ಬೆಂಗಳೂರು: ನನ್ನ ಆತ್ಮೀಯ ಸ್ನೇಹಿತರು ಮತ್ತು ಅನುಭವಿ ಆಡಳಿತಗಾರರು ಆಗಿರುವ ಬಸವರಾಜ ಬೊಮ್ಮಾಯಿ ಅವರು ನಮ್ಮ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವುದು ನಮಗೆಲ್ಲ ಅಭಿಮಾನದ ಮತ್ತು ಸಂತೋಷದ ಸಂಗತಿಯಾಗಿದೆ. ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಮಾಜಿ ಡಿಸಿಎಂ ಹಾಗೂ ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಬಿಜೆಪಿಯ ಅನುಭವಿ ಮುಖಂಡರಾಗಿರುವುದಲ್ಲದೆ, ಈಗಾಗಲೇ ಮಂತ್ರಿ ಮಂಡಲದಲ್ಲಿ ಹಲವು ಪ್ರಮುಖ ಖಾತೆಗಳನ್ನು ಸಮರ್ಥ ವಾಗಿ ನಿಭಾಯಿಸಿದ ಸಚಿವರಾಗಿ ಹೆಸರು ಮಾಡಿದ್ದಾರೆ. ತಮ್ಮ ತಂದೆಯವರಾದ ದಿವಂಗತ ಎಸ್. ಆರ್. ಬೊಮ್ಮಾಯಿ ಅವರ ಮಾರ್ಗದರ್ಶನವೂ ಬೊಮ್ಮಾಯಿ ಅವರಿಗೆ ವರದಾನವಾಗಿ ಲಭಿಸಿತ್ತು. ಈ ಎಲ್ಲಾ ಅನುಭವಗಳ ಹಿನ್ನೆಲೆಯಲ್ಲಿ ಶ್ರೀ ಮೋದಿಜಿ ಅವರ ಆಶಯದಂತೆ ಕರ್ನಾಟಕವನ್ನು ಒಂದು ಮಾದರಿ ರಾಜ್ಯವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ.
ಉತ್ತರ ಕರ್ನಾಟಕ ಭಾಗಕ್ಕಂತೂ ಶ್ರೀ ಬೊಮ್ಮಾಯಿ ಅವರ ಆಯ್ಕೆಯು ಆನೆ ಬಲವನ್ನು ತಂದುಕೊಟ್ಟಂತಾಗಿದೆ. ಅವರಿಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು. ಬಸವರಾಜ ಬೊಮ್ಮಾಯಿ ಅವರಿಗೆ ಭಗವಂತನು ಹೆಚ್ಚಿನ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಸಾರ್ವಜನಿಕ ಮತ್ತು ಸಾಮಾಜಿಕ ಸೇವೆಯನ್ನು ಯಶಸ್ವಿಯಾಗಿ ಮುಂದು ವರಿಸಲು ಹೆಚ್ಚಿನ ಶಕ್ತಿ ನೀಡಲಿ ಎಂದು ನಾನು ಹೃದಯಾಂತರಾಳದಿಂದ ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.