Sunday, 8th September 2024

ಇನ್ನೂ ನಾಗರಿಕವಾಗದ ಸಮಾಜ!

ಮೊನ್ನೆ ಮೊನ್ನೆ ಹೊಳೆನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ ಮ್ಯಾನ್ ಹೋಲ್‌ಗೆ ದಿನಗೂಲಿ ಪೌರ ಕಾರ್ಮಿಕರೊಬ್ಬರನ್ನು ಇಳಿಸಿ ಸ್ವಚ್ಛ ಮಾಡಿಸಿದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಈ ವರದಿ ಸದ್ದು ಮಾಡಿದೆ.

ಇದು ಕೇವಲ ಹೊಳೆ ನರಸೀಪುರಕ್ಕೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಿವೆ. ಶೌಚ ಗುಂಡಿಗೆ ಕಾರ್ಮಿಕರನ್ನು ಇಳಿಸುವುದು, ಹಾಗೂ ಮಲ ಹೊರಿಸುವುದು ಶಿಕ್ಷಾರ್ಹ ಅಪರಾಧ. ಸರ್ಕಾರ ಹಲವು ವರ್ಷಗಳ ಹಿಂದೆಯೇ ಇವನ್ನು ನಿಷೇಧಿಸಿದೆ. ಹಾಗಿದ್ದರೂ ಅಲ್ಲಲ್ಲಿ ಇಂತಹ ಬೇಜವಾಬ್ದಾರಿ ವರ್ತನೆಗಳು ಅಧಿಕಾರಿಗಳಿಂದ ಕಂಡು ಬರುತ್ತಿರುವುದು ದುರಾಡಳಿತದ ಸಂಕೇತ.

ಸ್ಥಳೀಯ ಆಡಳಿತಗಳ ಹೊಣೆಗೇಡಿತನಕ್ಕೆ ಇದು ನಿದರ್ಶನ. ಶೌಚಗುಂಡಿಯನ್ನು ಆವರಿಸಿ ಕೊಂಡಿರಬಹುದಾದ ಗಂಧಕ, ಮೀಥೇನ್ ಅನಿಲದಿಂದಾಗಿ ಮುಗ್ಧ ಕಾರ್ಮಿಕರು ಉಸಿರು ಕಟ್ಟಿ ಜೀವತೆತ್ತ ಅದೆಷ್ಟೋ ಮ್ಯಾನ್‌ಹೋಲ್ ದುರಂತಗಳು ಜರುಗಿ ದ್ದರೂ ಇನ್ನೂ ಇಂಥ ಅಮಾನವೀಯತೆಗೆ ಅಂತ್ಯ ಇಲ್ಲವೇ? ಅಸಹಾಯಕ ಕಾರ್ಮಿಕರ ಶೋಷಣೆಗೆ ಕೊನೆ ಯೆಂದು? ಆಧುನಿಕ ಆವಿಷ್ಕಾರಗಳ, ಸಲಕರಣೆಗಳ ಸೌಕರ್ಯ ಇದ್ದರೂ.

ಮಾನವರನ್ನೂ ಇಂದಿಗೂ ಇಳಿಸುತ್ತಿರುವುದು ಯಾವ ನಾಗರಿಕತೆಯ ಲಕ್ಷಣ? ಮಾನ ವತೆಯ ಪರಿಜ್ಞಾನದ ಅರಿವು ಸಂಬಂಧ ಪಟ್ಟವರಿಗೆ ಏಕೆ ಬರುತ್ತಿಲ್ಲ? ಪೌರಾಡಳಿತ ಇಲಾಖೆಯು ಇಂಥವುಗಳನ್ನುಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಉಗ್ರ ಶಿಕ್ಷೆಗೆ ಗುರಿ ಪಡಿಸಬೇಕು. ಇಂತಹ ಘಟನೆಗಳು ಇನ್ನು ಮುಂದೆಯಾದರೂ ರಾಜ್ಯದಲ್ಲಿ ನಡೆಯದಂತೆ, ಸರಕಾರ ಎಚ್ಚರ ವಹಿಸಿ,ಇರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ರಾಜ್ಯದ ಎಲ್ಲ ಸ್ಥಳೀಯ ಆಡಳಿತಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಬೇಕು.

