R Ashok: ಇಡೀ ದೇಶದಲ್ಲಿ ಕಸ ವಿಲೇವಾರಿಗೆ ಗರಿಷ್ಠ ತೆರಿಗೆ ಹಾಕಿದ ಪುಣ್ಯಾತ್ಮರು ಕಾಂಗ್ರೆಸ್ಸಿನವರು: ಆರ್.ಅಶೋಕ್
R Ashok: ಕಸದ ಸೆಸ್ 240 ಕೋಟಿ ಸಂಗ್ರಹವಾಗುತ್ತದೆ. ಕಸದ ನಿರ್ವಹಣೆಗೆ 145 ಕೋಟಿಗೆ ಟೆಂಡರ್ ಆಗಿದೆ. ಬಳಕೆದಾರರ ಶುಲ್ಕ ಸಂಗ್ರಹಿಸಿದರೆ 500 ರಿಂದ 600 ಕೋಟಿ ಲಭಿಸಲಿದೆ. ಯಾರ ಮನೆ ಹಾಳು ಮಾಡಲು ಈ ಶುಲ್ಕ ಸಂಗ್ರಹಿಸುತ್ತೀರಿ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಇತರ ರಾಜ್ಯಗಳಲ್ಲಿ ಒಂದೋ ಸೆಸ್ ಇಲ್ಲವೇ ಬಳಕೆದಾರರ ಶುಲ್ಕ ಸಂಗ್ರಹಿಸುತ್ತಾರೆ. ಇಲ್ಲಿ ಎರಡನ್ನೂ ಸಂಗ್ರಹಿಸುತ್ತಾರೆ ಎಂದು ಆರೋಪಿಸಿದ್ದಾರೆ.


ಬೆಂಗಳೂರು: ಕಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಸ ಮಾಡಲು ಯೋಜನೆ ತಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಿಸಿದ್ದಾರೆ. ಬಿಜೆಪಿ ನಿಯೋಗವು, ‘ಬೆಂಗಳೂರಿನಲ್ಲಿ ದುಬಾರಿ ಬೆಲೆ ಏರಿಕೆ’ ವಿರುದ್ಧ ಇಂದು ಬಿಬಿಎಂಪಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿತು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಆರ್. ಅಶೋಕ್ ಅವರು, ಇಡೀ ದೇಶದಲ್ಲಿ ಕಸ ವಿಲೇವಾರಿಗೆ ಗರಿಷ್ಠ ತೆರಿಗೆ ಹಾಕಿದ ಪುಣ್ಯಾತ್ಮರು ಈ ಕಾಂಗ್ರೆಸ್ಸಿನವರು. ಹಾಲಿನಿಂದ ಆಲ್ಕೋಹಾಲ್ವರೆಗೆ ದುಬಾರಿ ದರ ಏರಿಸಲಾಗಿದೆ. ದರ ಏರಿಸಿದ್ದರಿಂದ ಕರೆಂಟ್ ಮುಟ್ಟಿದರೆ ಶಾಕ್ ಹೊಡೆಯುವಂತಾಗಿದೆ ಎಂದು ದೂರಿದರು.
ಇವರು ಮನೆ ಕಟ್ಟುವವರಲ್ಲ; ಮನೆ ಹಾಳು ಮಾಡುವವರು ಎಂದರಲ್ಲದೆ, ಹಿಂದೆ ಕೆಂಪೇಗೌಡರು ನಾಡು ಕಟ್ಟಿ ನಾಡಪ್ರಭು ಎನಿಸಿದ್ದರು. ಕಾಂಗ್ರೆಸ್ಸಿನವರು ನಾಡು ಹಾಳು ಮಾಡಿದ ಬಿರುದನ್ನು ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು. ಕಸದ ಸೆಸ್ 240 ಕೋಟಿ ಸಂಗ್ರಹವಾಗುತ್ತದೆ. ಕಸದ ನಿರ್ವಹಣೆಗೆ 145 ಕೋಟಿಗೆ ಟೆಂಡರ್ ಆಗಿದೆ. ಬಳಕೆದಾರರ ಶುಲ್ಕ ಸಂಗ್ರಹಿಸಿದರೆ 500 ರಿಂದ 600 ಕೋಟಿ ಲಭಿಸಲಿದೆ. ಯಾರ ಮನೆ ಹಾಳು ಮಾಡಲು ಈ ಶುಲ್ಕ ಸಂಗ್ರಹಿಸುತ್ತೀರಿ ಎಂದು ಪ್ರಶ್ನಿಸಿದ ಅವರು, ಇತರ ರಾಜ್ಯಗಳಲ್ಲಿ ಒಂದೋ ಸೆಸ್ ಇಲ್ಲವೇ ಬಳಕೆದಾರರ ಶುಲ್ಕ ಸಂಗ್ರಹಿಸುತ್ತಾರೆ. ಇಲ್ಲಿ ಎರಡನ್ನೂ ಸಂಗ್ರಹಿಸುತ್ತಾರೆ. ಇದರಿಂದ ಬಾಡಿಗೆ ಹೆಚ್ಚಾಗುತ್ತದೆ. ಬಾಡಿಗೆದಾರರಿಗೂ ಮನೆ ಮಾಲೀಕರಿಗೂ ಜಗಳ ಶುರುವಾಗುತ್ತದೆ ಎಂದು ಆರೋಪಿಸಿದರು.
