ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಟ್ಟೂರು ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ನಿವಾಸದ ಮೇಲೆ ಸೋಮವಾರ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಆಸ್ತಿ ವ್ಯವಹಾರಗಳ ದಾಖಲೆಗಳ ಪರಿಶೀಲನೆ ನಡೆಸಿದೆ.
ಎಂಟು ಅಧಿಕಾರಿಗಳನ್ನು ಒಳಗೊಂಡ ತಂಡ ಮೂರು ಕಾರುಗಳಲ್ಲಿ ಬಂದಿದೆ. ಕನಕಪುರದ ಕೋಡಿಹಳ್ಳಿಯಲ್ಲಿರುವ ಡಿ.ಕೆ. ಸಹೋದರರ ನಿವಾಸಕ್ಕೂ ಅಧಿಕಾರಿಗಳ ಮತ್ತೊಂದು ತಂಡ ಭೇಟಿ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ ಎನ್ನಲಾಗಿದೆ. ಎರಡೂ ನಿವಾಸಗಳ ಸುತ್ತ ಜನರ ಓಡಾಟ ನಿರ್ಬಂಧಿಸಲಾಗಿದೆ.
ಮುಂಬೈ, ದೆಹಲಿಯ ಕಾವೇರಿ ಅಪಾರ್ಟ್ ಮೆಂಟ್ ಸೇರಿ 4 ಕಡೆ, ಬೆಂಗಳೂರು, ಬೆಂಗಳೂರು ಗ್ರಾಮಾಂತ, ರಾಮನಗರ, ಕನಕಪುರ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಸಿಬಿಐ ರೇಡ್ ಮಾಡ ಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯಲ್ಲಿ ಡಿಕೆಶಿ ಕಚೇರಿಗಳಿಂದ ಸುಮಾರು ಐವತ್ತು ಲಕ್ಷಕ್ಕಿಂತ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇಡಿ ವಿಚಾರಣೆ ಬಳಿಕ ಸಿಬಿಐ ಕಂಟಕ ಶುರುವಾಗಿದೆ. ಬೆಂಗಳೂರು ಸಿಬಿಐ ಅಧಿಕಾರಗಳ ತಂಡ ದಿಂದ ಡಿ.ಕೆ.ಶಿವಕುಮಾರ್ ಮನೆ ಹಾಗೂ ಡಿ.ಕೆ. ಸುರೇಶ್ ಮನೆ ಮೇಲೆ ರೇಡ್ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮನೆ ಮೇಲೆ ರೇಡ್ ನಡೆಯುತ್ತಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಮೇಲೆ ನಡೆದಿರುವ ಇವತ್ತಿನ ಸಿಬಿಐ ದಾಳಿ ಉಪಚುನಾವಣೆಯಲ್ಲಿನ ನಮ್ಮ ಸಿದ್ಧತೆಯನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವಾಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ದ್ದಾರೆ.