ಮಡಿಕೇರಿ: ದಸರಾ ಮತ್ತು ಕರಗೋತ್ಸವದ ಪ್ರಯುಕ್ತ ಅ.7 ರಿಂದ 17ರ ತನಕ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜಾಸೀಟ್, ಗದ್ದುಗೆ, ಮ್ಯುಸಿಯಂ, ಕೋಟೆ, ನೆಹರು ಮಂಟಪ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಬಂದ್ ಆಗಲಿವೆ.
ಮಡಿಕೇರಿ ದಸರಾ ಮತ್ತು ಕಾವೇರಿ ತೀರ್ಥೋದ್ಭವ ಕುರಿತು ಜಿಲ್ಲಾಡಳಿತದ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ ತೀರ್ಥೋದ್ಭವ ನಡೆಯಲಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ನಿಬಂಧನೆಗಳನ್ನು ಪಾಲಿಸುವಲ್ಲಿ ಸರ್ಕಾರದ ಜೊತೆ ಭಕ್ತಾಧಿಗಳು ಕೈಜೋಡಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಸಾಲು-ಸಾಲು ರಜೆ ಇರುವುದರಿಂದ ಕೋವಿಡ್ ನಿಯಮ ಪಾಲಿಸಬೇಕಿದೆ. ಆದ್ದ ರಿಂದ ಭಕ್ತರು ಅ.17ರ ಮಧ್ಯಾಹ್ನ 2 ಗಂಟೆಯ ನಂತರ ಭಾಗಮಂಡಲದಿಂದ ತಲಕಾವೇರಿಗೆ ತೆರಳಬಹುದಾಗಿದೆ.
ಅಕ್ಟೋಬರ್ 17ರಂದು ಖಾಸಗಿ ವಾಹನಗಳು ಭಾಗಮಂಡಲ ತನಕ ಮಾತ್ರ ತೆರಳಲು ಅವಕಾಶವಿದೆ. ಭಾಗಮಂಡಲದಿಂದ ತಲಕಾವೇರಿಗೆ ಕಾಲು ನಡಿಗೆ ಮೂಲಕ ತೆರಳಲು ಅವಕಾಶವಿದೆ. ಕಾಲ್ನಡಿಗೆಯಲ್ಲಿ ತಲಕಾವೇರಿಗೆ ಹೋಗುವವರು 72 ಗಂಟೆ ಅವಧಿಯ ಮೊದಲಿನ ಆರ್. ಟಿ. ಪಿ. ಸಿ. ಆರ್. ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿ ಪಡೆದಿರಬೇಕು ಜೊತೆಗೆ ಒಂದು ಬಾರಿಯಾದರೂ ಕೋವಿಡ್ ಲಸಿಕೆ ಪಡೆದಿರ ಬೇಕು ಹಾಗೂ ಗುರುತಿನ ಚೀಟಿ ಹೊಂದಿರಬೇಕು.