Simhastha Kumbh Mela: ಮುಂದಿನ ಕುಂಭಮೇಳಕ್ಕೆ ಮುಹೂರ್ತ ನಿಗದಿ; ಬರೋಬ್ಬರಿ 21 ತಿಂಗಳು ನಡೆಯಲಿದೆ ಧಾರ್ಮಿಕ ಮಹೋತ್ಸವ
Nashik Kumbh Mela: ಮಹಾರಾಷ್ಟ್ರದ ನಾಸಿಕ್-ತ್ರಯಂಬಕೇಶ್ವರದಲ್ಲಿ ನಡೆಯುವ ಸಿಂಹಸ್ಥ ಕುಂಭಮೇಳಕ್ಕೆ ದಿನಾಂಕ ನಿಗದಿಯಾಗಿದೆ. ಇದು 2026ರ ಅಕ್ಟೋಬರ್ನಲ್ಲಿ ಆರಂಭವಾಗಿ 2028ರ ಜುಲೈ ತನಕ ಸುಮಾರು 21 ತಿಂಗಳ ಕಾಲ ನಡೆಯಲಿದೆ. ಸಿಂಹಸ್ಥ ಕುಂಭಮೇಳವು 2026ರ ಅ. 31ರಂದು ತ್ರಯಂಬಕೇಶ್ವರ, ರಾಮಕುಂಡ ಮತ್ತು ಪಂಚವಟಿಯಲ್ಲಿ ನಡೆಯುವ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದ್ದು, 2028ರ ಜುಲೈ 24ರಂದು ಮುಕ್ತಾಯಗೊಳ್ಳಲಿದೆ.


ಮುಂಬೈ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ಯಶಸ್ವಿಯಾಗಿ ನೆರವೇರಿದ್ದು, ಇದೀಗ ಮಹಾರಾಷ್ಟ್ರದ ನಾಸಿಕ್-ತ್ರಯಂಬಕೇಶ್ವರದಲ್ಲಿ ನಡೆಯುವ ಸಿಂಹಸ್ಥ ಕುಂಭಮೇಳಕ್ಕೆ (Simhastha Kumbh Mela) ದಿನಾಂಕ ನಿಗದಿಯಾಗಿದೆ. ಇದು 2026ರ ಅಕ್ಟೋಬರ್ನಲ್ಲಿ ಆರಂಭವಾಗಿ 2028ರ ಜುಲೈ ತನಕ ಸುಮಾರು 21 ತಿಂಗಳ ಕಾಲ ನಡೆಯಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ಅಧ್ಯಕ್ಷತೆಯಲ್ಲಿ ನಾಸಿಕ್ನಲ್ಲಿ ನಡೆದ ಸಭೆಯ ಬಳಿಕ ಈ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. 12 ವರ್ಷಗಳಿಗೊಮ್ಮೆ ನಡೆಯುವ ಈ ಧಾರ್ಮಿಕ ಉತ್ಸವಕ್ಕಾಗಿ ಸರ್ಕಾರವು 4,000 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಮೂಲ ಸೌಕರ್ಯ ಕಾಮಗಾರಿಗಳನನು ನಿರ್ವಹಿಸಲು ಬಿಡ್ ಆಹ್ವಾನಿಸಿದೆ.
ಸಿಂಹಸ್ಥ ಕುಂಭಮೇಳವು 2026ರ ಅ. 31ರಂದು ತ್ರಯಂಬಕೇಶ್ವರ, ರಾಮಕುಂಡ ಮತ್ತು ಪಂಚವಟಿಯಲ್ಲಿ ನಡೆಯುವ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದ್ದು, 2028ರ ಜುಲೈ 24ರಂದು ಮುಕ್ತಾಯಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ: Kumbh Mela: ಮುಂದಿನ ಕುಂಭಮೇಳ ಎಲ್ಲಿ, ಯಾವಾಗ ನಡೆಯಲಿದೆ?
सिंहस्थ कुंभमेले के भव्य-दिव्य आयोजन का संकल्प!
