ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಪುನಃ ಚರ್ಚೆ ಆಗಲಾರಂಭಿಸಿರುವ ಬೆನ್ನಿಗೇ ಸಚಿವ ಉಮೇಶ್ ಕತ್ತಿ, ಸಿಎಂ ಹುದ್ದೆ ಖಾಲಿಯಾದರೆ ನೆಕ್ಸ್ಟ್ ನಾನೇ ಇದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ಮುಂದೆ ನಂದೇ ನಂಬರ್ ಇದೆ ಎಂದಿದ್ದಾರೆ
ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದ ಸಂದರ್ಭ ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ, ಸರ್ಕಾರವಿದೆ, ಒಳ್ಳೆಯ ಆಡಳಿತ ನಡೆಯುತ್ತಿದೆ. ಆದರೂ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಸಿಎಂ ಹುದ್ದೆ ಖಾಲಿಯಾದರೆ ನೆಕ್ಸ್ಟ್ ನಾನೇ ಇದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ಮುಂದೆ ನಂದೇ ನಂಬರ್ ಇದೆ ಎಂದಿದ್ದಾರೆ.
ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕ ನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು. ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲ ಯೋಗ್ಯತೆಗಳು ಇವೆ. ರಾಜ್ಯದ ಜನ ಆಶೀರ್ವದಿಸಿದರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದರೆ ನಾನು ಸಿಎಂ ಆಗುವ ಆಸೆ ಉಳ್ಳವನು. ಪಕ್ಷ ಮನಸ್ಸು ಮಾಡಿದರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ.
ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರಕ್ಕೆ, ಆಡಿಯೋ ಬಗ್ಗೆ ಅವರು ತಮ್ಮ ಅನಿಸಿಕೆ ಹೇಳಿರಬಹುದು. ಅದನ್ನು ಕೇಳಿಲ್ಲ, ಕೇಳಿದ ಮೇಲೆ ಪ್ರತಿಕ್ರಿ ಯಿಸುವೆ ಎಂದಿದ್ದಾರೆ. ಈಗ ಸಿಎಂ ಸ್ಥಾನ ಬದಲಾವಣೆಯಾದರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ನಸೀಬು ಗಟ್ಟಿ ಇದ್ದರೆ ಹೈಕಮಾಂಡ್ ನಿರ್ಣಯ ಮಾಡಿದರೆ ನಾನೇ ಸಿಎಂ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.