Saturday, 27th July 2024

ಅತಿಥಿಗಳಿಗೆ ಗೇಟ್ ಪಾಸ್ ನೀಡಲು ವಿವಿ ನಿರ್ಧಾರ: ಆದೇಶ ಹಿಂಪಡೆಯಲು ಆಗ್ರಹ

ತುಮಕೂರು: ವಿಶ್ವವಿದ್ಯಾಲಯದ ಸ್ನಾತಕೋತ್ತರದ 25 ವಿಭಾಗಗಳಲ್ಲಿ 150ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ವಿಶ್ವವಿದ್ಯಾ ಲಯ ಪ್ರಾರಂಭವಾದಾಗಿನಿಂದಲೂ ಉಪನ್ಯಾಸ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯವು ಸಂಶೋಧನೆಗೆ ಶಿಷ್ಯ ವೇತನ ಪಡೆಯುತ್ತಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಬೋಧನಾ ಅವಧಿ ಕಾರ್ಯಭಾರ ಹಂಚಿಕೆ ಮಾಡಬೇಕೇಂದು ಸುತ್ತೋಲೆ ಹೊರಡಿಸಿರುವುದು ಅವೈಜ್ಞಾನಿಕವಾಗಿದ್ದು ಕೂಡಲೇ ಹಿಂಪಡೆಯಬೇಕೆಂದು ಎಬಿವಿಪಿ ವತಿಯಿಂದ ಮನವಿ ನೀಡಲಾಯಿತು.
ವಿವಿಯ ಸುತ್ತೋಲೆಯಂತೆ ಕಾಯಂ ಅಧ್ಯಾಪಕರಿಗೆ ಬೋಧನಾವಧಿ ಹಂಚಿಕೆಯಾಗಿ ನಂತರ ಖಡ್ಡಾಯವಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ಬೋಧನಾ ಕಾರ್ಯಬಾರವನ್ನು ಹಂಚಿಕೆ ಮಾಡುವಂತೆ ಆದೇಶಿಸಲಾಗಿದೆ. ಅವರಿಗೆ ಹಂಚಿಕೆ ಯಾಗಿ ಉಳಿದ ಅವಧಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು ಎಂಬ ವಿಶ್ವವಿದ್ಯಾನಿಲಯದ ಆದೇಶ ನೂರಾರು ಅತಿಥಿ ಉಪನ್ಯಾಸ ಕರು ಕೆಲಸ ಕಳೆದುಕೊಳ್ಳುವಂತಹ ಮಾಡಲಿದೆ.
ಪೂರ್ಣಾವಧಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಯುಜಿಸಿ ಶಿಷ್ಯ ವೇತನ ನೀಡುತ್ತಿದ್ದು ಅವರನ್ನು ಬೋಧನಾ ಕಾರ್ಯದಲ್ಲಿ ಬಳಸಿಕೊಂಡು ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ವೇತನವನ್ನು ಉಳಿಸಿಕೊಳ್ಳಲು ವಿವಿ ಆಡಳಿತ ನಿರ್ಧರಿಸಿದಂತಿದೆ. ಇದರಿಂದ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಾಕಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಅದರ ಜತೆಯಲ್ಲಿ ಬೋಧನೆಯಲ್ಲಿ ಅನುಭವವಿಲ್ಲದ ಸಂಶೋಧನಾ ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವ ಮಟ್ಟಿಗೆ ಪಾಠ ಪ್ರವಚನ ಮಾಡಲಿದ್ದಾರೆ ಎನ್ನುವ ಆತಂಕ ವಿದ್ಯಾರ್ಥಿಗಳಲ್ಲಿ ಉಂಟುಮಾಡಲಿದೆ.
ಈ ಕೂಡಲೇ ತುಮಕೂರು ವಿಶ್ವವಿದ್ಯಾಲಯ ತನ್ನ ಈ ಅವೈಜ್ಞಾನಿಕ ಆದೇಶವನ್ನು ಹಿಂಪಡೆದು ಯಥಾಸ್ಥಿತಿ ಕಾಯ್ದಿರಿಸಿ ಸ್ನಾತ ಕೋತ್ತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಕುಲಸಚಿವೆ ನಹೀದಾ ಅವರಿಗೆ ಮನವಿ ಮಾಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪು ಪಾಟೀಲ್, ನಗರ ಕಾರ್ಯದರ್ಶಿ ಹರ್ಷವರ್ಧನ, ಸಹ ಕಾರ್ಯದರ್ಶಿ ಪ್ರಜ್ವಲ್ ವಿದ್ಯಾರ್ಥಿನಿ ಪ್ರಮುಖ್ ಅರ್ಪಿತಾ, ವಿನೋದ್, ಬಾಲಾಜಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!