-ಆರ್. ಬಿ.ಜಿ.ಘಂಟಿ ಅಮೀನಗಡ

ಗಗನಯಾನ ಯೋಜನೆ ಬಿಟ್ಟು ಕೊಡದಿರಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ 2023ರ ಮಾನವ ಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್ ಗೆ ಸ್ಥಳಾಂತರಿಸದಂತೆ ರಾಜ್ಯ ಸರಕಾರ ಸಹ ಪ್ರಧಾನಿ ನರೇಂದ್ರ ಮೋದಿಯವರ ಮನವೊಲಿಸಬೇಕು. ಈ ಸಂಬಂಧ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದು, ಪಕ್ಷಾತೀತವಾಗಿ ಒತ್ತಡ ತರುವ ಅಗತ್ಯವಿದೆ.
ಏಕೆಂದರೆ ರಾಜ್ಯರಾಜಧಾನಿ ಬೆಂಗಳೂರಿನಲ್ಲೇ ಇಸ್ರೋದ ಕೇಂದ್ರ ಕಚೇರಿಯಿದೆ. ಅಲ್ಲದೇ, ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದೆ. ಜತೆಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಂತಹ ರಾಷ್ಟ್ರೀಯ ಮಟ್ಟದ ಸರ್ಕಾರಿ ಸಂಸ್ಥೆಗಳೂ ರಾಜ್ಯದಲ್ಲೇ ಇವೆ. ಈ ಕಾರಣಕ್ಕೆ ಇಡೀ ಜಗತ್ತು ಇಂದು ರಾಜ್ಯದತ್ತ ನೋಡು ವಂತಾಗಿದೆ. ಇನ್ನೊಂದೆಡೆ, ಬೆಂಗಳೂರು ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದೇ ಜಗತ್ತಿಗೆ ಪರಿಚಿತ. ಜಗತ್ತಿನ ಸಾಫ್ಟ್ವೇರ್ ಕ್ಷೇತ್ರದ ಪ್ರಸಿದ್ಧ ಕಂಪನಿಗಳು ಸೇರಿದಂತೆ ನೂರಾರು ಕಂಪನಿಗಳು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು ಇಡೀ ಜಗತ್ತಿನ
ಗಮನ ಸೆಳೆದಿದೆ.

ಇಷ್ಟೆಲ್ಲ ಖ್ಯಾತಿಗೆ ಭಂಗ ತರುವಂತೆ ಇಸ್ರೋ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್ ಗೆ ಸ್ಥಳಾಂತರಿಸುವುದು ಎಷ್ಟರಮಟ್ಟಿಗೆ ಸರಿ! ರಾಜ್ಯದಲ್ಲೂ ಬಿಜೆಪಿ ಸರಕಾರವೇ ಇದ್ದು, ಮುಖ್ಯಮಂತ್ರಿಯವರು ಆದ್ಯತೆ ಮೇರೆಗೆ ತುರ್ತು ಗಮನಹರಿಸಿ ಕಾರ್ಯ ಪ್ರವೃತ್ತರಾಗಬೇಕು. ಹಾಗೂ ರಾಜ್ಯದ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಿ, ಯೋಜನೆಯನ್ನು ಇಲ್ಲೇ ಉಳಿಸಿಕೊಳ್ಳುವ ಕಾಳಜಿ, ಇಚ್ಛಾಶಕ್ತಿ ಮೆರೆಯಬೇಕಿದೆ.

