು ದಾಹ ಇಂಗಿಸಿಕೊಂಡರು.
ಬಳಿಕ ಪ್ರಾಣಿಗಳಿಗೆ ನೀರುಣಿಸಲು ಕೆರೆ ತೋಡುವ ಕಾರ್ಯ ಕೈಗೊಂಡರು. ಮೊದಲು ಊರಿನವರು ಕಾಮೇಗೌಡರು ಕೆರೆಗಳನ್ನು ತೋಡುವುದನ್ನು ಕಂಡು ಗೇಲಿ ಮಾಡಿದರು, ಇವರು ಹುಚ್ಚ ಎಂದು ಸಹ ಜರಿದರು. ಆದರೂ ಛಲ ಬಿಡದ ಗೌಡರು 14ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾರ್ಯವನ್ನು ಹೊಗಳಿದ್ದರು. ಆ ಮೂಲಕ ಕಾಮೇಗೌಡರು ರಾಷ್ಟ್ರಕ್ಕೆ ಪರಿಚಿತರಾದರು. ಬಳಿಕ ಕಾಮೇಗೌಡರು ಪ್ರಧಾನಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು.