Sunday, 8th September 2024

ಕನ್ನಡ ನಾಡು ನುಡಿಯ ಅಭಿಮಾನವಿಲ್ಲವೇ?

ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಅಲ್ಲಿ ಎಂಇಎಸ್ ಪುಂಡರು ಕನ್ನಡ ಧ್ವಜ ಸುಟ್ಟು ಹಾಕಿದ್ದಾರೆ. ನಮ್ಮ ಎಲ್ಲ ರಾಜಕಾರಣಿಗಳೂ ನರಸತ್ತವರಂತೆ ಸುಮ್ಮನಿದ್ದಾರೆ. ಬರೀ ಅಧಿಕಾರದ ಮೋಹ, ಹಣದ ಮೋಹ, ನಾಡು-ನುಡಿಯ ಮೇಲೆ ತೋರುಗಾಣಿಕೆಯ ಪ್ರೀತಿ. ಖಂಡನಾ ನಿರ್ಣಯ ತೆಗೆದುಕೊಳ್ಳೋಕೆ ಕಷ್ಟ? ಕನ್ನಡ ಬಾವುಟಕ್ಕೆ ಪುಂಡರು ಬೆಂಕಿ ಹಚ್ಚಿದ್ದನ್ನು ನೋಡಿದಾಗ ಎದೆಯಲ್ಲಿ ಬೆಂಕಿ ಹತ್ತಿ ಉರಿದಂತಾಗುತ್ತದೆ.

ನಮ್ಮವರು ಮಸಿ ಬಳಿದಾಗ ಶಿಕ್ಷೆ ನೀಡಲು ಹಿಂಜರಿಯದವರು ಈಗ ಏಕೆ ಸುಮ್ಮನಾಗಿಬಿಟ್ಟಿರಿ? ಈಗಾದರೂ ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬಾರದೇ? ಕನ್ನಡ ತಾಯಿಗೆ ಆಗುತ್ತಿರುವ ಅಪಮಾನವನ್ನೂ ಕಂಡೂ ಕಾಣದಂತೆ ಇದ್ದು ಕಣ್ಣು ಕಾಣದ ಗಾವಿಲರಾಗಿಬಿಟ್ಟಿರಲ್ಲ! ಇದು ಘೋರ ಅವಮಾನ. ನಿಮ್ಮ ತಾಯಿಯ ಸೆರಗನೆಳೆದು ರಸ್ತೆಯಲ್ಲಿ ನಿಲ್ಲಿಸಿದರೂ ಅದೆಂಥಾ ಕಲ್ಲು ಹೃದಯ ನಮ್ಮ ಕನ್ನಡಿಗರದು. ಬರೀ ನವೆಂಬರ್ ತಿಂಗಳಿಗಷ್ಟೇ ಕನ್ನಡ ಸೀಮಿತವೇ? ನಮ್ಮ ನೆಲ, ಜಲ, ಭಾಷೆಯ ಬಗ್ಗೆ ಇನಿತಾದರೂ ಅಭಿಮಾನವಿರಲಿ. ಇದು ಖಂಡನೀಯ ಕಾರ್ಯ. ಇದಕ್ಕೆ ಘೋರ ಶಿಕ್ಷೆಯಾಗಬೇಕು.

-ಸುಜಯ ಆರ್ ಕೊಣ್ಣೂರ್, ವಿದ್ಯಾಮಾನ್ಯ ನಗರ

ಪುಂಡರು, ಷಂಡರೂ ಹೌದು 
ಭಾಷಾ ಬಾಂಧವ್ಯ ಬೆಸೆಯುವುದು ಅಷ್ಟಕ್ಕೂ ಕಷ್ಟದ ಕೆಲಸವೆನಲ್ಲ. ಅದರಲ್ಲೂ ಒಂದೇ ರಾಷ್ಟ್ರದ ಎರಡು ರಾಜ್ಯಗಳ ನಡುವೆ ಈ ಬಾಂಧವ್ಯ ಬೆಳೆಯುವುದು ಕಷ್ಟವಾಗಬಾರದು. ಆದರೂ ಕರ್ನಾಟಕ ಮಹಾರಾಷ್ಟ್ರಗಳ ಮಧ್ಯದ ಈ ತಿಕ್ಕಾಟ ಹಾಕ್ಯಾಟಗಳು ಎ ಮೀರುತ್ತಿವೆ. ಮೊನ್ನೆ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಭಸ್ಮ ಮಾಡಿ ದ್ದಾರೆ. ಕನ್ನಡ ಧ್ವಜ ಸುಟ್ಟರೆ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದರೆ ಅದಕ್ಕೆ ಪ್ರತಿರೋಧವಾಗಿ ಕನ್ನಡಿಗರೂ ಕರ್ನಾಟಕದಲ್ಲಿ ಮಹಾರಾಷ್ಟ್ರ ಧ್ವಜವನ್ನು ಸುಡಬಹುದು ಮಹಾರಾಷ್ಟ್ರ ವಾಸಿಗಳ ಭಾವನೆಗಳಿಗೆ ಧಕ್ಕೆ ಮಾಡಿದರೂ ಮಾಡ್ಯಾರು.