— Devendra Fadnavis (@Dev_Fadnavis) June 1, 2025
त्र्यंबकेश्वर, नासिक में होने वाले सिंहस्थ कुंभमेले 2027 की पूर्व तैयारी बैठक में अमृत स्नान और प्रमुख पर्वों की तारीख निश्चित कर ली गई है। हमारी गोदावरी माँ की निर्मल धारा अविरल बहती रहे, इस दृष्टि से कई योजना बनाई गई है। इस हेतु… pic.twitter.com/lDcwSP1FVg
3 ಅಮೃತ ಸ್ನಾನ
ನಾಸಿಕ್ನಲ್ಲಿ 2027ರ ಜು. 29ರಂದು ನಗರ ಪ್ರದಕ್ಷಿಣೆ ನಡೆಯಲಿದೆ. ನಂತರ ಗೋದಾವರಿ ನದಿಯಲ್ಲಿ 3 ಅಮೃತ ಸ್ನಾನ (ಪವಿತ್ರ ಸ್ನಾನ) ನಡೆಯಲಿದೆ. ಆ. 2, ಆ. 31 ಮತ್ತು ಸೆ. 11ರಂದು ನಾಸಿಕ್ನಲ್ಲಿ ಅಮೃತ ಸ್ನಾನ ಆಯೋಜಿಸಲಾಗಿದ್ದು, ಸೆ. 12ರಂದು ತ್ರಯಂಬಕೇಶ್ವರದಲ್ಲಿ ಕೊನೆಯ ಸ್ನಾನ ನಡೆಯಲಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 13 ಅಖಾಡಗಳ ಮಹಾಂತರು, ಸಂತರು ಮತ್ತು ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. "ಈ ಭವ್ಯ ಕಾರ್ಯಕ್ರಮದ ಸಿದ್ಧತೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಾವು ಚರ್ಚೆ ನಡೆಸಿದ್ದೇವೆ ಮತ್ತು ವಿವಿಧ ಅಖಾಡಗಳ ಪ್ರಮುಖರು, ಸಾಧುಗಳು ಹಾಗೂ ಸನ್ಯಾಸಿಗಳಿಗೆ ಮಾಹಿತಿ ನೀಡಿದ್ದೇವೆ" ಎಂದು ಫಡ್ನವಿಸ್ ತಿಳಿಸಿದ್ದಾರೆ. ʼʼಗೋದಾವರಿ ನದಿಯನ್ನು ಸ್ವಚ್ಛಗೊಳಿಸುವುದು, ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು, ನೀರು ಶುದ್ಧೀಕರಣ ಘಟಕ ಸ್ಥಾಪನೆ ಮತ್ತು ಹೆಚ್ಚಿನ ನೀರನ್ನು ಬಿಡುಗಡೆ ಮಾಡುವುದು ಸೇರಿದಂತೆ ಇತರ ಕೆಲಸಗಳು ಇದರಲ್ಲಿ ಸೇರಿವೆ. ನಾವು ಸಾಧುಗ್ರಾಮಕ್ಕಾಗಿ ಭೂಮಿಯನ್ನು ಮೀಸಲಿಟ್ಟಿದ್ದೇವೆ ಮತ್ತು ಅದನ್ನು ಶೀಘ್ರದಲ್ಲೇ ಸ್ವಾಧೀನಪಡಿಸಿಕೊಳ್ಳುತ್ತೇವಚೆʼʼ ಎಂದು ವಿವರಿಸಿದ್ದಾರೆ.
ಈ ಕುಂಭಮೇಳ ದೀರ್ಘ ಕಾಲದವರೆಗೆ ನಡೆಯುತ್ತಿರುವುದರಿಂದ ಜನಸಂದಣಿಯನ್ನು ನಿಯಂತ್ರಿಸುವುದು ಆಡಳಿತಕ್ಕೆ ಸುಲಭವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. "ತ್ರಯಂಬಕೇಶ್ವರದಲ್ಲಿರುವ ಕುಶಾವರ್ತ್ ಕಿರಿದಾದ ಜಾಗವನ್ನು ಹೊಂದಿದೆ. ಆದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ತಪ್ಪಿಸಲು ನಾವು ಪರ್ಯಾಯ ಯೋಜನೆಗಳನ್ನು ರೂಪಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
ಪ್ರಯಾಗ್ರಾಜ್, ಉಜ್ಜಯಿನಿ, ಹರಿದ್ವಾರದ ವಿಶಾಲ ಪ್ರದೇಶಕ್ಕೆ ಹೋಲಿಸಿದರೆ ನಾಸಿಕ್ ಮತ್ತು ತ್ರಯಂಕೇಶ್ವರದಲ್ಲಿ ನಡೆಯುವ ಕುಂಭಮೇಳಕ್ಕೆ ಸೀಮಿತ ಸ್ಥಳ ಲಭ್ಯವಿದ್ದು, ಇದನ್ನು ನಿರ್ವಹಿಸುವುದೇ ದೊಡ್ಡ ಸವಾಲು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ʼʼಪ್ರಯಾಗ್ರಾಜ್ನ 10,000 ಎಕರೆಗೆ ಹೋಲಿಸಿದರೆ ಇಲ್ಲಿನ ಸಾಧುಗ್ರಾಮ ಕೇವಲ 350 ಎಕರೆಯಲ್ಲಿದೆ. ಅಮೃತ ಸ್ನಾನ ನಡೆಯುವ ರಾಮಕುಂಡವು ಇಲ್ಲಿಂದ ಕೆಲವೇ 100 ಮೀಟರ್ಗಳ ದೂರದಲ್ಲಿದೆ" ಎಂದು ಅವರು ತಿಳಿಸಿದ್ದಾರೆ. "ಕುಶಾವರ್ತ್ ಕುಂಡ್ (ತ್ರಯಂಬಕೇಶ್ವರ ದೇವಸ್ಥಾನದ ಬಳಿಯ ಗೋದಾವರಿ ನದಿಯ ಸಾಂಕೇತಿಕ ಮೂಲವೆಂದು ಪರಿಗಣಿಸಲಾದ ಪವಿತ್ರ ಕೊಳ) ಸ್ವಲ್ಪ ಎತ್ತರದಲ್ಲಿದ್ದು, ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ. ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತಿರಲು ತ್ರಯಂಬಕೇಶ್ವರದ ಗೋದಾವರಿ ನದಿಯ ದಡದಲ್ಲಿ 1.5 ಕಿ.ಮೀ.ಗಿಂತ ಹೆಚ್ಚು ವಿಸ್ತಾರದ ಪರ್ಯಾಯ ಘಾಟ್ ಸಿದ್ಧಪಡಿಸಲು ಅಖಾಡಗಳ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆʼʼ ಎಂದು ಹೇಳಿದ್ದಾರೆ.