ಮಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ತೋರಿಸುತ್ತೇವೆ ಅಂದರೆ ಬೇಡ ಅಂದೋರು ಯಾರು? ಆದರೆ ಸತ್ಯ ಏನು ನಡೆದಿದೆ ಅನ್ನೋದನ್ನು ತೋರಿಸಬೇಕು. ಕಾಶ್ಮೀರದಲ್ಲಿ ಭಯೋತ್ಪಾದಕರು ಏನ್ ಮಾಡಿದರು? ಕಾಶ್ಮೀರಿ ಪಂಡಿತರು ಸೇರಿದಂತೆ ಬೇರೆ ಸಮುದಾಯದವ ರೊಂದಿಗೆ ಏನೆಲ್ಲಾ ಆಗಿದೆ ಅನ್ನುವುದನ್ನು ತೋರಿಸಬೇಕು ಎಂದು ದೇಶದಲ್ಲಿ ಸಂಚಲನ ಮೂಡಿಸಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ ದರು.
ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುವ ಸಲುವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ರೀತಿ ಹೇಳಿದರು.
ಹಾಗೆಯೇ ಗುಜರಾತ್ನಲ್ಲಿ ನಡೆದದ್ದು, ಲಖಿಂಪುರದಲ್ಲಿ ನಡೆದದ್ದು ತೋರಿಸಬೇಕು. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಇನ್ನೂ ನೋಡಿಲ್ಲ. ಸಿನೆಮಾ ನೋಡಲೇಬೇಕು ಅಂತ ಏನಿದೆ? ಬಹಳ ಸಿನಿಮಾಗಳನ್ನು ನಾನು ನೋಡಿಲ್ಲ. ಅದೇ ಪ್ರಕಾರ ಇದನ್ನೂ ನೋಡಲ್ಲ ಎಂದು ಮಾಜಿ ಸಿಎಂ ತಿಳಿಸಿದರು.
ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಭೋದನೆಯ ಕುರಿತಾಗಿ, ನಾನು ಭಗವದ್ಗೀತೆ ವಿರೋಧಿ ಯಲ್ಲ. ನಾವು ಸಂವಿಧಾನ ಮತ್ತು ಸೆಕ್ಯುಲರಿಸಂನಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆ ಆದರೂ ಹೇಳಿಕೊಡಲಿ, ಕುರಾನ್ ಆದರೂ ಹೇಳಿಕೊಡಲಿ, ಬೈಬಲ್ ಆದರೂ ಹೇಳಿಕೊಡಲಿ. ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಅಷ್ಟೆ ಎಂದರು.
ಭಗವದ್ಗೀತೆಯನ್ನು ಮನೆಗಳಲ್ಲಿ ಮಕ್ಕಳಿಗೆ ಹೇಳಿ ಕೊಡಲ್ವಾ? ನಾನು ಕೂಡ ಹಿಂದೂ. ನನಗೂ ನನ್ನ ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದಾರೆ. ನೈತಿಕ ಶಿಕ್ಷಣ ಬೇಕು. ಹಾಗಂತ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳ ಬಾರದು. ನಾನು ಭಗವದ್ಗೀತೆ, ಬೈಬಲ್, ಕುರಾನ್ ವಿರೋಧಿ ಅಲ್ಲ. ನಮ್ಮಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.