ಹುಬ್ಬಳ್ಳಿ : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ನಾಳೆ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಬಿಜೆಪಿ ಪಕ್ಷದಿಂದ ಕೂಡ ಬೆಂಬಲ ಸೂಚಿಸುತ್ತಿದ್ದು, ಹೋರಾಟ ಎಲ್ಲಿಯವರೆಗೆ ನಡೆ ಯುತ್ತೋ ಅಲ್ಲಿಯವರೆಗೂ ನಾವು ಬೆಂಬಲಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ ಕರ್ನಾಟಕ ಬಂದ್ ಗೆ ಬಿಜೆಪಿ ಬೆಂಬಲ ನೀಡಲಿದೆ. ಕಾವೇರಿ ನದಿ ನೀರಿಗಾಗಿ ಎಲ್ಲಿಯವರೆಗೂ ಹೋರಾಟ ನಡೆಯು ತ್ತೋ, ಅಲ್ಲಿಯವರೆಗೂ ನಮ್ಮ ಬಿಜೆಪಿ ಪಕ್ಷ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬರಗಾಲ ಇದೆ.ಮಳೆ ಇಲ್ಲದೆ ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಆದರೆ ಈವರೆಗೂ ಬೆಳೆ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ.ಹಿಂದೆ ಪ್ರವಾಹ ಬಂದಾಗ ನಾವು ರೈತರಿಗೆ ಎರಡು ಪಟ್ಟು ಪರಿಹಾರವನ್ನು ನೀಡಿದ್ದೆವು. ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬಿಜೆಪಿಯ ಮಾಜಿ ಶಾಸಕರಿಗೆ ಕಾಂಗ್ರೆಸ್ ನತ್ತ ಸೆಳೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸನ್ನು ಕಳೆದು ಕೊಂಡಿದೆ. ಹೀಗಾಗಿ ಮತ್ತೆ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದು ಕಾಂಗ್ರೆಸ್ ಪಕ್ಷದ ವೀಕ್ನೆಸ್. ಕೆಲವರು ಟಿಕೆಟ್ ಸಿಗದೇ ಇದ್ದವರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ. ಅದರಿಂದ ಕಾಂಗ್ರೆಸ್ ಗೆ ಯಾವುದೇ ರೀತಿ ಲಾಭ ಆಗುವುದಿಲ್ಲ. ಟಿಕೆಟ್ ಸಿಗದೇ ಇದ್ದವರು ಬೇರೆ ಪಕ್ಷಗಳಿಗೆ ಹೋಗುವುದು ಸಹಜ ಎಂದು ಬೊಮ್ಮಾಯಿ ತಿಳಿಸಿದರು.