ಪಾವಗಡ: ಮುಂದುವರಿದ ಖದೀಮರ ಕೈಚಳಕ; ಪುರಸಭೆ ಮಾಜಿ ಅಧ್ಯಕ್ಷರ ಮನೆಯಲ್ಲಿ ಹಾಡಹಗಲೇ ಕಳವು
Theft Case: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶ್ರೀನಿವಾಸ ನಗರದಲ್ಲಿರುವ ಪುರಸಭೆ ಮಾಜಿ ಅಧ್ಯಕ್ಷರ ಮನೆಯಿಂದ ಕಳ್ಳರು ಹಾಡಹಗಲೇ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಪ್ರದೇಶದಲ್ಲಿ ನಡೆಯುತ್ತಿರುವ 7ನೇ ಕಳವು ಪ್ರಕರಣ ಇದಾಗಿದೆ.


ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶ್ರೀನಿವಾಸ ನಗರದಲ್ಲಿ ಕಳ್ಳರ ಹಾವಳಿ ಮುಂದುವರಿದಿದೆ. ಹಾಡ ಹಗಲೇ ಮನೆಯ ಬೀಗ ಒಡೆದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ (Theft Case). ಶ್ರೀನಿವಾಸ ನಗರದ ನಿವಾಸಿ ಪುರಸಭೆ ಮಾಜಿ ಅಧ್ಯಕ್ಷರ ಮನೆಯಲ್ಲಿ ಈ ಕಳವು ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ (Pavagada News). ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಪರ್ಯಾಸವೆಂದರೆ ಜು. 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವ ಹಿನ್ನೆಲೆಯಲ್ಲಿ ವಾರದಿಂದ ಪೊಲೀಸ್ ಇಲಾಖೆ ಜತೆಗೆ ಇತರ ಇಲಾಖೆಗಳ ಅಧಿಕಾರಿಗಳು ಪಾವಡ ಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ. ಇಷ್ಟೆಲ್ಲ ಇದ್ದರೂ ಹಾಡ ಹಗಲೇ ಮನೆ ಬೀಗ ಹೊಡೆದು ಕಳವು ಮಾಡಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಪುರಸಭೆ ಮಾಜಿ ಅಧ್ಯಕ್ಷರ ಮನೆಯಿಂದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಇನ್ನು ಕೃತ್ಯ ನಡೆದ ಮನೆಯ ಪಕ್ಕದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಾಸವಾಗಿದ್ದಾರೆ. ಅದಾಗ್ಯೂ ಕಂಚಿತ್ತೂ ಭಯವಿಲ್ಲದೆ ಕಳ್ಳರಿಗೆ ತಮ್ಮ ಕೈಚಳಕ ತೋರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಏಳನೇ ಕಳವು ಪ್ರಕರಣ ಇದು ಎಂದು ಕಾಂಗ್ರೆಸ್ ಮುಖಂಡ ಅನಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಾವಗಡ ಪೊಲೀಸರು ಮನೆ ಹಾಗೂ ಅಕ್ಕಪಕ್ಕದ ಸಿಸಿ ಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ. ಶೀಘ್ರದಲ್ಲೇ ಕಳ್ಳರನ್ನು ಹಿಡಿಯುವುದಾಗಿ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: KGF Babu: ಮಗ, ಆತನ ಮಾವನಿಂದ 45 ಕೋಟಿ ವಂಚನೆ: ಕೆಜಿಎಫ್ ಬಾಬು ಆರೋಪ
ಹಾಡಹಗಲೇ ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕದ್ದ ಕಳ್ಳರು!
ಕಲಬುರಗಿ: ಹಾಡಹಗಲೇ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ನಗರದ ಹಳೆ ಜೇವರ್ಗಿ ರಸ್ತೆ ಬಳಿಯ ನಾಗಾರ್ಜುನ ಬಾರ್ ಬಳಿ ಇತ್ತೀಚೆಗೆ ನಡೆದಿತ್ತು. ವೃದ್ದ ಸೇರಿ ನಾಲ್ವರು ಕಳ್ಳರಿಂದ ಕೃತ್ಯ ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ಬಲೆನೋ ಕಾರಿನಲ್ಲಿ ಇಟ್ಟಿದ್ದ ಲ್ಯಾಪ್ಟಾಪ್ ಅನ್ನು ಪಕ್ಕಾ ಪ್ಲ್ಯಾನ್ ಮಾಡಿ ಚಾಲಾಕಿ ಕಳ್ಳರು ಎಗರಿಸಿದ್ದರು. ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿತ್ತು. ಕಳ್ಳರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.