ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಯಲ್ಲಿರುವ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರುವ ಫೋಟೋ ವೈರಲ್ ಆಗಿವೆ.
ಶಿವಮೊಗ್ಗ ಮೂಲದ ಅಮರೇಂದ್ರ ಎಂಬವರು 2 ವರ್ಷದ ಹಿಂದೆ ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ವಿನಯ್ ಗುರೂಜಿಗೆ ಹುಲಿ ಚರ್ಮವನ್ನು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಅವರ ಮನೆಯಲ್ಲಿದ್ದ ಹುಲಿ ಚರ್ಮವನ್ನು ವಿನಯ್ ಗುರೂಜಿಗೆ ನೀಡಿದ್ದರು. ಇನ್ನು ವಿನಯ್ ಗುರೂಜಿ ಅವರು 2022ರಲ್ಲಿ ಅದನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ದರು ಎಂದು ಆಶ್ರಮ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ನಂತರ ಹುಲಿ ಚರ್ಮವನ್ನು ಇಟ್ಟುಕೊಳ್ಳಲು ಸಾಧ್ಯ ಆಗುತ್ತಿಲ್ಲ ಎಂದು ಪತ್ರ ಅಮರೇಂದ್ರ ಅವರು ಅರಣ್ಯ ಇಲಾಖೆಗೆ ಪತ್ರ ಬರೆದು 2023ರಲ್ಲಿ ಶಿವಮೊಗ್ಗ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರುಳ್ಳ ಡಾಲರ್ ಹಾಕಿಕೊಂಡಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರ ಸಾಮಾ ಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ಇದೇ ರೀತಿಯ ವಿವಾದದ ಸುಳಿಯಲ್ಲಿ ಹಲವರು ಸಿಲುಕಿದ್ದಾರೆ. ಬೆಂಗಳೂರಿನಲ್ಲಿರುವ ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ನಾಯಕ್ ಎಂಬುವವರು ವಿನಯ್ ಗುರೂಜಿ ಹಾಗೂ ನಟ ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.