ಬೆಂಗಳೂರು: ಅಜಾಗರೂಕತೆಯ ಚಾಲನೆಯಿಂದಾಗಿ ಲಾರಿ ಪಲ್ಟಿಯಾಗಿ, ಅದರಡಿಗೆ ಸಿಲುಕಿ ಬೈಕ್ ಸವಾರ, ಹಿರಿಯ ಪತ್ರಕರ್ತ ಎಸ್.ಎಸ್. ಗಂಗಾಧರ ಮೂರ್ತಿ (49) ಮೃತಪಟ್ಟಿದ್ದಾರೆ.
ಗಂಗಾಧರಮೂರ್ತಿ ಅವರು ರಾಜ್ಯಮಟ್ಟದ ಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸು ತ್ತಿದ್ದರು. ಭಾನುವಾರ ಅಪರಾಹ್ನ ಕಚೇರಿಗೆ ಬರುವ ವೇಳೆ ಈ ಅಪಘಾತ ಸಂಭವಿಸಿದೆ. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.
ಬೆಂಗಳೂರಿನ ಪುರಭವನ ಬಳಿ ಲಾರಿ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ. ವೇಗವಾಗಿ ಬಂದ್ ಲಾರಿ, ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿವೈಡರ್ನ ಮತ್ತೊಂದು ಪಾರ್ಶ್ವದ ರಸ್ತೆಗೆ ಮಗುಚಿದ ಲಾರಿ ಗಂಗಾಧರ ಮೂರ್ತಿ ಅವರ ಬೈಕ್ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒದಗಿಸಲಾಯಿತಾದರೂ ಫಲಿಸದೆ ಕೊನೆಯುಸಿರೆಳೆ ದಿದ್ದಾರೆ.
ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗಾಧರ ಮೂರ್ತಿ ಅವರ ಪತ್ರಕರ್ತ ವೃತ್ತಿಯ ಸೇವೆ ಗುರುತಿಸಿ ಕಳೆದ ವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅವರನ್ನು ಸನ್ಮಾನಿಸಿತ್ತು.