ಇದರಿಂದ ಆದದ್ದೇನು? ಭಾರತೀಯರೇ ಆಗಿರುವ ಕನ್ನಡಿಗರು ಮಹಾರಾಷ್ಟಿಗರ ಮಧ್ಯೆ ವೈಷಮ್ಯ, ದ್ವೇಷ ಭಾವನೆಗಳು ಇತ್ಯಾದಿಗಳ ಉದಯ. ಎರಡೂ ರಾಜ್ಯಗಳು ತಮ್ಮ ತಮ್ಮ ಗಡಿ ಪ್ರದೇಶಗಳನ್ನು ಸಂರಕ್ಷಿಸಿಕೊಳ್ಳಲು ಮತ್ತು ಆಯಾಯಾ ಗಡಿ ಊರುಗಳಲ್ಲಿ ತಮ್ಮ ಭಾಷೆಯನ್ನು ಬೆಳೆಸಲು ಪ್ರಯತ್ನ ಪಡಬೇಕು. ಆದರೆ ಈ ಪ್ರಯತ್ನ ಮಾಡುವ ಭರದಲ್ಲಿ ನಾವೆ ಭಾರತೀಯರು ಎಂದು ಮರೆತರೆ ಆಗುವುದು ಮೊನ್ನೆ ಮಹಾರಾಷ್ಟ್ರದದಂತಹ ಪುಂಡ ಕೆಲಸಗಳೇ. ಇಂತಹ ಪುಂಡರು ಷಂಡರೂ ಹೌದು.

ನೆರೆ ರಾಜ್ಯದ ಧ್ವಜ ಸುಡುವ ರಣ ಹೇಡಿಗಳ ಹಿಂಡು ಭಾರತ ತಾಯಿಯ ಸಂತಾನ ಪಡೆ ಆಗಿರಲು ಸಾಧ್ಯವಿದೆಯೇ? ಯೋಚಿಸಿ ನೋಡಿ. ಧರ್ಮಾಂಧತೆ ಮತಾಂಧತೆ ಜತೆಗೆ ಭಾಷ್ಯಾಂಧತೆಯೂ ಭಾರತವನ್ನು ಬಾಧಿಸತೊಡಗಿದರೆ ಈ ರಾಷ್ಟ್ರ ಅಭಿವೃದ್ಧಿ ಪಥವನ್ನು ಕಾಣುವುದೆಂದು? ಮಹಾರಾಷ್ಟ್ರ ಸರಕಾರ ಭಾರತದ ಏಕತೆ ಮತ್ತು ಐಕ್ಯತೆಯನ್ನು ಬಯಸುವ ಬಯಕೆ ಹೊಂದಿದ್ದರೆ ಈ ಎಂಇಎಸ್ ಪುಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಬೆಳಗಾವಿ ರಾಜಕಾರಣಿಗಳಂತೂ ಕೆಲಸಕ್ಕೆ ಬಾರದ ಕೈಯಗದ ಮನುಷ್ಯರುಗಳು. ಅವರಿಂದೇನಾದರೂ ಅಪೇಕ್ಷಿಸು ವುದೇ ತಪ್ಪು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವರ ಮಂತ್ರಿಮಂಡಲ ವಿರೋಧ ಪಕ್ಷದ ನಾಯ ಕರುಗಳ ಜೊತೆಗೂಡಿ ಮೊನ್ನೆಯ ಘಟನೆಯನ್ನು
ಮತ್ತು ಅದರಲ್ಲಿ ಭಾಗಿಯಾದವರನ್ನು ನ್ಯಾಯಾಂಗ ವ್ಯವಸ್ಥೆಯ ಮೂಲಕ ಹೇಗೆ ದಂಡಿಸಿ ಬುದ್ಧಿ ಕಲಿಸಬಹುದು ಎಂಬುದನ್ನು ಆಲೋಚಿಸಿ ನಿರ್ಣಯ ಕೈಗೊಳ್ಳಬೇಕು. ಸಿರಿಗನ್ನಡ ಗೆಲ್ಲಲಿ ಸಿರಿಗನ್ನಡ ಬಾಳಲಿ. ಭಾರತ ಪ್ರೇಮ ಬೆಳಯಲಿ ಭ್ರಾತೃತ್ವ ಎಡೆ ಪಸರಿಸಲಿ.
– ಹೃತಿಕ್ ಕುಲಕರ್ಣಿ

