Amritpal Singh: ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ನ ಏಳು ಸಹಚರರು ಮತ್ತೆ ಅರೆಸ್ಟ್
ಜೈಲಿನಲ್ಲಿರುವ ‘ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಹಾಗೂ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ನ ಏಳು ಸಹಚರರನ್ನು ಶುಕ್ರವಾರ ಅಮೃತಸರದ ಅಜ್ನಾಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು ಮಾರ್ಚ್ 25 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.


ಚಂಡೀಗಢ: ಜೈಲಿನಲ್ಲಿರುವ ‘ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ನ ( Amritpal Singh) ಏಳು ಸಹಚರರನ್ನು ಶುಕ್ರವಾರ ಅಮೃತಸರದ ಅಜ್ನಾಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು ಮಾರ್ಚ್ 25 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಏಳು ಜನರನ್ನು ಈ ಹಿಂದೆ ಅಸ್ಸಾಂನ ದಿಬ್ರುಗಢ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಪಂಜಾಬ್ ಪೊಲೀಸರು ಬೇರೊಂದು ಪ್ರಕರಣದಲ್ಲಿ ಇವರನ್ನು ಬಂಧಿಸಿದ್ದರು. ಬಂಧಿತ ಏಳು ಜನರನ್ನು ಬಿಗಿ ಭದ್ರತೆಯಲ್ಲಿ ಅಜ್ನಾಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023 ರಲ್ಲಿ ಅಮೃತಸರದ ಹೊರವಲಯದಲ್ಲಿರುವ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ. ದಿಬ್ರುಗಢ ಸೆಂಟ್ರಲ್ ಜೈಲಿನಿಂದ ಕಾನೂನುಬದ್ಧ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಂಧಿತರನ್ನು ಅಜ್ನಾ ನ್ಯಾಯಾಲಯಕ್ಕೆ ಕರೆತರಲಾಗಿದೆ.
ಯಾರು ಈ ಅಮೃತ್ಪಾಲ್ ಸಿಂಗ್?
ಅಮೃತ್ಪಾಲ್ ಸಿಂಗ್ ಖಲಿಸ್ತಾನಿ ನಾಯಕ ಹಾಗೂ ವಾರಿಸ್ ಪಂಜಾಬ್ ದೇ (Waris Punjab De) ಮುಖ್ಯಸ್ಥ. ಸದ್ಯ ಈತ ಜೈಲಿನಲ್ಲಿದ್ದಾನೆ. ಅಮೃತ್ಪಾಲ್ ಸಿಂಗ್ ಮತ್ತು ಆತನ ಒಂಬತ್ತು ಸಹಚರರು ಕಳೆದ ಎರಡು ವರ್ಷಗಳಿಂದ ಎನ್ಎಸ್ಎ ಅಡಿಯಲ್ಲಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾರೆ. ಜೈಲಿನಲ್ಲಿದ್ದುಕೊಂಡೇ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಖದೂರ್ ಸಾಹಿಬ್ ಕ್ಷೇತ್ರದಿಂದ ಅಮೃತ್ಪಾಲ್ ಸಿಂಗ್ ಗೆಲುವನ್ನು ಸಾಧಿಸಿದ್ದ. ಅಮೃತ್ ಪಾಲ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿದ್ದ. ‘ಅಮಿತ್ ಶಾ ಅವರು ಖಲಿಸ್ತಾನ್ ಚಳವಳಿಯನ್ನು ಹುಟ್ಟುಹಾಕಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ಮಾತನ್ನು ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅವರಿಗೆ ಏನಾಯಿತು ಎಂದು ಯೋಚಿಸಿಕೊಳ್ಳಿ, ಅದೇ ರೀತಿ ನೀವು ಕೂಡ ಮಾಡಿದರೆ, ಅವರಿಗೆ ಆದ ಗತಿಯೇ ನಿಮಗೂ ಆಗಬಹುದು. ಅಂತಹ ಪರಿಸ್ಥಿತಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ನಮ್ಮ ಚಳವಳಿಯನ್ನು ಹತ್ತಿಕ್ಕುವ ಬಗ್ಗೆ ಎಚ್ಚರಿಕೆ ನೀಡಿದಂತೆಯೇ ಹಿಂದೂ ರಾಷ್ಟ್ರಕ್ಕೆ ಆಗ್ರಹಿಸುತ್ತಿರುವವರಿಗೂ ಎಚ್ಚರಿಕೆ ಕೊಟ್ಟರೆ ನೀವು ಕೇಂದ್ರ ಗೃಹ ಸಚಿವರಾಗಿ ಉಳಿಯುವುದಿಲ್ಲ. ಅದರ ಅರಿವು ಅಮಿತ್ ಶಾಗೆ ಇದೆ ಎಂದು ಅಮೃತ್ ಪಾಲ್ ಸಿಂಗ್ ಹೇಳಿದ್ದ. ಈ ಹೇಳಿಕೆಗೂ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ: S Jaishankar: ಖಲಿಸ್ತಾನಿ ಉಗ್ರರಿಂದ ವಿದೇಶಾಂಗ ಸಚಿವ ಜೈಶಂಕರ್ ಮೇಲೆ ದಾಳಿ ಯತ್ನ; ಭಾರತದ ಧ್ವಜ ಹರಿದು ಪ್ರತಿಭಟನೆ
ಸಿಂಗ್ನನ್ನು ಬೆಂಬಲಿಸಿ ನಗರದಲ್ಲಿ ರ್ಯಾಲಿ ನಡೆಸಿದ್ದಕ್ಕಾಗಿ ರಾಯ್ಪುರದಲ್ಲಿ ಮಾರ್ಚ್ 24ರಂದು ನಾಲ್ವರನ್ನು ಬಂಧಿಸಲಾಗಿತ್ತು. ಎಲ್ಲಾ ಆರೋಪಿಗಳು ಛತ್ತೀಸ್ಗಢದ ರಾಜಧಾನಿ ರಾಯ್ಪುರ ನಿವಾಸಿಗಳೆಂದು ತಿಳಿದುಬಂದಿದ್ದು, ದಿಲೇರ್ ಸಿಂಗ್ ರಾಂಧ್ವಾ (46), ಮಣಿಂದರ್ಜಿತ್ ಸಿಂಗ್ ಅಲಿಯಾಸ್ ಮಿಂಟು ಸಂಧು ಅಲಿಯಾಸ್ ಹರಿಂದರ್ ಸಿಂಗ್ ಖಾಲ್ಸಾ (44) ಮತ್ತು ಹರ್ಪ್ರೀತ್ ಸಿಂಗ್ ರಾಂಧವಾ ಅಲಿಯಾಸ್ ಚಿಂಟು (42) ಎಂಬುವವರನ್ನು ಅಂದು ಬಂಧಿಸಲಾಗಿತ್ತು.