ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನವರಿ 31 ರಿಂದ ಫೆಬ್ರವರಿ 03 ರವರೆಗೆ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಾನ್ಯ ಆಡಳಿತಗಾರರು ಹಾಗೂ ಮಾನ್ಯ ಆಯುಕ್ತರು ರವರು ಇಂದು ವಸಂತರನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ತದನಂತರ ಮಾನ್ಯ ಕಂದಾಯ ಸಚಿವರು ಶ್ರೀ ಆರ್.ಅಶೋಕ್ ಹಾಗೂ ಮಾನ್ಯ ಆಯುಕ್ತರು ಶ್ರೀ ಮಂಜುನಾಥ್ ಪ್ರಸಾದ್ ರವರು ಹೆಚ್.ಸಿದ್ಧಯ್ಯ ರೆಫೆರಲ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಡೀ ದೇಶದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ನಗರದಾದ್ಯಂತ 5 ವರ್ಷ ದೊಳಗಿನ 10,84,392 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಆಡಳಿತಗಾರರು ತಿಳಿಸಿದರು.
ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, 3,340 ಬೂತ್ಗಳು, 456 ಸ್ಥಿರ ತಂಡಗಳು, 324 ಸಂಚಾರಿ ತಂಡಗಳು, 14,922 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು, ಲಸಿಕೆ ಹಾಕಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಈ ಪೈಕಿ ಪೋಷಕರು ಎಲ್ಲಾ ಮಕ್ಕಳು ಆಯಾ ಬೂತ್ ಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು. ತದನಂತರ ಫೆ. 3 ರವರೆಗೆ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ಎಲ್ಲರೂ ಪಲ್ಸ್ ಪೊಲಿಯೊ ಲಸಿಕೆ ಹಾಕಿಸಿಕೊಳ್ಳುವ ಮೂಲಕ ನಗರವನ್ನು ಪೊಲಿಯೊ ಮುಕ್ತವನ್ನಾಗಿಸಬೇಕು ಎಂದು ತಿಳಿಸಿದರು.
ಪಾಲಿಕೆ ಶಾಲೆಗಳಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ: ನಾಳೆಯಿಂದ 9ನೇ ತರಗತಿ ಶಾಲೆಗಳು ಹಾಗೂ ಪ್ರಥಮ ಪಿಯುಸಿ ಶಾಲೆಗಳು ಪ್ರಾರಂಭವಾಗುತ್ತಿದ್ದು, ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಸುರಕ್ಷಿತವಾಗಿ ಶಾಲೆಗಳನ್ನು ನಡೆಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಪಾಲಿಕೆಯ 33 ಪ್ರೌಢಶಾಲೆ ಹಾಗೂ 15 ಪಿಯು ಕಾಲೇಜುಗಳಿದ್ದು, ಈ ಪೈಕಿ ಈಗಾಗಲೇ ಶಾಲಾ-ಕಾಲುಜುಗಳಿಗೆ ಸೋಂಕು ನಿವಾರಕ ಸಿಂಪಡಣೆ ಮಾಡಲಾಗಿದೆ. ನಾಳೆ ಶಾಳೆಗೆ ಬರುವ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು, ಸಾನಿಟೈಸ್ ಮಾಡಿಕೊಂಡು ಶಾಲೆಗೆ ಬರಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಿಕ್ಷಕರಿಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಲಾಗಿದೆ. ಶಿಕ್ಷಣ ಇಲಾಖೆ ಸೂಚಿಸಿರುವ ಕ್ರಮಗಳನ್ನೆಲ್ಲಾ ಪಾಲನೆ ಮಾಡಲಾಗುತ್ತದೆ ಎಂದರು.
ರಾಜ್ಯದಾದ್ಯಂತ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮುಂದೆ ಬರುವ ಅನಾಹುತ ಗಳನ್ನು ತಡೆಯಬೇಕು. ಆದ್ದರಿಂದ ಎಲ್ಲಾ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ಲಸಿಕೆ ಹಾಕಿಸಬೇಕು ಎಂದು ಮಾನ್ಯ ಕಂದಾಯ ಸಚಿವರು ತಿಳಿಸಿದರು.
ಮಾನ್ಯ ಆಯುಕ್ತರು ಸಿದ್ಧಯ್ಯ ರೆಫೆರಲ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕಿದ ಬಳಿಕ ಆಸ್ಪತ್ರೆ ಪಕ್ಕದಲ್ಲೇ ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ ಹಾಗೂ ಪಾಲಿಕೆ ವತಿಯಿಂದ ಹೈಟೆಕ್ ಲ್ಯಾಬ್ ಸ್ಥಾಪಿಸುತ್ತಿರುವ ಕಟ್ಟಡ ಪರಿಶೀಲನೆ ನಡೆಸಿ ತ್ವರಿತವಾಗಿ ಪೂರ್ಣ ಗೊಳಿಸುವಂತೆ ಸೂಚನೆ ನೀಡಿದರು.