-ಶ್ರೀಧರ್ ಡಿ.ರಾಮಚಂದ್ರಪ್ಪ, ತುರುವನೂರು

ಪಿಡಿಒಗಳ ನಿಯಂತ್ರಿಸುವಲ್ಲಿ ಸರಕಾರಗಳು ವಿಫಲ 
ರಾಜ್ಯದಲ್ಲಿ ಇದುವರೆಗೆ ಬಂದು ಹೋದ ಎಲ್ಲ ಸರಕಾರಗಳು ಗ್ರಾಮ ಲೆಕ್ಕಿಗರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಏಕೆಂದರೆ ಗ್ರಾಮಗಳಲ್ಲಿಯೇ ವಾಸಮಾಡಬೇಕೆಂದು ಕಳೆದ ಎಲ್ಲ ಸರಕಾರಗಳೂ ಹೇಳಿದ್ದರೂ ಇದುವರೆಗೆ ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹಾಗಿರಲಿ, ಕನಿಷ್ಠ ಆ ವ್ಯಾಪ್ತಿಯ ಗ್ರಾಮ ಗಳಲ್ಲೂ ಯಾವೊಬ್ಬ ಗ್ರಾಮಲೆಕ್ಕಿಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೂ ವಾಸಮಾಡುತ್ತಿಲ್ಲ. ಇದು ಸರಕಾರಕ್ಕೆ, ಸಂಬಂಧಿಸಿದ
ಅಧಿಕಾರಿ-ಸಚಿವರಿಗೆ ಗೊತ್ತಿದ್ದರೂ ಕಠಿಣ ಆದೇಶ, ಸುತ್ತೋಲೆ ಹೊರಡಿಸಿಲ್ಲ. ಹೀಗಾಗಿ, ಗ್ರಾಮ ಲೆಕ್ಕಿಗರು, ಅಧಿಕಾರಿಗಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ವಾಸ ಮಾಡುತ್ತ ಯಾವಾಗಲೋ ಒಮ್ಮೆ ಮನಸ್ಸಿಗೆ ಬಂದಾಗ ಪಂಚಾಯಿತಿ ಕೇಂದ್ರಕ್ಕೆ ಬರುತ್ತಿದ್ದಾರೆ. ತಾವು ವಾಸವಿರುವ ಸ್ಥಳದಲ್ಲೇ ಸಣ್ಣಕೊಠಡಿಯಲ್ಲಿ ಕಚೇರಿ ತೆರೆದು ತಮ್ಮಲ್ಲಿಗೇ ಬಂದು ಭೇಟಿ ಮಾಡುವಂತೆ ಸಾರ್ವಜನಿಕರಿಗೂ ಸೂಚಿಸುತ್ತಿ ದಾರೆ.

ಅಲ್ಲಿ ಕನಿಷ್ಠ ಗೌರವ, ಸ್ಪಂದನೆಯೂ ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಹೋಗಲಿ ಅಲ್ಲಾದರೂ ಕೆಲಸ ಮಾಡಿಕೊಡುತ್ತಾರೆಯೇ ಎಂದರೆ ಅದೂ ಇಲ್ಲ. ಕೇವಲ, ನಿರ್ಲಕ್ಷ್ಯ, ಅಸಡ್ಡೆ. ಇನ್ನು ಪಿಡಿಒಗಳನ್ನಂತೂ ಕೇಳುವುದೇ ಬೇಡ. ಪಂಚಾಯಿತಿ ಕಚೇರಿಗೆ ಹಾಜರಾಗುವುದೇ ವಿರಳ. ಸಾರ್ವಜನಿಕರು ಪಂಚಾಯಿತಿ ಕೇಂದ್ರಕ್ಕೆ ಹೋದರೆ ಹಳ್ಳಿಗಳಿಗೆ ಇನ್ಸ್‌ಪೆಕ್ಷನ್‌ಗೆ ಹೋಗಿzರೆ, ಮೀಟಿಂಗೆಗೆ ಹೋಗಿದ್ದಾರೆ ಎಂಬುದು ಸಾಮಾನ್ಯ ಸಬೂಬು. ನನಗೆ ತಿಳಿದ ಮಟ್ಟಿಗೆ, ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಟಿಟಿಪಿ-ತಾತ್ಕಾಲಿಕ ಪ್ರವಾಸ ಪಟ್ಟಿ ಕಳುಹಿಸಿಕೊಡುವ ಸಂಪ್ರದಾಯವಿದೆ. ಹೀಗೆ ಕಳುಹಿಸಿದ ಪ್ರವಾಸಪಟ್ಟಿಯನ್ನು ಸಂಬಂಧಿಸಿದ ಪಂಚಾಯಿತಿ ಕೇಂದ್ರಗಳಲ್ಲಿ ಸಾರ್ವಜನಿಕರ ಗಮನಕ್ಕೆ ತರುವುದಿಲ್ಲ.