ಹಿಂದೆ ನಮ್ಮ ಸರ್ಕಾರ ಇದ್ದಾಗ ಸಂಗ್ರಹಿಸಿದ ಕಸಕ್ಕೆ ಕೆಜಿ ಲೆಕ್ಕದಲ್ಲಿ ಸೆಸ್ ಸಂಗ್ರಹಿಸುತ್ತಿದ್ದೆವು. ಇವರು ನಿವೇಶನದ ಚದರಡಿ ಲೆಕ್ಕದಲ್ಲಿ ಶುಲ್ಕ ಪಡೆಯುತ್ತಾರೆ. ಇವರಿಗೆ ಗ್ಯಾರಂಟಿಗೆ ಹಣ ಹೊಂದಿಸಲು ಹೀಗೆ ಮಾಡುತ್ತಿದ್ದಾರೆ ಎಂದು ದೂರಿದರು. ಬೆಂಗಳೂರಿನ ಶಾಸಕರ ಸಭೆ ಕರೆದು ತೆರಿಗೆ ದರ ಹೆಚ್ಚಳಕ್ಕೆ ಕಾರಣ ಏನು? ಎಷ್ಟು ದರ ಏರಿಸಿದ್ದೀರಿ ಎಂಬ ಕುರಿತು ವಿವರವನ್ನು ಕೊಡುವಂತೆ ಆಗ್ರಹಿಸಿದರು. ಬಳಿಕ ಇದನ್ನು ಅನುಷ್ಠಾನಕ್ಕೆ ತರಲು ಒತ್ತಾಯಿಸಿದರು. ಚದರಡಿ ಲೆಕ್ಕದಲ್ಲಿ ಕಸದ ಶುಲ್ಕ ವಿಧಿಸದೆ ಅದನ್ನು ಕೆಜಿ ಲೆಕ್ಕದಲ್ಲಿ ವಿಧಿಸುವಂತೆ ಕೋರಿದ್ದೇವೆ. ಇಲ್ಲವಾದರೆ ಬೆಂಗಳೂರಿನ ಜನರ ಶಾಪ ನಿಮಗೆ ತಟ್ಟಲಿದೆ ಎಂದರು. ಚೆನ್ನೈ, ಮಹಾರಾಷ್ಟ್ರದ ನಗರಗಳು, ಕೊಚ್ಚಿ ಮೊದಲಾದ ಕಡೆ ಇಷ್ಟು ತೆರಿಗೆ ಇಲ್ಲ; ಗ್ಯಾರಂಟಿ ಅನುಷ್ಠಾನಕ್ಕಾಗಿ ಕಾಂಗ್ರೆಸ್ಸಿನವರು ಬೆಂಗಳೂರಿನ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಪ್ರತಿ ಜಿಲ್ಲೆಗೂ ಬಿಐಎಸ್ ಸೌಲಭ್ಯಕ್ಕೆ ಪ್ರಯತ್ನ; ಪ್ರಲ್ಹಾದ್ ಜೋಶಿ
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿರೋಧ ಪಕ್ಷದ ವಿಧಾನ ಪರಿಷತ್ತಿನ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಶಾಸಕರಾದ ಕೆ. ಗೋಪಾಲಯ್ಯ, ಎಸ್. ರಘು, ಎಸ್. ಮುನಿರಾಜು, ಎಲ್.ಎ. ರವಿಸುಬ್ರಮಣ್ಯ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸಹ ಸಂಚಾಲಕ ಪ್ರಶಾಂತ್ ಕೆಡಂಜಿ ಮತ್ತು ಪಕ್ಷದ ಮುಖಂಡರು ನಿಯೋಗದಲ್ಲಿ ಇದ್ದರು.