ಬಳಿವ ಪ್ರಜ್ಞೆ ಇಲ್ಲವೇ?
ಇತ್ತೀಚೆಗಷ್ಟೇ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಸಂಪನ್ನಗೊಂಡಿತು. ಮತೆ ಎಣಿಕೆ ಕೇಂದ್ರ ಬಳಿಯಿದ್ದ ಪೋಲಿಸ್ ಬಂದೋಬಸ್ತ್ ನೋಡಿ ಅಚ್ಚರಿ ಯಾಯಿತು. ಆ ಮಟ್ಟಕ್ಕೆ ಮಾಡಬೇಕಾದ ಪರಿಸ್ಥಿತಿ ಏನಿತ್ತೋ ನನಗೆ ತಿಳಿ ಯದು. ಇರಲಿ, ಆದರೆ ಸಂಜೆಯ ಹೊತ್ತಿಗೆ ಲ್ಲಿನ ರಸ್ತೆಯ ಉದ್ದಕ್ಕೂ, ಇಕ್ಕೆಲ ಗಳಲ್ಲಿಯೂ ಅದೆಷ್ಟು ಗಲೀಜು ಬಿದ್ದಿತ್ತೆಂದರೆ ನೋಡಲು ಅಸಹ್ಯವಾಗಿತ್ತು. ಅಲ್ಲಲ್ಲಿ ಚದುರಿಬಿದ್ದಿದ್ದ ಪ್ಲಾಸ್ಟಿಕ್ ನೀರಿನ, ಪಾನೀಯದ ಬಾಟಲಿಗಳು, ಒತ್ತೊತ್ತಾಗಿ ಬಿದ್ದಿದ್ದ ಸಿಡಿದ ಪಟಾಕಿಯ ರದ್ದಿ ನಮ್ಮ ಮನಸಿಗೆ ಅಂಟಿದ ಹೊಲಸಿನ ಪ್ರತೀಕದಂತೆ ಕಾಣುತ್ತಿತ್ತು.

ಅಲ್ಲಿ ಹಾಜರಿದ್ದ ಜನರು, ಆರಕ್ಷಕರು, ಇತರ ಅಧಿಕಾರಿಗಳು, ವಿದ್ಯಾವಂತರು, ನಾಗರಿ ಕರ ನಡುವೆ, ಸಾರ್ವಜನಿಕ ಜಾಗ, ರಸ್ತೆಗಳನ್ನು ಆ ರೀತಿಯಲ್ಲಿ ಹೊಲಸು ಮಾಡುವುದನ್ನು ತಪ್ಪಿಸುವವರು ಯಾರೂ ಇರಲಿಲ್ಲವೇ ಎನ್ನುವುದು ಬಹಳವಾಗಿ ಕಾಡುವ ಪ್ರಶ್ನೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ರಸ್ತೆ ಬದಿಯಲ್ಲಿ ಕಂಬಗಳಿಗೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ, ಸೂಚನಾ ಫಲಕ ಗಳನ್ನು ಹೀಗೇ ದುರ್ಬಳಕೆ ಮಾಡುವುದು ಸಾಮಾನ್ಯ ಸಂಗತಿ ಯಾಗಿದೆ.