ಗ್ರಾಮ ಪಂಚಾಯಿತಿ ನೌಕರರಿಗೆ ಯಾವುದೇ ‘ಹಾಜರಾತಿ ವಹಿ’ ಇದೆ ಎಂಬುದೇ ಸಾರ್ವಜನಿಕರಿಗೆ ಗೊತ್ತಿಲ್ಲ. ಇದರಲ್ಲಿ ಸಂಬಂಧಿ ಸಿದ ನೌಕರ ಸಹಿ ಹಾಕಿzರೆಯೋ ಇಲ್ಲವೋ ಎಂಬುದನ್ನು ಯಾವ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ತಾಲೂಕು ಪಂಚಾಯಿ ತಿಯ ಮೇಲಧಿಕಾರಿಯೂ ಗಮನಿಸಿರುವುದಿಲ್ಲ. ಇನ್ನು ಪಂಚಾಯಿತಿ ಕಚೇರಿಗಳಲ್ಲಿರುವ ಸಿಬ್ಬಂದಿ ಎಂದರೆ ಒಬ್ಬ ಡಾಟಾ ಎಂಟ್ರಿಆಪರೇಟರ್(ಹೊರ ಗುತ್ತಿಗೆ ನೌಕರ), ಇನ್ನೊಬ್ಬ ಬಿಲ್ ಕಲೆಕ್ಟರ್. ಪಂಚಾಯಿತಿ ಅಧ್ಯಕ್ಷ ರಂತೂ ಮೀಟಿಂಗ್ ಇರುವ ದಿನ ಮಾತ್ರ ದರ್ಶನ ಕೊಡುತ್ತಾರೆ. ಕೆಲವು ಪಂಚಾಯಿತಿ ಸದಸ್ಯರು/ಅಧ್ಯಕ್ಷರು ದೂರದ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಸನ್ನಿವೇಶವೂ ಇದೆ.

ಹೀಗಾಗಿ ಪಂಚಾಯಿತಿಗೆ ಯಾವ ಸೌಲಭ್ಯಕ್ಕಾಗಿ, ಎಷ್ಟು ಅನುದಾನ ಬಂದಿದೆ. ಇತ್ಯಾದಿ ಯಾವ ಮಾಹಿತಿಯೂ ಸದಸ್ಯರಿಗೂ ಗೊತ್ತಿರುವುದಿಲ್ಲ, ಬಂದ ಅನುದಾನವನ್ನು ಮುಚ್ಚಿಟ್ಟು ತಮಗೆ ತೋಚಿದ ಹಾಗೆ ಖರ್ಚು ಮಾಡಲಾಗುತ್ತಿದೆ. ಹೀಗೆ ಅಕ್ರಮಗಳ ಸರಮಾಲೆಯೇ ಪಂಚಾಯಿತಿಗಳಲ್ಲಿ ನಡೆಯು ತ್ತಿವೆ. ಇಷ್ಟಾದರೂ ನಮ್ಮನ್ನಾಳುವವರು ಮಾಥ್ರ ಗಾಮಗಳ ಸಬಲೀಕರಣ, ಪಂಚಾಯಿತಿ ವ್ಯವಸ್ಥೆಯ ಬಲವರ್ಧನೆಯ ಮಾತಾಡುತ್ತಿದ್ದಾರೆ. ಏನಿದ ಮರ್ಮ?
-ಶ್ರೀಹರ್ಷವರ್ಧನ ಬಸವೇಶ್ವರ ನಗರ

error: Content is protected !!