ಬೆಂಗಳೂರು: ಕೋವಿಡ್ 2ನೇ ಅಲೆಗೆ ನಿಯಂತ್ರಣ ಹೇರಿ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಲು ಮಂಗಳವಾರ ರಾತ್ರಿಯಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಲಾಗುತ್ತಿರುವುದರಿಂದ ಸಾರ್ವಜನಿಕರು ಮತ್ತು ಸಾರಿಗೆ ವಲಯದಲ್ಲಿ ಕೆಲಸ ಮಾಡುವವರು ಸಹಕರಿಸಬೇಕೆಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೋಮವಾರ ಮನವಿ ಮಾಡಿದ್ದಾರೆ.
ಕರ್ಫ್ಯೂ ವಿಧಿಸುವುದು ಸರ್ಕಾರಕ್ಕೆ ಸಂತಸದ ವಿಷಯವೇನಲ್ಲ. ಆದರೆ ಈ ಸಂಕಷ್ಟದ ಸಂದರ್ಭದಲ್ಲಿ ಅನಿವಾರ್ಯ ಕ್ರಮವಾ ಗಿದೆ. ಇಲ್ಲದಿದ್ದರೆ ಕೋವಿಡ್ ಕೈಮೀರಿ ಇಡೀ ಸಮುದಾಯಕ್ಕೇ ಅಪಾಯ ತಂದೊಡ್ಡಬಹುದು. ಆದ್ದರಿಂದ ಜಾರಿಗೆ ಬರಲಿರುವ ಕರ್ಫ್ಯೂ ಯಶಸ್ವಿಯಾಗಲು ವಾಹನಗಳ ಸಂಚಾರ ಮತ್ತು ಜನರ ಓಡಾಟಗಳನ್ನು ಪ್ರತಿಬಂಧಿಸಲಾಗಿದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮವನ್ನು ಉಲ್ಲಂಘಿಸಲು ಯಾರೂ ಮುಂದಾಗಬಾರದು. ಬಾಡಿಗೆ ಆಧಾರದ ಮೇಲೆ ವಾಹನ ಸೇವೆ ಸಲ್ಲಿಸು ತ್ತಿರುವ ಖಾಸಗಿಯವರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಒಂದು ವೇಳೆ ಪರಿಸ್ಥಿತಿಯ ದುರ್ಲಾಭ ಮಾಡಿಕೊಂಡು ಹೆಚ್ಚಿನ ಹಣ ಸುಲಿಗೆಗೆ ಮುಂದಾಗಿ ಕಾನೂನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಮ್ಮ ಸರ್ಕಾರ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಕವಾಗಿ ಉಚಿತ ಲಸಿಕೆ ವ್ಯವಸ್ಥೆಯನ್ನು ಕೈಗೊಳ್ಳುತ್ತಿದೆ. ಇದರ ಸೌಲಭ್ಯ ವನ್ನು ಪಡೆದುಕೊಂಡು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಕೋವಿಡ್ ಪಿಡುಗನ್ನು ನಿರ್ಮೂಲನ ಮಾಡಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ತಿಳಿಸಿದರು.