Saturday, 27th July 2024

ನಾಮಪತ್ರ ವಾಪಸ್ ಪಡೆದ ಬಂಡಾಯ ಅಭ್ಯರ್ಥಿ ಚನ್ನಪ್ಪ ಬಳ್ಳಾರಿ

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಬಿಜೆಪಿ ಮುಖಂಡ ಚನ್ನಪ್ಪ ಬಳ್ಳಾರಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಅ.30ರಂದು ಉಪ ಚುನಾವಣೆ ನಡೆಯಲಿದೆ.

ಬುಧವಾರ ಸಚಿವ ಮುರುಗೇಶ ನಿರಾಣಿ ಕಾರಿನಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಚನ್ನಪ್ಪ ಬಳ್ಳಾರಿ ನಾಮಪತ್ರವನ್ನು ವಾಪಸ್ ಪಡೆದರು. ನಾಮಪತ್ರ ಗಳನ್ನು ವಾಪಸ್ ಪಡೆಯಲು ಇಂದು ಕೊನೆ ದಿನವಾಗಿತ್ತು.

ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯ ಜಿಎಂಐಟಿಯಲ್ಲಿ ಚನ್ನಪ್ಪ ಬಳ್ಳಾರಿ ಜೊತೆ ಸಭೆ ನಡೆಸಿದ್ದರು. ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದ್ದರು. ಆದರೆ ಬುಧವಾರ ತೀರ್ಮಾನ ಕೈಗೊಳ್ಳುವೆ ಎಂದು ಅವರು ಹೇಳಿದ್ದರು.

ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ. ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಚನ್ನಪ್ಪ ಬಳ್ಳಾರಿ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದಾಗಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿತ್ತು. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಹಾನಗಲ್ ಉಪ ಚುನಾವಣೆಯ ನಾಮಪತ್ರಗಳನ್ನು ವಾಪಸ್ ಪಡೆಯಲು ಬುಧವಾರ ಕೊನೆ ದಿನವಾಗಿತ್ತು. ನಾಲ್ವರು ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದು, ಕ್ಷೇತ್ರದ ಚುನಾವಣಾ ಚಿತ್ರಣ ಅಂತಿಮಗೊಂಡಿದೆ.

Leave a Reply

Your email address will not be published. Required fields are marked *

error: Content is protected !!