Khalistan Slogan: ಸ್ವರ್ಣಮಂದಿರದಲ್ಲಿ ಮೊಳಗಿದ ಖಾಲಿಸ್ತಾನ್ ಜಿಂದಾಬಾದ್ ಘೋಷಣೆ!
Khalistan Zindabad slogan: ಇತ್ತೀಚಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಪಂಜಾಬ್ನಲ್ಲಿ ಖಾಲಿಸ್ತಾನ್ ಬೆಂಬಲ ಇನ್ನೂ ಜೀವಂತವಿದೆ ಎಂಬುದನ್ನು ಸೂಚಿಸುತ್ತವೆ. ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳ ಸ್ವರ್ಣಮಂದಿರದಲ್ಲಿ ಖಲಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿ ಬಂದಿದೆ. ಆಪರೇಷನ್ ಬ್ಲೂ ಸ್ಟಾರ್ಗೆ 41ನೇ ವಾರ್ಷಿಕೋತ್ಸವ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ಜರ್ಣೈಲ್ ಸಿಂಗ್ ಭಿಂದ್ರನ್ವಾಲೆ ಸಾವನ್ನಪ್ಪಿದ ದಿನದ ನಿಮಿತ್ತ ಅಮೃತಸರದ ಪವಿತ್ರ ಸ್ವರ್ಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮೊಳಗಿವೆ.


ಅಮೃತಸರ: ಪಂಜಾಬ್ನ ಅಮೃತಸರದಲ್ಲಿರುವ ಸ್ವರ್ಣಮಂದಿರದಲ್ಲಿ ಖಲಿಸ್ತಾನ್ ಪರ ಘೋಷಣೆಗಳು ಮೊಳಗಿವೆ. ಆಪರೇಷನ್ ಬ್ಲೂ ಸ್ಟಾರ್ ನಡೆದು 41ವರ್ಷ ಪೂರೈಸಿದ ಹಾಗೂ ಖಲಿಸ್ತಾನಿ ಉಗ್ರ ಜರ್ಣೈಲ್ ಸಿಂಗ್ ಭಿಂದ್ರನ್ವಾಲೆ ಹತ್ಯೆಯಾದ ದಿನವಾದ ಇಂದು ಸ್ವರ್ಣ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳು ಕೇಳಿಬಂದಿವೆ. ಶಿರೋಮಣಿ ಅಕಾಲಿ ದಳದ ನಾಯಕ ಸಿಮ್ರಂಜೀತ್ ಸಿಂಗ್ ಮನ್ ಸ್ವರ್ಣ ಮಂದಿರ ಪ್ರವೇಶಿಸುವಾಗ, ಖಾಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿರುವುದು ಕಂಡುಬಂದಿದೆ.
ಅಕಾಲ್ ತಕ್ತ್ ಪ್ರತಿಕ್ರಿಯೆ
ಘಟನೆ ಕುರಿತು ಸಿಖ್ ಧಾರ್ಮಿಕ ಸಂಘಟನೆಗಳಲ್ಲಿ ಒಂದಾಗಿರುವ ಅಕಾಲ್ ತಕ್ತ್ ಪ್ರತಿಕ್ರಿಯಿಸಿದೆ. ಈ ಕುರಿತು ಅಕಾಲ್ ತಕ್ತ್ ವಕ್ತಾರ ಜಸ್ವೀರ್ ಸಿಂಗ್ ರೋಡೆ ಪ್ರತಿಕ್ರಿಯಿಸಿದ್ದು, ಈ ರೀತಿಯ ಘೋಷಣೆಗಳು ಇಲ್ಲಿ ಮಾತ್ರವಲ್ಲದೇ ವಿಶ್ವದ ಹಲವೆಡೆ ಸದಾ ಕೇಳಿಸುತ್ತಿವೆ. ಇದರಲ್ಲಿ ಹೊಸದೇನೂ ಇಲ್ಲ. ಇದುವರೆಗೂ ಸರ್ಕಾರ ಸಿಖ್ಖರ ಪವಿತ್ರ ತೀರ್ಥಕ್ಷೇತ್ರದ ಮೇಲೆ ದಾಳಿ ಮಾಡಿದ ಕಾರಣವನ್ನು ಸ್ಪಷ್ಟಪಡಿಸಿಲ್ಲ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ಆದರೆ ಭಾರತ ಸರ್ಕಾರದ ವಿರುದ್ಧ ಯುದ್ಧ ಘೋಷಿಸಿದ್ದಲ್ಲ. ಆದರೂ ಯುದ್ಧದಷ್ಟು ಭೀಕರವಾಗಿ ನಮ್ಮ ಮೇಲೆ ದಾಳಿ ನಡೆಸಲಾಯಿತು, ಎಂದು ಆಕ್ರೋಶ ಹೊರಹಾಕಿದ್ದಾರೆ.