ಕನಿಷ್ಠ ತಮ್ಮ ಕಾರ್ಯಕ್ರಮ ಮುಗಿದ ನಂತರ ತಾವು ಮಾಡಿದ ಅಪಚಾರವನ್ನು ತಿದ್ದುವ, ಸ್ವಚ್ಛ ಮಾಡುವ ಕೆಲಸವನ್ನೂ ಮಾಡದಿರುವುದು ಶೋಚ ನೀಯ. ಇದಕ್ಕಾಗಿ ಆಗ್ರಹಿಸುವವರು, ಇದನ್ನು ಪ್ರಶ್ನಿಸುವವರೂ ಇಲ್ಲದಿರುವುದು ಮತ್ತೂ ಶೋಚನೀಯ ಮತ್ತು ಚಿಂತನಾರ್ಹ ವಿಷಯ. ಸಾರ್ವಜನಿ ಕರು, ನಾಗರಿಕರು ಇಂತಹ ಅನಾಗರಿಕ, ಸಾರ್ವ ಜನಿಕ ಅಪಚಾರಗಳ ಕುರಿತು ಮಾತನಾಡದೆ ಕಿವುಡರಂತೆ, ಕುರುಡರಂತೆ ವರ್ತಿಸಿದರೆ ಅಂತಹ ಸಮಾಜದ ಏಳಿಗೆ ಹೇಗೆ ಸಾಧ್ಯವಾದೀತು?
– ರಾಗಿರಾಯ, ಕೋಲಾರ.

ಪ್ರತಿಭಟನೆ ವೇದಿಕೆಯಲ್ಲ
ನಮ್ಮಲ್ಲಿ ತಮ್ಮ ಕಥೆ, ಕಾದಂಬರಿ, ವಿಮರ್ಶೆ, ಚಿಂತನಾ ಬರಹಗಳಿಂದ ಕನ್ನಡ ಜನಕ್ಕೆ ಪರಿಚಿತರಾದ ಬರಹಗಾರರು ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಚಂಪಾ, ಬರಗೂರು ಅಂತಹ ಚಿರಪರಿಚಿತ ಮತ್ತು ಜನತೆಯ ಪ್ರೀತಿ ವಿಶ್ವಾಸಗಳಿಸಿಕೊಂಡಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳ ಆಯಕಟ್ಟಿನ ಜಾಗದಲ್ಲಿದ್ದಂಥವರೂ ಇಂದಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸದೇ ಮೌನವಾಗಿರುವುದಕ್ಕೆ ಕಾರಣ ತಿಳಿಯದಾಗಿದೆ. ಎಲ್ಲೆಲ್ಲಿ ಪ್ರತಿಭಟನೆಗೆ  ಆಹ್ವಾನ ವಿರುತ್ತದೋ ಅಲ್ಲೆಲ್ಲ ಭಾಗವಹಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಇಂಥವರು ಭಾರೀ ಬರಹಗಾರರು, ಚಿಂತಕರು ಎಂದು ಬಿಂಬಿತವಾಗುತ್ತಾರೆ. ಇಂಥವರ ಪ್ರತಿಭಟನೆ, ವಿರೋಧಗಳೆಲ್ಲ ಕೆಲವೇ ಕೋಮಿನ, ಸಮುದಾಯದ ಪರವಾಗಿ ಮಾತ್ರ.

ಉಳಿದ್ಯಾವುದೂ ಪ್ರತಿಭಟನಾ ಸಭೆಗಳು ಇವರಿಗೆ ವೇದಿಕೆ ಅಲ್ಲ. ಅವರ ಇಂಥ ವಿವಾದಾತ್ಮಕ ನಡೆಯ ಬಗ್ಗೆ ಕೆಲ ಪತ್ರಿಕೆಗಳೂ ‘ಭಾರೀ ಚಿಂತನಾಪೂರ್ಣ ಬರಹ’ಗಳೆನ್ನುವಂತೆ ಲೇಖನಗಳು ಪ್ರಕಟವಾಗುತ್ತವೆ. ಬರೆಯುವುದಕ್ಕಿಂತ ವೀರಾವೇಷದ ಭಾಷಣ, ವಿವಾದದ ಕಿಡಿಹೊತ್ತಿಸುವ ಹೇಳಿಕೆಗಳಿಂದಲೇ ಇವರು ಪ್ರಸಿದ್ಧರು. ಆದರೆ ತಾವು ಮಾತ್ರ ಅನಕೃ, ಶಿವರಾಮಕಾರಂತರೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಲೇಖಕರಿಗೆ ಪೆನ್ನು ಮುಖ್ಯವಾಗಬೇಕೇ ವಿನಾ ವೇದಿಕೆಗಳಲ್ಲ. ಕನಿಷ್ಠ ಕನ್ನಡದಂಥ ವಿಷಯದಲ್ಲಾದರೂ ಈ ‘ಪ್ರಸಿದ್ದ ಚಿಂತಕ’ರು, ಲೇಖಕರು ಮೌನ ಮುರಿಯುವಂತಾಗಲಿ.
-ಸತ್ಯಬೋಧ, ಬೆಂಗಳೂರು

error: Content is protected !!