#WATCH | Amritsar, Punjab: People raise slogans of 'Khalistan zindabad' as SAD (Mann faction) leader Simranjit Singh Mann reaches the Golden Temple on the 41st anniversary of Operation Blue Star and also the death anniversary of Jarnail Singh Bhindranwale, who was killed during… pic.twitter.com/f0kmGBa1le
— ANI (@ANI) June 6, 2025
ಅಂಬೇಡ್ಕರ್ಗೂ ಅವಮಾನ
ಇನ್ನು ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ, ಫಿಲ್ಲೌರ್ ಬಳಿಯ ನಂಗಲ್ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಮೇಲೆ ಕಪ್ಪುಬಣ್ಣ ಎರಚಲಾಗಿದ್ದು, ಸಿಖ್ ಫಾರ್ ಜಸ್ಟೀಸ್ ಎಂಬ ನಿಷೇಧಿತ ಉಗ್ರ ಸಂಘಟನೆಯ ಧ್ವಜವನ್ನು ಅಂಟಿಸಲಾಗಿತ್ತು. SFJ ಇದರ ಹೊಣೆ ವಹಿಸಿಕೊಂಡಿದ್ದು, ಇಂತಹ ಕಿಡಿಗೇಡಿ ಕೃತ್ಯಗಳನ್ನು ಮುಂದುವರಿಸುವಂತೆ ಬೆಂಬಲಿಗರಿಗೆ ಕರೆ ನೀಡಿದೆ.
ಈ ಸುದ್ದಿಯನ್ನೂ ಓದಿ: Amritpal Singh: ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ನ ಏಳು ಸಹಚರರು ಮತ್ತೆ ಅರೆಸ್ಟ್
ಆಪರೇಷನ್ ಬ್ಲೂ ಸ್ಟಾರ್ ಹಿನ್ನೆಲೆ:
ಪ್ರತ್ಯೇಕ ಖಲಿಸ್ತಾನಕ್ಕೆ ಆಗ್ರಹಿಸಿದ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಭಿಂದ್ರನ್ವಾಲೆ ಹಾಗೂ ಆತನ ಜೊತೆಗಿದ್ದ ಉಗ್ರರು ಸಿಖ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರದಲ್ಲಿ ಅವಿತು ಕುಳಿತಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ 1984ರ ಜೂನ್ 1ರಿಂದ 10ರವರೆಗೆ ಆಪರೇಷನ್ ಬ್ಲೂ ಸ್ಟಾರ್ ಎಂಬ ಹೆಸರಿನಲ್ಲಿ ಸೇನಾ ಕಾರ್ಯಚರಣೆಗೆ ಆದೇಶ ಕೊಟ್ಟಿದ್ದರು. ಅದರಂತೆ ಸ್ವರ್ಣಮಂದಿರಕ್ಕೆ ನುಗ್ಗಿದ್ದ ಸೇನೆ ಬಿಂದ್ರನ್ವಾಲೆ ಮತ್ತು ಆತನ ಸಹಚರರನ್ನು ಹೊಡೆದುರುಳಿಸಿತ್ತು. ಅಲ್ಲಿಂದೀಚೆಗೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಕೂಗು ಆಗಾಗ ಕೇಳಿಬರುತ್ತಲೇ ಇದೆ.
2023ರ ಫೆಬ್ರವರಿಯಲ್ಲಿ, ಕಳ್ಳತನ ಪ್ರಕರಣದಲ್ಲಿ ತನ್ನ ಬೆಂಬಲಿಗನನ್ನು ಅರೆಸ್ಟ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಖಲಿಸ್ತಾನ ನಾಯಕ ಅಮೃತಪಾಲ್ ಸಿಂಗ್ ಅಮೃತಸರದ ಅಜನಾಲಾ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಹಲವು ಪೊಲೀಸರಿಗೆ ಮೇಲೆ ಹಲ್ಲೆ ನಡೆಸಿದ್ದ. ಇದಾದ ಬಳಿಕ ಆತ ಅರೆಸ್ಟ್ ಆಗಿದ್ದ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಸಂಸದನಾಗಿ ಆಯ್ಕೆಯಾಗಿದ್ದಾರೆ.